ಯುವ ವಕೀಲರು ಮತ್ತು ಬರಹಗಾರರಾದ ಪುನೀತ್ ಅಪ್ಪು, ವಿಶ್ವ ಕಾವ್ಯ ದಿನದಂದು ಕೊಂದುಬಿಡು ಕೊರೊನಾ ಎಂದು ಕವಿತೆ ಬರೆಯುತ್ತಾರೆ. ದೇಶಕ್ಕೆ ದೇಶವೇ ಕೊರೋನಾದಿಂದ ಪಾರಾಗಲು ಬಯಸುವಾಗ ಇವರೇಕೆ ಕೊಂದುಬಿಡು ಎಂದು ಆಹ್ವಾನ ಕೊಡುತ್ತಿದ್ದಾರೆ? ಪೂರ್ತಿ ಕವನ ಓದಿ ಅರ್ಥವಾದೀತು…
ಕೊಂದುಬಿಡು ಕೊರೋನಾ,
ಹಸಿವಿನಿಂದ ಸತ್ತೆನೆಂಬ ಅಪವಾದ
ನನ್ನ ದೇಶಕ್ಕೆ ಬರದಿರಲಿ,
ಕೊಂದು ಬಿಡು ಶೀತಗಟ್ಟಿ
ಕಣ್ಣು ಮೂಗುಗಳಿಂದ ನೀರು ಸುರಿವಂತೆ
ಜ್ವರವೇರಿ ಮೈಮನಗಳು ಸುಡುವಂತೆ,
ಕೋಮುದಳ್ಳುರಿಗೆ ಸಿಲುಕಿ
ಅನಾಥನಂತೆ ಕಣ್ಣೀರು ಸುರಿಸಿ
ಜೀವಂತ ಸುಟ್ಟು ಸತ್ತೆನೆಂಬ ಅಪವಾದ
ನನ್ನ ದೇಶಕ್ಕೆ ಬರದಿರಲಿ
ಬಾ ಅಪ್ಪಿಬಿಡು ಅರಿವಿಲ್ಲದೇ
ಬೆಚ್ಚಗಿನ ಮೃತ್ಯುಬಾಹು ಬಂಧನದಲ್ಲಿ,
ನನ್ನ ಹುಟ್ಟಿನ ಬಗ್ಗೆ ದಾಖಲೆಯ ನೀಡಲಾರದೆ
ಜನ್ಮಕೊಟ್ಟವಳೇ ತನ್ನ ಮಗುವನ್ನು
ಹೊರದಬ್ಬಿದಳೆಂಬ ಅಪವಾದ
ಎನ್ನ ತಾಯ್ನಾಡಿಗೆ ಬರದಿರಲಿ
ಬಾ ಒಮ್ಮೆ ನಿನ್ನ ಕಬಂಧ ತೋಳುಗಳಲ್ಲಿ
ನುಗ್ಗುನುರಿಗೊಳಿಸು
ಧ್ವನಿಯೆತ್ತಿದವನ ಸದ್ದಡಗಿಸು
ಅಸಹಾಯಕನ ತುಳಿ
ನ್ಯಾಯಕ್ಕೆ ಮೊರೆಯಿಟ್ಟವನ
ಅನ್ಯಾಯವಾಗಿ ಕೊಂದುಬಿಡು,
ಜಾಮೀನು ಸಿಗದೆ
ಜೈಲಿನಲ್ಲೇ ಕೊಳೆತು ಹೋದೆನೆಂಬ ಅಪವಾದ
ನನ್ನ ದೇಶದ ನ್ಯಾಯಾಲಯಗಳಿಗೆ ತಟ್ಟದಿರಲಿ
- 21 – 03 -2020