ಅಪರಾಧ ಹಿನ್ನೆಲೆಯುಳ್ಳ ಲ್ಯಾಂಡ್ ಏಜೆಂಟ್ ಕುರಿತು ಫೆಬ್ರವರಿ 6ರಂದು ಮಹಾರಾಷ್ಟ್ರ ರತ್ನಗಿರಿ ಮೂಲದ ಸ್ಥಳೀಯ ದೈನಿಕವು ಮೊದಲ ಪುಟದ ವರದಿಯನ್ನು ಪ್ರಕಟಿಸಿದ ಕೆಲವೇ ಗಂಟೆಗಳ ಬಳಿಕ, ವರದಿ ಬರೆದ ಪತ್ರಕರ್ತನನ್ನು ಕೊಲ್ಲಲಾಗಿದೆ. ಕಾರು ಹತ್ತಿಸಿ ಗಾಯಗೊಳಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವರದಿಗಾರನು ಕೊನೆಯುಸಿರೆದಿದ್ದಾನೆ.
‘ಮಹಾನಗರಿ ಟೈಮ್ಸ್’ ಪತ್ರಿಕೆಯ ಪ್ರಾದೇಶಿಕ ಮುಖ್ಯಸ್ಥ 48 ವರ್ಷದ ಶಶಿಕಾಂತ್ ವಾರಿಷೆ ಅವರು ಸ್ಥಳೀಯ ಪ್ರಭಾವಿ ವ್ಯಕ್ತಿಯಾದ ಪಂಢರಿನಾಥ್ ಅಂಬರ್ಕರ್ ಅವರ ಬಗ್ಗೆ ವರದಿಯನ್ನು ಬರೆದಿದ್ದರು.
“ರಿಫೈನರಿ ಪರ ಏಜೆಂಟ್ ಆಗಿರುವ ವ್ಯಕ್ತಿಯು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜೊತೆಯಲ್ಲಿ ತನ್ನ ಫೋಟೋಗಳನ್ನು ಏಕೆ ಹಂಚಿಕೊಳ್ಳುತ್ತಿದ್ದಾನೆ?” ಎಂದು ವರದಿಯಲ್ಲಿ ಗಮನ ಸೆಳೆಯಲಾಗಿತ್ತು.
ಕೊಂಕಣಕ್ಕೆ ಸಂಸ್ಕರಣಾಗಾರ ಯೋಜನೆಯನ್ನು ತಂದಿದ್ದಕ್ಕಾಗಿ ಪ್ರಧಾನಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿ ಲ್ಯಾಂಡ್ ಏಜೆಂಟ್ ತನ್ನ ಫೋಟೋಗಳೊಂದಿಗೆ ಪೋಸ್ಟರ್ಗಳನ್ನು ಹಾಕಿದ್ದನು.
ಸುದ್ದಿಯು ವಾರಿಷೆ ಅವರ ಬೈಲೈನ್ ಹೊಂದಿರಲಿಲ್ಲ. ಆದರೆ ಇದನ್ನು ಬರೆದವರು ಯಾರೆಂಬುದು ಅಂಬರ್ಕರ್ಗೆ ಚೆನ್ನಾಗಿ ಗೊತ್ತಿತ್ತು ಎಂದು ವಾರಿಷೆ ಸಹೋದ್ಯೋಗಿಗಳು ಹೇಳಿದ್ದಾರೆ.
ವರದಿ ಪ್ರಕಟವಾದ ದಿನ ಅಂದು ಮಧ್ಯಾಹ್ನ 1.30ರ ಸುಮಾರಿಗೆ ವಾರಿಷೆಯವರ ಮೇಲೆ ದಾಳಿ ಮಾಡಲಾಯಿತು. ರತ್ನಗಿರಿಯ ಮುನ್ಸಿಪಲ್ ಕೌನ್ಸಿಲ್ ರಾಜಾಪುರದ ಪೆಟ್ರೋಲ್ ಪಂಪ್ನ ಹೊರಗೆ ಈ ಘಟನೆ ನಡೆಯಿತು. ವಾರಿಷೆ ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೊಲ್ ಹಾಕಿಸಲು ನಿಂತಿದ್ದಾಗ ಅಂಬರ್ಕರ್ ತನ್ನ ಮಹೀಂದ್ರ ಥಾರ್ ಎಸ್ಯುವಿಯನ್ನು ವಾರಿಷೆ ಮೇಲೆ ಹತ್ತಿಸಿ ಸುಮಾರು 100 ಮೀಟರ್ ಎಳೆದೊಯ್ದಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ವಾರಿಷೆಯವರನ್ನು, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಾಯಗೊಂಡು ಒಂದು ದಿನದ ನಂತರ ಫೆಬ್ರವರಿ 7 ರಂದು ಅವರು ನಿಧನರಾದರು.
ಸ್ಥಳದಿಂದ ಪರಾರಿಯಾಗಿದ್ದ ಅಂಬರಕರ್ ನನ್ನು ಫೆ.7ರ ಸಂಜೆ ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
“ನಾವು ಆರಂಭದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಕೊಲೆಗೆ ಸಮನಾಗಿರುವುದಿಲ್ಲ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಆದರೆ ವಾರಿಷೆಯವರನ್ನು ಕೊಲ್ಲುವ ಉದ್ದೇಶವಿದ್ದದ್ದು ಸಾಕ್ಷ್ಯಗಳಿಂದ ಕಂಡುಬಂದ ಬಳಿಕ ಐಪಿಸಿಯ ಸೆಕ್ಷನ್ 302 (ಕೊಲೆ) ಅಡಿಯಲ್ಲೂ ಆರೋಪ ಹೊರಿಸಲಾಗಿದೆ. ಪ್ರಾಥಮಿಕ ಸಾಕ್ಷ್ಯಗಳು ಅಂಬರ್ಕರ್ ಕೊಲ್ಲುವ ಉದ್ದೇಶದಿಂದಲೇ ಬಂದಿದ್ದನು ಎಂದು ತಿಳಿಸುತ್ತಿವೆ. ಅಂಬರ್ಕರ್ನನ್ನು ಫೆಬ್ರವರಿ 14ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ” ಎಂದು ರತ್ನಗಿರಿ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ.
ಆರೋಪಿ ಅಂಬರ್ಕರ್ ಬಂಧನವಾಗಿದ್ದು ಸ್ಥಳೀಯ ವರದಿಗಾರರ ಸಂಘವು ವಾರಿಷೆಯ ಹತ್ಯೆಯನ್ನು ಖಂಡಿಸಿದೆ. ಇದನ್ನು ‘ಕೊಲೆ’ ಎಂದು ಪರಿಗಣಿಸಬೇಕೆಂದು ಮನವಿ ಮಾಡಿದೆ.
ಮಹಾರಾಷ್ಟ್ರ ಟೈಮ್ಸ್ನ ಆನ್ಲೈನ್ ವರದಿಗಾರ ಪ್ರಸಾದ್ ರಾನಡೆ ಪ್ರತಿಕ್ರಿಯಿಸಿ, “ಇದು ನಮ್ಮಲ್ಲಿ ಯಾರಾಗಾದರೂ ಆಗಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.