ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಇಂದೇ ಬಿಜೆಪಿಗೆ ಬಹುಮತ ಸಾಬೀತುಪಡಿಸಬೇಕೆಂದು ಆದೇಶಿಸುವಂತೆ ಸುಪ್ರೀಂ ಕೋರ್ಟ್ನಲ್ಲಿ ಶಿವಸೇನೆ, NCP, ಕಾಂಗ್ರೆಸ್ ವಾದ ಮಂಡಿಸಿವೆ.
ಇಂದು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ವಿಚಾರದ ಕುರಿತು ಮೂರು ಪಕ್ಷಗಳು ಒಟ್ಟಾಗಿ ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಒಪ್ಪಿಕೊಂಡಿದೆ. ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರ ಮೂವರು ನ್ಯಾಯಾಧೀಶರ ಪೀಠವು ಅರ್ಜಿಯನ್ನು ಆಲಿಸುತ್ತಿದೆ. ಬಿಜೆಪಿಯ ಸಾಕಷ್ಟು ಬಹುಮತವಿಲ್ಲದಿದ್ದರೂ ಸಹ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿರುವುದನ್ನು ಮೂರು ಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಅಷ್ಟೇ ಅಲ್ಲದೇ ಶನಿವಾರ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ NCPಯ ಮೂರು ಜನ ಶಾಸಕರು ಈಗ ಉಲ್ಟಾ ಹೊಡೆದಿದ್ದು ಶರದ್ ಪವಾರ್ ಪರ ನಿಂತಿದ್ದಾರೆ. ನಾವು ಗೊತ್ತಿಲ್ಲದೇ ಹೋಗಿದ್ದೆವು ಎಂದು ಮಾಧ್ಯಮದ ಎದುರು ಹೇಳಿದ್ದಾರೆ. ಜೊತೆಗೆ ಅಜಿತ್ ಪವಾರ್ರನ್ನು ಎನ್ಸಿಪಿಯ ಶಾಸಕಾಂಗ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಇವೆಲ್ಲಾ ವಿಚಾರಗಳು ಇಂದು ಸುಪ್ರೀಂ ನಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.
ಶನಿವಾರ ಮುಂಜಾನೆ ನಡೆದ “ಅವಸರದ ಮತ್ತು ತಾತ್ಕಾಲಿಕ” ಸಮಾರಂಭದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಮಹಾರಾಷ್ಟ್ರ ಸಿಎಂ ಆಗಿ ನೇಮಕ ಮಾಡುವ ಗವರ್ನರ್ ಕೊಶ್ಯರಿಯವರ ನಡೆಯನ್ನು ಸಹ ಮೂರು ಪಕ್ಷಗಳು ಪ್ರಶ್ನಿಸಿವೆ.