alit
ಶೋಭಮ್ಮ ಹರಿಜನ ಎಂಬವರಿಗೆ ಸೇರಿದ ಹಸು ರಾಂಪುರದ ಅಮರೇಶಪ್ಪ ಎಂಬುವವರ ಹೊಲಕ್ಕೆ ನುಗ್ಗಿತ್ತು. ಇದೇ ಕಾರಣಕ್ಕೆ ಆ ದಲಿತ ಮಹಿಳೆಯನ್ನು ಆರೋಪಿಯ ಮನೆಯ ಮುಂದೆ ಕಂಬಕ್ಕೆ ಕಟ್ಟಿ ಹಾಕಿ, ನಂತರ ಹಲ್ಲೆ ನಡೆಸಿ, ಚಪ್ಪಲಿಯಿಂದ ಥಳಿಸಿ, ಜಾತಿ ನಿಂದನೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಆರೋಪಿ ಅಮರೇಶ ಕುಂಬಾರನ ಈ ವರ್ತನೆ ಅದೇ ಹೊಸತಲ್ಲ ಎಂಬುದು ಹಲ್ಲೆಗೊಳಗಾದ ದಲಿತ ಮಹಿಳೆಯ ಕುಟುಂಬಸ್ಥರು ಹೇಳುವ ಮಾತು. ಆತ ಮೊದಲಿಂದಲೂ ದಲಿತ ಸಮುದಾಯವನ್ನು ನಿಂದಿಸುತ್ತಾ ಬರುತ್ತಿದ್ದಾನೆ. ಆತನ ಮೇಲೆ ಕ್ರಮ ಜರುಗಿಸಬೇಕು ಎಂದು ಗ್ರಾಮದ ದಲಿತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ
ಹಲ್ಲೆಗೊಳಗಾದ ಮಹಿಳೆಯನ್ನು ಗಂಗಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಲಿತ ಮಹಿಳೆ ಶೋಭಮ್ಮರ ಮೇಲೆ ಅಮರೇಶ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಕೂಡ ಆಗಿದೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಎಸ್ಸಿ ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿದ್ದೇವೆ. ತನ್ನ ಹಸುವನ್ನು ಬಿಡಿಸಿಕೊಳ್ಳಲು ಮಹಿಳೆಯು ಅರೋಪಿ ಅಮರೇಶನ ಮನೆಗೆ ಹೋದಾಗ ಆತ ಚಪ್ಪಲಿಯಿಂದ ಹೊಡೆದಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಕೆಯ ಸಮುದಾಯವನ್ನು ಅವಮಾನ ಮಾಡಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ಘಟನೆ ಬಳಿಕ ಮಹಿಳೆಯ ಸಂಬಂಧಿಕರು ಅಮರೇಶ ಮನೆಗೆ ಹೋಗಿ ಮಾತನಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ವಿವಿಧೆಡೆ ದಲಿತರ ಮೇಲೆ ಸವರ್ಣೀಯರು ದೌರ್ಜನ್ಯ ಎಸಗುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ. ಕೊಪ್ಪಳದ ಈ ಘಟನೆಯ ರೀತಿಯಲ್ಲೇ ಕಳೆದ ವಾರ ಹಾಸನ ಜಿಲ್ಲೆಯಲ್ಲಿ ನಡೆದಿತ್ತು. ಕಾಫಿ ಬೀಜ ಕದಿಯಲು ಬಂದಿದ್ದ ಎಂದು ಆರೋಪಿಸಿ ಕಾಫಿ ತೋಟದ ಮಾಲೀಕರು ಯುವಕನೊಬ್ಬನನ್ನು ಹಿಡಿದು ಕೈಕಾಲು ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೆಹಳ್ಳಿ ಬಳಿಯ ಬೆಳ್ಳಾವರ ಗ್ರಾಮದಲ್ಲಿ ನಡೆದಿತ್ತು.
ಕಿತ್ತಾವರ ಗ್ರಾಮದ ಮಂಜುನಾಥ್ ಸಂತ್ರಸ್ತ ಯುವಕನ. ಆತನ ಮೇಲೆ ನಡೆದ ಅಮಾನವೀಯ ದೌರ್ಜನ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಆ ದಲಿತ ಯುವಕ ಮಂಜುನಾಥ್ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿದ್ದ ದುಷ್ಕರ್ಮಿಗಳು, ಮಂಜುನಾಥ್ನನ್ನು ಮರಕ್ಕೆ ನೇತುಹಾಕಿ, ಅವಾಚ್ಯವಾಗಿ ನಿಂದಿಸುತ್ತಾ ಥಳಿಸಿದ್ದಾರೆ. ಸಂತ್ರಸ್ತ ಯುವಕನ ಸೊಂಟಕ್ಕೆ ಮತ್ತು ಕಾಲಿನ ಹೆಬ್ಬೆರಳಿಗೆ ಹಗ್ಗ ಕಟ್ಟಿ ಚಿತ್ರಹಿಂಸೆ ನೀಡಿದ್ದಲ್ಲದೆ, ನಾಯಿಯನ್ನು ಛೂ ಬಿಟ್ಟು ದಾಳಿ ಮಾಡಿಸಲಾಗಿದೆ ಎಂದು ಅರೋಪಿಸಲಾಗಿದೆ.
ದುಷ್ಕರ್ಮಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನಿಗೆ ಅರೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕೆತ್ಸೆಗೆ ಬೇಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ನಾನುಗೌರಿ.ಕಾಂಗೆ ಹೇಳಿವೆ.