ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಮತ್ತು ದಾಳಿಯನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(KRS ಪಕ್ಷ)ವು ಗುರುವಾರದಂದು ‘ಪಾಂಡವಪುರ ಚಲೋ’ ನಡೆಯಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಬುಧವಾರ ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ ಮಂಡ್ಯದ ಪಾಂಡವಪುರ ತಾಲೂಕು ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಮತ್ತು ತಹಸಿಲ್ದಾರ್ನ ಕುಮ್ಮಕ್ಕಿನಿಂದ ಅಲ್ಲಿಯ ಸರ್ಕಾರಿ ಅಧಿಕಾರಿಗಳು ಮತ್ತು ಇತರರು ಸೇರಿಕೊಂಡು ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಕಛೇರಿಯಲ್ಲಿನ ಅವ್ಯವಸ್ಥೆಯ ವಿರುದ್ಧ ಪ್ರಶ್ನೆ: KRS ಪಕ್ಷದ ರವಿಕೃಷ್ಣಾ ರೆಡ್ಡಿ ಬಂಧನ
ಇದಾಗಿಯೂ, ಸಂಜೆ ವೇಳೆ ವಕೀಲರ ಕಚೇರಿಯಲ್ಲಿದ್ದ ಪಕ್ಷದ ನಾಯಕ ರಘು ಜಾಣಗೆರೆ ಮತ್ತು ಇತರ ಕಾರ್ಯಕರ್ತರ ಮೇಲೆ ಕೂಡಾ ಗೂಂಡಾಗಳು ಹಲ್ಲೆ ನಡೆಸಿ, ಪಕ್ಷದ ಕಾರ್ಯಕರ್ತರೊಬ್ಬರ ಬೆಲೆಬಾಳುವ ಫೋನ್ ಮತ್ತು ಚಿನ್ನದ ಸರವನ್ನು ದೂಚಿಕೊಂಡು ಹೋಗಿದ್ದಾರೆ ಎಂದು ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ಮೇಲೆ ನಡೆದ ದಾಳಿಯ ವಿರುದ್ದ ಪಕ್ಷದ ರಾಜ್ಯ ಕಾರ್ಯದರ್ಶಿ ನವೀನ್ ವಿ. ಅವರು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಒಟ್ಟು 19 ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ.
“ಪಾಂಡವಪುರ ತಾಲ್ಲೂಕು ಕಚೇರಿಯ ಸರ್ಕಾರಿ ಗೂಂಡಾಗಳು, ಮತ್ತವರು ಸಾಕಿಕೊಂಡಿರುವ ರೌಡಿ ದಲ್ಲಾಳಿಗಳ ದೌರ್ಜನ್ಯ ಮತ್ತು ಹಿಂಸಾಚಾರವನ್ನು ಖಂಡಿಸಿ KRS ಪಕ್ಷದ ವತಿಯಿಂದ, ಗುರುವಾರ ‘ಪಾಂಡವಪುರ ಚಲೋ’ ಹಮ್ಮಿಕೊಂಡಿದ್ದು, ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ” ಎಂದು ರವಿಕೃಷ್ಣಾ ರೆಡ್ಡಿ ನಾನುಗೌರಿ.ಕಾಂಗೆ ಹೇಳಿದ್ದಾರೆ.
ಈ ಮಧ್ಯೆ, ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ಪಾಂಡವಪುರ ಪೊಲೀಸರು KRS ಪಕ್ಷದ ಸುಮಾರು 9 ಮುಖಂಡರನ್ನು ಬಂಧಿಸಿದ್ದಾರೆ ಎಂದು ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ:ರವಿಕೃಷ್ಣಾ ರೆಡ್ಡಿಯವರಿಗೆ ಅಪಘಾತ: “ಚಲಿಸು ಕರ್ನಾಟಕ” ಸೈಕಲ್ ಯಾತ್ರೆ ತಾತ್ಕಾಲಿಕ ಸ್ಥಗಿತ