ಮಹಾರಾಷ್ಟ್ರದ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿನ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ನಾಗ್ಪುರ, ನಾಂದೇಡ್ ಮತ್ತು ಛತ್ರಪತಿ ಸಂಭಾಜಿನಗರ ಸೇರಿ ಮೂರು ಆಸ್ಪತ್ರೆಗಳಲ್ಲಿ 78 ಜನರ ಸರಣಿ ಸಾವು ಸಂಭವಿಸಿದೆ.
ನಾಂದೇಡ್ ಮತ್ತು ಛತ್ರಪತಿ ಸಂಭಾಜಿನಗರ ಮತ್ತು ನಾಗ್ಪುರದಲ್ಲಿ ಸಂಭವಿಸಿದ ಈ ಸರಣಿ ಸಾವುಗಳು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (GMCH) ಮತ್ತು ಇಂದಿರಾ ಗಾಂಧಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮತ್ತು ನಾಂದೇಡ್ನಲ್ಲಿರುವ ಡಾ ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾವುಗಳು ವರದಿಯಾಗಿದೆ.
ನಾಗ್ಪುರದ GMCHನಲ್ಲಿ 14 ಮತ್ತು ನಾಗ್ಪುರದ ICGMCHನಲ್ಲಿ 9 ಸಾವುಗಳು ವರದಿಯಾಗಿದೆ. ನಾಗ್ಪುರಕ್ಕೆ ನೆರೆಯ ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳಿಂದ ರೋಗಿಗಳು ಬರುತ್ತಾರೆ. ಭಾನುವಾರ ಮತ್ತು ಮಂಗಳವಾರದ ನಡುವೆ ಎಸ್ಸಿಜಿಎಂಸಿ ನಾಂದೇಡ್ನಲ್ಲಿ 35 ಮಂದಿ ಮೃತಪಟ್ಟಿದ್ದಾರೆ. ಛತ್ರಪತಿ ಸಂಭಾಜಿನಗರದ GMCHನಲ್ಲಿ ಸೋಮವಾರ 18 ಸಾವುಗಳು ಸಂಭವಿಸಿದೆ.
ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ-ಶಿವಸೇನೆ-ಎನ್ಸಿಪಿ ಸರ್ಕಾರವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ವೈದ್ಯರು ಅಥವಾ ಆಸ್ಪತ್ರೆಯ ಸಿಬ್ಬಂದಿಯ ಕಡೆಯಿಂದ ಲೋಪವಾಗಿದೆಯೇ ಎಂಬುದನ್ನು ಕಂಡುಹಿಡಿಯಲು ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸಲಾಗುವುದು. ಉಪಕರಣಗಳು ಮತ್ತು ಔಷಧಿಗಳ ಕೊರತೆ ಆರೋಪದ ಬಗ್ಗೆ ಕೂಡ ತನಿಖೆ ನಡೆಸಲಾಗುವುದು ಎಂದು ಸರಕಾರ ಹೇಳಿದೆ.
ನಾಂದೇಡ್ ಮತ್ತು ಛತ್ರಪತಿ ಸಂಭಾಜಿನಗರದ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವುಗಳನ್ನು ಬಾಂಬೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ಅವರಲ್ಲಿ ವರದಿಯನ್ನು ಸಲ್ಲಿಸುವಂತೆ ಕೇಳಿದೆ.
ಆಸ್ಪತ್ರೆಯ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಔಷಧಿಗಳ ಕೊರತೆಯಿಂದ ಈ ಸಾವುಗಳು ಸಂಭವಿಸುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ಸ್ವಯಂ ಹೊಗಳಿ ಪ್ರಚಾರದ ಕಾರ್ಯಕ್ರಮಗಳನ್ನು ಆಯೋಜಿಸಲು, ಜಾಹೀರಾತುಗಳಿಗಾಗಿ ಮತ್ತು ರಾಜಕಾರಣಿಗಳನ್ನು ಖರೀದಿಸಲು ಸರ್ಕಾರದ ಬಳಿ ಹಣವಿದೆ. ಆದರೆ ಸಾಮಾನ್ಯ ಜನರಿಗೆ ಔಷಧಿಗಳನ್ನು ಖರೀದಿಸಲು ಅವರ ಬಳಿ ಹಣ ಇಲ್ಲ ಎಂದು ಟೀಕಿಸಿದ್ದಾರೆ.
ಇದನ್ನು ಓದಿ: ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಬಗ್ಗೆ ನ್ಯಾಯಾಂಗದ ಮಧ್ಯಸ್ಥಿಕೆ ಕೋರಿ 16 ಮಾದ್ಯಮ ಸಂಸ್ಥೆಗಳಿಂದ ಸಿಜೆಐಗೆ ಪತ್ರ