2024-25ಕ್ಕೆ ಪ್ರಸ್ತಾಪಿಸಲಾದ ಒಟ್ಟು ಬಜೆಟ್ ಗಾತ್ರದಲ್ಲಿ ಅಲ್ಪಸಂಖ್ಯಾತರಿಗೆ ಶೇಕಡಾ 1ಕ್ಕಿಂತ ಕಡಿಮೆ ಅನುದಾನವನ್ನು ನೀಡಲಾಗಿದೆ ಎಂದು ಸ್ವತಃ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಸೋಮವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿನ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಕುರಿತು ಶಿಕಾರಿಪುರದ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಪ್ರಶ್ನೆಯನ್ನು ಕೇಳಿದ್ದು, ಬರಪೀಡಿತ ರೈತರಿಗಿಂತ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುತ್ತಿದೆ ಎಂದು ಆಪಾದಿಸಿದ್ದರು. ಇದಕ್ಕೆ ಉತ್ತರಿಸಿದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್, 2024-25ರ ಸಾಲಿನ ಬಜೆಟ್ನ 3.71 ಲಕ್ಷ ಕೋಟಿ ರೂ. ಅಲ್ಪಸಂಖ್ಯಾತರಿಗೆ 1% ರಷ್ಟು ಕೂಡ ಅನುದಾನದಲ್ಲಿ ಮೀಸಲು ನೀಡಲಾಗಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 1,000 ಕೋಟಿ ರೂ.ಗೆ ಕ್ರಿಯಾ ಯೋಜನೆ ರೂಪಿಸಿದ್ದೇವೆ. ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ 300 ಕೋಟಿ ರೂ.ಗಳಲ್ಲಿ 165 ಕೋಟಿ ಮಾತ್ರ ಬಿಡುಗಡೆ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮೊದಲು ಸದನದಲ್ಲಿ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದೆ. ಬರ ಪೀಡಿತ ರೈತರಿಗೆ ಸಹಾಯ ಮಾಡದೆ, ಅಲ್ಪಸಂಖ್ಯಾತರಿಗೆ 10,000 ಕೋಟಿ ರೂ.ಗಳನ್ನು ಸಿಎಂ ಘೋಷಿಸಿದ್ದಾರೆ. ಇದಲ್ಲದೆ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವಲ್ಲಿ ತಾರತಮ್ಯ ಎಸಗಿದೆ. ಹೆಚ್ಚಿನ ಅನುದಾನ ಕಾಂಗ್ರೆಸ್ ಶಾಸಕರ ಪಾಲಾಗಿದೆ ಎಂದು ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, 1000 ಕೋಟಿ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಕ್ರಿಯಾ ಯೋಜನೆಯಡಿ ಹಣವನ್ನು 3 ವರ್ಷಗಳಲ್ಲಿ ಬಿಡುಗಡೆ ಮಾಡಲಾಗುವುದು. ಈಗಾಗಲೇ ಬಿಜೆಪಿ ಶಾಸಕರಿರುವ 29 ವಿಧಾನಸಭಾ ಕ್ಷೇತ್ರಗಳು ಮತ್ತು 8 ಜೆಡಿಎಸ್ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ನಾವು ಜನಸಂಖ್ಯೆಯ ಆಧಾರದ ಮೇಲೆ ಅಲ್ಪಸಂಖ್ಯಾತರ ಕಾಲೋನಿಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿದ್ದೇವೆ. ಇದರ ಆಧಾರದ ಮೇಲೆ ವಿಧಾನಸಭೆ ಕ್ಷೇತ್ರಗಳಿಗೆ ಹಣವನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಈ ವೇಳೆ ಮಧ್ಯಪ್ರವೇಶಿಸಿ, ಬಿಜಾಪುರ ನಗರ ಕ್ಷೇತ್ರದಲ್ಲಿ 1.2 ಲಕ್ಷ ಮುಸ್ಲಿಮರಿದ್ದರೂ ಹಣ ಬಂದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಉತ್ತರಿಸಿದ ಜಮೀರ್, ನೀವು ಮುಸ್ಲಿಮರಿಗಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳುತ್ತೀರಿ ಆದ್ದರಿಂದ ನಾವು ನಿಮಗೆ ಹಣವನ್ನು ಯಾಕೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಇದು ಸದನದಲ್ಲಿ ಕೆಲ ಕಾಲ ಚರ್ಚೆಗೆ ಕಾರಣವಾಗಿತ್ತು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಯತ್ನಾಳ್ ಅವರ ರಾಜಕೀಯ ಹೇಳಿಕೆಗಳನ್ನು ಅನುದಾನ ಹಂಚಿಕೆಗೆ ಜೋಡಿಸಬಾರದು. ಯತ್ನಾಳ್ ಅವರ ಕಾರಣದಿಂದ ಬಿಜಾಪುರದ 1.2 ಲಕ್ಷ ಮತದಾರರನ್ನು ನಿರ್ಲಕ್ಷಿಸಿದರೆ ನೀವು ಅಲ್ಪಸಂಖ್ಯಾತರ ರಕ್ಷಕರಾಗುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಮುಸ್ಲಿಂ ವಿರೋಧಿ ಹೇಳಿಕೆ ನೀಡದಂತೆ ಬೊಮ್ಮಾಯಿ ಅವರು ಯತ್ನಾಳ್ ಅವರಿಗೆ ಸಲಹೆ ನೀಡಬೇಕಿತ್ತು. ಅದೇನೇ ಇದ್ದರೂ ನಾನು ಬಿಜಾಪುರಕ್ಕೆ 5 ಕೋಟಿ ಅಲ್ಲ, 10 ಕೋಟಿ ಕುಡ ನೀಡಲು ಸಿದ್ಧನಿದ್ದೇನೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಇದನ್ನು ಓದಿ: ಗಾಝಾದಲ್ಲಿ ಮಾನವೀಯತೆಯನ್ನು ಸಮಾಧಿ ಮಾಡಿದ ನೆತನ್ಯಾಹು