ಹಿಜಾಬ್- ಕೇಸರಿ ಶಾಲು ವಿವಾದದ ಹಿನ್ನೆಲೆ ರಜೆ ಘೋಷಿಸಲಾಗಿದ್ದ ಪ್ರೌಢಶಾಲೆಗಳು ಇಂದಿನಿಂದ ಪುನರಾರಂಭಗೊಂಡಿವೆ. ರಾಜ್ಯದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಯಾವುದೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿವೆ. ಇದರ ನಡುವೆ ಮಂಡ್ಯದಲ್ಲಿ ಹಿಜಾಬ್ ಧರಿಸಿದ ಶಿಕ್ಷಕಿಯರಿಗೂ ಪ್ರವೇಶ ನಿರಾಕರಿಸಲಾಗಿದೆ.
ವಿದ್ಯಾರ್ಥಿಗಳು ಯಾವುದೇ ಧರ್ಮವನ್ನು ಸೂಚಿಸುವಂತಹ ಬಟ್ಟೆ ಧರಿಸಿ ಬರಬಾರದು ಎಂಬ ಹೈಕೋರ್ಟ್ ಮಧ್ಯಂತರ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ. ಈ ನಡುವೆಯೇ ಮಂಡ್ಯದ ರೋಟರಿ ವಿದ್ಯಾಸಂಸ್ಥೆಯಲ್ಲಿ ಹಿಜಾಬ್ ಧರಿಸಿ ಬರಿವ ಶಿಕ್ಷಕಿಯರಿಗೂ ಪ್ರವೇಶ ನಿರಾಕರಿಸಲಾಗಿದ್ದು, ಶಾಲೆಯ ಗೇಟ್ ಬಳಿಯೇ ಹಿಜಾಬ್, ಬುರ್ಕಾ ತೆಗೆದಿಟ್ಟು ಒಳ ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.
ಹಿಜಾಬ್ ಧರಿಸಿ ಬರುವ ಶಿಕ್ಷಕರಿಗೂ ಕ್ಯಾಂಪಸ್ ಒಳಗೆ ಪ್ರವೇಶ ನೀಡದಂತೆ ಮಂಡ್ಯ ಜಿಲ್ಲಾಡಳಿತ ಸೂಚನೆ ನೀಡಿದೆ. ಶಿಕ್ಷಕರು ಶಾಲೆ ಅಥವಾ ಕಾಲೇಜಿಗೆ ಪ್ರವೇಶಿಸುವ ಮೊದಲು ಗೇಟ್ನಲ್ಲಿಯೇ ಹಿಜಾಬ್ ಅನ್ನು ತೆಗೆದುಹಾಕಬೇಕು ಎಂದು ಆದೇಶಿಸಲಾಗಿದೆ ಎಂದು ಟೈಮ್ಸ್ ನೌ ಪತ್ರಕರ್ತ ಇಮ್ರಾನ್ ಖಾನ್ ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಪ್ರೌಢಶಾಲೆಗಳು ಆರಂಭ: ಶಾಂತಿ ಮತ್ತು ಸಹಜತೆ ನೆಲೆಸಲಿದೆ ಎಂದ ಸಿಎಂ
#Mandya dist administration has instructed even the teachers to be not allowed inside campus with #hijab. They should remove the hijab at the gate itself before entering school or college. #KarnatakaHijabRow #HijabControversy #Karnataka pic.twitter.com/bt33RTTmgp
— Imran Khan (@KeypadGuerilla) February 14, 2022
ಶಾಲೆಗೆ ಬಂದ ಬುರ್ಕಾ ಹಾಗೂ ಹಿಜಾಬ್ ತೊಟ್ಟು ವಿದ್ಯಾರ್ಥಿನಿಯರನ್ನ ಶಾಲಾ ಆಡಳಿತ ಮಂಡಳಿಯವರು ಗೇಟ್ ಬಳಿಯೇ ತಡೆದು ನಿಲ್ಲಿಸಿದ್ದಾರೆ. ಬುರ್ಕಾ, ಹಿಜಾಬ್ ತೆಗೆದ ನಂತರವೇ ಶಾಲೆಯ ಒಳಗೆ ಹೋಗಲು ಅವಕಾಶ ನೀಡಲಾಗಿದೆ.
ಪ್ರೌಢಶಾಲೆಗಳು ಆರಂಭದ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “10ನೇ ತರಗತಿವರೆಗಿನ ಪ್ರೌಢಶಾಲೆಗಳು ಪುನರಾರಂಭಗೊಳ್ಳಲಿವೆ. ಶಾಂತಿ ಸಮಿತಿ ಸಭೆ ನಡೆಸುವಂತೆ ಡಿಸಿಗಳು, ಎಸ್ಪಿಗಳು ಮತ್ತು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದೇನೆ. ಪರಿಸ್ಥಿತಿ ಅವಲೋಕಿಸಿದ ಕಾಲೇಜುಗಳು ಆರಂಭದ ಬಗ್ಗೆ ರ್ಧಾರ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದರು.
ಹಿಜಾಬ್ ಧರಿಸಿ ಕಾಲೇಜು ಪ್ರವೇಶ ಕೋರಿ ಸಲ್ಲಿಸಿದ್ದ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯರ ಅರ್ಜಿಯನ್ನು ಆಲಿಸುತ್ತಿದ್ದ ವಿಸ್ಕೃತ ಪೀಠ ಇಂದು (ಫೆ.14) ಮಧ್ಯಾಹ್ನ 2.30ಕ್ಕೆ ಪ್ರಕರಣದ ವಿಚಾರಣೆ ಪುನರಾರಂಭಿಸಲಿದೆ.
ಇದನ್ನೂ ಓದಿ: ಹಿಜಾಬ್ – ಕೇಸರಿ ಶಾಲು ವಿವಾದ: ಉಡುಪಿಯ ಪ್ರೌಢಶಾಲಾ ವ್ಯಾಪ್ತಿಯಲ್ಲಿ ಫೆ.14 ರಂದು ನಿಷೇಧಾಜ್ಞೆ ಜಾರಿ