Homeಎಕಾನಮಿಹಿಂದೂ-ಸಿಖ್‌ ಸಮುದಾಯದ ಅರ್ಥಶಾಸ್ತ್ರಜ್ಞ ಗೆಳೆಯರಿಬ್ಬರೂ ಭಾರತದ ಪ್ರಸ್ತುತ ಸ್ಥಿತಿ ಕುರಿತು ಬರೆದ ಭಾವನಾತ್ಮಕ ಪತ್ರ..

ಹಿಂದೂ-ಸಿಖ್‌ ಸಮುದಾಯದ ಅರ್ಥಶಾಸ್ತ್ರಜ್ಞ ಗೆಳೆಯರಿಬ್ಬರೂ ಭಾರತದ ಪ್ರಸ್ತುತ ಸ್ಥಿತಿ ಕುರಿತು ಬರೆದ ಭಾವನಾತ್ಮಕ ಪತ್ರ..

ಕೇಡಿನ ಕಾರ್ಮೋಡದಿಂದ ಭಾರತ ಎಂಬ ಕಲ್ಪನೆಯನ್ನು ರಕ್ಷಿಸೋಣ ಎಂದು ಮನವಿ ಮಾಡಿದ ಕೌಶಿಕ್ ಬಸು ಮತ್ತು ನಿರ್ವಿಕಾರ್ ಸಿಂಗ್...

- Advertisement -
- Advertisement -

ಭಾರತ ಎಂಬ ಕಲ್ಪನೆಯನ್ನು ರಕ್ಷಿಸೋಣ : ಕೌಶಿಕ್ ಬಸು ಮತ್ತು ನಿರ್ವಿಕಾರ್ ಸಿಂಗ್
ಅನುವಾದ : ಟಿ.ಎಸ್‌ ವೇಣುಗೋಪಾಲ್‌

ಕೇಡಿನ ಕಾರ್ಮೋಡ ಭಾರತವನ್ನು ಆವರಿಸಿಕೊಂಡಿದೆ. ವಿಭಜನೆ ಹಾಗೂ ದ್ವೇಷದ ನೆರಳು ಕವಿದುಕೊಂಡಿದೆ. ನಾಗರಿಕ ಸಮಾಜವನ್ನೇ ಆತಂಕಕ್ಕೆ ಒಡ್ಡಿದೆ. ಆರ್ಥಿಕ ಪ್ರಗತಿಯನ್ನು ಸ್ಥಗಿತಗೊಳಿಸುವ ಅಥವಾ ಹಿಂದಕ್ಕೆ ಒಯ್ಯುವ ಗಾಬರಿ ಕಾಡುತ್ತಿದೆ. ಒಂದು ದೊಡ್ಡ ಪ್ರಪಾತದ ಕಡೆಗೆ ಹೋಗುತ್ತಿದ್ದೇವೆ. ಮತ್ತೆ ಹಿಂತಿರುಗಿ ಬರಲಾಗದೆ ಇರಬಹುದು. ಈ ಅಪಾಯದ ಎಲ್ಲಾ ಸೂಚನೆಗಳು ಇವೆ.

ಹೊಸ ದಶಕ ಪ್ರಾರಂಭವಾಗುತ್ತಿದ್ದಂತೆ ನಾವಿಬ್ಬರೂ ಒಟ್ಟಿಗೆ ಬರೆಯಲು ನಿರ್ಧರಿಸಿದೆವು. ಆದರೆ ಈಗ ನಾವು ಯಾವುದೋ ಆರ್ಥಿಕ ಸಿದ್ಧಾಂತವನ್ನು ಕುರಿತಾಗಲಿ ಅಥವಾ ತಕ್ಷಣದ ಯಾವುದೋ ನೀತಿಯ ಸವಾಲನ್ನಾಗಲಿ ಕುರಿತು ಬರೆಯುತ್ತಿಲ್ಲ. ದೇಶದ ಸಮಾಜಿಕ ಹಾಗೂ ರಾಜಕೀಯ ಭವಿಷ್ಯದ ಬಗ್ಗೆ ಬರೆಯಲು ನಿರ್ಧರಿಸಿದ್ದೇವೆ. ಅದು ನಮ್ಮ ಅಸ್ತಿತ್ವಕ್ಕೇ ಸವಾಲಾಗಿದೆ.

ನಾವಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಹಲವು ದಶಕಗಳಿಂದ ಬಲ್ಲೆವು. ಇಬ್ಬರೂ ಭಾರತದಲ್ಲೇ ಬೆಳೆದವರು. ನಿಜ ನಾವು ಬೆಳೆದ ಭಾರತ ಪರಿಪೂರ್ಣವಾಗಿರಲಿಲ್ಲ. ಆದರೆ ಅದಕ್ಕೆ ಸಹಬಾಳ್ವೆಯ ಕನಸಿತ್ತು. ಆ ಕನಸು ನಮ್ಮಲ್ಲಿ ಭರವಸೆಯನ್ನು ಮೂಡಿಸಿತ್ತು. ನಾವಿಬ್ಬರೂ ವಿಭಿನ್ನ ಹಿನ್ನಲೆಯಿಂದ ಬಂದವರು. ನಮ್ಮಲ್ಲಿ ಒಬ್ಬರು ಬಂಗಾಳಿ, ಇನ್ನೊಬ್ಬರು ಪಂಜಾಬಿ. ಒಬ್ಬರು ಹಿಂದು ಇನ್ನೊಬ್ಬರು ಸಿಖ್‌. ಮಾನವರ ಕ್ಷೇಮ, ಸಹಾನುಭೂತಿ, ಸಹಿಷ್ಟುತೆ ಮತ್ತು ಕರುಣೆ ಈ ನಂಬಿಕೆಗಳನ್ನು ಕುರಿತ ಶ್ರದ್ಧೆ ನಮ್ಮಿಬ್ಬರನ್ನು ಒಟ್ಟಿಗೆ ತಂದಿದೆ. ಧರ್ಮ, ಲಿಂಗ ಮತ್ತು ಜಾತಿಯನ್ನು ಮೀರಿಕೊಂಡು ಎಲ್ಲಾ ಮನುಷ್ಯರನ್ನು ಸಮಾನವಾಗಿ ಕಾಣುವುದಕ್ಕೆ ಸಾಧ್ಯವಾಗಬೇಕು. ಕಷ್ಟದಲ್ಲಿದ್ದವರಿಗೆ ನೆರವಾಗಬೇಕು ಎಂಬ ಭಾವನೆ ನಮ್ಮನ್ನು ಬೆಸೆದಿದೆ.

ನೈತಿಕವಾಗಿ ಯಾವುದು ಸರಿ ಅನ್ನುವ ತೀರ್ಮಾನ ತೆಗೆದುಕೊಳ್ಳುವಾಗ, ನಿರ್ಧರಿಸುತ್ತಿರುವ ವ್ಯಕ್ತಿ ಯಾರು ಎನ್ನುವುದಾಗಲಿ ಅಥವಾ ಆ ವ್ಯಕ್ತಿಯ ಧರ್ಮ, ಜಾತಿ ಯಾವುದು ಎನ್ನುವುದಾಗಲಿ ಮುಖ್ಯವಾಗಬಾರದು. ಇಂತಹದೇ ತತ್ವಗಳನ್ನು ಜ್ಞಾನೋದಯ ಕಾಲದ ದಾರ್ಶನಿಕ ಜಾನ್ ರಾಲ್ಸ್ ತನ್ನ ಬರಹಗಳಲ್ಲಿ ಕಾಣಬಹುದು. ಅವುಗಳಿಗೆ ಅವನೂ ಈ ತತ್ವಗಳಿಗೆ ಮಹತ್ವ ನೀಡಿದ್ದಾನೆ. ಇವು ಅಷ್ಟು ಪುರಾತನವಾದ ತತ್ವಗಳು. ಭಾರತದ ದಾರ್ಶನಿಕರು ಮತ್ತು ಧಾರ್ಮಿಕ ಚಿಂತಕರಲ್ಲೂ ಇದೇ ಚಿಂತನೆಗಳನ್ನು ಕಾಣಬಹುದು. ಈ ಚಿಂತನೆಗಳೇ ಭಾರತವೆಂಬ ಕಲ್ಪನೆಯ ಆಧಾರಸ್ತಂಭ ಆಗಿವೆ.

ಬಹುತ್ವ ಸಂಸ್ಕೃತಿಯ ಭಾರತ
ಗುರುನಾನಕ್ ಅವರ ತತ್ವವನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದು ಸಕಾಲ. ಗುರು ಅರ್ಜನ್ ಬರೆಯುತ್ತಾರೆ “ಯಾರೂ ನನ್ನ ಶತ್ರುವಲ್ಲ. ಯಾರೂ ನನಗೆ ಅಪರಿಚಿತರಲ್ಲ. ನಾನು ಎಲ್ಲರೊಂದಿಗೂ ಇದ್ದೇನೆ.” ಗುರು ಗೋವಿಂದ ಸಿಂಗ್ ಒತ್ತಿ ಹೇಳುತ್ತಾರೆ “ಎಲ್ಲ ಮನುಷ್ಯರನ್ನು ಒಂದೇ ಎಂದು ಕಾಣು.” ರಬೀಂದ್ರನಾಥ್ ಠಾಕೂರರು ಹೇಳುತ್ತಾರೆ “ಆರ್ಯರೇ ಬನ್ನಿ, ಆರ್ಯೇತರರೇ ಬನ್ನಿ, ಹಿಂದುಗಳೇ, ಮುಸ್ಲಿಮರೇ ಇಂದು ಬನ್ನಿ, ಇಂಗ್ಲೀಷರೇ ಬನ್ನಿ, ಕ್ರಿಶ್ಚಿಯನ್ನರೇ ಬನ್ನಿ, ಬ್ರಾಹ್ಮಣರೇ ಬನ್ನಿ, ನಿಮ್ಮ ಮನಸ್ಸುಗಳನ್ನು ಶುದ್ಧ ಮಾಡಿಕೊಳ್ಳಿ, ಎಲ್ಲರೂ ಪರಸ್ಪರ ಕೈಜೋಡಿಸಿ.”

ಇಂತಹ ಮೂಲಭೂತ ನಂಬಿಕೆಗಳು ಭಾರತದಲ್ಲಿ ನಾಶವಾಗುತ್ತಿರುವುದು ನಮ್ಮನ್ನಿಂದು ಕಾಡುತ್ತಿದೆ. 1947ರ ಆಗಸ್ಟ್ ತಿಂಗಳ ಮಧ್ಯ ರಾತ್ರಿಯ ಸ್ವಾತಂತ್ರ್ಯದ ಆ ದಿನಗಳಿಂದ ಭಾರತದ ಚರಿತ್ರೆ ಪ್ರಕ್ಷುಬ್ಧ ಸ್ಥಿತಿಯನ್ನು ಕಂಡಿದೆ. ನಾವು ನಾಚಿಕೆಯಿಂದ ತಲೆತಗ್ಗಿಸಬೇಕಾದ ಹಲವು ದುರ್ಘಟನೆಗಳು ನಡೆದುಹೋಗಿವೆ. ಎರಡನೆಯ ಮಹಾಯುದ್ಧದ ಮುಗಿದ ನಂತರ ಹಲವು ಹೊಸ ರಾಷ್ಟ್ರಗಳು ಹುಟ್ಟಿಕೊಂಡವು. ಜನ ಮತ್ತು ರಾಷ್ಟ್ರಗಳು ವಸಾಹತುಶಾಹಿಯ ಬಂಧನಗಳನ್ನು ಕಳಚಿಕೊಂಡು ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿದ್ದಾರೆ. ಈ ರಾಷ್ಟ್ರಗಳು ಆದರ್ಶವನ್ನು ಇಟ್ಟುಕೊಂಡು ಹುಟ್ಟಿಕೊಂಡವು. ಪ್ರಜಾಸತ್ತೆ ಮತ್ತು ಸಮಾನತೆಯನ್ನು ಆತುಕೊಂಡವು. ಆದರೆ ಈ ದೇಶದ ಆದರ್ಶಗಳನ್ನು ಒಂದೊಂದಾಗಿ ಮಿಲಿಟರಿ ದಂಗೆ ಮತ್ತು ಧಾರ್ಮಿಕ ದಾಳಿಗಳು ಛಿದ್ರಗೊಳಿಸಿದವು.

ಆದರೆ ಭಾರತ ಮಾತ್ರ ಪ್ರಜಾಸತ್ತೆಗೆ, ವಾಕ್ ಸ್ವತಂತ್ರಕ್ಕೆ, ಧರ್ಮನಿರಪೇಕ್ಷತೆಗೆ ಬದ್ಧವಾಗಿ ಭರವಸೆಯ ದೀವಿಗೆಯಾಗಿ ನಿಂತುಕೊಂಡಿತ್ತು. 1990ರಿಂದ ಆರ್ಥಿಕ ಪ್ರಗತಿಯೂ ವೇಗವಾಗಿ ಆಗುತ್ತಿತ್ತು. ಇಂದು ಹಲವು ಸವಾಲುಗಳು ನಮ್ಮನ್ನು ಕಾಡುತ್ತಿವೆ. ಬಡತನ ಮತ್ತು ತಾರತಮ್ಯ ಕಾಡುತ್ತಿದೆ. ಭ್ರಷ್ಟಾಚಾರವಿದೆ. ಪರಿಸರದ ಸವಾಲು ಬೆಳೆಯುತ್ತಿದೆ. ಮಾಲಿನ್ಯವನ್ನು ನಿಯಂತ್ರಿಸದಿದ್ದರೆ, ಅದು ಮುಂದಿನ ತಲೆಮಾರಿನ ಗ್ರಹಣ ಶಕ್ತಿಯನ್ನೇ ಹಾಳುಮಾಡುತ್ತದೆ. ಇವೆಲ್ಲವನ್ನು ನಾವು ತುರ್ತಾಗಿ ಎದುರಿಸಬೇಕಾಗಿದೆ. 1990ರ ಆರ್ಥಿಕ ಪ್ರಗತಿ ನಮ್ಮಲ್ಲಿ ಭರವಸೆಯನ್ನು ಮೂಡಿಸಿತ್ತು. ನಾವು ಈ ಎಲ್ಲಾ ಸವಾಲುಗಳನ್ನು ನೇರವಾಗಿ ಎದುರಿಸಬಲ್ಲೆವು ಎನ್ನುವ ಭರವಸೆಯನ್ನು ಉಂಟುಮಾಡಿತ್ತು. ಆದರೆ ಇಂದು ಪ್ರಚಾರ ಮಾಡುತ್ತಿರುವ ವಿಭಜನೆಯ ಮನಸ್ಸು ದೊಡ್ಡ ಹಿನ್ನಡೆಯನ್ನು ತಂದಿದೆ. ಇದು ನಮ್ಮ ದೇಶದಲ್ಲಿದ್ದ ನಂಬಿಕೆ ಮತ್ತು ಸಹಕಾರದ ಭಾವನೆಯನ್ನು ಘಾಸಿಗೊಳಿಸಿದೆ. ಉದಾಹರಣೆಗೆ ಉತ್ತರಪ್ರದೇಶದಲ್ಲಿ “ಪ್ರತೀಕಾರಕ್ಕೆ” ಸರ್ಕಾರದ ಯಂತ್ರವನ್ನು ಬಳಸಿರುವುದು, ವಿರೋಧದ ಧ್ವನಿಯನ್ನು ಹತ್ತಿಕ್ಕುತ್ತಿರುವುದು ನೈತಿಕವಾಗಿ ಸ್ವೀಕಾರಾರ್ಹವಲ್ಲ. ಇದರಿಂದ ಜಾಗತಿಕವಾಗಿ ಭಾರತದ ಸ್ಥಾನಮಾನಕ್ಕೆ ಧಕ್ಕೆಯಾಗಿದೆ.

ನಂಬಿಕೆ ಆರ್ಥಿಕತೆಯನ್ನು ಉತ್ತಮಗೊಳಿಸುತ್ತದೆ
ಸಾಮಾಜಿಕ ನಂಬಿಕೆ ಮತ್ತು ನಾನು ನನ್ನದು ಎಂಬ ಬಾಂಧವ್ಯ ಆರ್ಥಿಕತೆಯನ್ನು ಸುಧಾರಿಸುತ್ತದೆ, ಆರ್ಥಿಕ ಪ್ರಗತಿಯೂ ಸಾಧ್ಯವಾಗುತ್ತದೆ. ಇದರ ಮಹತ್ವ ಯಾರಿಗೂ ಅರ್ಥವಾಗಿಲ್ಲ. ಇದಕ್ಕೆ ಹೇರಳವಾದ ಪುರಾವೆಗಳಿದ್ದರೂ ಇದು ಯಾರಿಗೂ ಮನವರಿಕೆಯಾಗಿಲ್ಲ. ಯಾನ್ ಅಲ್ಗಾನ್ ಮತ್ತು ಪಿಯರಿ ಕಾಹುಕ್ ‘ವಿಶ್ವಾಸ ಹೆಚ್ಚಾದಂತೆ ರಾಷ್ಟ್ರೀಯ ವರಮಾನವೂ ಅತ್ಯಂತ ತ್ವರಿತವಾಗಿ ಹೆಚ್ಚುತ್ತದೆ’ ಎಂದು ಬಲವಾದ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಗಳನ್ನು ಬಳಸಿಕೊಂಡು ತೋರಿಸಿದ್ದಾರೆ. ಸ್ವೀಡನ್ನಿನಲ್ಲಿ ಸಾಧ್ಯವಾಗಿರುವ ವಿಶ್ವಾಸದ ಮಟ್ಟವನ್ನು ಆಫ್ರಿಕಾದಲ್ಲಿ ಸಾಧಿಸುವುದಕ್ಕೆ ಸಾಧ್ಯವಾದರೆ, ಅಲ್ಲಿ ಈಗಿರುವುದಕ್ಕಿಂತ ಆರುಪಟ್ಟು ತಲಾ ವರಮಾನ ಹೆಚ್ಚುತ್ತದೆ ಎಂದು ಅವರ ಅಧ್ಯಯನ ತೋರಿಸುತ್ತದೆ.

ಕೆಲಸಗಾರರಲ್ಲಿ ವಿಶ್ವಾಸ ಮೂಡಿಸಿದರೆ ಮತ್ತು ಕಂಪೆನಿ ತಮಗೂ ಸೇರಿದ್ದು ಅನ್ನುವ ಭಾವನೆ ಅವರಲ್ಲಿ ಮೂಡಿದರೆ ಅವರ ಉತ್ಪಾದಕತ್ವ ಶೇಕಡ 56ರಷ್ಟು ಹೆಚ್ಚುತ್ತದೆ, ಶೆಕಡ 50ರಷ್ಟು ಗೈರುಹಾಜರಿಯ ಸಾಧ್ಯತೆಗಳು ಕಡಿಮೆಯಾಗುತ್ತದೆ. ಖಾಯಿಲೆ ರಜಗಳು ಶೇಕಡ 75ರಷ್ಟು ಕಡಿಮೆಯಾಗುತ್ತದೆ ಎಂದು ಹಾರ್ವರ್ಡ್ ಬಿಸಿನೆಸ್ ರಿವ್ಯೂ ಪ್ರಕಟಿಸಿರುವ ಒಂದು ಅಧ್ಯಯನ ತೋರಿಸಿದೆ. “10,000 ಜನರಿರುವ ಕಂಪೆನಿಯಲ್ಲಿ ಇದರಿಂದ 52ಮಿಲಿಯನ್ ಪೌಂಡಿಗೂ ಹೆಚ್ಚು ವಾರ್ಷಿಕ ಉಳಿತಾಯ ಆಗುತ್ತದೆ” ಇದನ್ನು ಒಂದು ದೇಶಕ್ಕೆ ಹಿಗ್ಗಿಸಿ ಲೆಕ್ಕ ಹಾಕಿಕೊಂಡು ನೋಡಿದರೆ ಈ ತಮ್ಮದು, ತಮಗೆ ಸೇರಿದ್ದು ಎಂಬ ಭಾವನೆಯ ಪ್ರಾಮುಖ್ಯ ಆರ್ಥವಾಗುತ್ತದೆ.

2019ರ ಸಂಕ್ಷೋಭೆಗೂ ಮೊದಲೇ ಭಾರತದ ಆರ್ಥಿಕತೆಯ ಹಿನ್ನಡೆ ಪ್ರಾರಂಭವಾಗಿತ್ತು. ಕೈಗಾರಿಕೆ, ಕೃಷಿ, ರಫ್ತು ಇವುಗಳ ಬೆಳವಣಿಗೆಯ ವೇಗ ಕಳೆದ ದಶಕಕ್ಕಿಂತ ಕಡಿಮೆಯಾಗಿತ್ತು. ಈಗ ನಮ್ಮ ಮೂಲಭೂತ ನೈತಿಕ ನಂಬಿಕೆಗಳು ಅಪಾಯದಲ್ಲಿವೆ. ದ್ವೇಷ ಮತ್ತು ವಿಭಜನೆಯನ್ನು ಪ್ರಚೋದಿಸುತ್ತಿರುವುದರಿಂದ ಭಾರತದ ಆರ್ಥಿಕತೆ ಮತ್ತಷ್ಟು ಕುಸಿಯುತ್ತದೆೆ. ನಾವೀಗ ಕಡಿದಾದ ಇಳಿಜಾರಿನಲ್ಲಿ ಕೆಳಕ್ಕೆ ಜಾರುತ್ತಿದ್ದೇವೆ.

ಪಕ್ಷಪಾತವನ್ನು ತಿರಸ್ಕರಿಸೋಣ
ನಾವು ಈ ಹೊತ್ತಿನಲ್ಲಿ ಒಂದು ಕ್ಷಣ ನಿಂತು ನಾವು ವ್ಯಕ್ತಿಗಳಾಗಿ ಏನು ಮಾಡಬೇಕು ಎಂದು ಕೇಳಿಕೊಳ್ಳಬೇಕು. ನಾವು ಈ ಲೇಖನದಲ್ಲಿ ಪ್ರತ್ಯೇಕತಾ ಸಿದ್ದಾಂತಗಳ ವಿರುದ್ಧ ಹೋರಾಡುತ್ತಿರುವ ಯುವ ವಿದ್ಯಾರ್ಥಿಗಳು, ವಿಜ್ಞಾನಿಗಳು, ಹಿಂದುಗಳು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಲ್ಲಿ ಮಾತ್ರ ಮನವಿ ಮಾಡಿಕೊಳ್ಳುತ್ತಿಲ್ಲ. ನಾವು ಹಿಂಸೆಯನ್ನು ಪ್ರಚೋದಿಸುವವರನ್ನೂ ಕೇಳಿಕೊಳ್ಳುತ್ತಿದ್ದೇವೆ. ನಿಮ್ಮ ಹೃದಯವನ್ನು ಹೊಕ್ಕು ನೋಡಿಕೊಳ್ಳಿ, ಹಿಂಸೆಯನ್ನು ಬಿಡಿ. ಲಾಟಿ ಬೀಸುತ್ತಾ ಹೋದರೆ ಪೋಲಿಸರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಜನ ನಂಬುವುದಿಲ್ಲ, ಅವರ ಮಾತನ್ನು ಕೇಳುವುದಿಲ್ಲ. ಅವರು ಇಂದು ಒಂದು ನೈತಿಕ ಘನತೆಯನ್ನು ಕಾಪಾಡಿಕೊಳ್ಳಬೇಕು.

ನಮ್ಮ ಕ್ಯಾಂಪಸ್ಸಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಅರ್ಥವಾಗುತ್ತದೆ ಅನ್ನುವುದು ನಮ್ಮಲ್ಲಿ ಭರವಸೆ ಮೂಡಿಸುತ್ತದೆ. ಯಾವುದೇ ರಾಜಕೀಯ ಪಕ್ಷಗಳಿಗೂ ಸೇರದ ವಿಜ್ಞಾನಿಗಳು, ಪ್ರಮುಖ ಚಿಂತಕರು ಮಾತನಾಡಲು ಪ್ರಾರಂಭಿಸಿರುವುದು ನಮ್ಮಲ್ಲಿ ಭರವಸೆಯನ್ನು ಮೂಡಿಸುತ್ತದೆ. ಇತರ ಧಾರ್ಮಿಕ ಗುಂಪುಗಳ ವಿರುದ್ಧ ಪಕ್ಷಪಾತ ಧೋರಣೆ ಅನುಸರಿಸದ ಸಿಖ್ಖರು, ಎಲ್ಲಾ ಅಲ್ಪಸಂಖ್ಯಾತರನ್ನು ರಕ್ಷಿಸಲು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಜೊತೆಗೆ ನಿಂತಿರುವ ಹಿಂದುಗಳು, ಪ್ರಜಾಪ್ರಭುತ್ವ ಮತ್ತು ಧರ್ಮನಿರಪೇಕ್ಷೆಗೆ ಭಾರತದ ಬದ್ಧತೆಯನ್ನು ಎತ್ತಿಹಿಡಿದ ಜನರು ನಮ್ಮಲ್ಲಿ ವಿಶ್ವಾಸ ಮೂಡಿಸುತ್ತಿದ್ದಾರೆ.

ನಾವು ಒಟ್ಟಾಗಿ ನಿಂತು, ಪ್ರಪಾತದಿಂದ ಹೊರಗೆ ಬಂದುಬಿಟ್ಟರೆ ನಮ್ಮೆಲ್ಲಾ ಸಮಸ್ಯೆಗಳು ಮಾಯವಾಗುತ್ತವೆ ಅಂತಲ್ಲ. ಭಾರತದ್ದು ಕೆಳ ಮಧ್ಯಮ ವರಮಾನದ ಆರ್ಥಿಕತೆ. ಅನ್ಯಾಯ, ಅಸಮಾನತೆ, ನೋವು ಇವೆಲ್ಲಾ ತಕ್ಷಣದಲ್ಲಿ ಇಲ್ಲವಾಗಿಬಿಡುವುದಿಲ್ಲ. ಆದರೂ ದೇಶದಲ್ಲಿ ಇಂದು ಬೋಧಿಸುತ್ತಿರುವ ಪಕ್ಷಪಾತವನ್ನು ಸಂಪೂರ್ಣವಾಗಿ ನಿರಾಕರಿಸಲು ಸಂಕಲ್ಪಿಸಿ, ಅನಂತರ ನಮ್ಮ ಮುಂದಿರುವ ಹಲವು ಸವಾಲುಗಳನ್ನು ಎದುರಿಸಲು ಪ್ರಯತ್ನಿಸಿದರೆ ಆಗ ಏನಾದರೂ ಮಾಡಬಹುದು. ಆಗ ಮಾತ್ರ ಪ್ರಪಾತದಿಂದ ಹೊರಬಂದು, ಕೇವಲ ನಮಗೆ ಮಾತ್ರವಲ್ಲ ಇಡಿ ಜಗತ್ತಿಗೆ ಮಾದರಿಯಾಗಬಲ್ಲ ಸಮಾಜವನ್ನು ಮತ್ತು ಒಂದು ಆರ್ಥಿಕತೆಯನ್ನು ಕಟ್ಟುವ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...