ಉತ್ತರಪ್ರದೇಶದ ಮುಜಾಫರ್ನಗರ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಲು ಸಹಪಾಠಿ ವಿದ್ಯಾರ್ಥಿಗಳಿಗೆ ಸೂಚಿಸಿದ ವಿಡಿಯೋ ವೈರಲ್ ಆಗಿತ್ತು. ಬಳಿಕ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಟೀಕೆಗೆ ಕಾರಣವಾಗಿತ್ತು. ಆರೋಪಿ ಶಿಕ್ಷಕಿ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು.
ಆದರೆ ಇದೀಗ ಬಾಲಕನ ಕುಟುಂಬಕ್ಕೆ ಪ್ರಕರಣವನ್ನು ಹಿಂತೆಗೆದಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಪುರ ಗ್ರಾಮದ ಮುಖ್ಯಸ್ಥ ನರೇಶ್ ತ್ಯಾಗಿ ಬಾಲಕನ ತಂದೆಯನ್ನು ಭೇಟಿಯಾಗಿ, ಈ ನಾಟಕವನ್ನು ಈಗ ನಿಲ್ಲಿಸಿ. ನಮಗೆ ಈ ಗ್ರಾಮದಲ್ಲಿ ಮಾಧ್ಯಮಗಳು ಬೇಡ. ನೀವು ಪೊಲೀಸ್ ಠಾಣೆಗೆ ಹೋಗಿ ನಿಮಗೆ ಎಫ್ಐಆರ್ ಅಗತ್ಯವಿಲ್ಲ ಎಂದು ಹೇಳಬೇಕೆಂದು ಒತ್ತಡ ಹೇರಲಾಗಿದೆ ಎಂದು ವರದಿಯಾಗಿದೆ.
ಆರ್ಎಲ್ಡಿ ನಾಯಕ ಜಯಂತ್ ಚೌಧರಿ, ಐಎನ್ಸಿಯ ರಾಜ್ಯಸಭಾ ಸದಸ್ಯ ಇಮ್ರಾನ್ ಪ್ರತಾಪ್ಗರ್ಹಿ ಮತ್ತು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೂಡ ಬಾಲಕನ ತಂದೆಯೊಂದಿಗೆ ಮಾತನಾಡಿದ್ದಾರೆ.
ರಾಷ್ಟ್ರವ್ಯಾಪಿ ಗಮನ ಸೆಳೆದ ಈ ಪ್ರಕರಣದಲ್ಲಿ ಮುಜಾಫರ್ನಗರದಲ್ಲಿ ವಾಸಿಸುವ ಈ ಕುಟುಂಬಕ್ಕೆ ತಮ್ಮ ಭವಿಷ್ಯದ ಬಗ್ಗೆ ಚಿಂತೆ ಆವರಿಸಿದೆ. ನನ್ನ ಕುಟುಂಬ ಮತ್ತು ನಾನು ಇಲ್ಲಿ ನಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದೇವೆ. ನಾನೊಬ್ಬ ಕೃಷಿ ಕೂಲಿ. ತ್ರಿಪ್ತಾ ಮೇಡಮ್ ಅವರನ್ನು ಬಂಧಿಸುವುದು ಅಥವಾ ಶಿಕ್ಷಿಸುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ನಾವು ಶಿಕ್ಷಕಿಯಿಂದ ಕ್ಷಮೆ ಮತ್ತು ವಿವರಣೆಯನ್ನು ಮಾತ್ರ ಬಯಸಿದ್ದೇವೆ. ನನ್ನ ಮಗನನ್ನು ಅವರು ಧರ್ಮದ ಗುರುತಿನ ಮೇಲೆ ಹೊಡೆಯುವುದನ್ನು ನೋಡಿ ನನಗೆ ಆಘಾತವಾಯಿತು. ಅವನು ಹೋಂ ವರ್ಕ್ ಮಾಡದ ಕಾರಣ ಅವಮಾನಕ್ಕೊಳಗಾದನು. ನಾವು ಹಳ್ಳಿಯಲ್ಲಿ ಇಂತಹ ಸಮಸ್ಯೆ ಎದುರಿಸಲಿಲ್ಲ. ಆದರೆ ಈಗ ಎಲ್ಲರೂ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಶಿಕ್ಷಕಿ ತ್ಯಾಗಿ ವಿರುದ್ಧ ಸಂತ್ರಸ್ತ ಬಾಲಕ ಮತ್ತು ಆತನ ತಂದೆಯ ಹೇಳಿಕೆಗಳ ಆಧಾರದ ಮೇಲೆ ಐಪಿಸಿ ಸೆಕ್ಷನ್ 323 ಮತ್ತು 504ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಅವರನ್ನು ಬಂಧಿಸಲಾಗಿಲ್ಲ.
ಶಿಕ್ಷಕಿ ತ್ಯಾಗಿ ನೇಹಾ ಪಬ್ಲಿಕ್ ಶಾಲೆಯ ಸಹ-ಮಾಲೀಕರಾಗಿದ್ದು, ಗ್ರಾಮದ ಏಕೈಕ ಖಾಸಗಿ ಶಾಲೆಯಾಗಿತ್ತು. ನೂತನ ಶಾಲೆಗೆ ಕಟ್ಟಡ ನಿರ್ಮಾಣವಾಗಿರುವುದರಿಂದ ಅವರು ತಮ್ಮ ನಿವಾಸದಲ್ಲಿ ತರಗತಿ ತೆಗೆದುಕೊಳ್ಳುತ್ತಿದ್ದರು.
ಇದನ್ನು ಓದಿ; ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ: ವಿಚಿತ್ರ ಆಗ್ರಹ ಮುಂದಿಟ್ಟ ಹಿಂದೂ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷ