ಉತ್ತರ ಪ್ರದೇಶದಲ್ಲಿ ಪೊಲೀಸರ ಭದ್ರತೆಯಲ್ಲೇ ಗ್ಯಾಂಗ್ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಅತೀಕ್ ಹಾಗೂ ಆಶ್ರಫ್ನನ್ನು ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಯನ್ನು ”ಕಾನೂನು ಸುವ್ಯವಸ್ಥೆಯ ಕುಸಿತ ಮತ್ತು ರಾಜ್ಯದಲ್ಲಿ ಆಘಾತಕಾರಿ, ಲಜ್ಜೆಗೆಟ್ಟ ಅರಾಜಕತೆ ತಾಂಡವಾಡುತ್ತಿದೆ” ಎಂದು ಬ್ಯಾನರ್ಜಿ ಬಣ್ಣಿಸಿದ್ದಾರೆ.
”ಪೊಲೀಸರು ಮತ್ತು ಮಾಧ್ಯಮದವರ ಎದುರುಗಡೆಯೇ ಅಪರಾಧಿಗಳು ನಿರ್ಭೀತಿಯಿಂದ ಕಾನೂನನ್ನು ಕೈಗೆತೆಗೆದುಕೊಂಡು ಆ ಇಬ್ಬರಿಗೂ ಗುಂಡು ಹೊಡೆದು ಸಾಯಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಉತ್ತರ ಪ್ರದೇಶ ಸರ್ಕಾರ ಅಸಮರ್ಥವಾಗಿದೆ. ಇದು ನಾಚಿಕೆಗೇಡಿನ ಕೃತ್ಯ” ಎಂದು ಕರೆದಿದ್ದಾರೆ.
”ಇದು ಬಿಜೆಪಿಯ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಎನ್ಕೌಂಟರ್ಗಳು ಹಾಗೂ ಕೊಲೆಗಳು ಸಾಮಾನ್ಯ ಘಟನೆಯಾದಂತಾಗಿವೆ. ಇಂತಹ ಪ್ರಕರಗಳನ್ನು ಬಿಜೆಪಿ ನಿರ್ಲಕ್ಷಿಸುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಏನಾದರೂ ಸಂಭವಿಸಿದಾಗ ಪಕ್ಷವು ಕೇಂದ್ರೀಯ ಸಂಸ್ಥೆಗಳನ್ನು ಕಳುಹಿಸುತ್ತದೆ” ಎಂದು ಅವರು ಟೀಕಿಸಿದ್ದಾರೆ.
ಉತ್ತರ ಪ್ರದೇಶದ ಜನರಿಗೆ ಎನ್ಕೌಂಟರ್ಗಳು ಸಾಮಾನ್ಯ ಸಂಗತಿಯಾಗಿದೆ. ಈ ಎನ್ಕೌಂಟರ್ಗಳ ವಿರುದ್ಧ ಅಲ್ಲಿಯ ಜನರು ಪ್ರತಿಭಟಿಸಬೇಕು. ಪಶ್ಚಿಮ ಬಂಗಾಳದಲ್ಲಿ ಏನಾದರೂ ಸಂಭವಿಸಿದರೆ, ಅವರು (ಬಿಜೆಪಿ) ಕೇಂದ್ರ ಏಜೆನ್ಸಿಗಳನ್ನು ಕಳುಹಿಸುತ್ತಾರೆ. ಬಿಜೆಪಿ ಡಬಲ್ ಇಂಜಿನ್… ಡಬಲ್ ಸ್ಟ್ಯಾಂಡರ್ಡ್ ನೀತಿ ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರವು ಎನ್ಕೌಂಟರ್ಗಳನ್ನು ಸಮರ್ಥಿಸಿಕೊಂಡಿದೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ನಾಗರಿಕರನ್ನು ಅಪರಾಧಿಗಳಿಂದ ರಕ್ಷಿಸಲು ಎನ್ಕೌಂಟರ್ಗಳು ಅಗತ್ಯವೆಂದು ಪ್ರತಿಪಾದಿಸುತ್ತಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ ನಕಲಿ ಎನ್ಕೌಂಟರ್ಗಳ ಆರೋಪಗಳಿವೆ ಮತ್ತು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯ ಬಗ್ಗೆ ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.