ಕೊರೊನ ಸಾಂಕ್ರಾಮಿಕ ರೋಗ ಹರಡಿರುವ ಅವಧಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು, ಮತ್ತು ಪತ್ರಿಕಾ ವಿತರಕರು ಮೃತಪಟ್ಟರೆ ಅವರ ಕುಟುಂಬಗಳಿಗೆ 50 ಲಕ್ಷ ಪರಿಹಾರ ನೀಡಲು ಪರಿಗಣಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ಸೂರತ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಸಾಂಕ್ರಾಮಿಕ ರೋಗದ ಭೀತಿಯ ಸಂದರ್ಭದಲ್ಲಿ ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳು ಮತ್ತು ಪತ್ರಿಕಾ ವಿತರಕರ ಸೇವೆಯನ್ನು ಕಡೆಗಣಿಸಲಾಗದು. ಇವರೂ ಕೂಡ ವೈದ್ಯರು, ನರ್ಸ್ ಗಳು, ಸರ್ಕಾರಿ ಸಮಿತಿಗಳು ಮತ್ತು ಇತರೆ ಕೋವಿಡ್ ವಿರುದ್ದ ಹೋರಾಡುತ್ತಿರುವವರಂತೆ ಅಗತ್ಯಸೇವೆಗಳ ಅಡಿಯಲ್ಲಿ ಬರುತ್ತಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಶ್ವವ್ಯಾಪಿ ಭೀತಿಯನ್ನು ಮೂಡಿಸಿರುವ ಕೊರೊನಾ ಸಾಂಕ್ರಾಮಿಕ ರೋಗದ ಪರಣಾಮಗಳ ಕುರಿತು ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳು ದೇಶದ ಜನರಿಗೆ ಸಮರ್ಪಕ ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕೋರ್ಟ್ ಹೇಳಿದೆ ಎಂದು ಲೈವ್ ಲಾ.ಇನ್ ವರದಿ ಮಾಡಿದೆ.
ನಮ್ಮ ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಪ್ರಾಮುಖ್ಯತೆಯನ್ನು ಕಡೆಗಣಿಸಲಾಗದು. ಸಂವಿಧಾನದ ಆರ್ಟಿಕಲ್ 19 (1) (ಎ)ರಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದ ಜೊತೆಗೆ ಎಲೆಕ್ಟ್ರಾನಿಕ್ ಮತ್ತು ಸಂವಹನನ ಮೂಲಕ ಮಾಹಿತಿ ಹಕ್ಕನ್ನು ತಿಳಿಯುವ ಹಕ್ಕು ಇದೆ. ಹಾಗಾಗಿ ಅಭವ್ಯಕ್ತಿ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಮಹತ್ವವಿದೆ ಎಂದು ಹೇಳಿದೆ.
ಕೋವಿಡ್ ಅವಧಿಯನ್ನು ಸವಾಲಾಗಿ ಸ್ವೀಕರಿಸಿದ ಪತ್ರಕರ್ತರು ಕೊರೊನ ರೋಗದ ಪರಿಣಾಮಗಳನ್ನು ಜನರಿಗೆ ತಿಳಿಸುವ ಮೂಲಕ ಕರ್ತವ್ಯ ಮೆರೆದಿದ್ದಾರೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಓದಿ: ಕ್ಯಾಮರ ಎದುರೆ ಇಸ್ಲಾಮೋಫೋಬಿಯ ಹರಡಿದ ಪ್ರಾಂಶುಪಾಲೆ: ತೀವ್ರ ವಿರೋಧ