Homeಕರ್ನಾಟಕವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

- Advertisement -
- Advertisement -

ಹಣ್ಣೆಲೆ ಉದುರುವುದು, ಹೊಸ ಚಿಗುರು ಮೂಡುವುದು ಜೀವಂತ ಮರದ ಲಕ್ಷಣ. ಅಂತೆಯೇ ಒಂದು ರಾಷ್ಟ್ರದ ಸಂಸ್ಕೃತಿಯೂ ಸಹ. ಕಾಲಕಾಲಕ್ಕೆ ಹಳತು ಉದುರಿ ಹೊಸ ಚಿಗುರು ಹಸುರಾಗಬೇಕು. ಹಳೆಯ ಕೊಳೆಯೆಲ್ಲ ಕೊಚ್ಚಿ ಹೋಗಬೇಕು. ಹೊಸ ನೀರು ಹರಿಯಬೇಕು. ಅದಕ್ಕಾಗಿ ರಾಷ್ಟ್ರಕವಿ ಕುವೆಂಪು ದಶಕಗಳ ಹಿಂದೆಯೇ ತರುಣರಿಗೆ ಕೊಟ್ಟ ಕರೆ:

ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ
ಕೊಚ್ಚಿಹೋಗಲಿ; ಬರಲಿ ವಿಜ್ಞಾನ ಬುದ್ಧಿ
ವೇದ ಪ್ರಮಾಣತೆಯ ಮರು ಮರೀಚಿಕೆಯಲ್ಲಿ
ನೀರರಸಿ ಕೆಡದಿರಲಿ ಸ್ವಾತಂತ್ರ್ಯ ಸಿದ್ಧಿ
ತರುಣರಿರ ಎದ್ದೇಳಿ! ಎಚ್ಚರಗೊಳ್ಳಿ! ಬಾಳಿ! -ತರುಣರಿರ ಎದ್ದೇಳಿ

ಇದು ತರುಣರಿಗೆ ಕುವೆಂಪು ನೀಡಿದ ಸ್ವಾತಂತ್ರ್ಯ ದೀಕ್ಷಾಮಂತ್ರ. ವಿಚಾರಶೀಲತೆಗೆ ಅಡ್ಡಗೋಡೆಯಾಗಿರುವ ವೈಜ್ಞಾನಿಕ ಪ್ರಜ್ಞೆಗೆ ಗಂಟಲಗಾಳವಾಗಿರುವ ಉಸಿರುಗಟ್ಟಿಸುವ ಮತ ಮೌಢ್ಯದ ಮುಗ್ಗುಲು ವಾಸನೆ ತುಂಬಿರುವ ಗುಡಿ ಚರ್ಚು ಮಸೀದಿಗಳ ಗರ್ಭ ಗುಡಿಗಳನ್ನು ತೊರೆದು ಬರದಿದ್ದರೆ ನಮ್ಮ ತರುಣರಿಗೆ ಉದ್ಧಾರವಿಲ್ಲ ಎಂಬುದು ಈ ಪ್ರವಾದಿ ಕವಿಯ ಕರೆ. ಮತ ಮೌಢ್ಯಕ್ಕೂ ಬಡತನಕ್ಕೂ ಬಿಡಿಸಲಾರದ ನಂಟು. ಅದರ ನಿವಾರಣೆಗೆ ಮೊದಲು ಮೌಢ್ಯದ ಮಾರಿಯನು ಗೆಲ್ಲಬೇಕು. ಅಲ್ಲಿ ವಿಜ್ಞಾನ ದೀವಿಗೆಯ ಬೆಳಗಬೇಕು ಎಂದು ಒತ್ತಾಯಿಸುತ್ತಾರೆ.

ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟ ಕೀಳಬನ್ನಿ,
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ!

ಹಳೆಯ ಮತಗಳನ್ನು ಬಿಟ್ಟು ವಿಜ್ಞಾನವೆಂಬ ಹೊಸಮತಕ್ಕೆ ಸೇರಿದಾಗ ಮಾತ್ರ ವಿಶ್ವಶಾಂತಿ. ನಾಡಿನ ಅಶಾಂತಿಗೆ, ಅನಭಿವೃದ್ಧಿಗೆ, ರಕ್ತಪಾತಕ್ಕೆ ಮುಖ್ಯಕಾರಣ ಮತೀಯ ಗಲಭೆಗಳೇ, ಕೋಮು ಕಲಹಗಳೇ. ಉದಾಹರಣೆಗೆ ಆ ತೊಂಭತ್ತರ ದಶಕದಲ್ಲಿ ಅಯೋಧ್ಯೆಯ ಹಳೆ ಮಸೀದಿಯನ್ನು ಕೋಮುವಾದಿಗಳು ಕೆಡುವುದರೊಂದಿಗೆ ಮುರಿದುಬಿದ್ದ ಹಿಂದೂ-ಮುಸ್ಲಿಂ ಸೌಹಾರ್ದದ ಸೇತುವೆ ಇನ್ನೂ ದುರಸ್ತಿ ಕಾಣದೆ ನೇತಾಡುತ್ತಿದೆ. ಆದ್ದರಿಂದ ಕವಿವಾಣಿ ಎಚ್ಚರಿಸುತ್ತಿದೆ:

ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ
ಓ, ಬನ್ನಿ ಸೋದರರೆ ವಿಶ್ವಪಥಕೆ!

ಎಂದು ಪ್ರಾರ್ಥಿಸುತ್ತದೆ. ಆದರೀಗ ಆಗುತ್ತಿರುವುದೇನು? ಕೇಂದ್ರ ಸರ್ಕಾರ ಕೊಟ್ಟ, ಕರ್ನಾಟಕ ರಾಜ್ಯ ಜಾರಿಗೆ ತಂದಿರುವ ’ರಾಷ್ಟ್ರೀಯ ಶಿಕ್ಷಣ ನೀತಿ 2020’ರ ಕಾಯಿದೆಯು ಕುವೆಂಪು ಕೊಟ್ಟ ಪ್ರಗತಿ ಕರೆಗೆ ತದ್ವಿರುದ್ಧವಾಗಿ ಬ್ರಾಹ್ಮಣ್ಯದ ಬೇರುಗಳು ಬಸವಯುಗದ ಪೂರ್ವಕ್ಕೂ ಇಳಿಯುವಂತಿದೆ. ಸಂಗ್ರಹವಾಗಿ ಹೇಳುವುದಾದರೆ: ಈ ಕಾಯಿದೆಯು ಸಂಪೂರ್ಣವಾಗಿ ಕಾರ್ಯಗತವಾದರೆ ವರ್ತಮಾನ ಭಾರತವು ’ಅರಿವೆ ಗುರು’ ಎಂದ ಬಸವಣ್ಣನವರ ಪೂರ್ವಯುಗಕ್ಕೆ ಜಾರುವ ಅಪಾಯ ತಪ್ಪಿದ್ದಲ್ಲ. ಸದ್ಯದ ಪಠ್ಯಪುಸ್ತಕ ಪರಿಷ್ಕರಣೆಯು ಅದರ ಪೂರ್ವಭಾವಿ ತಾಲೀಮು ಅಷ್ಟೆ. ಜಾತೀಯತೆ, ಪಿತೃಪ್ರಧಾನತೆ, ಮೂಲಭೂತವಾದವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿ ಬೆಳೆಸಲಿಕ್ಕೆ ಬಿಜೆಪಿಯು ಹಾಕಿರುವ ಭದ್ರ ಬುನಾದಿ ಇದಾಗಿದೆ. ವರ್ಗ, ವರ್ಣ, ಜಾತಿ, ಲಿಂಗ ತಾರತಮ್ಯಗಳನ್ನು ಕಳೆದು ಇಲ್ಲಿ ಸಮಬಾಳು ಸಮಪಾಲು ಎಂಬ ಸಮಸಮಾಜಕ್ಕೆ ನಾಂದಿ ಹಾಡಿದ್ದು ಶರಣ ಚಳವಳಿ. ಆದರೀಗ ಮೊದಲಿನ ಪಠ್ಯಗಳನ್ನು ಕಮ್ಯೂನಿಸ್ಟ್ ಪ್ರಣಾಳಿಕೆ ಎಂದು ದೂರಿ, ಮನುಧರ್ಮ ಶಾಸ್ತ್ರ ಪ್ರಣೀತ ಸಮಾಜವನ್ನು ಪುನಃ ಸಂಸ್ಥಾಪಿಸಲು ಅಡಿಪಾಯ ಹಾಕುತ್ತಿರುವ ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿಯು ಇತಿಹಾಸವನ್ನು ಸರಿಪಡಿಸುವ ಸೋಗಿನಲ್ಲಿ ರಾಷ್ಟ್ರೀಯತೆ, ಭಾರತೀಯ ಸಂಸ್ಕೃತಿ, ದೇವಭಾಷೆ ಸಂಸ್ಕೃತ ಎಂದು ಸ್ಥಳೀಯ ಆಡು ನುಡಿಗಳನ್ನು ನಿರ್ಲಕ್ಷಿಸಿ, ಹಿಂದಿಗೆ ಮಣೆ ಹಾಕುತ್ತಾ ಬುದ್ಧ, ಬಸವ, ಸೂಫಿ ಸಂತರ, ಪೆರಿಯಾರ್, ನಾರಾಯಣ ಗುರು, ಶಾಹು ಮಹಾರಾಜ್, ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ, ಭಗತ್‌ಸಿಂಗ್, ಗಾಂಧಿ, ಕುವೆಂಪು, ಅಂಬೇಡ್ಕರ್ ಮತ್ತಿತರ ಪ್ರಗತಿಪರರ ಜೀವನಗಾಥೆಗಳ ಪಠ್ಯಗಳನ್ನು ನೇಪಥ್ಯಕ್ಕೆ ಸರಿಸಿ ಸಂಘಪರಿವಾರದ ಅಜೆಂಡಾಕ್ಕನುಗುಣವಾಗಿ ಹೆಡಗೆವಾರ್, ಸಾವರ್ಕರ್ ಮುಂತಾದವರ ಪಠ್ಯಗಳನ್ನು ಮುನ್ನೆಲೆಗೆ ತರುತ್ತಿರುವುದು ಎದ್ದು ಕಾಣುತ್ತದೆ.

ಇದರಲ್ಲಿ ಮುಚ್ಚುಮರೆಯೇನಿಲ್ಲ. ಈ ಪಠ್ಯ ಪರಿಷ್ಕರಣೆಯ ಮೂಲವಿರುವುದು 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ. ಈ ಸತ್ಯವನ್ನು ಮನಗಂಡ ರಾಜ್ಯದ ನ್ಯಾಯವಾದಿಗಳು, ಸಾಹಿತಿ ಕಲಾವಿದರು, ಪ್ರಗತಿಪರ ಚಿಂತಕರು, ಮಠದ ಸ್ವಾಮಿಗಳು, ವಿವಿಧ ಸಂಘಟನೆಗಳು ’ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ’ ನೇತೃತ್ವದಲ್ಲಿ, ಕಳೆದ ಜೂನ್ 19, 2022ರಂದು ಫ್ರೀಡಂ ಪಾರ್ಕಿನಲ್ಲಿ ಸಭೆ ಸೇರಿ ಪರಿಷ್ಕೃತ ಪಠ್ಯಪುಸ್ತಕವನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿ, 10 ದಿನಗಳ ಗಡುವು ಕೊಟ್ಟಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇವರ ಮನವಿಯನ್ನು ಸ್ವೀಕರಿಸುವ ಸೌಜನ್ಯವನ್ನೂ ತೋರಲಿಲ್ಲ. ಮತ್ತು ಪಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ’ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಪ್ರತಿಭಟನೆ ಮಾಡುವವರಿಗೆ ಸ್ವಾತಂತ್ರ್ಯವಿದೆ’ ಎಂದು ತಮ್ಮ ದಿವ್ಯ ನಿರ್ಲಕ್ಷ್ಯವನ್ನು ಪ್ರದರ್ಶಿಸಿದ್ದಾರೆ.

ನಿಜ. ಬಹುಮತವಿರುವ ಯಾವುದೇ ಸರ್ಕಾರ ಇಂಥ ಮೆರವಣಿಗೆ, ಪ್ರತಿಭಟನೆಗಳಿಗೆ ಜಗ್ಗುವುದುಂಟೆ? ಎಲ್ಲೀವರೆಗೆ ಶೋಷಿತ ವರ್ಗಕ್ಕೆ ಸೇರಿದ ಶಾಸಕರು, ಮಂತ್ರಿಗಳು, ಸಂಸದರು, ಅಧಿಕಾರ ಆಮಿಷಗಳಿಗೆ ಮಾರುಹೋಗಿ ಬಿಜೆಪಿಗೆ ತಲೆಯಾಡಿಸುತ್ತಾ ಬೆಂಬಲ ನೀಡುತ್ತಾರೋ, ಎಲ್ಲೀವರಗೆ ದನಿಯಿಲ್ಲದವರಿಗೆ ದನಿಯಾಗಿ ತಮ್ಮ ಅಸಮಾಧಾನ, ಅತೃಪ್ತಿ ವ್ಯಕ್ತಪಡಿಸುವುದಿಲ್ಲವೋ, ಅಲ್ಲೀವರೆಗೆ ಆಳುವ ಸರ್ಕಾರ ಬಂಡೆಗಲ್ಲಿನಂತೆ ಭದ್ರವಾಗಿರುತ್ತದೆಯಲ್ಲವೆ?

ಇನ್ನೂ ಪರಮಾಶ್ಚರ್ಯವೆಂದರೆ, ಯಾವ ಬ್ರಾಹ್ಮಣ್ಯವನ್ನು ವಿರೋಧಿಸಿ ಬಸವಾದಿ ಶರಣರು ಧರ್ಮ ನಿರಪೇಕ್ಷ ಸಮಸಮಾಜದ, ಕಲ್ಯಾಣದ ಕನಸು ಕಂಡು ಕ್ರಾಂತಿ ಕಹಳೆ ಊದಿದರೂ ಅದೇ ಬಸವ ಧರ್ಮಾವಲಂಬಿ ವೀರಶೈವ ಲಿಂಗಾಯಿತ ರಾಜಕಾರಣಿಗಳು ತೀರ ಅಲ್ಪಸಂಖ್ಯಾತರಾದ ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿಯೊಂದಿಗೆ ಕೈ ಜೋಡಿಸಿ ಸಹಭಾಗಿಗಳಾಗಿ ಕನ್ನಡನಾಡನ್ನು ಬಸವಪೂರ್ವ ಯುಗಕ್ಕೆ ಕೊಂಡೊಯ್ಯಲು ಉತ್ಸುಕರಾಗಿ ಟೊಂಕಕಟ್ಟಿ ನಿಂತಿರುವುದು. ಹೀಗಿರುತ್ತ, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಪಠ್ಯಗಳನ್ನು ಕಿತ್ತು ಹಾಕುವುದು ಅಥವಾ ಅವರ ಚಿಂತನೆಗಳನ್ನು ತಿರುಚುವುದು ಇವರಿಗೆ ಯಾವ ಲೆಕ್ಕ? ಇಂಥ ಒಂದು ಅವಕಾಶಕ್ಕಾಗಿ ಸಂಘಪರಿವಾರವು ಶತಮಾನ ಪರ್ಯಂತ ಕಾದಿದೆ. ಹಿಂದೂ ರಾಷ್ಟ್ರವನ್ನಾಗಿ ಮಾಡಿ, ಧರ್ಮನಿರಪೇಕ್ಷ ಸೆಕ್ಯುಲರ್ ಸಂವಿಧಾನವನ್ನು ತಿದ್ದುವ ಯಾವ ಅವಕಾಶವನ್ನು ಅದು ಕಳೆದುಕೊಳ್ಳಲಾರದು.
ಆದ್ದರಿಂದ ಕುವೆಂಪು ಕೈವಾರಿಸಿದ ನಾಡಗೀತೆಯನ್ನು ತಿರುಚುವುದೂ ದಶದಿಕ್ಕುಗಳಿಂದಲೂ ಸಂವಿಧಾನದ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮೇಲೆ ಆಕ್ರಮಣ ಮಾಡುವುದೂ ನಡೆದೇ ತೀರುತ್ತದೆ. ’ನೂಲ ಎಳೆಯಲಿ ಕೊರಳ ಕೊಯ್ಯುವ, ಭೇದದಲಿ ಹೊಕ್ಕಿರುವ ಚಾತುರ್ಯ ಬ್ರಾಹ್ಮಣ್ಯದ ಹುಟ್ಟುಗುಣ’ ಎಂದು ವಿದುರ ನೀತಿಯಲ್ಲಿ ಕವಿ ಕುಮಾರವ್ಯಾಸ ಹೇಳಿರುವುದು ನೂರಕ್ಕೆ ನೂರು ಸತ್ಯ. ಬುದ್ಧ ಬಸವರು ಕಂಡ, ಕುವೆಂಪು ದರ್ಶಿಸಿದ, ಅಂಬೇಡ್ಕರ್ ಕಲ್ಪಿಸಿದ ಕಲ್ಯಾಣಕರ್ನಾಟಕ ಕುಸಿಯುತ್ತಿದೆ. ಇಂಥ ಕಲ್ಯಾಣ ಪ್ರಭುತ್ವವನ್ನು ಕಿತ್ತೆಸೆದು ಕಾರ್ಪೊರೆಟ್ ಪ್ರಭುತ್ವವನ್ನೂ, ಸಂವಿಧಾನದ ಜಾಗದಲ್ಲಿ ಮನುವಾದವನ್ನೂ, ಪ್ರಜಾತಂತ್ರ ಜಾಗದಲ್ಲಿ ಸರ್ವಾಧಿಕಾರವನ್ನೂ ನೆಲೆಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದುವರೆಗೆ ಕುಂಟುತ್ತಲೆ ಹೇಗೋ ಮುಂದೆ ಸಾಗುತ್ತಿದ್ದ ದೇಶ ಈಗ ನಾಗಾಲೋಟದಲ್ಲಿ ಹಿಂದಕ್ಕೆ ಜಾರುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ, ಆರ್ಥಿಕತೆ ಕುಸಿಯುತ್ತಿದೆ, ಬೆಲೆ ಏರುತ್ತಿದೆ, ಭ್ರಷ್ಟಾಚಾರ ಮುಗಿಲು ಮುಟ್ಟುತ್ತಿದೆ. ಅರಾಜಕತೆ ಬೆಳೆಯುತ್ತಿದೆ.

’ಅಗ್ನಿಪಥ’ದಂತ ಘನ ಗಂಭೀರ ಯೋಜನೆಯ ಅನುಷ್ಠಾನವು ಸರಿಯಲ್ಲವೆಂದೂ, ಸೇನೆ ಸೇರಿ ನಾಲ್ಕು ವರ್ಷಗಳ ನಂತರ ಬಿಡಬೇಕಾಗಿ ಬಂದಾಗ ನಾವೇನು ಮಾಡಬೇಕೆಂದೂ ಸೇನಾಕಾಂಕ್ಷಿ ’ಅಗ್ನಿವೀರರು’ ಕೆಲಸಕ್ಕೆ ಮೊದಲೇ ದಂಗೆಯೆದ್ದು ಬೀದಿಗಿಳಿದು ಹೋರಾಡುತ್ತಿದ್ದಾರೆ. ಇದೆಲ್ಲಾ ನೋಡಿದರೆ ಶ್ರೀಲಂಕಾ, ಆಫ್ಘಾನಿಸ್ಥಾನಗಳು ತಲುಪಿರುವ ದುಃಸ್ಥಿತಿಗೆ ಭಾರತವೂ ತಲುಪಬಹುದೇ ಎಂಬ ಆತಂಕ ಕಾಡುತ್ತದೆ.

ಆದರೆ ನಿರಾಶೆಗಿದು ಹೊತ್ತಲ್ಲ; ಚಿಂತಿಸುತ್ತಾ ಕೂರಲು ಸಮಯ ಇಲ್ಲ, ಎಲ್ಲಾ ಕ್ಷೇತ್ರದಲ್ಲಿಯೂ ಮೌಲ್ಯಗಳ ಅಧಃಪತನ; ಪ್ರಾಮಾಣಿಕತೆ ನೆಲಕಚ್ಚುತ್ತಿದೆ; ದೊಡ್ಡ ದೇಶದ ದೊಡ್ಡ ಜನ ಎತ್ತ ಸಾಗುತ್ತಿದ್ದಾರೋ ಗೊತ್ತಿಲ್ಲ? ಮನುಕುಲದ ನಡಿಗೆಯಲ್ಲಿ ಈ ಏರುಪೇರು ಹೊಸದೇನೂ ಅಲ್ಲ. ಪ್ರತಿಗಾಮಿ ಹಾಗೂ ಪ್ರಗತಿಗಾಮಿ ಶಕ್ತಿಗಳ ನಡುವೆ ಸಂಘರ್ಷ ಎಲ್ಲಾ ಕಾಲಕ್ಕೂ ಇದ್ದದ್ದೇ. ’ಚಕ್ರಾರಪಂಕ್ತಿ’ಯಂತೆ ಕಾಲ ಸುತ್ತುತ್ತಿರುತ್ತದೆ-ಮುಂದೆ ಮುಂದೆ. ಎಷ್ಟೆಷ್ಟೋ ಚಳವಳಿಗಳು, ಆಂದೋಲನಗಳು, ದನಿಯಿಲ್ಲದವರಿಗೆ ದನಿಗೊಡುವ ಹೋರಾಟಗಳು ಮುಂತಾಗಿ ನಡೆದೇ ಇವೆ; ನಡೆಯುತ್ತವೆ. ’ಚಲಿಸಲ್ ಸೃಷ್ಟಿ; ನಿಲ್ಲಲ್ ಪ್ರಳಯ’ ಪ್ರಜಾತಂತ್ರದಲ್ಲಿ ಇರುವುದೊಂದೇ ಮಾರ್ಗ. ಅದು ಗಾಂಧೀ ನೀಡಿದ ಅಹಿಂಸಾತ್ಮಕ ಮಾರ್ಗ. ಅದೇ ಸ್ವಾಭಿಮಾನ ಮತದಾರರ ಒಂದು ಓಟಿನ ಕ್ರಾಂತಿ ಮಾರ್ಗ. ಈ ಕುರಿತು ರಾಷ್ಟ್ರಕವಿ ಕುವೆಂಪು ತಮ್ಮ ವಿಚಾರಕ್ರಾಂತಿಗೆ ಆಹ್ವಾನ ಎಂಬ ಭಾಷಣದಲ್ಲಿ ಎಂದೋ ಗುಡುಗಿದ್ದಾರೆ. ಆಲಿಸಿ:

’ಚುನಾವಣೆಯ ರೀತಿಯನ್ನೇ ಬದಲಿಸದಿದ್ದರೆ, ಮಾನ-ಮರ್ಯಾದೆಯುಳ್ಳ ಯಾವ ಪ್ರಾಮಾಣಿಕ ವ್ಯಕ್ತಿಯಾಗಲೀ, ಯಾವ ಪಕ್ಷವಾಗಲೀ ಭ್ರಷ್ಟಾಚಾರಕ್ಕೆ ಬಲಿಯಾಗದಿರಲು ಸಾಧ್ಯವಿಲ್ಲ. ಉಗ್ರ ಕ್ರಾಂತಿಯಿಂದಲಾದರೂ ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳು, ಸಮಯ ಸಾಧಕರು, ಗೂಂಡಾಗಳು, ಕಾಳಸಂತೆಕೋರರು, ಕಳ್ಳಸಾಗಾಣಿಕೆ ಖದೀಮರು, ಚಾರಿತ್ರ್ಯಹೀನರು ಪ್ರಜಾಸತ್ತೆಯ ಹುಸಿ ಹೆಸರಿನ ಹಿಂದೆ ಪ್ರಚ್ಛನ್ನ ಸರ್ವಾಧಿಕಾರ ನಡೆಸುತ್ತಾರೆ’.

ಆದ್ದರಿಂದ ’ಮಾತನೆ ಉಣಕೊಟ್ಟು ಮಾತನೆ ಉಡಕೊಟ್ಟು ಮಾತಿನಾ ಮುತ್ತ ಸೂರೆಗೊಟ್ಟು ಹೋದಾತನೇ ಜಾಣ’ ಎಂಬಂತಿರುವ ರಾಜಕಾರಣಿಯನ್ನು, ಅಂತಹವನ ರಾಜಕಾರಣವನ್ನು ದೂರವಿಟ್ಟು ನಿಜವಾದ ಅಂತಃಕರಣವುಳ್ಳ ಮುತ್ಸದ್ಧಿ ರಾಜಕಾರಣಿಯನ್ನು, ಎಲ್ಲ ಜನರನ್ನೂ ಒಟ್ಟಿಗೆ ಕರೆದೊಯ್ಯಬಹುದಾದ ಪಕ್ಷವನ್ನು ಚುನಾಯಿಸುವುದು ಮತದಾರನ ಕರ್ತವ್ಯ. ಅದಕ್ಕಾಗಿ ವಿಜ್ಞಾನದೀವಿಗೆ ಹಿಡಿದ ಯುವಜನರು ಮುಂದೆ ಬರಬೇಕು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ ಪಠ್ಯ ಪರಿಶೀಲನೆ ಸಮಿತಿ ಸದಸ್ಯನ ಸಮರ್ಥನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...