ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನಾಯಕಿ ಸಾಧ್ವಿ ಪ್ರಾಚಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದು, “ಮದರಸಾಗಳ ಮೂಲಕ ‘ಲವ್ ಜಿಹಾದ್’ ಹೇಳಿಕೊಡಲಾಗುತ್ತಿದೆ. ದೇಶದಲ್ಲಿ ಮದರಸಾಗಳನ್ನು ಮುಚ್ಚಬೇಕು” ಎಂದು ಹೇಳಿಕೆ ನೀಡಿದ್ದಾರೆ.
ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಪ್ರೇಮ ಪ್ರಕರಣದಲ್ಲಿ ಸಿಲುಕಿಸಿ, ನಂತರ ಮತಾಂತರ ಮಾಡುತ್ತಾರೆಂಬ ಬಲಪಂಥೀಯ ಪಿತೂರಿ ಸಿದ್ಧಾಂತವಾದ ‘ಲವ್ ಜಿಹಾದ್’ಗೆ ಮದರಸಾಗಳನ್ನು ಥಳುಕಿ ಹಾಕಿರುವ ಅವರು ದ್ವೇಷಯುಕ್ತ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಾಚಿ, “ಹಿಂದೂಗಳು ಕೇವಲ ಹಣ ಗಳಿಸುವ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ ವಿಶೇಷ ಸಮುದಾಯವೊಂದಿದೆ, ಅದು ಭಾರತವನ್ನು ಆಳುವ ಬಗ್ಗೆ ಯೋಚಿಸುತ್ತದೆ. ಭಾರತವನ್ನು ಆಳುವ ಅವರ ಅಜೆಂಡಾ ಸಾವಿರಾರು ವರ್ಷಗಳಿಂದ ಇದೆ. ಅವರು ಏನು ಮಾಡುತ್ತಾರೆ? ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಕ್ಚರ್ ಅಂಗಡಿ ನಡೆಸುತ್ತಾರೆ. ನಗರದ ಯಾವುದೇ ಬೈಲೇನ್ನಲ್ಲಿ ಪಂಕ್ಚರ್ ಅಂಗಡಿ ಏಕೆ ಕಾಣಿಸುವುದಿಲ್ಲ?” ಎಂದು ಪ್ರಶ್ನಿಸಿದ್ದಾರೆ
“ಲವ್ ಜಿಹಾದ್ ಮದರಸಾಗಳಿಂದ ಪ್ರಾರಂಭವಾಗುತ್ತದೆ, ಲವ್ ಜಿಹಾದ್ ಬಗ್ಗೆ ತಿಳಿಸಿಕೊಡಲಾಗುತ್ತದೆ. ಇದೇ ಕಾರಣಕ್ಕಾಗಿ ‘ಲವ್ ಜಿಹಾದ್’ ಹೆಚ್ಚುತ್ತಿದೆ. ಭಾರತದಲ್ಲಿ ಮದರಸಾಗಳು ಮುಚ್ಚಲ್ಪಟ್ಟ ದಿನ, ‘ಲವ್ ಜಿಹಾದ್’ ಅಸ್ತಿತ್ವದಲ್ಲಿ ಇರುವುದಿಲ್ಲ. ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಶಾಂತಿ ಮತ್ತು ಸೌಹಾರ್ದತೆ ಇರಬೇಕು” ಎಂದು ತಿಳಿಸಿದ್ದಾರೆ.
‘ಲವ್ ಜಿಹಾದ್’ ಎಂಬ ಪಿತೂರಿ ಸಿದ್ಧಾಂತವನ್ನು ಬಿಜೆಪಿ ಮತ್ತು ಬಲಪಂಥೀಯ ಕಾರ್ಯಕರ್ತರು ಹೆಚ್ಚಾಗಿ ಮಂಡಿಸುತ್ತಾರೆ. ಆದರೆ ಈ ಕುರಿತು ಕೇಂದ್ರ ಸರ್ಕಾರವೇ ಅಲ್ಲಗಳೆದಿರುವ ಪ್ರಸಂಗಗಳೂ ಇವೆ.
ಭಾರತ ಸರ್ಕಾರವು ಈ ಪದಕ್ಕೆ ಯಾವುದೇ ಮಾನ್ಯತೆ ನೀಡಿಲ್ಲ. 2020ರಲ್ಲಿ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದ ಸಚಿವರು, “ಲವ್ ಜಿಹಾದ್ ಸಂಬಂಧ ಕೇಂದ್ರೀಯ ಸಂಸ್ಥೆಗಳು ಯಾವುದೇ ಪ್ರಕರಣಗಳನ್ನು ದಾಖಲಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದರು.
ಲವ್ ಜಿಹಾದ್ ಎಂಬ ಪದವನ್ನು ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ.
ಲವ್ ಜಿಹಾದ್ನ ಯಾವುದೇ ಪ್ರಕರಣವನ್ನು ಕೇಂದ್ರೀಯ ಸಂಸ್ಥೆಗಳು ವರದಿ ಮಾಡಿಲ್ಲ ಎಂದು ಕಿರಿಯ ಗೃಹ ಸಚಿವ ಜಿ ಕಿಶನ್ ರೆಡ್ಡಿ ಪ್ರತಿಕ್ರಿಯಿಸಿದ್ದರು.
ಮುಂದುವರಿದು ಮಾತನಾಡಿರುವ ಸಾಧ್ವಿ ಪ್ರಾಚಿ, “ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ತಮ್ಮ ಕನಸುಗಳನ್ನು ಕೈಬಿಡಬೇಕು” ಎಂದಿದ್ದಾರೆ.
ಇದನ್ನೂ ಓದಿರಿ: ಸಾಗರದ ದಲಿತ ವಿದ್ಯಾರ್ಥಿನಿ ಪ್ರಕರಣ; ವಸತಿ ಶಾಲೆ ಮುಖ್ಯಸ್ಥನ ವಿರುದ್ಧ ‘ಪೋಕ್ಸೋ’, ‘ಅಟ್ರಾಸಿಟಿ’ ಕೇಸ್ ದಾಖಲು
“ಅವರು ಯುಪಿ ಮುಖ್ಯಮಂತ್ರಿಯಾಗುವುದಿಲ್ಲ ಅಥವಾ ಪ್ರಧಾನಿಯಾಗುವುದಿಲ್ಲ. 2024ರ ಸಂಸತ್ತಿನ ಚುನಾವಣೆಯಲ್ಲೂ ನರೇಂದ್ರ ಮೋದಿ ಗೆಲ್ಲುತ್ತಾರೆ. ಇದು ಜನರಿಗೆ ತಿಳಿದಿದೆ. ಜನರು ನರೇಂದ್ರ ಮೋದಿಯವರಿಗೆ ಮಾತ್ರ ಮತ ಹಾಕುತ್ತಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಉತ್ತರಾಖಂಡ್ ರಾಜ್ಯದಲ್ಲಿ ಯಾವುದೇ ಮಸೀದಿಯನ್ನು ತೆರವು ಮಾಡಿಲ್ಲ. ಅಕ್ರಮ ಸಮಾಧಿಗಳನ್ನು ಮಾತ್ರ ಧ್ವಂಸಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಕೈಗೊಂಡಿರುವುದಾಗಿ ಉತ್ತರಖಾಂಡ್ ಸರ್ಕಾರ ಹೇಳುತ್ತಿದೆ.
“ದೇವಭೂಮಿಯಲ್ಲಿ ಹಿಂದೂಯೇತರರ ಸಂಖ್ಯೆ ಹೆಚ್ಚುತ್ತಿದೆ. ಉತ್ತರಾಖಂಡ್ನ ಹಿಂದೂಗಳು ವಲಸೆ ಹೋಗುತ್ತಿದ್ದಾರೆ” ಎಂದು ಪ್ರಾಚಿ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.