ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡವೊಂದರ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿತ್ತು, ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 2022ರಲ್ಲಿ ‘ಪಟಾಕಿ ಸಿಡಿದ” ಘಟನೆಯನ್ನು ಮುಂದಿಟ್ಟು ಎನ್ಐಎ ತಂಡವು ಮುಂಜಾನೆ ಹಲವಾರು ಮನೆಗಳಿಗೆ ನುಗ್ಗಿದೆ, ಈ ವೇಳೆ ಆತ್ಮ ರಕ್ಷಣೆಗೆ ಗ್ರಾಮಸ್ಥರು ಪ್ರತಿರೋಧ ತೋರಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಸ್ಥಳೀಯರ ಮೇಲೆ ಎನ್ಐಎ ದಾಳಿ ನಡೆಸಿದೆ ಎಂದು ಆರೋಪಿಸಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ದಾಳಿಯ ನೇತೃತ್ವ ವಹಿಸಿದವರು ಯಾರು? ಮಹಿಳೆಯರು ದಾಳಿ ಮಾಡಲಿಲ್ಲ, ಎನ್ಐಎ ದಾಳಿ ನಡೆಸಿತ್ತು. ಮಧ್ಯರಾತ್ರಿಯ ನಂತರ ಯಾರಾದರೂ ಮಹಿಳೆಯರಿರುವ ಮನೆಗೆ ನುಗ್ಗಿ ಅವರಿಗೆ ಹಿಂಸಿಸಿದರೆ, ಮಹಿಳೆಯರು ಏನು ಮಾಡಬೇಕು? ಅವರು ಕುಳಿತುಕೊಂಡು ನೋಡಬೇಕೆ? ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಲ್ಲವೇ ಮತ್ತು ತಮ್ಮ ಘನತೆಯನ್ನು ಕಾಪಾಡಬೇಕಲ್ಲವೇ? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಮಧ್ಯರಾತ್ರಿಯ ನಂತರ ಕೆಲವು ಅಪರಿಚಿತರು ಗ್ರಾಮಕ್ಕೆ ಪ್ರವೇಶಿಸುವುದನ್ನು ಗ್ರಾಮಸ್ಥರು ನೋಡಿದರೆ, ಅವರು ಹೇಗೆ ಗುರುತಿಸುತ್ತಾರೆ? ಚುನಾವಣೆಗೂ ಮುನ್ನವೇಕೆ ಜನರನ್ನು ಬಂಧಿಸಲಾಗುತ್ತಿದೆ? ಟಿಎಂಸಿಯ ಎಲ್ಲಾ ಬೂತ್ ಏಜೆಂಟ್ಗಳನ್ನು ಬಂಧಿಸಿ ನಂತರ ಬಿಜೆಪಿ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇಟ್ಟುಕೊಂಡಿದೆಯಾ? ಬಿಜೆಪಿಯನ್ನು ಬೆಂಬಲಿಸಲು ಈ ಬಂಧನಗಳನ್ನು ಮಾಡಲಾಗಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.
ಭೂಪತಿನಗರದಲ್ಲಿ ನಡೆದ ದಾಳಿಯಲ್ಲಿ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ ಮತ್ತು ವಾಹನಕ್ಕೆ ಹಾನಿಯಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿಳಿಸಿದೆ. ಗವರ್ನರ್ ಸಿವಿ ಆನಂದ ಬೋಸ್, ತನಿಖಾ ಸಂಸ್ಥೆಗಳನ್ನು ಬೆದರಿಸುವ ಯಾವುದೇ ಪ್ರಯತ್ನವು ಯಾರಿಗೂ ಒಳಿತನ್ನು ತರುವುದಿಲ್ಲವಾದ್ದರಿಂದ ಈ ವಿಷಯವನ್ನು ಗಂಭೀರತೆಯಿಂದ ಪರಿಗಣಿಸಬೇಕು ಎಂದು ಹೇಳಿದರು.
ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷವು ಇದು ರಾಜ್ಯ ಪ್ರಾಯೋಜಿತ ದಾಳಿ ಎಂದು ಆರೋಪಿಸಿತು ಮತ್ತು ಬ್ಯಾನರ್ಜಿ ಅವರು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಡಿಸೆಂಬರ್ 3, 2022ರಂದು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ರಾಜ್ಕುಮಾರ್ ಮನ್ನಾ ಅವರ ಮನೆಯಲ್ಲಿ ನಡೆದ ಸ್ಫೋಟದಲ್ಲಿ ಮನ್ನಾ ಮತ್ತು ಇಬ್ಬರು ಪಕ್ಷದ ಕಾರ್ಯಕರ್ತರಾದ ಬಿಸ್ವಜಿತ್ ಗಯೆನ್ ಮತ್ತು ಬುದ್ಧದೇಬ್ ಮನ್ನಾ ಸೇರಿದಂತೆ ಮೂವರು ಸಾವನ್ನಪ್ಪಿದ್ದರು.
ಮಾರ್ಚ್ 2023ರಲ್ಲಿ, ಕಲ್ಕತ್ತಾ ಹೈಕೋರ್ಟ್ ಘಟನೆಯ ಬಗ್ಗೆ NIA ತನಿಖೆಗೆ ಆದೇಶಿಸಿದೆ. ಸಂಸ್ಥೆಯು ಕಳೆದ ವರ್ಷ ಜೂನ್ನಲ್ಲಿ ತನ್ನ ತನಿಖೆಯನ್ನು ಪ್ರಾರಂಭಿಸಿದೆ ಮತ್ತು 8 ಟಿಎಂಸಿ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಿಗೆ ಸಮನ್ಸ್ ಕಳುಹಿಸಿದೆ ಆದರೆ ಅವರು ವಿಚಾರಣೆಗೆ ಹಾಜರಾಗದೆ ತಪ್ಪಿಸಿದ್ದರು ಎನ್ನಲಾಗಿದೆ.
ಎನ್ಐಎ ಅಧಿಕಾರಿಗಳ ಮೇಲೆ ಶನಿವಾರ ಬಹುತೇಕ ಮಹಿಳೆಯರನ್ನು ಒಳಗೊಂಡಂತೆ ಸ್ಥಳೀಯರು ದಾಳಿ ಮಾಡಿದ್ದಾರೆ. ಎನ್ಐಎ ತಂಡವನ್ನು ತಡೆಯಲು ರಸ್ತೆಯನ್ನು ತಡೆ ಹಿಡಿಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಜಾನೆ 5.30ರ ಸುಮಾರಿಗೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ ಎನ್ಐಎ ಅಧಿಕಾರಿಗಳು ತೆರಳುತ್ತಿದ್ದಾಗ ಸ್ಥಳೀಯರು ವಾಹನವನ್ನು ತಡೆದು ಕಲ್ಲು, ಇಟ್ಟಿಗೆಗಳನ್ನು ತೂರಾಟ ನಡೆಸಿದ್ದರು. ನಾವು ಈ ಬಗ್ಗೆ ಎನ್ಐಎಯಿಂದ ದೂರು ಸ್ವೀಕರಿಸಿದ್ದೇವೆ, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಇದನ್ನು ಓದಿ: ದಿನೇಶ್ ಗುಂಡೂರಾವ್ ಮನೆಯಲ್ಲೇ ಅರ್ಧ ಪಾಕಿಸ್ತಾನ ಇದೆ ಎಂದ ಯತ್ನಾಳ್: ಕ್ರಮಕ್ಕೆ ಆಗ್ರಹಿಸಿದ ತಬು ರಾವ್