ಮಂಡ್ಯದ ಕೆರಗೋಡು ಗ್ರಾಮದಲ್ಲಿ ಭುಗಿಲೆದ್ದಿರುವ ಹನುಮಧ್ವಜ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ. ಸರ್ಕಾರಿ ಜಾಗದಲ್ಲಿ ಸ್ಥಾಪಿಸಿದ್ದ ಧ್ವಜ ಸ್ಥಂಬದಿಂದ ಹನುಮಧ್ವಜ ಇಳಿಸಿ, ತ್ರಿವರ್ಣ ಧ್ವಜ ಹಾರಿಸಿದ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿರುವ ಜಾತ್ಯತೀತ ಜನತಾದಳ ನಾಯಕರೂ ಕೂಡ ತಮ್ಮ ಪಕ್ಷದ ಶಾಲುಗಳನ್ನು ಬಿಟ್ಟು. ಕೇಸರಿ ಶಾಲುಗಳನ್ನು ಧರಿಸಿ ಬೀದಿಗೆ ಇಳಿದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಇಂದು ಆಯೋಜಿಸಿದ್ದ ಪ್ರತಿಭಟನೆಯನ್ನು ಖುದ್ದು ಎಚ್.ಡಿ. ಕುಮಾರಸ್ವಾಮಿಯವರೆ ಕೇಸರಿ ಶಾಲು ಧರಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ, ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾತ್ಯತೀತ ಜನತಾದಳ ಮತ್ತು ಬಿಜೆಪಿ ವತಿಯಿಂದ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ನಾಯಕರಾದ ಸಿಟಿ ರವಿ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಸುರೇಶ್ ಗೌಡ, ಡಾ.ಕೆ.ಅನ್ನದಾನಿ, ಪ್ರೀತಂಗೌಡ, ಸೇರಿ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾವಿರಾರು ಸಾರ್ವಜನಿಕರು ಭಾಗಿಯಾದರು’ ಎಂದು ಜೆಡಿಎಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
‘ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದಲ್ಲಿ ಜಾತ್ಯತೀತಿ ಜನತಾದಳ ಮತ್ತು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದೆ. ಬಿಜೆಪಿ ಹಿರಿಯ ನಾಯಕರಾದ ಸಿಟಿ ರವಿ ಅವರು, ಮಾಜಿ ಶಾಸಕ ಪ್ರೀತಂಗೌಡ, ನಮ್ಮ ಪಕ್ಷದ ಮಾಜಿ ಶಾಸಕರಾದ ಸುರೇಶ್ ಗೌಡ, ಸಿ.ಎಸ್.ಪುಟ್ಟರಾಜು, ಡಾ.ಕೆ.ಅನ್ನದಾನಿ ಸೇರಿ ಎರಡೂ ಪಕ್ಷಗಳ ರಾಜ್ಯ, ಜಿಲ್ಲಾ ಮುಖಂಡರು ಹಾಗೂ ಅಸಂಖ್ಯಾತ ಕಾರ್ಯಕರ್ತರು ಭಾಗಿಯಾಗಿದ್ದರು’ ಎಂದು ಹೆಚ್.ಡಿ ಕುಮಾರಸ್ವಾಮಿ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಸಹಿತಿ ಪೋಸ್ಟ್ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಹನುಮ ಧ್ವಜ ತೆರವು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ; ಒಬ್ಬರ ಕಣ್ಣಿಗೆ ಏಟು ಬಿದ್ದಿದೆ. ಕಣ್ಣು ಹೋಗಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಣ್ಣು ತಂದು ಕೊಡುತ್ತಿತ್ತಾ? ಪೊಲೀಸರೇ ಎಚ್ಚರವಾಗಿರಿ. ಎಷ್ಟು ದಿನ ನಿಮ್ಮ ಆಟ ನಡೆಯುತ್ತದೆ ನಾನು ನೋಡುತ್ತೇನೆ. ಯಾವಾನೋ ಹೇಳುತ್ತಾನೆ ಅಂತಾ ಹೇಗೆ ಬೇಕೋ ಹಾಗೇ ಕೆಲಸ ಮಾಡುವುದನ್ನು ನಾವು ಒಪ್ಪಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಕೆರಗೋಡು ಗ್ರಾಮದ ಧ್ವಜ ವಿವಾದದ ಸಂಘರ್ಷಕ್ಕೆ ಸರ್ಕಾರವೆ ಕಾರಣ. ಈ ಘಟನೆಗೆಲ್ಲ ಕಾರಣ ಮಂಡ್ಯ ಜಿಲ್ಲಾಧಿಕಾರಿ; ಅವರನ್ನು ಮೊದಲು ಇಲ್ಲಿಂದ ಹೊರಗೆ ಕಳುಹಿಸಿ. ಹನುಮಂತನ ಕೆಣಕ್ಕಿದ್ದಕ್ಕೆ ಲಂಕ ದಹನವಾಯ್ತು. ಅದೇ ರೀತಿ ನಿಮ್ಮ ಅವನತಿ ಆಗುತ್ತದೆ. ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದರೆ ಸಾಲದು, ನಿಮ್ಮಲ್ಲಿ ರಾಮನ ನಡವಳಿಕೆ ಇರಬೇಕು. ಇಲ್ಲಿ ನಡೆದಿರುವ ಲಾಠಿ ಚಾರ್ಜ್ ಸರ್ಕಾರದ ರಾಕ್ಷಸಿ ಪ್ರವೃತ್ತಿ ತೋರಿಸುತ್ತದೆ. ನಿಮ್ಮ ತಪ್ಪು ತಿದ್ದಿಕೊಳ್ಳಿ. ರಾಜಕೀಯ ಮಾಡಿದ್ದು ನೀವು. ಅಧಿಕಾರದ ಅಮಲಿನಲ್ಲಿ ದೈಹಿಕ ಹಲ್ಲೆ ಮಾಡಿಸಿದ್ದೀರಿ. ಈ ಹೋರಾಟ ಇಲ್ಲಿಗೆ ನಿಲ್ಲಿಸುವ ಪ್ರಶ್ನೆ ಇಲ್ಲ. ನಮ್ಮ ಕಾರ್ಯಕರ್ತರಿಗೆ ದೈಹಿಕವಾಗಿ ಪೆಟ್ಟು ಕೊಟ್ಟಿದ್ದೀರಿ. ಇದಕ್ಕೆ ಅಧಿಕಾರಿಗಳಿಗೆ ಪ್ರಾಯಶ್ಚಿತ್ತವಾಗಲೇ ಬೇಕು’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ; ಕೆರಗೋಡು ಧ್ವಜ ವಿವಾದ: ಬಿಜೆಪಿ-ಆರ್ಎಸ್ಎಸ್ ಎಂಬ ದೇಶದ್ರೋಹಿಗಳಿಗೆ ಹೆದರುವುದುಂಟೆ ಎಂದ ಕಾಂಗ್ರೆಸ್