ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಟಿಕೆಟ್ ಕೈತಪ್ಪಿರುವುದರಿಂದ ಬಂಡಾಯವೆದ್ದಿರುವ ಹೂಡಿ ವಿಜಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅವರ ಬೆಂಬಲಿಗರು ತಮ್ಮ ಕಚೇರಿಗಳಲ್ಲಿ ಹಾಕಿದ್ದ ಮೋದಿ ಫೋಟೊ ಕಿತ್ತೊಗೆದು, ಬಿಜೆಪಿಯ ವಿವಿಧ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ.
ಜೆಡಿಎಸ್ನಲ್ಲಿದ್ದ ಮಾಜಿ ಶಾಸಕರಾದ ಕೆ.ಎಸ್ ಮಂಜುನಾಥ್ ಗೌಡರು ಇತ್ತೀಚೆಗೆ ಬಿಜೆಪಿ ಸೇರಿ ಟಿಕೆಟ್ ಪಡೆದಿದ್ದಾರೆ. ಇದರಿಂದ ಮೂಲ ಬಿಜೆಪಿಗರು ರೊಚ್ಚಿಗೆದ್ದಿದ್ದು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
#BREAKING: Farmer Morcha, SC Morcha, Mahila Morcha, Parent Body Secretary, Core Committee, Prakoshta Members Tenders primary resignation to the BJP.!
BJP IS IN BIG TROUBLE..!
Not A Good News For the LAPDOGS & its leader.!!#KarnatakaElection2023#KarnatakaKurukshetra2023 pic.twitter.com/IhsHIq1wXD
— Gururaj Anjan (@Anjan94150697) April 13, 2023
ನಾಲ್ಕು ವರ್ಷದಿಂದ ಸಮಾಜ ಸೇವೆ ಮಾಡಿದ್ದೇನೆ. ಬಿಜೆಪಿ ಪಕ್ಷ ಕಟ್ಟಿದ್ದೇನೆ. ಆದರೆ ಪಕ್ಷದ ಮುಖಂಡರೆ ನನಗೆ ಟಿಕೆಟ್ ತಪ್ಪಿಸಿ ಜೆಡಿಎಸ್ನಿಂದ ಬಂದವರಿಗೆ ಟಿಕೆಟ್ ನೀಡಿದ್ದಾರೆ. ಇದರಿಂದ ನೋವಾಗಿದ್ದು, ಕಾರ್ಯಕರ್ತರ ಮಾತಿಗೆ ಬೆಲೆ ಕೊಟ್ಟು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೂಡಿ ವಿಜಯ್ ಕುಮಾರ್ ಘೋಷಿಸಿದ್ದಾರೆ.
ಬೆಂಬಲಿಗರ ಸಭೆ ಮುಗಿದ ಕೂಡಲೇ ಸಿಟ್ಟಿಗೆದ್ದ ವಿಜಯ್ ಕುಮಾರ್ ಬೆಂಬಲಿಗರು ತಮ್ಮ ಮನೆಗಳಲ್ಲಿ ಹಾಕಿದ್ದ ಮೋದಿ ಫೋಟೊ ಕಿತ್ತು ಎಸೆದಿದ್ದಾರೆ. ಬಿಜೆಪಿ ಬಾವುಟಗಳನ್ನು ವಿಲೇವಾರಿ ಮಾಡಿದ್ದಾರೆ. ಆದರೆ ವಿಜಯ್ ಕುಮಾರ್ ಹೊಸದಾಗಿ ಕಟ್ಟಿಸಿದ ತಮ್ಮ ಮನೆಗೆ ಮೋದಿ ನಿವಾಸ ಎಂದು ಹೆಸರಿಟ್ಟಿದ್ದರು. ಅವರು ಏನು ಮಾಡುತ್ತಾರೆ ಕಾದು ನೋಡಬೇಕಿದೆ.
ಕಾಂಗ್ರೆಸ್ನಿಂದ ಹಾಲಿ ಶಾಸಕ ಕೆ.ವೈ ನಂಜೇಗೌಡರವರಿಗೆ ಟಿಕೆಟ್ ದೊರಕಿದೆ. ಜೆಡಿಎಸ್ ರಾಮೇಗೌಡರಿಗೆ ಟಿಕೆಟ್ ಘೋಷಿಸಿದೆ. ಇನ್ನು ಬಿಜೆಪಿ ಟಿಕೆಟ್ ಕೆ.ಎಸ್ ಮಂಜುನಾಥ್ ಗೌಡರ ಪಾಲಾಗಿದೆ. ಟಿಕೆಟ್ ವಂಚಿತ ಹೂಡಿ ವಿಜಯ್ ಕುಮಾರ್ ಪಕ್ಷೇತರರಾಗಿ ಮಾಲೂರಿನಲ್ಲಿ ಕಣಕ್ಕಿಳಿಯಲಿದ್ದಾರೆ. ಈ ನಾಲ್ವರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ.
ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಲಕ್ಷ್ಮಣ್ ಸವದಿ ಬಿಜೆಪಿ ತೊರೆದಿದ್ದಾರೆ. ಜಗದೀಶ್ ಶೆಟ್ಟರ್ ಬಂಡಾಯ ಸ್ಪರ್ಧೆ ಸುಳಿವು ನೀಡಿದ್ದಾರೆ. ಗೂಳಿಹಟ್ಟಿ ಶೇಖರ್ ಬಂಡಾಯ ಅಭ್ಯರ್ಥಿಯಾಗುವುದಾಗಿ ಘೋಷಿಸಿದ್ದಾರೆ. ಸುಳ್ಯ ಕ್ಷೇತ್ರದ ಶಾಸಕರೂ ಆಗಿರುವ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರಿಗೆ ಟಿಕೆಟ್ ಸಿಗದಿರುವ ಕಾರಣಕ್ಕೆ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಉಡುಪಿ ಟಿಕೆಟ್ ಸಿಗದ ರಘುಪತಿ ಭಟ್ ಕಣ್ಣೀರು ಹಾಕಿದ್ದಾರೆ. ನಿನ್ನೆಯೇ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ತುಮಕೂರು ನಗರದ ಸೊಗಡು ಶಿವಣ್ಣ ಬಿಜೆಪಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಕುಣಿಗಲ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮುದ್ದಹನುಮೇಗೌಡ ಮತ್ತು ರಾಜೇಶ್ ಗೌಡ ಕೂಡ ಬಂಡಾಯದ ಬಾವುಟ ಹಾರಿಸಿದ್ದಾರೆ. ಜೇವರ್ಗಿಯ ದೊಡ್ಡಪ್ಪಗೌಡ ಪಾಟೀಲ್ ಬಿಜೆಪಿ ತೊರೆದು ಜೆಡಿಎಸ್ನತ್ತ ಮುಖ ಮಾಡಿದ್ದಾರೆ. ಮಾಲೂರಿನಲ್ಲಿ ಹೂಡಿ ವಿಜಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಲಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: ಮೂರೂ ಪ್ರಮುಖ ಪಕ್ಷಗಳಲ್ಲಿ ಟಿಕೆಟ್ ಮತ್ತು ಮುಖ್ಯಮಂತ್ರಿ ಆಕಾಂಕ್ಷಿಗಳ ಹಗ್ಗಜಗ್ಗಾಟ