ಬೆಂಗಳೂರಿನ ಅಭಿವೃದ್ಧಿ ಕುರಿತು ಸಾರ್ವಜನಿಕರು ತಮ್ಮ ಸಲಹೆ, ಅಭಿಪ್ರಾಯ ಹಂಚಿಕೊಳ್ಳುವ ಉದ್ದೇಶದಿಂದ www.brandbengaluru.Karnataka.gov.in ಸೈಟ್ ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ”ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳಲ್ಲಿ ಏನು ನಡೆದಿದೆ? ಎಂಬುದು ಗೊತ್ತಿದೆ. ಗುತ್ತಿಗೆದಾರರು ಎಷ್ಟು ಜೋರಾಗಿ ಬೇಕಿದ್ದರೂ ಕೂಗಲಿ. ಯಾವುದಕ್ಕೂ ಜಗ್ಗುವುದಿಲ್ಲ” ಎಂದರು.
”ಬಿಬಿಎಂಪಿ ವ್ಯಾಪ್ತಿಯಲ್ಲಿ ತಡೆ ಹಿಡಿದಿರುವ ಎಲ್ಲ ಕಾಮಗಾರಿಗಳನ್ನೂ ಪರಿಶೀಲಿಸಿದ ಬಳಿಕವೇ ಬಿಲ್ ಪಾವತಿಸಲಾಗುವುದು. ಪರಿಶೀಲನೆ ಇಲ್ಲದೆ ಯಾವ ಬಿಲ್ ಕೂಡ ಪಾವತಿ ಆಗುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
”ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ ನಡೆಸದೇ ನೂರಾರು ಕೋಟಿ ರೂಪಾಯಿ ಬಿಲ್ ಪಾವತಿ ಆಗಿರುವುದು ಲೋಕಾಯುಕ್ತರ ತನಿಖೆಯಲ್ಲಿ ಹೊರಬಂದಿದೆ. ಬೇರೆ ಕಡೆಗಳಲ್ಲೂ ಏನೇನು ಆಗಿದೆ ನೋಡಬೇಕಲ್ಲವೆ? ಎಲ್ಲ ಕಾಮಗಾರಿಗಳ ಅಂದಾಜುಪಟ್ಟಿ, ಭೌತಿಕ ಸ್ಥಿತಿ ಪರಿಶೀಲಿಸದೇ ಬಿಲ್ ಪಾವತಿಗೆ ಅವಕಾಶ ನೀಡುವುದಿಲ್ಲ” ಎಂದು ಹೇಳಿದರು.
”ಬಿಡಿಎ ಮತ್ತು ಬಿಬಿಎಂಪಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಬೇಕಾದ ಅಗತ್ಯ ಇದೆ. ಸೂಕ್ತ ಕಾಲದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಶಿವಕುಮಾರ್ ತಿಳಿಸಿದರು.
”ಬಿಬಿಎಂಪಿಯಲ್ಲಿ ದೊಡ್ಡ ಪ್ರಮಾಣದ ತೆರಿಗೆ ಸೋರಿಕೆ ಆಗುತ್ತಿರುವ ಸಂಶಯವಿದೆ. ಅದನ್ನು ತಡೆಯಲು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುವುದು” ಎಂದು ಹೇಳಿದರು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಮೊಬೈಲ್ನಲ್ಲೇ ಅರ್ಜಿ ಸಲ್ಲಿಸಲು ಪ್ರತ್ಯೇಕ ಆ್ಯಪ್: ಡಿ.ಕೆ ಶಿವಕುಮಾರ್
”ಘನ ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣ, ನೀರು ಪೂರೈಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ಅಗತ್ಯವಿದೆ. ಸಾರ್ವಜನಿಕರು, ತಜ್ಞರು ಮತ್ತು ಆಯಾ ಕ್ಷೇತ್ರಗಳ ಪ್ರಮುಖರ ಅಭಿಪ್ರಾಯ ಆಲಿಸಿ ಯೋಜನೆಗಳನ್ನು ರೂಪಿಸಲಾಗುವುದು” ಎಂದರು.
”ಬೆಂಗಳೂರು ಜಲಂಡಳಿಯಲ್ಲಿ ಒಂಬತ್ತು ವರ್ಷಗಳಿಂದ ನೀರಿನ ದರ ಪರಿಷ್ಕರಣೆ ಆಗಿಲ್ಲ. ವಿದ್ಯುತ್ ಬಿಲ್ ಹೆಚ್ಚುತ್ತಲೇ ಇದೆ. ಈ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು” ಎಂದರು.
ಬೆಂಗಳೂರಿನ ಅಭಿವೃದ್ಧಿ ಕುರಿತು ಸಾರ್ವಜನಿಕರು ವೆಬ್ ಸೈಟ್ ಮೂಲಕ ತಮ್ಮ ಸಲಹೆ, ಅಭಿಪ್ರಾಯ ಹಂಚಿಕೊಳ್ಳಬಹುದು ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದ್ದರು.
Nice information