ಮಹಾತ್ಮಾ ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಹೆಸರಿನಲ್ಲಿ ತೆರೆದಿದ್ದ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರವನ್ನು ಉದ್ಘಾಟನೆಯಾದ ಒಂದೇ ದಿನದಲ್ಲಿ ಮುಚ್ಚಲಾಗಿದೆ. ಬಿಜೆಪಿ ಆಡಳಿತದ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಹಿಂದೂ ಮಹಾಸಭಾ ಗೋಡ್ಸೆ ಜ್ಞಾನಶಾಲೆಯನ್ನು ತೆರೆದಿತ್ತು. ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ಈಗ ಮುಚ್ಚಲಾಗಿದೆ.
ಈ ಕ್ರಮವನ್ನು ಗ್ವಾಲಿಯರ್ ಜಿಲ್ಲಾಡಳಿತ ಮತ್ತು ಪೊಲೀಸರು ಸೆಕ್ಷನ್ 144 ರ ಅಡಿಯಲ್ಲಿ ತೆಗೆದುಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಮಿತ್ ಸಂಘಿ ಹೇಳಿದ್ದಾರೆ. ಇದರ ಭಾಗವಾಗಿ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸುವ ಯಾವುದೇ ಕ್ರಿಯೆಯನ್ನು ಈ ಕೂಡಲೆ ನಿಷೇಧಿಸಬೇಕು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಗಾಂಧಿ ಹಂತಕ ಗೋಡ್ಸೆ ಹೆಸರಿನಲ್ಲಿ ಗ್ರಂಥಾಲಯ ನಿರ್ಮಿಸಿದ ಹಿಂದೂ ಮಹಾಸಭಾ!
ಭಾನುವಾರ ಅಖಿಲ ಭಾರತೀಯ ಹಿಂದೂ ಮಹಾಸಭಾ, ಮಹಾತ್ಮಾ ಗಾಂಧಿಯ ಹಂತಕ ನಾಥೂರಾಂ ಗೋಡ್ಸೆಯ ಹೆಸರಿನಲ್ಲಿ ಗ್ರಂಥಾಲಯವೊಂದನ್ನು ತೆರೆದು, ಇದನ್ನು ಗೋಡ್ಸೆಯ ಜೀವನ ಮತ್ತು ಸಿದ್ಧಾಂತಕ್ಕೆ ಮೀಸಲಾಗಿರಿಸಿತ್ತು. ‘ವಿಶ್ವ ಹಿಂದಿ ದಿವಸ್’ ದಿನದ ಅಂಗವಾಗಿ ಗ್ವಾಲಿಯರ್ನಲ್ಲಿ ಈ ಗ್ರಂಥಾಲಯವನ್ನು ತೆರೆಯಲಾಗಿದ್ದು, ಗೋಡ್ಸೆ ಜ್ಞಾನ ಶಾಲೆ ಎಂದು ಹೆಸರಿಡಲಾಗಿತ್ತು.
‘ಗೋಡ್ಸೆ ಜ್ಞಾನ ಶಾಲೆ’ಯನ್ನು ದೌಲತ್ ಗಂಜ್ನಲ್ಲಿರುವ ಮಹಾಸಭಾ ಕಚೇರಿಯಲ್ಲಿ ಉದ್ಘಾಟಿಸಲಾಗಿದ್ದು, ಇಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಗೋಡ್ಸೆ ಹೇಗೆ ರೂಪಿಸಿದ್ದ ಎನ್ನುವ ವಿವರ, ಅವರ ಲೇಖನಗಳು ಮತ್ತು ಅವರ ಭಾಷಣಗಳ ಕುರಿತ ಸಾಹಿತ್ಯವಿದೆ ಎಂದು ಹೇಳಲಾಗಿತ್ತು. ಇದು ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ನ ಕಮಲನಾಥ್, “ಬಿಜೆಪಿಯು ಗಾಂಧಿ ಸಿದ್ಧಾಂತದೊಂದಿಗಿದೆಯೋ ಅಥವಾ ಗೋಡ್ಸೆ ಸಿದ್ಧಾಂತದೊಂದೊಗಿದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಗಾಂಧಿಯ ಹಂತಕರನ್ನು ಬಹಿರಂಗವಾಗಿ ಪೂಜಿಸಲಾಗುತ್ತಿದೆ. ವೀರರೆಂಬಂತೆ ಬಡ್ತಿ ನೀಡಲಾಗುತ್ತಿದೆ. ಆದರೆ ಬಿಜೆಪಿ ಸರ್ಕಾರ ಜಾಣ ಮೌನಕ್ಕೆ ಜಾರಿದೆ. ಇದು ನಾಚಿಕೆಗೇಡಿನ ವಿಷಯ. ಬಿಜೆಪಿ ಗಾಂಧಿಯ ಸಿದ್ಧಾಂತದೊಟ್ಟಿಗಿದ್ದರೆ, ಈ ಕೂಡಲೇ ಹಿಂದೂ ಮಹಾಸಭಾದ ಈ ಕೃತ್ಯವನ್ನು ತಡೆಗಟ್ಟಬೇಕು. ಇಲ್ಲದಿದ್ದರೆ ಬಿಜೆಪಿಯು ಗೋಡ್ಸೆ ಮತ್ತು ಅವನ ಸಿದ್ಧಾಂತವನ್ನು ಮುಕ್ತವಾಗಿ ರಕ್ಷಿಸುತ್ತಿದೆ ಎಂದು ಒಪ್ಪಿಕೊಳ್ಳಬೇಕು” ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಗೋಡ್ಸೆ ಬೆಂಗಳೂರಿಗೆ ಬಂದ ಸುದ್ದಿಯೂ ಕೂಡಾ… ಪರ್ತಕರ್ತನಾಗಿ ನನ್ನ ಪಾಲಿಗೆ News is Sacred
ಮಹಾಸಭಾದ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಮಾತನಾಡಿ, “ಗೋಡ್ಸೆ ಎಂಬ ನಿಜವಾದ ರಾಷ್ಟ್ರೀಯತಾವಾದಿಯನ್ನು ಜಗತ್ತಿಗೆ ಪರಿಚಯಿಸಲು ಈ ಗ್ರಂಥಾಲಯವನ್ನು ತೆರೆಯಲಾಗಿದೆ. ಅವಿಭಜಿತ ಭಾರತಕ್ಕಾಗಿ ಅವರು ಹೋರಾಡಿ ಸತ್ತರು. ಗೋಡ್ಸೆಯ ನಿಜವಾದ ರಾಷ್ಟ್ರೀಯತೆಯನ್ನು ಇಂದಿನ ಅಜ್ಞಾನಿ ಯುವಕರಲ್ಲಿ ಹುಟ್ಟುಹಾಕುವುದು ಗ್ರಂಥಾಲಯದ ಉದ್ದೇಶ” ಎಂದು ಹೇಳಿದರು.
“ಜವಾಹರಲಾಲ್ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರ ಆಕಾಂಕ್ಷೆಗಳನ್ನು ಈಡೇರಿಸಲು ಭಾರತವನ್ನು ವಿಭಜಿಸಲಾಗಿದೆ. ಇಬ್ಬರೂ ರಾಷ್ಟ್ರವನ್ನು ಆಳಲು ಬಯಸಿದ್ದರು, ಆದರೆ ಗೋಡ್ಸೆ ಅದನ್ನು ವಿರೋಧಿಸಿದರು” ಎಂದು ಭಾರದ್ವಾಜ್ ಹೇಳಿದರು.
“ಗಾಂಧಿಯ ಹತ್ಯೆ ಮಾಡಲು ಇಲ್ಲಿ ಸಂಚು ರೂಪಿಸಲಾಗಿದ್ದರಿಂದ ಗ್ವಾಲಿಯರ್ನಲ್ಲಿ ಗೋಡ್ಸೆಗೆ ಮೀಸಲಾಗಿರುವ ಗ್ರಂಥಾಲಯದ ನಿರ್ಮಿಸಲು ನಿರ್ಧರಿಸಲಾಗಿದೆ. ಅಲ್ಲಿ ಪಿಸ್ತೂಲ್ ಸಹ ಖರೀದಿಸಿಡಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಗೋಡ್ಸೆ ಮತ್ತು ಮೋದಿಯವರು ಒಂದೇ ಸಿದ್ಧಾಂತವನ್ನು ನಂಬುತ್ತಾರೆ : ರಾಹುಲ್ ಗಾಂಧಿ