‘ತೆರಿಗೆ ಪಾಲಿನ ಸಮಾನ ಹಂಚಿಕೆ ಮತ್ತು ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ’ (ಎಂಎಸ್ಪಿ) ಖಾತರಿಪಡಿಸುವ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ವಿಧಾನಸಭೆಯಲ್ಲಿ ಗುರುವಾರ ಎರಡು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಗುರುವಾರ ಸಂಜೆ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಮುಕ್ತಾಯಗೊಂಡ ಬಳಿಕ ಕಾಂಗ್ರೆಸ್ ಶಾಸಕ ಪ್ರಕಾಶ್ ಕೆ ಕೋಳಿವಾಡ್ ಅವರು ‘ಮೋಡ ಬಿತ್ತನೆ’ಗೆ ಸಂಬಂಧಿಸಿದ ಖಾಸಗಿ ಮಸೂದೆ ಮಂಡಿಸಿದರು. ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಅವರು ಹೆಚ್ಚುವರಿ ಕಾರ್ಯಸೂಚಿಯ ಮೂಲಕ ನಿರ್ಣಯ ಮಂಡಿಸಲು ಅನುಮತಿ ಕೋರಿದರು. ಸಭಾಧ್ಯಕ್ಷ ಯು.ಟಿ ಖಾದರ್ ಅವರು ಅನುಮತಿ ನೀಡಿದರು.
ಈ ವೇಳೆ, ಸದನದ ಕಾರ್ಯಸೂಚಿಯಲ್ಲಿ ಉಲ್ಲೇಖಿಸದ, ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಮಾಹಿತಿ ನೀಡದೇ ದಿಢೀರನೆ ನಿರ್ಣಯ ಮಂಡಿಸಲಾಗಿದೆ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಘೋಷಣೆಗಳನ್ನು ಕೂಗಿದರು. ವಿರೋಧದ ನಡುವೆಯೂ ನಿರ್ಣಯ ಮಂಡಿಸಿದ ಹೆಚ್.ಕೆ ಪಾಟೀಲ್, ಅಂಗೀಕಾರ ಕೋರಿದರು. ಧ್ವನಿಮತದ ಮೂಲಕ ನಿರ್ಣಯಗಳನ್ನು ಅಂಗೀಕರಿಸಲಾಯಿತು.
Govt of Karnataka moved 2 resolutions yesterday.
1. A resolution to urge the Central Government to take strong stand of equal distribution and non-discriminatory allocation of financial resources in the interest of the citizens and that no injustice shall be done in the interest… pic.twitter.com/5ipeyuENY7
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 23, 2024
ರಾಜ್ಯ ಸರ್ಕಾರದ ನಡೆಯಿಂದ ಕೆರಳಿದ ಬಿಜೆಪಿ ಸದಸ್ಯರು, ಸಭಾಧ್ಯಕ್ಷರ ಕೊಠಡಿಯಲ್ಲಿ ನಡೆದ ಸಂಧಾನ ಸಭೆಯಲ್ಲೂ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭಾಧ್ಯಕ್ಷರ ಕೊಠಡಿಯಲ್ಲಿ ನಡೆದ ಸಂಧಾನ ವಿಫಲವಾಯಿತು. ಪುನಃ ಕಲಾಪ ಪ್ರಾರಂಭಗೊಂಡಾಗ ಬಿಜೆಪಿ ಸದಸ್ಯರು ಸದನದೊಳಗೆ ಬರಲಿಲ್ಲ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಲು ಬಾಕಿಯಿರುವ ತೆರಿಗೆ ಪಾಲು ಕೊಡುವಂತೆ ಆಗ್ರಹಿಸಿ ಮತ್ತು ಅನುದಾನ ತಾರತಮ್ಯ ಖಂಡಿಸಿ ರಾಜ್ಯ ಸರ್ಕಾರ ಪ್ರತಿಭಟಿಸುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ಜಂತರ್ ಮಂತರ್ನಲ್ಲಿ ‘ನನ್ನ ತೆರಿಗೆ ನನ್ನ ಹಕ್ಕು’ ಶೀರ್ಷಿಕೆಯಡಿಯಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆ ನಡೆಸಿತ್ತು. ಇದೀಗ ತೆರಿಗೆ ಪಾಲು ಕೊಡುವಂತೆ ನಿರ್ಣಯ ಅಂಗೀಕರಿಸಿದೆ.
ಎಂಎಸ್ಪಿ ಖಾತರಿಗೆ ಕಾನೂನು ಜಾರಿ ದೆಹಲಿಯ ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ರೈತರ ಪ್ರಮುಖ ಬೇಡಿಕೆಯಾಗಿದೆ. ಎಲ್ಲಾ ಬೆಳೆಗಳ ಖರೀದಿಗೆ ಎಂಎಸ್ಪಿ ಖಾತರಿಗೊಳಿಸುವ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ರೈತರು ದೆಹಲಿ ಚಲೋ ಹಮ್ಮಿಕೊಂಡಿದ್ದಾರೆ. ರಾಜ್ಯ ಸರ್ಕಾರ ಎಂಎಸ್ಪಿ ಪರ ನಿರ್ಣಯ ಅಂಗೀಕರಿಸುವ ಮೂಲಕ ರೈತ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡದಂತಾಗಿದೆ.
ಇದನ್ನೂ ಓದಿ : ಕಳೆದ 15 ವರ್ಷಗಳಲ್ಲಿ ಪುನರಾಯ್ಕೆಗೊಂಡಿರುವ 23 ಸಂಸದರ ಆಸ್ತಿ ಮೌಲ್ಯ ಸರಾಸರಿ ಶೇ.1,045ರಷ್ಟು ಏರಿಕೆ: ವರದಿ