ಕೇರಳದ ಕೋಝಿಕ್ಕೋಡ್ನಲ್ಲಿ ರೈಲಿಗೆ ಬೆಂಕಿ ಹಚ್ಚಿ ಮೂವರನ್ನು ಕೊಂದು ಎಂಟು ಮಂದಿಗೆ ಸುಟ್ಟ ಗಾಯಗಳಾಗಲು ಕಾರಣವಾದ ಆರೋಪಿಯ ವಿರುದ್ಧ ಕೇರಳ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಿದ್ದಾರೆ.
ಎಪ್ರಿಲ್ 2ರಂದು ಆಲಪ್ಪುಳ-ಕಣ್ಣೂರು ಎಕ್ಸ್ಪ್ರೆಸ್ನ ಕೋಚ್ ಸಂಖ್ಯೆ ಡಿ1ಗೆ ಬೆಂಕಿ ಹತ್ತಿಸುವ ದ್ರವವನ್ನು ಸಿಂಪಡಿಸಿ ಬೆಂಕಿ ಹಚ್ಚಿದ ಆರೋಪದ ಮೇಲೆ ದೆಹಲಿಯ ನಿವಾಸಿ ಶಾರುಖ್ ಸೈಫಿ ಎಂಬಾತನನ್ನು ಏಪ್ರಿಲ್ 4ರಂದು ಬಂಧಿಸಲಾಯಿತು. ಸೈಫಿಯನ್ನು ಏಪ್ರಿಲ್ 5ರಂದು ಮಹಾರಾಷ್ಟ್ರದ ರತ್ನಗಿರಿ ನಗರದಲ್ಲಿ ಪೊಲೀಸರು ವಶಕ್ಕೆ ಪಡೆದರು.
ಜೀವಹಾನಿಗೆ ಕಾರಣವಾಗುವ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಯುಎಪಿಎಯ ಸೆಕ್ಷನ್ 16 ರ ಅಡಿಯಲ್ಲಿ ಪ್ರಕರಣವನ್ನು ಗುರುತಿಸಲಾಗಿದೆ. ಸೈಫಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯಾಗುವಂತೆ ಪ್ರಕರಣ ದಾಖಲಾಗಿದೆ ಎಂದು ಕೋಝಿಕ್ಕೋಡ್ ನಗರ ಪೊಲೀಸ್ ಕಮಿಷನರ್ ರಾಜ್ಪಾಲ್ ಮೀನಾ ಭಾನುವಾರ ಹೇಳಿರುವುದಾಗಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಇದನ್ನೂ ಓದಿರಿ: ಪುಲ್ವಾಮಾ ದಾಳಿ ಕುರಿತ ಸತ್ಯಪಾಲ್ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯೆ
ಈ ಹಿಂದೆ ಪೊಲೀಸರು ಸೈಫಿ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 326ಎ (ಆಸಿಡ್ ಇತ್ಯಾದಿಗಳ ಬಳಕೆಯಿಂದ ಘೋರವಾದ ಗಾಯವನ್ನು ಉಂಟುಮಾಡುವುದು), 436 (ಬೆಂಕಿ ಮತ್ತು ಸ್ಫೋಟಕ ವಸ್ತುಗಳಿಂದ ಕಿಡಿಗೇಡಿತನ), 438 (ಬೆಂಕಿ ಅಥವಾ ಸ್ಫೋಟಕಗಳಿಂದ ದುಷ್ಕೃತ್ಯ ಎಸಗುವ ಪ್ರಯತ್ನ) ಮತ್ತು ಭಾರತೀಯ ರೈಲ್ವೇ ಕಾಯಿದೆಯ ಸೆಕ್ಷನ್ 151 (ರೈಲ್ವೆ ಆಸ್ತಿ ಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ಹೀಗೆ ಬೆಂಕಿ ಇಡುವಲ್ಲಿ ಭಯೋತ್ಪಾದನೆಯ ಉದ್ದೇಶವಿದೆ” ಎಂದು ನ್ಯಾಯಾಲಯಕ್ಕೆ ಕೇರಳ ಪೊಲೀಸರ ವಿಶೇಷ ತನಿಖಾ ತಂಡವು ವರದಿ ಸಲ್ಲಿಸಿದ ನಂತರ ಯುಎಪಿಎ ಅಡಿಯಲ್ಲಿ ಆರೋಪಗಳನ್ನು ಸೇರಿಸಲಾಯಿತು.
ಈ ಕೃತ್ಯದ ಹಿಂದೆ ಸೈಫಿಯ ಉದ್ದೇಶವೇನಿತ್ತು ಎಂಬುದರ ಕುರಿತು ಪೊಲೀಸರು ಇನ್ನೂ ಹೇಳಿಕೆಯನ್ನು ನೀಡಿಲ್ಲ. ಈತ ಕಾರ್ಪೆಂಟರ್ ಆಗಿ ಉತ್ತರ ಪ್ರದೇಶದ ನೋಯ್ಡಾದಲ್ಲಿದ್ದ. ನವದೆಹಲಿಯ ಶಾಹೀನ್ ಬಾಗ್ನಲ್ಲಿ ವಾಸವಿದ್ದ. ಈ ಪ್ರದೇಶಗಳಿಗೂ ಈತನ ಕೃತ್ಯಕ್ಕೂ ಏನಾದರೂ ಸಂಪರ್ಕವಿದೆಯೇ ಎಂದು ತಿಳಿಯಲು ಆರೋಪಿಯ ಸಾಮಾಜಿಕ ಮಾಧ್ಯಮ ಚಟುವಟಿಕೆಗಳು ಮತ್ತು ಫೋನ್ ಕರೆ ದಾಖಲೆಗಳನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.