ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರು ಮಾಡಿರುವ ಯಡವಟ್ಟು ಬಿಜೆಪಿಗೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಬಿಜೆಪಿ ಪಕ್ಷದ ಕೇರಳ ರಾಜ್ಯ ಘಟಕವು ಬಿಡುಗಡೆ ಮಾಡಿರುವ ಪ್ರೋಮೋ ಸಾಂಗ್ನಲ್ಲಿ “ಭ್ರಷ್ಟಾಚಾರಕ್ಕೆ ಹೆಸರಾಗಿರುವ ಕೇಂದ್ರದ ಸರ್ಕಾರವನ್ನು” ಸೋಲಿಸುವಂತೆ ಜನರಿಗೆ ಕರೆ ನೀಡಲಾಗಿದೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪಕ್ಷದ ನಾಯಕತ್ವದ ಗಮನಕ್ಕೆ ಬಂದಿದ್ದು, ಎಲ್ಲಾ ರೀತಿಯ ಪ್ರತಿಕ್ರಿಯೆಗಳನ್ನು ಗಮನಿಸಲಾಗಿದೆ. ನಂತರ ಡೆಕ್ಕನ್ ಹೆರಾಲ್ಡ್ ಪ್ರಕಾರ ಬಿಜೆಪಿ ರಾಜ್ಯ ನಾಯಕತ್ವವು ವಿಡಿಯೊ ಬಿಡುಗಡೆಗೆ ಕಾರಣರಾದವರಲ್ಲಿ ವಿವರಣೆಯನ್ನು ಕೇಳಿದೆ ಎಂದು ಹೇಳಲಾಗಿದೆ.
ಮೂಲಗಳನ್ನು ಉಲ್ಲೇಖಿಸಿ, ಪ್ರೋಮೋ ವಿಡಿಯೋದಲ್ಲಿ ಬಳಸಲಾದ ಆಡಿಯೊ (ಹಾಡು) ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ದಿನಗಳ ಹಿಂದಿನದು ಎಂದು ಪತ್ರಿಕೆ ಹೇಳಿದೆ. 2014ರ ಚುನಾವಣೆಗೆ ಪೂರ್ವಭಾವಿಯಾಗಿ ಈ ಹಾಡನ್ನು ಸಿದ್ಧಪಡಿಸಲಾಗಿತ್ತು. ಯುಪಿಎ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಎಂಬ ಸಂದೇಶವನ್ನು ಸಾರಲು ಈ ಆಡಿಯೋವನ್ನು ಹಂಚಿಕೊಳ್ಳಲಾಗಿತ್ತು.
ಮತ್ತೊಂದೆಡೆ ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಫೆಬ್ರವರಿ 20ರಂದು ಎಸ್ಸಿ ಮತ್ತು ಎಸ್ಟಿ ನಾಯಕರ ಜೊತೆ ಔತನ ಕೂಟದಲ್ಲಿ ಭಾಗವಹಿಸಲಿದ್ದಾರೆ ಎಂಬ ಪೋಸ್ಟರ್ನ ಇನ್ನೊಂದು ವಿವಾದವನ್ನು ಸೃಷ್ಟಿಸಿದೆ. ಪೋಸ್ಟರ್ ವಿರುದ್ಧ ವ್ಯಾಪಕವಾದ ಟೀಕೆ ವ್ಯಕ್ತವಾಗಿದ್ದು, ಪೋಸ್ಟರ್ ಬಿಜೆಪಿಯ ಮೇಲ್ಜಾತಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸುರೇಂದ್ರನ್, ಎಸ್ಸಿ ಮತ್ತು ಎಸ್ಟಿ ಮುದಾಯಗಳು ಬಿಜೆಪಿಗೆ ಹತ್ತಿರವಾಗುತ್ತಿರುವ ಬಗ್ಗೆ ಅಸಮಾಧಾನ ಹೊಂದಿರುವವರು ಸೃಷ್ಟಿಸುತ್ತಿರುವ ಅನಗತ್ಯ ವಿವಾದ ಇದು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಕೇರಳದ ಮೇಲೆ ಕಣ್ಣಿಟ್ಟಿದೆ. ಬಿಜೆಪಿಗೆ ಕೇರಳದಲ್ಲಿ ದೀರ್ಘಕಾಲದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಕೇರಳದ ದೇವಾಲಯಗಳಿಗೆ ಭೇಟಿ ನೀಡಿದ್ದರು ಮತ್ತು ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯದ ನಾಯಕರನ್ನು, ಪಾದ್ರಿಗಳನ್ನು ಭೇಟಿ ಮಾಡಿದ್ದರು. ಕೇರಳದಲ್ಲಿ ಏನಾದರೂ ಮಾಡಿ ಈ ಬಾರಿ ಖಾತೆಯನ್ನು ತೆರೆಯಬೇಕು ಎಂದು ಬಿಜೆಪಿ ಶತಾಯಗತಾಯ ಪ್ರಯತ್ನವನ್ನು ಮಾಡುತ್ತಿದೆ.
ಇದನ್ನು ಓದಿ: ಮೋದಿ ಸರಕಾರದಿಂದ ನಿರ್ದಿಷ್ಟ ಖಾತೆ, ಪೋಸ್ಟ್ಗಳನ್ನು ನಿರ್ಬಂಧಿಸಲು ಸೂಚನೆ: ಇದೇ ಮೊದಲ ಬಾರಿಗೆ ಮಾಹಿತಿ ಬಿಚ್ಚಿಟ್ಟ ಎಕ್ಸ್(X)