ನಾಲ್ಕು ತಿಂಗಳ ಬಾಂಬ್ ದಾಳಿಯ ಮೂಲಕ ಗಾಝಾವನ್ನು ಬಹುಪಾಲು ಭಗ್ನಾವಶೇಷಗಳಾಗಿ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ರಕ್ಷಣಾ ಪಡೆಗೆ (IDF) ಈಜಿಪ್ಟ್ ಗಡಿಯಲ್ಲಿರುವ ದಕ್ಷಿಣ ಗಾಝಾ ಪಟ್ಟಣವಾದ ರಫಾವನ್ನು ವಶಕ್ಕೆ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಸಂಪೂರ್ಣ ಗೆಲುವು ಕೈಗೆಟುಕಲು ಇಸ್ರೇಲ್ಗೆ ಇನ್ನೇನು ಬಾಕಿ ಉಳಿದಿದೆ ಎಂಬಂತಹ ಪರಿಸ್ಥಿ ಇದೆ. ಜನಾಂಗೀಯ ಹತ್ಯೆ, ಜನರ ಬಲವಂತದ ವರ್ಗಾವಣೆ ಮೂಲಕ ಇಸ್ರೇಲ್ ತನ್ನ ನೈಜ ಮುಖವನ್ನು ವಿಶ್ವಕ್ಕೆ ಅನಾವರಣಗೊಳಿಸಿದೆ. ನಾಗರಿಕರ ನೋವು ಇಸ್ರೇಲ್ನ್ನು ಕ್ರೂರ ಕೃತ್ಯದಿಂದ ಹಿಂದೆ ಸರಿಯುವಂತೆ ಮಾಡಿಲ್ಲ. ನೆತನ್ಯಾಹು ರಕ್ತಪಾತದ ಬೆದರಿಕೆಯನ್ನು ಮುಂದವರಿಸಿದ್ದಾರೆ. ಗಾಝಾದಲ್ಲಿ ಕಾನೂನು ಮತ್ತು ಮಾನವೀಯತೆಯನ್ನು ಹೂತು ಹಾಕಿದ್ದಾರೆ.
ಅ.7ರಂದು ಇಸ್ರೇಲ್ ಗಾಝಾದ ಮೇಲೆ ಯುದ್ಧ ಘೋಷಿಸಿದ ಬಳಿಕ ಆ ಪ್ರದೇಶದಲ್ಲಿ ಸಾವಿನ ಸಂಖ್ಯೆ 29,000 ಮೀರಿದೆ. 69,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಗಾಯಗೊಂಡಿದ್ದಾರೆ ಎಂದು ಯುಎನ್ ವರದಿ ತಿಳಿಸಿದೆ. ಆದರೆ ವಾಸ್ತವ ಸಾವು ಮತ್ತು ಗಾಯಾಳುಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳದ ಸಾಧ್ಯತೆ ಇದೆ. ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ ಲಕ್ಷಾಂತರ ಮನೆಗಳು, ಕಟ್ಟಡಗಳು ಧ್ವಂಸಗೊಂಡಿದೆ. ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡು ಕಿಕ್ಕಿರಿದ ಜನಸಂದಣಿಯ ನಿರಾಶ್ರಿತರ ಕೇಂದ್ರಗಳಲ್ಲಿ ದಿನದೂಡುವಂತಾಗಿದೆ. ಗಾಝಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಗ್ಧ ಮಕ್ಕಳು ಮತ್ತು ಮಹಿಳೆಯರ ಹತ್ಯೆ ನಡೆಸಿದರೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧ ದಾಹ ಮುಗಿದಿಲ್ಲ. ಹಮಾಸ್ನ್ನು ಸಂಪೂರ್ಣ ನಿರ್ನಾಮ ಮಾಡುತ್ತೇವೆ ಎಂದು ಹೇಳುತ್ತಿರುವ ನೆತನ್ಯಾಹು, ಪ್ಯಾಲೆಸ್ತೀನ್ನ ಮುಗ್ಧ ನಾಗರಿಕರ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಗಾಝಾದಲ್ಲಿನ ಯುದ್ಧ ನಿರಾಶ್ರಿತರಿಗೆ ಮಾನವೀಯ ನೆರವನ್ನು ತಡೆಯುತ್ತಿರುವುದು ಮತ್ತು ಶುದ್ಧ ನೀರಿನ ಕೇಂದ್ರಗಳ ಮೇಲೆ ದಾಳಿ ನಡೆಸಿ ಕುಡಿಯಲು ಅಯೋಗ್ಯವನ್ನಾಗಿ ಮಾಡುವುದು ಇಸ್ರೇಲ್ ಯುದ್ಧ ಕ್ರೌರ್ಯವನ್ನು ಬಿಚ್ಚಿಡುತ್ತಿದೆ.
2007ರಲ್ಲಿ ಇಸ್ರೇಲ್ ಗಾಝಾದ ಮೇಲೆ ಆಕ್ರಮಿಸಿದ ಬಳಿಕ ರಫಾವು ಗಾಝಾದ ಯುದ್ದ ಸಂತ್ರಸ್ತ ಪ್ರದೇಶಕ್ಕೆ ಹೆಚ್ಚಿನ ಮಾನವೀಯ ಸರಬರಾಜುಗಳನ್ನು ತಲುಪಿಸುವ ಮಾರ್ಗವಾಗಿತ್ತು. ಇಸ್ರೇಲ್ ಆಕ್ರಮಣಕ್ಕೆ ಮುಂಚಿತವಾಗಿ ಒಂದು ಲಕ್ಷ ಜನರು ಇಲ್ಲಿ ವಾಸಿಸುತ್ತಿದ್ದರು. ಇತ್ತೀಚಿನ ಇಸ್ರೇಲ್ ಯುದ್ಧ ಘೋಷಣೆ ಬಳಿಕ ಒಂದೂವರೆ ಮಿಲಿಯನ್ ಜನರು ಗಾಝಾದ ರಫಾವನ್ನು ಆಶ್ರಯ ಕೇಂದ್ರವನ್ನಾಗಿಸಿಕೊಂಡಿದ್ದಾರೆ. ಜನ ಸಂದಣಿಯಿಂದಾಗಿ ರಫಾದಲ್ಲಿ ವಾಸಿಸುವ ಜನರು ನೀರಿನ ಕೊರತೆ, ಮೂಲ ಸೌಕರ್ಯದ ಕೊರತೆ, ಆಹಾರದ ಕೊರತೆ, ನೈರ್ಮಲ್ಯದ ಕೊರತೆ, ಸಾಂಕ್ರಾಮಿಕ ರೋಗದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗ ಇಸ್ರೇಲ್ ರಫಾವನ್ನೇ ಟಾರ್ಗೆಟ್ ಮಾಡಿ ದಾಳಿಯನ್ನು ನಡೆಸುತ್ತಿದ್ದು, ಆಸ್ಪತ್ರೆಗಳು, ಮನೆಗಳು ಮತ್ತು ಮಸೀದಿಗಳನ್ನು ಧ್ವಂಸ ಮಾಡಿದೆ. ರಫಾದಲ್ಲಿ ಕೂಡ ಡಜನ್ ಗಟ್ಟಲೆ ಜನರನ್ನು ಹತ್ಯೆ ಮಾಡಿದೆ.
UNICEF ಹೇಳುವಂತೆ ಗಾಝಾವು ಮಕ್ಕಳ ಸಾವುಗಳ ಕೇಂದ್ರವಾಗುತ್ತಿದೆ. ಹತ್ತಾರು ಯುರೋಪಿಯನ್ ರಾಷ್ಟ್ರಗಳು ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿವೆ. ರಫಾದ ಮೇಲೆ ಇಸ್ರೇಲ್ ಆಕ್ರಮಣವನ್ನು ಕೈಬಿಡುವಂತೆ ಆಗ್ರಹಿಸಿದೆ. ಅಲ್ ಜಝೀರಾ ವರದಿಯ ಪ್ರಕಾರ, ಉತ್ತರ ಗಾಝಾದಲ್ಲಿ ಮಾನವೀಯ ನೆರವಿಗಾಗಿ ಕಾಯುತ್ತಿದ್ದ ಅಂದರೆ ಆಹಾರದ ಪೊಟ್ಟಣಕ್ಕೆ ಕಾಯುತ್ತಿದ್ದ ಪ್ಯಾಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ದಾಳಿಯಲ್ಲಿ ಓರ್ವ ನಾಗರಿಕ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಗಾಝಾದಲ್ಲಿ ಅಪೌಷ್ಟಿಕತೆಯ ಕುರಿತು ಯುಎನ್ನ ಮಕ್ಕಳ ಸಂಸ್ಥೆ (ಯುನಿಸೆಫ್), ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕಳವಳವನ್ನು ವ್ಯಕ್ತಪಡಿಸಿದೆ. ಗಾಝಾ ಪಟ್ಟಿಯು ಪೌಷ್ಟಿಕಾಂಶದ ಬಿಕ್ಕಟ್ಟಿನ ಅಂಚಿನಲ್ಲಿದೆ ಎಂದು ನಾವು ವಾರಗಳಿಂದ ಎಚ್ಚರಿಸುತ್ತಿದ್ದೇವೆ. ಗಾಝಾದಲ್ಲಿ ಊಹಿಸಲು ಅಸಾಧ್ಯವಾದ ಮಟ್ಟದಲ್ಲಿ ಮಕ್ಕಳ ಸಾವುಗಳು ಸಂಭವಿಸುತ್ತದೆ ಎಂದು ಯುನಿಸೆಫ್ನ ಉಪ ಕಾರ್ಯನಿರ್ವಾಹಕ ನಿರ್ದೇಶಕ ಟೆಡ್ ಚೈಬಾನ್ ಹೇಳಿದ್ದಾರೆ.
ವರದಿಯ ಪ್ರಕಾರ, ಗಾಝಾದ ಉತ್ತರದಲ್ಲಿ ಪರಿಸ್ಥಿತಿಯು ಚಿಂತಾಜನಕವಾಗಿದೆ, ಈ ಪ್ರದೇಶಗಳಲ್ಲಿ ವಾರಗಳಿಂದ ಎಲ್ಲಾ ಮಾನವೀಯ ನೆರವು ಪರಿಹಾರ ಕಡಿತಗೊಂಡಿದೆ ಮತ್ತು ಅಲ್ಲಿನ ಆರು ಮಕ್ಕಳಲ್ಲಿ ಒಂದು ಮಗು ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿದೆ. ರಾಫಾದಲ್ಲಿ ಎರಡಕ್ಕಿಂತ ಕಡಿಮೆ ವಯಸ್ಸಿನ 5 ಪ್ರತಿಶತ ಮಕ್ಕಳು ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಹಸಿವು ಮತ್ತು ರೋಗವು ಮಾರಣಾಂತಿಕವಾಗಿದೆ ಎಂದು WHO ನ ಆರೋಗ್ಯ ತುರ್ತು ಕಾರ್ಯಕ್ರಮದ ಮುಖ್ಯಸ್ಥ ಡಾ ಮೈಕ್ ರಯಾನ್ ಹೇಳಿದ್ದಾರೆ. ಹಸಿದ, ದುರ್ಬಲಗೊಂಡ ಮತ್ತು ಆಳವಾಗಿ ಆಘಾತಕ್ಕೊಳಗಾದ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಇದು ಅಪಾಯಕಾರಿ ಮತ್ತು ಈ ದುರಂತ ನಮ್ಮ ಕಣ್ಣುಗಳ ಮುಂದೆ ನಡೆಯುತ್ತಿದೆ ಎಂದು ರಯಾನ್ ಹೇಳಿದ್ದಾರೆ.
#Gaza: A surge in #malnutrition poses grave threats to children's health.
🔺1 in 6 children under two are acutely malnourished
🔺95% of households are limiting meals & portion sizes
🔺64% of households eat only one meal a dayAccess the report: https://t.co/U2Baf5j73S
— WFP in the Middle East & North Africa (@WFP_MENA) February 19, 2024
ಐರಿಷ್ ವಿದೇಶಾಂಗ ಸಚಿವ ಮೈಕೆಲ್ ಮಾರ್ಟಿನ್ ಅವರು ದಕ್ಷಿಣ ಗಾಝಾದ ರಫಾಹ್ ಮೇಲೆ ದಾಳಿ ಮಾಡದಂತೆ ಯುರೋಪಿಯನ್ ಒಕ್ಕೂಟವು ಇಸ್ರೇಲ್ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದ್ದಾರೆ. ಬ್ರಸೆಲ್ಸ್ನಲ್ಲಿ ಮಾತನಾಡಿದ ಮಾರ್ಟಿನ್, ಗಾಝಾದಲ್ಲಿ ಈಗ ನಡೆಯುತ್ತಿರುವ ಅಮಾನವೀಯತೆಯ ಮಟ್ಟ ಜಗತ್ತನ್ನು ಬೆಚ್ಚಿಬೀಳಿಸಿದೆ. ರಫಾದಲ್ಲಿ ಇಸ್ರೇಲ್ನ ಯೋಜಿತ ಆಕ್ರಮಣವನ್ನು ತಡೆಯಲು ಯುರೋಪ್ ಸಾಧ್ಯವಾದ ಎಲ್ಲವನ್ನೂ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಭಾನುವಾರ ಮತ್ತು ಸೋಮವಾರದ ನಡುವೆ ಗಾಝಾದ ಮೇಲಿನ ಇಸ್ರೇಲ್ ದಾಳಿಯಲ್ಲಿ ಹೆಚ್ಚುವರಿ 107 ಪ್ಯಾಲೆಸ್ತೀನ್ ನಾಗರಿಕರ ಹತ್ಯೆ ನಡೆದಿದೆ. ಈ ದಾಳಿಯಲ್ಲಿ 145 ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್ ಗಾಝಾ ಮೇಲೆ ಮತ್ತೆ ಆಕ್ರಮಣವನ್ನು ಮುಂದುವರಿಸಿದೆ.
ಇದನ್ನು ಓದಿ: 5 ವರ್ಷದ ಎಂಎಸ್ಪಿ ಗುತ್ತಿಗೆ; ಕೇಂದ್ರದ ಪ್ರಸ್ತಾವನೆ ತಿರಸ್ಕರಿಸಿದ ರೈತ ಮುಖಂಡರು: ನಾಳೆಯಿಂದ ದೆಹಲಿ ಚಲೋ ಆರಂಭ