ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ ಹತ್ತು ವರ್ಷ ಪೂರೈಸಿದ ನೆನಪಿನಲ್ಲಿ ಸಂವಿಧಾನವೇ ಉಸಿರು, ಬಹುತ್ವವೇ ಬದುಕು’ ಹೆಸರಿನಲ್ಲಿ ಒಗ್ಗೂಡುವ ಹಬ್ಬ ನಡೆಯಿತು. ಹಲವು ಚಿಂತಕಿಯರು, ಹೋರಾಟಗಾರ್ತಿಯರು ಭಾಗವಹಿಸಿ ಹೋರಾಟದ ಮಹತ್ವದ ಕುರಿತು ಮಾತನಾಡಿದರು.
ಜೆಎನ್ಯು ನಿವೃತ್ತ ಪ್ರಾಧ್ಯಾಪಕಿ ಜಾನಕಿ ನಾಯರ್ ಮಾತನಾಡಿ, “ಭಾರತದ ಮಹಿಳಾವಾದಿ ಚಳವಳಿ ಸ್ವತಂತ್ರ ಭಾರತದಲ್ಲಿ ಕಾನೂನು ಮತ್ತು ನ್ಯಾಯದ ನಡುವೆ ಇರುವ ಅಂತರವನ್ನು ಬೆಳಕಿಗೆ ತಂದಿದೆ. ಇಂದಿನ ಸಮಾಜದಲ್ಲಿ ಹಕ್ಕುಗಳ ರಕ್ಷಣೆಗೆ ಸಂಪ್ರದಾಯವೇ ಸಾಕು, ಸಂವಿಧಾನದ ಅಗತ್ಯವೇ ಇಲ್ಲವೆಂಬಂತೆ ಬಲಪಂಥೀಯ ದಾಳಿ ನಡೆಯುತ್ತಿದೆ. ಹೀಗಾಗಿ ಸಂವಿಧಾನವೇ ಬದುಕು ಮತ್ತು ಬಹುತ್ವವೇ ಉಸಿರು ಎಂಬ ಹೋರಾಟ ಹಿಂದೆಂದಿಗಿಂತಲೂ ಇಂದು ಅತ್ಯಗತ್ಯವಿದೆ ಎಂದು ಹೇಳಿದರು.
ಎನ್ಎಫ್ಡಿಡಬ್ಲ್ಯೂ ಸಂಘಟನೆಯ ಸ್ಥಾಪಕ ಅಧ್ಯಕ್ಷೆ ರುತ್ ಮನೋರಮಾ ಮಾತನಾಡಿ, “ಇಂದು ನಾವೆಲ್ಲ ಅನುಭವಿಸುತ್ತಿರುವ ಸ್ವಾತಂತ್ಯ್ರವು ಮಹಿಳಾ ಚಳವಳಿಯ ಫಲವೇ ಆಗಿದೆ. ಮಹಿಳೆಯರ ಮೇಲಿನ ಎಲ್ಲ ಬಗೆಯ ದೌರ್ಜನ್ಯಗಳು ಹೆಚ್ಚಾಗಲು ಸಾಮಾಜಿಕ-ಆರ್ಥಿಕ ಪ್ರಾಬಲ್ಯವೇ ಕಾರಣ. ಯುವ ಮಹಿಳೆಯರು ಮನೆಯಿಂದ ಹೊರಬನ್ನಿ, ಅನ್ಯಾಯ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಬೇಕು” ಎಂದು ಕರೆ ನೀಡಿದರು.
“ಕುಟುಂಬ, ಕೆಲಸದ ಸ್ಥಳ, ಸಂಘಟನೆ ಎಲ್ಲೆಡೆ ಜಾತಿ, ಜನಾಂಗೀಯ ಭೇದಗಳಿವೆ. ರಾಜಕೀಯದಲ್ಲಿಯೂ ಇಂತಹ ಭೇದಭಾವಗಳಿವೆ. ದೇಶದೆಲ್ಲೆಡೆ ದ್ವೇಷದ ರಾಜಕಾರಣ ನಡೆಯುತ್ತಿದೆ. ಸಮಾನತೆಯಿಂದ ಮಾತ್ರವೇ ಇದನ್ನು ಹೊಡೆದುರುಳಿಸಲು ಸಾಧ್ಯ.. ಸಮಾನತೆ ಮತ್ತು ಸಾಮಾಜಿಕ ನ್ಯಾಯ ಮಹಿಳೆಯರಿಗೆ ಹುಟ್ಟಿನಿಂದಲೇ ಇರುವ ಹಕ್ಕುಗಳು. ಪ್ರಭುತ್ವವು ಸಂವಿಧಾನ ಮತ್ತು ಮಹಿಳೆಯರ ಹಕ್ಕುಗಳನ್ನು ಗೌರವಿಸಬೇಕು” ಎಂದು ಹೇಳಿದರು.
ಮನೆಯೊಳಗೆ ಹೆಣ್ಣು, ಹೊರಗೆ ಗಂಡು ಎಂಬ ವರ್ಗೀಕರಣದ ಮಾದರಿಗಳನ್ನು ಒಡೆದು ಸಮಾಜದಲ್ಲಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ಆರಂಭವಾಗಬೇಕು. ಮಹಿಳೆಯ ಜಗತ್ತು ಯಾವಾಗ ಮನೆಯಿಂದ ಆಚೆಗೆ ವಿಸ್ತರಿಸುತ್ತದೆಯೋ ಅಂದು ಮಹಿಳಾ ವಿಮೋಚನೆಯ ಹಾದಿ ತೆರೆದುಕೊಳ್ಳಲಾರಂಭಿಸುತ್ತದೆ ಎಂದು ಲೇಖಕಿ ಎನ್ ಗಾಯತ್ರಿ ಅಭಿಪ್ರಾಯಪಟ್ಟರು.
‘‘ಹೆಣ್ಣಿನ ಅಸ್ಮಿತೆಯನ್ನು ಸ್ಥಾಪಿಸಿಕೊಳ್ಳುವುದು, ಮಹಿಳಾ ಅಜೆಂಡಾಗಳು ರಾಜಕೀಯ ಹೋರಾಟವಾಗಬೇಕು. ಸಂವಿಧಾನದಲ್ಲಿ ಸ್ತ್ರೀ-ಪುರುಷ ಸಮಾನತೆಯ ಬಗ್ಗೆ ಮಾತನಾಡುವಾಗಲು ಸಮಾಜದೊಳಗೆ ಇರುವ ಅಸಮಾನತೆ ವಿರುದ್ಧ ಹೋರಾಟ ಹೇಗೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಹೆಣ್ಣಿನ ಅಸ್ಮಿತೆಯನ್ನು ಸ್ಥಾಪಿಸಿಕೊಳ್ಳುವ ಯೋಚನೆ ಮತ್ತು ಚಿಂತನೆ ಬಂದಾಗ ಮಾತ್ರ ಚರಿತ್ರೆಯನ್ನು ದಾಖಲಿಸಬೇಕು ಎನ್ನುವ ಮನೋಭಾವ ಮೂಡಲು ಸಾಧ್ಯ” ಎಂದರು.
“ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಬೇಕು-ಬೇಡ ಎನ್ನುವ ವಿಷಯ ಬಂದಾಗ ಎಲ್ಲ ಪಕ್ಷಗಳಲ್ಲಿರುವ ಮಹಿಳೆಯರು ಮಾತನಾಡುತ್ತಾರೆ. ಆದರೆ, ಅತ್ಯಾಚಾರ, ದೌರ್ಜನ್ಯದ ವಿಷಯ ಬಂದಾಗ ಆ ಮಹಿಳೆಯರು ಧ್ವನಿ ಎತ್ತದೇ ಇರುವುದು ಆಶ್ಚರ್ಯ. ಸಂಸತ್ತಿನಲ್ಲಿ ಮಹಿಳೆಯರು ಹೆಚ್ಚಿರಬೇಕು ಎಂದು ಹೇಳಲಾಗುತ್ತದೆ. ಆದರೆ, ಇರುವ ಮಹಿಳೆಯರು ಧ್ವನಿ ಎತ್ತಿ ಮಾತನಾಡಿದಾಗ ಅವರ ಚಾರಿತ್ರ್ಯವಧೆ ಮಾಡುವ, ನಿಂದಿಸಿರುವ ಹಲವು ಉದಾಹರಣೆಗಳಿವೆ. ಕರ್ನಾಟಕದ ವಿಧಾನಸಭೆಯಲ್ಲಿಯೇ ಜನಪ್ರತಿನಿಧಿಗಳು ಮಹಿಳೆಯರ ಬಗ್ಗೆ ಮಾತನಾಡಿದಾಗ, ಆ ಸಭೆಯಲ್ಲಿದ್ದ ಮಹಿಳೆಯರು ಮೌನವಹಿಸಿದ್ದನ್ನು ನೋಡಬಹುದು. ರಾಜಕೀಯದಲ್ಲಿ ಮಹಿಳೆಯರು ಒಗ್ಗಟ್ಟಿನಿಂದ ಇಂತಹ ದೌರ್ಜನ್ಯಗಳ ವಿರುದ್ಧ ಮಾತನಾಡಬೇಕಿದೆ” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿವಿಯ ನಿವೃತ್ತ ಕುಲಪತಿ ಸಬಿಹಾ ಭೂಮಿಗೌಡ, “ಜನಸಂಖ್ಯೆಯ ಅರ್ಧದಷ್ಟಿರುವ ನಾವು ಒಂದು ವರ್ಗವಾಗಿ, ಒಂದು ಶಕ್ತಿಯಾಗಲು ಸಾಧ್ಯವಾಗಿಲ್ಲ ಏಕೆ?. ಈ ನಿಟ್ಟಿನಲ್ಲಿ ನಾವೆಲ್ಲರೂ ಮಹಿಳೆಯಾಗಿ ಒಗ್ಗೂಡಲು ಏಕೆ ಸೋತಿದ್ದೇವೆ?. ನಮಗಾಗುತ್ತಿರುವ ಅಡ್ಡಿಯಗಳೇನು? ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ” ಎಂದರು.
“ಮಹಿಳೆ ಎನ್ನುವ ಏಕೈಕ ಕಾರಣಕ್ಕಾಗಿ ನಾವೆಲ್ಲರೂ ಒಂದುಗೊಡಲು ಈವರೆಗೂ ಸಾಧ್ಯವಾಗಿಲ್ಲ. ಅದಕ್ಕೆ ವಾತಾವರಣ ವಲಯ ಎಲ್ಲವೂ ಕಾರಣ. ನಾವು ಶಕ್ತಿಯಾಗಿ ರೂಪುಗೊಳ್ಳದೇ ಇರಲು ಜಾತಿ, ಧರ್ಮ, ಭಾಷೆ, ಆಹಾರ, ವೃತ್ತಿ, ಶಿಕ್ಷಣ ಹೀಗೆ ನೂರಾರು ಕಂಪಾರ್ಟ್ಮೆಂಟ್ಗಳ ಒಳಗೆ ಸಿಲುಕಿದ್ದೇವೆ. ಇವೆಲ್ಲದರಿಂದ ಹೊರಗೆ ಬರಲು ಸಾಧ್ಯವಾದ ದಿನ ನಾವು ಎಲ್ಲರೂ ಒಂದು ಶಕ್ತಿಯಾಗಿ ಕೆಲಸ ಮಾಡಲು ಸಾಧ್ಯ” ಎಂದು ತಿಳಿಸಿದರು.
“ಉಳಿದ ಚಳವಳಿ, ಹೋರಾಟ ವಲಯಗಳಲ್ಲಿ ಶೋಷಕ ವರ್ಗಗಳು ಸ್ಫುಟವಾಗಿ ಕಾಣುವಂತೆ ಮಹಿಳೆಯನ್ನು ಶೋಷಿರುತ್ತಿರುವವರು ಹಾಗೆ ಕಾಣುವುದಿಲ್ಲ. ಏಕೆಂದರೆ, ಇದು ನಮ್ಮ ಭಾವ ಜಗತ್ತಿನ ಒಳಗೆ ಸ್ಥಾಪಿತರಾದವರ ಜೊತೆಗೆ ನಮ್ಮ ನಿರಂತರ ಗುದ್ದಾಟ ಇದೆ. ಆದ್ದರಿಂದಲೇ ಇದು ಕಾಣುವುದಿಲ್ಲ. ನಮ್ಮನ್ನು ಈ ರೀತಿ ಕಟ್ಟಿಹಾಕಿರುವ ಎಲ್ಲ ಗೋಡೆಗಳನ್ನು ಒಡೆದು, ಅರಿವಿನ ಮೂಲಕ ಹೊರಬರಬೇಕಿದೆ” ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಎಚ್.ಎಸ್ ಅನುಪಮಾ, ಸುನಂದಾ ಕಡಮೆ, ಸಬಿತಾ ಬನ್ನಾಡಿ, ಮಲ್ಲಿಗೆ, ಆರ್ ಪ್ರತಿಭಾ, ರತಿರಾವ್, ಸುಮನಾ, ವಾಣಿ ಪೆರಿಯೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ; ಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ?: ಲೇಖಕಿ ಬಾನು ಮುಷ್ತಾಕ್ ಪ್ರಶ್ನೆ