ಆಂಧ್ರ ರಾಜಕೀಯದಲ್ಲಿ ಅಣ್ಣ, ತಂಗಿಯ ನಡುವಿನ ಸಮರ ತೀವ್ರಗೊಂಡಿದೆ. ವೈಎಸ್ಆರ್ಸಿಪಿ ನಾಯಕ ಮತ್ತು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿಯಾಗಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ ರೆಡ್ಡಿ ಅವರು ಗೃಹ ಬಂಧನ ಭೀತಿಯಿಂದ ಬುಧವಾರ ಕಾಂಗ್ರೆಸ್ ಕಚೇರಿಯಲ್ಲೇ ರಾತ್ರಿ ಕಳೆದಿದ್ದಾರೆ.
ವಿಜಯವಾಡದ ಪಕ್ಷದ ಕಚೇರಿಯಲ್ಲಿ ನೆಲದ ಮೇಲೆ ಚಾಪೆ ಹಾಕಿ ಶರ್ಮಿಳಾ ನಿದ್ದೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
#WATCH | Andhra Pradesh: APCC chief YS Sharmila Reddy spent the night in her party office in Vijayawada to avoid house arrest. (21.2) pic.twitter.com/JyWSnM9EYS
— ANI (@ANI) February 22, 2024
ಯುವಜನರ ನಿರುದ್ಯೋಗ ಮತ್ತು ವಿದ್ಯಾರ್ಥಿಗಳ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಶರ್ಮಿಳಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ‘ಚಲೋ ಸೆಕ್ರೆಟರಿಯೇಟ್’ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಅದನ್ನು ತಡೆಯುವ ಸಲುವಾಗಿ ಶರ್ಮಿಳಾ ಅವರನ್ನು ಪೊಲೀಸರು ಗೃಹ ಬಂಧನಕ್ಕೆ ಒಳಪಡಿಸುವ ಸಾಧ್ಯತೆಯಿದೆ.
ಬುಧವಾರ ವಿಜಯವಾಡದ ಆಂಧ್ರ ರತ್ನ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವೈಎಸ್ ಶರ್ಮಿಳಾ, ಕಳೆದ ಐದು ವರ್ಷಗಳಲ್ಲಿ ಯುವಕರು, ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಗನ್ ಮೋಹನ್ ರೆಡ್ಡಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
“ನಿರುದ್ಯೋಗಿಗಳ ಪರವಾಗಿ ನಾವು ಪ್ರತಿಭಟನೆಗೆ ಕರೆ ನೀಡಿದರೆ, ನೀವು ನಮ್ಮನ್ನು ಗೃಹಬಂಧನದಲ್ಲಿ ಇರಿಸಲು ಪ್ರಯತ್ನಿಸುತ್ತೀರಾ? ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ನಮಗಿಲ್ಲವೇ? ಪೊಲೀಸರಿಂದ ಮತ್ತು ಗೃಹ ಬಂಧನದಿಂದ ತಪ್ಪಿಸಿಕೊಳ್ಳಲು ಓರ್ವ ಮಹಿಳೆಯಾಗಿ ನಾನು ಕಾಂಗ್ರೆಸ್ ಕಚೇರಿಯಲ್ಲಿ ರಾತ್ರಿ ಕಳೆಯುತ್ತಿರುವುದು ನಿಮಗೆ ನಾಚಿಕೆಗೇಡಿನ ಸಂಗತಿಯಲ್ಲವೇ?” ಎಂದು ಶರ್ಮಿಳಾ ಎಕ್ಸ್ನಲ್ಲಿ ಪ್ರಶ್ನಿಸಿದ್ದಾರೆ.
“ಸಾವಿರಾರು ಪೊಲೀಸರು ನಮ್ಮನ್ನು ಸುತ್ತುವರಿದಿದ್ದಾರೆ. ತಂತಿ ಬೇಲಿ ಹಾಕಿ ನಮ್ಮನ್ನು ಒತ್ತೆಯಾಳಾಗಿ ಇರಿಸಲಾಗಿದೆ. ನಿರುದ್ಯೋಗಿಗಳ ಪರ ನಿಂತರೆ ಬಂಧಿಸುತ್ತಿದ್ದಾರೆ. ನಮ್ಮನ್ನು ತಡೆಯಲು ಯತ್ನಿಸುತ್ತಿರುವುದು ಜಗನ್ ಸರ್ಕಾರದ ಸರ್ವಾಧಿಕಾರಿ ನಡೆಗೆ ಪುರಾವೆಯಾಗಿದೆ. ಸರ್ಕಾರ ನಿರುದ್ಯೋಗಿಗಳ ಕ್ಷಮೆಯಾಚಿಸಬೇಕು” ಎಂದು ಶರ್ಮಿಳಾ ಆಗ್ರಹಿಸಿದ್ದಾರೆ.
ವೈಎಸ್ ಶರ್ಮಿಳಾ ಅವರು ಜನವರಿ 4 ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದರು. ಜನವರಿ 16ರಂದು ಅವರನ್ನು ಆಂಧ್ರ ಪ್ರದೇಶ ರಾಜ್ಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆಯಾಗಿ ನೇಮಿಸಲಾಗಿದೆ.
ಇದನ್ನೂ ಓದಿ : ಕನ್ನಡಿಗರು ಸೇರಿದಂತೆ ಭಾರತೀಯ ಯುವಕರನ್ನು ಯುದ್ಧಕ್ಕೆ ಕಳುಹಿಸಿದ ರಷ್ಯಾ: ರಕ್ಷಿಸುವಂತೆ ಓವೈಸಿ ಮನವಿ