ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದ್ದು, ಬಿಜೆಪಿ-ತೃಣಮೂಲ ಕಾಂಗ್ರೆಸ್ ಆರೋಪ -ಪ್ರತ್ಯಾರೋಪಗಳಲ್ಲಿ ಮುಳುಗಿವೆ. ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಂಗಾಳವನ್ನು “ಗಲಭೆ ಪೀಡಿತ ಗುಜರಾತ್” ಆಗಿ ಪರಿವರ್ತಿಸಲು ಎಂದಿಗೂ ಅನುಮತಿಸುವುದಿಲ್ಲ’ ಎಂದಿದ್ದಾರೆ.
ಬಿಜೆಪಿ ಹೊರಗಿನವರ ಪಕ್ಷವಾಗಿದ್ದು, ಅದಕ್ಕೆ ರಾಜ್ಯದಲ್ಲಿ ಸ್ಥಾನವಿಲ್ಲ ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಂಗಾಳವನ್ನು “ಗಲಭೆ ಪೀಡಿತ ಗುಜರಾತ್” ಆಗಿ ಪರಿವರ್ತಿಸಲು ಎಂದಿಗೂ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.
ದೇಶದ ಗಡಿಯಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಆದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣೆಯಲ್ಲಿ ಏಕೆ ನಿರತರಾಗಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ತಮ್ಮ ವೃತ್ತಿಜೀವನದಲ್ಲಿ ಇಂತಹ “ಗೃಹ ಸಚಿವರನ್ನು” ನೋಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ನನ್ನ ಜೈಲಿಗೆ ಹಾಕಿದರೂ, ಅಲ್ಲಿಂದಲೇ ಪಕ್ಷವನ್ನು ಗೆಲ್ಲಿಸುವೆ-ಮಮತಾ ಬ್ಯಾನರ್ಜಿ
“ಪಶ್ಚಿಮ ಬಂಗಾಳದಲ್ಲಿ ಹೊರಗಿನವರಿಗೆ ಸ್ಥಾನವಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ರಾಜ್ಯಕ್ಕೆ ಬಂದು ರಾಜ್ಯದ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸುವವರಿಗೆ ರಾಜ್ಯದಲ್ಲಿ ಸ್ವಾಗತವಿಲ್ಲ” ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.
ಬಿಜೆಪಿ ಇತ್ತೀಚೆಗೆ ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆ, ರಾಜ್ಯವನ್ನು ಐದು ಸಾಂಸ್ಥಿಕ ವಲಯಗಳಾಗಿ ವಿಂಗಡಿಸಿ ಕೇಂದ್ರ ನಾಯಕರಿಗೆ ವಲಯಗಳ ಉಸ್ತುವಾರಿ ವಹಿಸಿದೆ. “ಬಿಜೆಪಿ ಅವರು ಪಶ್ಚಿಮ ಬಂಗಾಳವನ್ನು ಗುಜರಾತ್ ಆಗಿ ಪರಿವರ್ತಿಸುವುದಾಗಿ ಹೇಳುತ್ತಿದ್ದಾರೆ. ನಮ್ಮ ಬಂಗಾಳವನ್ನು ಗುಜರಾತ್ ನಂತಹ ಗಲಭೆ ಪೀಡಿತ ಸ್ಥಳವನ್ನಾಗಿ ಮಾಡಲು ಅವರು ಏಕೆ ಬಯಸುತ್ತಾರೆ..? ನಮಗೆ ಗಲಭೆಗಳು ಬೇಡ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನಿನ್ನೆ ಕೂಡ ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದ ಮಮತಾ ಬ್ಯಾನರ್ಜಿ, ಬಿಜೆಪಿ “ಸುಳ್ಳಿನ ಕಸ” ಮತ್ತು “ರಾಷ್ಟ್ರದ ಅತಿದೊಡ್ಡ ಶಾಪ” ಎಂದು ವಾಗ್ದಾಳಿ ನಡೆಸಿದ್ದರು. ಬಿಜೆಪಿ ನನ್ನನ್ನು ಬಂಧಿಸಲು ಧೈರ್ಯಮಾಡಿದರು ಕೂಡ, ಜೈಲಿನಿಂದಲೇ ಮುಂದಿನ ಚುನಾವಣೆಯನ್ನು ಎದುರಿಸಿ, ಟಿಎಂಸಿ ಪಕ್ಷವನ್ನು ಗೆಲ್ಲಿಸುತ್ತೇನೆ‘ ಎಂದು ಸವಾಲು ಹಾಕಿದ್ದರು.
ಪಶ್ಚಿಮ ಬಂಗಾಳ ಚುನಾವಣೆ ಮೇಲೆ ಕಣ್ಣೀಟ್ಟಿರುವ ಬಿಜೆಪಿ ಸರ್ಕಾರ ತೃಣಮೂಲ ಕಾಂಗ್ರೆಸ್ ಆಡಳಿತವನ್ನು ಗೂಂಡಾ ರಾಜ್ಗೆ ಹೋಲಿಸಿದೆ. ರಾಜ್ಯದಲ್ಲಿರುವ ಪೊಲೀಸ್ ಪಡೆ ಗೂಂಡಾ ರಾಜ್ ಸರ್ಕಾರದ ವಿರುದ್ದ ಏನೂ ಮಾಡುವುದಿಲ್ಲ ಎಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿ ರ್ಯಾಲಿಯಲ್ಲೂ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.