2018 ಮೇ 22 ರಂದು ತಮಿಳುನಾಡಿನ ತೂತುಕುಡಿ ಜಿಲ್ಲೆಯ ‘ವೇದಾಂತ’ ಕಂಪೆನಿಯ ಸ್ಟೆರ್ಲೈಟ್ ಕಾರ್ಖಾನೆಯ ವಿರುದ್ಧ ಪ್ರತಿಭಟಿಸುತ್ತಿದ್ದ ನಾಗರಿಕರ ಮೇಲೆ, ಪೋಲಿಸರು ಗುಂಡು ಹಾರಿಸಿದ್ದರಿಂದ 13 ಜನರು ಮೃತಪಟ್ಟಿದ್ದರು. ಇದನ್ನು ಸೋಮವಾರ ಉಲ್ಲೇಖಿಸಿರುವ ಮದ್ರಾಸ್ ಹೈಕೋರ್ಟ್, ಘಟನೆಯು ಪ್ರಜಾಪ್ರಭುತ್ವದ ಮೇಲಿನ ಗಾಯವಾಗಿದ್ದು, ಅದನ್ನು ಮರೆಯಬಾರದು ಎಂದು ಹೇಳಿದೆ.
ಈ ಘಟನೆಯು ದೇಶದಾದ್ಯಂತ ತೀವ್ರ ಆಕ್ರೋಶ ಹುಟ್ಟುಹಾಕಿತ್ತು, ಹೀಗಾಗಿ ನಂತರ ಕಾರ್ಖಾನೆಯನ್ನು ಮುಚ್ಚಲಾಗಿತ್ತು. ತೂತುಕುಡಿಯ ನಿವಾಸಿಗಳು ಸ್ಟೆರ್ಲೈಟ್ ಕಾರ್ಖಾನೆಯು ಪ್ರದೇಶದ ವಾಯು ಮತ್ತು ಜಲ ಸಂಪನ್ಮೂಲಗಳನ್ನು ಕಲುಷಿತಗೊಳಿಸಿದೆ ಎಂದು ನಿರಂತರವಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ವೇದಾಂತ ಸ್ಟೆರ್ಲೈಟ್ ವಿರೋಧಿ ಹಿಂಸಾಚಾರ: ರಜನಿಕಾಂತ್ಗೆ ಸಮನ್ಸ್
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು(ಎನ್ಎಚ್ಆರ್ಸಿ) ಗುಂಡಿನ ದಾಳಿಯ ತನಿಖೆಯನ್ನು ಪುನಃ ಮಾಡಬೇಕು ಎಂದು ಮದ್ರಾಸ್ ಹೈಕೋರ್ಟ್ಗೆ ಸಲ್ಲಿಕೆಯಾದ ಅರ್ಜಿಯನ್ನು ಆಲಿಸುವಾಗ, ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಅವರಿದ್ದ ಪೀಠವು ಈ ಅವಲೋಕನ ಮಾಡಿದೆ.
“ಈ ಘಟನೆ ನಿಜವಾಗಿಯೂ ಸಾರ್ವಜನಿಕರ ಮನಸ್ಸಿನಿಂದ ಹೊರಟು ಹೋಗಿದೆ. ಆದರೆ ಹದಿನೈದು ಅಥವಾ ಹದಿನಾರು ನಾಗರಿಕರು ಪ್ರಾಣ ಕಳೆದುಕೊಂಡರು. ಆ ರೀತಿಯ ಘಟನೆ ನಮ್ಮ ಪ್ರಜಾಪ್ರಭುತ್ವದ ಮೇಲಿನ ಗಾಯವಾಗಿದ್ದು, ನಾವು ಎಂದಿಗೂ ಮರೆಯಬಾರದು” ಎಂದು ಹೇಳಿದ್ದಾರೆ.
ಸರ್ಕಾರೇತರ ಸಂಸ್ಥೆ ಪೀಪಲ್ಸ್ ವಾಚ್ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿ ಟಿಫಾಗ್ನೆ ಅವರು ‘ಎನ್ಎಚ್ಆರ್ಸಿ’ ವಿಚಾರಣೆಯನ್ನು ಪುನಃ ನಡೆಸಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ‘ತೂತುಕುಡಿ ಹತ್ಯಾಕಾಂಡ’ ಸಂತ್ರಸ್ತರನ್ನು ಸರ್ಕಾರಿ ಉದ್ಯೋಗಕ್ಕೆ ನೇಮಕ ಮಾಡಿದ ತಮಿಳುನಾಡು ಸಿಎಂ
ಅವರು ತಮ್ಮ ಅರ್ಜಿಯಲ್ಲಿ, “ಎನ್ಎಚ್ಆರ್ಸಿ ಅಕ್ಟೋಬರ್ 2018 ರಲ್ಲಿ ಗುಂಡಿನ ದಾಳಿಯ ತನಿಖೆಯನ್ನು ಮುಚ್ಚಿದೆ. ಆದರೆ ಅದರ ತನಿಖಾ ತಂಡವು ಸಲ್ಲಿಸಿದ ವರದಿಯ ವಿಷಯಗಳನ್ನು ಇನ್ನೂ ಬಹಿರಂಗಪಡಿಸಿಲ್ಲ” ಎಂದು ಹೇಳಿದ್ದಾರೆ.
ಹೆನ್ರಿ ಟಿಫಾಗ್ನೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಗಸ್ಟ್ 9 ರಂದು ವಿಚಾರಣೆ ನಡೆಸಲಾಗಿತ್ತು. ಆಗ ಎನ್ಎಚ್ಆರ್ಸಿಯು ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯದೊಂದಿಗೆ ಸಮಯ ಕೋರಿತ್ತು. ಅದರಂತೆ ಹೈಕೋರ್ಟ್ ಕೂಡಾ ಸೋಮವಾರದವರೆಗೆ ಸಮಯ ನೀಡಿತ್ತು.
ಸೋಮವಾರದಂದು ಎನ್ಎಚ್ಆರ್ಸಿ ವರದಿಯನ್ನು ಮೊಹರು ಮಾಡಿದ ಕವರ್ನಲ್ಲಿ ನ್ಯಾಯಾಲಯದ ಮುಂದೆ ಸಲ್ಲಿಸಿದೆ. ಆದರೆ ಸದ್ಯಕ್ಕೆ ವರದಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ವರದಿಯ ಪ್ರತಿಗಳನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್, ಅರ್ಜಿದಾರರು ಮತ್ತು ರಾಜ್ಯ ಸರ್ಕಾರಕ್ಕೆ ಕಳುಹಿಸುವಂತೆ ಹೈಕೋರ್ಟ್ ಆದೇಶಿಸಿದೆ ಮತ್ತು ತನಿಖೆಯನ್ನು ಅದರ ತಾರ್ಕಿಕ ಅಂತ್ಯಕ್ಕೆ ತರಲು NHRC ಗೆ ಸೂಚಿಸಿದೆ.
ಇದನ್ನೂ ಓದಿ: ಪ್ಯಾಲೆಸ್ಟೀನೀಯರ ಹೋರಾಟ; ದಬ್ಬಾಳಿಕೆಯ ವಿರೋಧ ಅದು ಜಗಳಗಂಟತನವಲ್ಲ
ಈ ದೇಶದ ನ್ಯಾಯಾಂಗ ಜನತೆಯ ಪರವಾಗಿದೆ. ಈಗ ಇದೊಂದೇ ಸಮಾಧಾನಕರ ವಿಚಾರ.
ನ್ಯಾಯಾಂಗವೆಂದರೆ ಹೀಗಿರಬೇಕು.ನಮ್ಮ ಜನತೆಗೆ ಜಯ ಕೊಟ್ಟ ನ್ಯಾಯಾಂಗಕ್ಕೂ ಜಯವಾಗಲಿ.