ಏಪ್ರಿಲ್ನಲ್ಲಿ ಕರ್ನಾಟಕದಲ್ಲಿ ಎನ್ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್ಪಿಆರ್ ಸಮಯದಲ್ಲಿ ದಾಖಲೆ ತೋರಿಸಬೇಕಿಲ್ಲ ಮಾಹಿತಿ ಕೊಟ್ಟರೆ ಸಾಕು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಆದರೆ NPR ಸಮಯದಲ್ಲಿ ದಾಖಲೆ ತೋರಿಸಬೇಕು, ಹಾಗಾಗಿ ನಿಮ್ಮ ದಾಖಲೆ ಭದ್ರವಾಗಿಟ್ಟುಕೊಳ್ಳಿ ಎಂದು ದೆಹಲಿ ಮುಸ್ಲಿಂ ಮತದಾರರ ವಿರುದ್ಧ ಕರ್ನಾಟಕ ಬಿಜೆಪಿ ವ್ಯಂಗ್ಯ ಮಾಡಿದೆ.
ಇಂದು ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶಾಹೀನ್ ಬಾಗ್ ಸೇರಿದಂತೆ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಮತದಾನ ಮಾಡಲು ಸಾಲಾಗಿ ನಿಂತಿರುವ ಮತದಾರರು ತಮ್ಮ ಗುರುತಿನ ಚೀಟಿ ತೋರಿಸುವ ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಕಾಗಜ್ ನಹಿ ದಿಖಾಂಯೇಂಗೆ ಹಮ್… NPR ಸಮಯದಲ್ಲಿ ದಾಖಲೆ ತೋರಿಸಬೇಕು, ಭದ್ರವಾಗಿಟ್ಟುಕೊಳ್ಳಿ ಎಂದು ವ್ಯಂಗ್ಯವಾಡಿದೆ.
"Kaagaz Nahi Dikayenge Hum" ! ! !
Keep the documents safe, you will need to show them again during #NPR exercise.#DelhiPolls2020 pic.twitter.com/bEojjeKlwI
— BJP Karnataka (@BJP4Karnataka) February 8, 2020
ಒಂದು ಕಡೆ ಬಿಜೆಪಿ ಸರ್ಕಾರ ದಾಖಲೆ ತೋರಿಸಬೇಕಿಲ್ಲ ಎಂದು ಹೇಳುತ್ತದೆ. ಈಗ ಅದೇ ಪಕ್ಷದ ಅಧಿಕೃತ ಟ್ವಿಟ್ಟರ್ನಿಂದ ದಾಖಲೆ ತೋರಿಸಬೇಕು ಜೋಪಾನವಾಗಿಟ್ಟುಕೊಳ್ಳಿ ಎಂದು ಹೇಳುತ್ತಿದೆ. ಏನಿದರ ಹುನ್ನಾರ ಎಂದು ಹಲವಾರು ನೆಟ್ಟಿಗರು ಕಿಡಿಕಾರಿದ್ದಾರೆ.
ಬಿಜೆಪಿ ಮತದಾರರನ್ನು ಎದುರಿಸುತ್ತಿದೆ. ಮೋದಿ ಸ್ವಲ್ಪ ಸೂಕ್ಷ್ಮತೆಯನ್ನು ಪ್ರದರ್ಶಿಸಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.