Homeಮುಖಪುಟಕಂಗೆಡುತ್ತಿರುವ ಪ್ರಜಾಪ್ರಭುತ್ವ ಮತ್ತು ಬೆದರಿದ ರಾಜಕೀಯಕ್ಕೆ ಬಲಿಪಶುಗಳಾದ ಪಠ್ಯಪುಸ್ತಕಗಳು

ಕಂಗೆಡುತ್ತಿರುವ ಪ್ರಜಾಪ್ರಭುತ್ವ ಮತ್ತು ಬೆದರಿದ ರಾಜಕೀಯಕ್ಕೆ ಬಲಿಪಶುಗಳಾದ ಪಠ್ಯಪುಸ್ತಕಗಳು

- Advertisement -
- Advertisement -

ಇತ್ತೀಚಿಗೆ ಎನ್‌ಸಿಇಆರ್‌ಟಿಯ ಪಠ್ಯಪುಸ್ತಕಗಳಲ್ಲಿ ಆದ ಬದಲಾವಣೆಗಳಿಂದ ಸೃಷ್ಟಿಯಾದ ವಿವಾದವು ಒಂದು ದೊಡ್ಡ ಪ್ರಶ್ನೆಯನ್ನು ಎತ್ತಿದೆ. ಭಾರತವನ್ನು ಪ್ರಜಾಪ್ರಭುತ್ವದ ಜನನಿ ಎಂದು ಸಾಬೀತುಪಡಿಸುವ ಅತ್ಯುತ್ಸಾಹದಲ್ಲಿ, ಈ ಸರಕಾರ, ಪ್ರಜಾಪ್ರಭುತ್ವವನ್ನು ಕೊಲೆಗೈದ ಹೊಸ ಮಾದರಿಯ ಜನನಿ ಭಾರತ ಎಂದು ಸಾಬೀತುಪಡಿಸುತ್ತಿದೆಯೇ? ಪಠ್ಯಪುಸ್ತಕಗಳಲ್ಲಿ ಯಾವ ರೀತಿಯಲ್ಲಿ ಯಾವ ಪ್ರಕಾರ ಹಾಗೂ ಯಾವ ನೀತಿಯಿಂದ ಕತ್ತರಿ ಹಾಕಲಾಗಿದೆಯೆಂದರೆ ಈ ಕತ್ತರಿ ಪ್ರಯೋಗಗಳು ಮೇಲೆ ಹೇಳಿದ ಅನುಮಾನವನ್ನು ಗಟ್ಟಿಗೊಳಿಸುತ್ತವೆ. ರಾಜಕೀಯ ಶಾಸ್ತ್ರದ ಪುಸ್ತಕಗಳಲ್ಲಿ ಮಾಡಲಾದ ಬದಲಾವಣೆಗಳು ಭಾರತೀಯ ಪ್ರಜಾಪ್ರಭುತ್ವ ಕುಸಿಯುತ್ತಿರುವ ಬಗ್ಗೆ ಆತ್ಮವಿಶ್ವಾಸದ ಚಿಹ್ನೆಯಾಗಿವೆ.

ಇಲ್ಲಿ ನಾನು ರಾಜಕೀಯ ಶಾಸ್ತ್ರದ ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳ ಮೇಲೆ ವಿಶೇಷ ಲಕ್ಷ್ಯ ನೀಡುತ್ತಿದ್ದೇನೆ. ಇತಿಹಾಸ ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳು ಎಲ್ಲರ ಗಮನ ಸೆಳೆದಿವೆ ಹಾಗೂ ಇತಿಹಾಸಕಾರರು ವಿಸ್ತಾರವಾಗಿ ಚರ್ಚೆ ನಡೆಸಿದ್ದಾರೆ. ಎನ್‌ಸಿಇಆರ್‌ಟಿಯದ್ದೇ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕಗಳಲ್ಲಿ ಆದ ಬದಲಾವಣೆಗಳ ಬಗ್ಗೆ ಅಷ್ಟೊಂದು ಚರ್ಚೆ ಆಗಿಲ್ಲ. ನನಗೆ ಇದರಲ್ಲಿ ವಿಶೇಷ ಆಸಕ್ತಿ ಹೊಂದಿರಲು ಇನ್ನೊಂದು ಕಾರಣ, ಪ್ರೊ ಸುಹಾಸ್ ಪಳಶೀಕರ್ ಮತ್ತು ನನಗೆ 9, 10, 11 ಹಾಗೂ 12ನೆಯ ತರಗತಿಯ ರಾಜಕೀಯ ಶಾಸ್ತ್ರದ ಪುಸ್ತಕಗಳ ಮುಖ್ಯ ಸಲಹಾಕಾರರ ಹೊಣೆಗಾರಿಕೆ ನೀಡಲಾಗಿದೆ. ಭಾರತೀಯ ಪ್ರಜಾಪ್ರಭುತ್ವದಲ್ಲಿ ಮುಂಬರುವ ತಲೆಮಾರಿಗೆ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯ ಬಗ್ಗೆ ಎಂತಹ ಶಿಕ್ಷಣ ನೀಡಬೇಕು, ವಿದ್ಯಾರ್ಥಿಗಳಿಗೆ ರಾಜಕೀಯದಲ್ಲಿ ಹೇಗೆ ಆಸಕ್ತಿ ಕೆರಳಿಸಬೇಕು, ಹೇಗೆ ನಮ್ಮ ಪಠ್ಯಪುಸ್ತಕಗಳು ಆಡಳಿತದಲ್ಲಿರುವ ಪಕ್ಷದ ಅಥವಾ ಅದರ ವಿಚಾರಧಾರೆಯ ವಾಹಕವಾಗದೇ, ಪ್ರಜಾಪ್ರಭುತ್ವದ ಮತ್ತು ಸಾಂವಿಧಾನಿಕ ಮೌಲ್ಯಗಳ ವಾಹಕಗಳಾಗಬಲ್ಲವು ಎಂಬುದರ ಬಗ್ಗೆ ಯೋಚಿಸುವುದರಲ್ಲಿಯೇ ನನ್ನ ಜೀವನದ ಎರಡು ವರ್ಷಗಳನ್ನು ನಾನು ಕಳೆದಿದ್ದೇನೆ.

ರಾಜಕೀಯ ಶಾಸ್ತ್ರದ ಬಗ್ಗೆಯಂತೂ, ಈ ಪಠ್ಯಪುಸ್ತಕಗಳಲ್ಲಿ ರಾಜಕೀಯ ನಿಷ್ಪಕ್ಷಪಾತದ ನಿಯಮ ಪಾಲಿಸುತ್ತ, ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ತೊಂದರೆ ಆಗುವಂತಹ ಅನೇಕ ಸತ್ಯಗಳನ್ನು ಹೇಳಿದ್ದೇವೆ ಎಂದು ನಾನು ವಿಶ್ವಾಸದಿಂದ ನುಡಿಯಬಲ್ಲೆ. 12ನೆಯ ತರಗತಿಯ ಪಠ್ಯಪುಸ್ತಕದಲ್ಲಂತೂ ಇಡೀ ಒಂದು ಅಧ್ಯಾಯದಲ್ಲಿ ತುರ್ತು ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೇರ ಪದಗಳಲ್ಲಿ ನೀಡಲಾಗಿತ್ತು. ಮೊದಲ ಬಾರಿ ಭಾರತೀಯ ಜನಸಂಘಕ್ಕೆ ಪಠ್ಯಪುಸ್ತಕದಲ್ಲಿ ಜಾಗ ಸಿಕ್ಕಿತು, ಅದರೊಂದಿಗೆ ನಕ್ಸಲ್ ಚಳವಳಿ ಬಗ್ಗೆಯೂ ಪಠ್ಯಪುಸ್ತಕಗಳಲ್ಲಿ ಉಲ್ಲೇಖ ಕಾಣಿಸಿಕೊಂಡಿತು. ಗುಜರಾತಿನ ದಂಗೆಗಳಲ್ಲಿ ಆದ ಮುಸ್ಲಿಂ ವಿರೋಧಿ ಹಿಂಸೆಯ ಬಗ್ಗೆ ಉಲ್ಲೇಖವಿದ್ದರೆ, 1984ರಲ್ಲಿ ದೆಹಲಿಯಲ್ಲಿ ಸಿಖ್ಖರ ಮಾರಣಹೋಮದ ಉಲ್ಲೇಖವೂ ಇತ್ತು. ಒಂದು ಆರೋಗ್ಯವಂತ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಪ್ರಜಾಪ್ರಭುತ್ವವು, ಬೆಳಕಿನಿಂದ ಕೂಡಿದ ಮತ್ತು ಕತ್ತಲೆಯಾವರಿಸಿದ ತನ್ನ ಬಗೆಗಿನ ಎರಡೂ ಅಂಶಗಳ ಬಗ್ಗೆ ಮಾತನಾಡಬಲ್ಲದು; ಆಡಳಿತದಲ್ಲಿರುವ ಶಕ್ತಿಗಳನ್ನು ಮತ್ತು ವಿಚಾರಗಳನ್ನು ಹೊರತುಪಡಿಸಿ ವಿರೋಧಿ ಶಕ್ತಿಗಳ ಬಗ್ಗೆಯೂ ಮಾತನಾಡಬಲ್ಲದು ಎಂಬ ವಿಶ್ವಾಸದೊಂದಿಗೆ ಈ ಪಠ್ಯಪುಸ್ತಕಗಳನ್ನು ರೂಪಿಸಲಾಗಿತ್ತು.

ಇದನ್ನೂ ಓದಿ: ಅಸ್ಪೃಶ್ಯ, ಅಸಹಾಯಕ ಲೋಕಕ್ಕೆ ಅಕ್ಷರ ಕಲಿಸಿದ ಸಾವಿತ್ರಮ್ಮನನ್ನೇ ಪಠ್ಯಪುಸ್ತಕದಿಂದ ಹೊರಗಿಟ್ಟ ಕಾಲದಲ್ಲಿ ಒಂದು ಸ್ಮರಣೆ

ಈ ಪಠ್ಯಪುಸ್ತಕಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಕತ್ತರಿ ಪ್ರಯೋಗದಿಂದ, ಇವುಗಳಲ್ಲಿದ್ದ ಆತ್ಮವಿಶ್ವಾಸದ ಚಹರೆಯನ್ನು ತಿರುಚಲಾಗಿದೆ. ಕಳೆದ ವಾರ ಎನ್‌ಸಿಇಆರ್‌ಟಿಯು ಮೊದಲು ಘೋಷಿಸಿದ ಬದಲಾವಣೆಗಳಷ್ಟೇ ಅಲ್ಲದೆ, ಇನ್ನೂ ಅನೇಕ ಅಘೋಷಿತ ರೂಪದಲ್ಲಿ ಈ ಪುಸ್ತಕಗಳಲ್ಲಿ ಹತ್ತುಹಲವು ಬದಲಾವಣೆಗಳನ್ನು ಮಾಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಉದಾಹರಣೆಗೆ ಮಹಾತ್ಮ ಗಾಂಧಿಯ ಹತ್ಯೆಯ ನಂತರ ಆಗಿನ ಗೃಹ ಸಚಿವ ಸರದಾರ್ ಪಟೇಲರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿರ್ಬಂಧ ಹೇರಿದ್ದರು ಎಂಬ ತಥ್ಯವು ಕಾಣೆಯಾಗಿದೆ. ಒಂದು ವೇಳೆ ಈ ಪುಟ್ಟ ದ್ರೋಹವನ್ನು ನಿರ್ಲಕ್ಷಿಸಿದರೂ, ಪಠ್ಯಪುಸ್ತಕಗಳ ಬದಲಾವಣೆಗಳ ಬಗ್ಗೆ ಒಂದು ಗಂಭೀರವಾದ ಪ್ರಶ್ನೆ ಉದ್ಭವಿಸುತ್ತದೆ; ಈ ಪಠ್ಯಪುಸ್ತಕಗಳ ಲೇಖಕರ ಅಭಿಪ್ರಾಯ ತೆಗೆದುಕೊಳ್ಳದೇ ಅವುಗಳಲ್ಲಿ ಬದಲಾವಣೆ ಮಾಡುವುದು ನ್ಯಾಯೋಚಿತವೇ? ಅಂದಹಾಗೆ ಇಂದಿಗೂ ಈ ಪಠ್ಯಪುಸ್ತಕಗಳಲ್ಲಿ ನನ್ನ ಹೆಸರು ಮುಖ್ಯ ಸಲಹಾಕಾರರು ಎಂಬ ರೂಪದಲ್ಲಿ ಪ್ರಕಟವಾಗುತ್ತಿದೆ; ಕಳೆದ ಒಂಬತ್ತು ವರ್ಷಗಳಲ್ಲಿ ನನ್ನ ಅಥವಾ ಪಠ್ಯಪುಸ್ತಕ ಸಮಿತಿಯ ಇತರ ಸದಸ್ಯರು ಅಥವಾ ಸಲಹಾಕಾರರಿಂದ ಪಠ್ಯಗಳಲ್ಲಿ ಮಾಡುತ್ತಿರುವ ಬದಲಾವಣೆಗಳ ಬಗ್ಗೆ ಎಂದೂ ಅಭಿಪ್ರಾಯ ಪಡೆದುಕೊಂಡಿಲ್ಲ. ಯಾವ ಪುಸ್ತಕಗಳನ್ನು ಬರೆಯುವುದರಲ್ಲಿ, ದೇಶದ ಹಲವಾರು ಅಗ್ರಗಣ್ಯ ರಾಜಕೀಯಶಾಸ್ತ್ರಜ್ಞರು ಆಳವಾದ ಪರಾಮರ್ಶೆ ಮಾಡಿ, ಪ್ರತಿಯೊಂದು ವಿಷಯ, ಪ್ರತಿಯೊಂದು ಅಂಶ, ಪ್ರತಿಯೊಂದು ಕಾಗುಣಿತವನ್ನು ಅನೇಕ ಬಾರಿ ಪರಿಶೀಲಿಸಿ ರಚಿಸಲಾಗಿದೆಯೋ, ಇಂತಹ ಪುಸ್ತಕಗಳನ್ನು ಒಂದೇ ಏಟಿನಲ್ಲಿ ಕೆಲವು ಅಜ್ಞಾತ ಜನರ ಸಮಿತಿಯ ಮೂಲಕ, ಯಾವುದೇ ಕಾರಣ ನೀಡದೇ ಬದಲಾವಣೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಯಾವ ಸೂಚನೆ ನೀಡುತ್ತದೆ?

ಬದಲಾವಣೆಯ ಪ್ರಕ್ರಿಯೆಯನ್ನು ಹೊರತುಪಡಿಸಿ, ಪಠ್ಯಗಳಲ್ಲಿ ಆದ ಬದಲಾವಣೆಯ ವಿವರಗಳನ್ನು ನೋಡಿದರೆ ಅದು ಕೂಡ ಪ್ರಜಾಪ್ರಭುತ್ವದ ಬಗ್ಗೆ ಇನ್ನೂ ಆಳವಾದ ಮತ್ತು ಗಂಭೀರವಾದ ಆತಂಕ ಸೃಷ್ಟಿಸುತ್ತದೆ. ರಾಜಕೀಯ ಶಾಸ್ತ್ರದಲ್ಲಿ ಯಾವ ಅಂಶಗಳನ್ನು ತೆಗೆದುಹಾಕಲಾಗಿದೆಯೋ, ಅವುಗಳು ನೇರಾನೇರ ಆಡಳಿತಾರೂಢ ಪಕ್ಷ ಮತ್ತು ಅದರ ವಿಚಾರಧಾರೆಯ ಪ್ರತಿಬಿಂಬವಾಗಿವೆ. ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡುವುದು ಯಾವುದಾದರೂ ದೇಶಕ್ಕೆ ಎಷ್ಟು ಘಾತಕವಾಗಬಲ್ಲದು ಎಂಬುದನ್ನು ಹೇಳಲು ಶ್ರೀಲಂಕಾ ಮತ್ತು ಬೆಲ್ಜಿಯಮ್ ದೇಶಗಳ ಉದಾಹರಣೆ ನೀಡಿದ್ದ, ಲೋಕತಂತ್ರ ಮತ್ತು ವೈವಿಧ್ಯದ ಬಗ್ಗೆ 10ನೆಯ ತರಗತಿಗೆ ಇದ್ದ ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳನ್ನು ಹೊರತುಪಡಿಸಿ ಆಗುವ ಬದಲಾವಣೆಗಳ ಬಗ್ಗೆ ಒತ್ತು ನೀಡುವ 10 ಮತ್ತು 12ನೆಯ ಪಠ್ಯಪುಸ್ತಕಗಳಲ್ಲಿ ಇದ್ದ ಜನಾಂದೋಲನಗಳ ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಗುಜರಾತಿನ ದಂಗೆಗಳ ಬಗ್ಗೆ ಇದ್ದ ಉಲ್ಲೇಖವನ್ನು ತೆಗೆದುಹಾಕಲಾಗಿದೆ ಆದರೆ ಸಿಕ್ಖರ ಮಾರಣಹೋಮದ ಭಾಗವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಅದರೊಂದಿಗೆ ತುರ್ತು ಪರಿಸ್ಥಿತಿಯ ಔಪಚಾರಿಕ ವರ್ಣನೆ ಇದೆ ಆದರೆ ಆ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ನ್ಯಾಯಾಂಗ ಮತ್ತು ಮಾಧ್ಯಮದ ನಾಚಿಕೆಗೇಡಿನ ಪಾತ್ರದ ಬಗ್ಗೆ ಇದ್ದ ಭಾಗವನ್ನು ತೆಗೆದುಹಾಕಲಾಗಿದೆ. ಹಾಗಾಗಿ ಇಂದಿನ ಸರಕಾರ ಯಾವ ಪ್ರಶ್ನೆಗಳಿಂದ ಹೆದರಿಕೊಂಡಿದೆ, ಯಾವ ವಿಷಯಗಳ ಬಗ್ಗೆ ಮೌನವಾಗಿರಲು ಬಯಸುತ್ತದೆ ಎಂಬುದು ಈ ಕತ್ತರಿ ಪ್ರಯೋಗದಿಂದ ಸ್ಪಷ್ಟವಾಗುತ್ತದೆ.

ಯಾವ ವಿಷಯಗಳ ಬಗ್ಗೆ ಪಠ್ಯಪುಸ್ತಕಗಳು ಮೌನವಾಗಿರುತ್ತವೋ, ಆ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರು ಮರೆತುಬಿಡುತ್ತಾರೆ ಅಂತೇನಿಲ್ಲ. ಯಾವುದೇ ಪ್ರಜಾಪ್ರಭುತ್ವದಲ್ಲಿ ಜನರ ರಾಜಕೀಯ ಚಿಂತನೆ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕಗಳ ಆಧಾರದ ಮೇಲೆ ಸೃಷ್ಟಿಯಾಗುವುದಿಲ್ಲ; ವಿಶೇಷವಾಗಿ ಎಲ್ಲಿ ಪ್ರಜಾಪ್ರಭುತ್ವವನ್ನು ಮುಗಿಸುವ ಪ್ರಯತ್ನ ನಡೆದಿದೆಯೋ, ಎಲ್ಲಿ ಆಡಳಿತದಲ್ಲಿರುವ ಶಕ್ತಿಗಳು ಹೆದರಿಕೊಂಡಿರುತ್ತವೋ ಅಲ್ಲಂತೂ ಖಂಡಿತ ಇದು ಸಾಧ್ಯವಾಗುವುದಿಲ್ಲ. ಇಂತಹ ದೇಶಗಳಲ್ಲಿ ಆಡಳಿತವರ್ಗ ಸುಳ್ಳು ಹೇಳುತ್ತಿದೆ ಎಂದು ಜನರಿಗೆ ತಿಳಿದಿರುತ್ತದೆ ಹಾಗೂ ಸತ್ಯವನ್ನು ಅರಿಯಲು ತನ್ನದೇ ಆದ ರೀತಿಗಳನ್ನು ಹುಡುಕಿಕೊಳ್ಳುತ್ತಾರೆ. ಹಾಗಾಗಿಯೇ ರಾಜಕೀಯ ಶಾಸ್ತ್ರದಲ್ಲಿ ಪಠ್ಯಪುಸ್ತಕಗಳಲ್ಲಿ ಆದ ಬದಲಾವಣೆಗಳಿಂದ ಆಡಳಿತದಲ್ಲಿರುವ ಪಕ್ಷ ಮತ್ತು ವಿಚಾರಧಾರೆಗೆ ಲಾಭವಾಗುತ್ತದೆ ಎಂಬುದು ಸತ್ಯವಲ್ಲ. ಆದರೆ ಈ ಕಸರತ್ತಿನಿಂದ ಭಾರತೀಯ ಪ್ರಜಾಪ್ರಭುತ್ವ ತನ್ನ ಹಾಗೂ ವಿಶ್ವದ ದೃಷ್ಟಿಯಲ್ಲಿ ಒಂದೆರಡು ಮೆಟ್ಟಿಲು ಕೆಳಗೆ ಕುಸಿದಿರುವುದಂತೂ ಖಂಡಿತ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...