ಗೌರಿ ಲಂಕೇಶ್ ದಿಟ್ಟ ಪತ್ರಕರ್ತೆ ಮಾತ್ರ ಆಗಿರಲಿಲ್ಲ, ಹೋರಾಟಗಾರ್ತಿಯೂ, ಪ್ರೀತಿ ತುಂಬಿದ ತಾಯಿಯೂ, ಸಾಮಾಜಿಕ ಚಳವಳಿಗಳ ಶಕ್ತಿಯೂ ಆಗಿದ್ದರು. ಆ ಮೂಲಕ ಕೋಮುವಾದಿಗಳಿಗೆ ಸಿಂಹಸ್ವಪ್ನವಾಗಿದ್ದರು. ಕೋಮು ಸೌಹಾರ್ದಕ್ಕಾಗಿ, ಬಹುತ್ವದ ಉಳಿವಿಗಾಗಿ ಅವರು ನಿರಂತರ ಶ್ರಮಿಸುತ್ತಿದ್ದರು. ಶೋಷಿತರು ದನಿಯಾಗಿದ್ದರು. ಅದಕ್ಕಾಗಿಯೇ ಅವರು ಸನಾತನಾವಾದಿಗಳ ಗುಂಡಿಗೆ ಎದೆಯೊಡ್ಡಬೇಕಾಯಿತು. ಆದರೆ ಯಾವ ಗೌರಿ ಲಂಕೇಶ್ರವರ ದನಿಯನ್ನು ಅಡಗಿಸಲು ಅವರನ್ನು ಹತ್ಯೆ ಮಾಡಲಾಯಿತೊ ಆ ದನಿ ದ್ವಿಗುಣಗೊಂಡಿತು. ರಾಜ್ಯ-ದೇಶ-ಪ್ರಪಂಚದೆಲ್ಲೆಡೆ ನಾನು ಗೌರಿ ನಾವೆಲ್ಲರೂ ಗೌರಿ ಎಂಬ ದನಿ ಎದ್ದಿತು. ಅದು ಇಂದಿಗೂ ಮುಂದುವರೆಯುತ್ತಿದೆ. ಅದು ಮತ್ತಷ್ಟು ಮಾರ್ಧನಿಸುವಂತೆ ಮಾಡಲು ಅವರ ಸಹೋದರಿ ಕವಿತಾ ಲಂಕೇಶ್ ಮುಂದಾಗಿದ್ದು ಗೌರಿ ಲಂಕೇಶ್ರವರ ಬದುಕು, ಹೋರಾಟದ ಕುರಿತು ಸಾಕ್ಷ್ಯಚಿತ್ರವೊಂದನ್ನು ತಯಾರಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕಿ ಕವಿತಾ ಲಂಕೇಶ್ ಅವರು ಗೌರಿ ಲಂಕೇಶ್ ರವರ ಹತ್ಯೆಗೆ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಅದರೊಟ್ಟಿಗೆ ಗೌರಿಯವರ ಕುರಿತು ಪ್ರಪಂಚಕ್ಕೆ ತಿಳಿಸುವ ಕೆಲಸದಲ್ಲಿಯೂ ನಿರತರಾಗಿದ್ದಾರೆ. ಅದಕ್ಕಾಗಿ ಇಡೀ ಕರ್ನಾಟಕ ಸುತ್ತುತ್ತಿರುವ ಅವರು ಈ ತಿಂಗಳಿನಲ್ಲಿ ಸಾಕ್ಷ್ಯಚಿತ್ರ ಪೂರ್ಣಗೊಳಿಸಿ 2022ರ ಜನವರಿಯಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ.
ಆಮ್ಸ್ಟರ್ಡ್ಯಾಮ್ನ ಫ್ರೀ ಪ್ರೆಸ್ ಅನ್ಲಿಮಿಟೆಡ್ ಸಂಸ್ಥೆಯು ಕಳೆದ ವರ್ಷ ತಮ್ಮ ವೃತ್ತಿಪರ ಸೇವೆಯ ಕಾರಣದಿಂದಾಗಿ ಹಿಂಸಾಚಾರಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಪತ್ರಕರ್ತರ ಸಾಕ್ಷ್ಯಚಿತ್ರಗಳ ಪ್ರಸ್ತಾಪಗಳಿಗೆ ಕರೆ ನೀಡಿತ್ತು. ಸುಮಾರು 300 ಪ್ರಸ್ತಾವನೆಗಳು ಬಂದಿದ್ದವು, ಆ ಪೈಕಿ ನಾಲ್ಕು ಚಿತ್ರಗಳನ್ನು ಫ್ರೀ ಪ್ರೆಸ್ ಆಯ್ಕೆ ಮಾಡಿದ್ದು, ಅದರಲ್ಲಿ ‘ಗೌರಿ’ ಅವರ ಕುರಿತ ತಮ್ಮ ಸಾಕ್ಷ್ಯಾಚಿತ್ರವೂ ಒಂದಾಗಿದೆ” ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.
“ಗೌರಿ ನನಗೆ ಸಹೋದರಿ ಎಂಬುದಕ್ಕಿಂತಲೂ ಮಿಗಿಲಾಗಿ ಆಕೆಯ ಜೀವನವು ಆಕೆಯ ಬಗ್ಗೆ ಚಿತ್ರಮಾಡಬೇಕೆಂಬ ಕಠಿಣ ನಿರ್ಧಾರಕ್ಕೆ ಕಾರಣವಾಗಿತ್ತು. ಆಕೆ ನನ್ನ ಸ್ನೇಹಿತೆ, ಮಾರ್ಗದರ್ಶಕಿಯಾಗಿದ್ದಳು. ಆಕೆ ನನ್ನ ಹತ್ತಿರದಲ್ಲಿಲ್ಲ ಎಂದು ನಾನು ಇನ್ನೂ ಅರ್ಥಮಾಡಿಕೊಳ್ಳಬೇಕಾಗಿದೆ. ಚಿತ್ರ ಮಾಡುವುದು ಎಂದರೆ, ಆ ಆಘಾತಕಾರಿ ನೆನಪುಗಳಿಗೆ ಹಿಂತಿರುಗುವುದು. ಆದರೆ, ನ್ಯಾಯ ಮತ್ತು ಜನರ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವಾಗ ಯಾವುದೇ ಭಯವಿಲ್ಲದ ಆಕೆಯ ಕಥೆಯನ್ನು ನಾನು ಹೇಳಲೇಬೇಕು ಎಂದು ನಾನು ಭಾವಿಸಿದ್ದೇನೆ” ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.
ಇದನ್ನೂ ಓದಿ: ಗೌರಿ ಲಂಕೇಶ್ ದಿನ: ಗೌರಿಯನ್ನು ನೆನೆಯುತ್ತಾ…ಸಾವಿರಾರು ಗೌರಿಯರ ಮಾತುಗಳು…
2000 ರಲ್ಲಿ ನಮ್ಮ ತಂದೆಯ ಪ್ರಕಾಶನ ಲಂಕೇಶ್ ಪತ್ರಿಕೆಯ ಜವಾಬ್ದಾರಿಯನ್ನು ಗೌರಿ ವಹಿಸಿಕೊಂಡಿರು. ನಂತರದ ಅವರ ಜೀವನ ಮತ್ತು ಅವರ ಕ್ರಿಯಾಶೀಲತೆಯನ್ನು ಈ ಚಿತ್ರ ಸೆರೆಹಿಡಿಯುತ್ತದೆ. ಸಾಕ್ಷ್ಯಚಿತ್ರವು ನೆದರ್ಲ್ಯಾಂಡ್ನಲ್ಲಿ ನಡೆಯುವ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ.
ಸೆಪ್ಟೆಂಬರ್ 5, 2017 ರ ಸಂಜೆ, ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯಲ್ಲಿ ಗೌರಿ ಹತ್ಯೆಯಾದರು. ಆಗಿನ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರವು ಸ್ಥಾಪಿಸಿದ ವಿಶೇಷ ತನಿಖಾ ತಂಡ (ಎಸ್ಐಟಿ) 18 ಆರೋಪಿಗಳನ್ನು ಬಂಧಿಸಿ ಚಾರ್ಜ್ಶೀಟ್ ಸಲ್ಲಿಸಿದೆ. ಆ ಆರೋಪಿಗಳು ಬಲಪಂಥೀಯ ಗುಂಪುಗಳಿಗೆ ನಿಷ್ಠರಾಗಿದ್ದರು ಎಂದು ಚಾರ್ಜ್ಶೀಟ್ನಲ್ಲಿ ವರದಿ ಮಾಡಿದ್ದಾರೆ. ಅವರ ಮೇಲೆ ಕಠಿಣ ಕೋಕಾ ಪ್ರಕರಣವನ್ನು ಹೇರಲಾಗಿದೆ. ಕರ್ನಾಟಕ ಹೈಕೋರ್ಟ್ ಒಬ್ಬ ಆರೋಪಿ ಮೇಲಿನ ಕೋಕಾ ಪ್ರಕರಣ ರದ್ದುಗೊಳಿಸಲು ಮುಂದಾಗಿತ್ತು. ಆಗ ಕವಿತಾ ಲಂಕೇಶ್ರವರು ಅದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿ ಅದಕ್ಕೆ ತಡೆ ತಂದಿದ್ದಾರೆ.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯಾ ಆರೋಪಿ ಮೇಲಿನ ಕೋಕಾ ಮೊಕದ್ದಮೆ ಎತ್ತಿ ಹಿಡಿದ ಸುಪ್ರೀಂ