ಮಂಗಳೂರಿನ ಧಾರ್ಮಿಕ ಕೇಂದ್ರಗಳ ಕಾಣಿಕೆ ಡಬ್ಬಿಗಳಿಗೆ ಕಾಂಡೋಮ್ ಮತ್ತು ಭಿತ್ತಿ ಪತ್ರಗಳನ್ನು ಹಾಕಿರುವ ಪ್ರಕರಣದಲ್ಲಿ 62 ವರ್ಷದ ದೇವದಾಸ ದೇಸಾಯಿ ಎಂಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸರು ಬುಧವಾರ ತಿಳಿಸಿದ್ದಾರೆ. ಆರೋಪಿಯೂ ಮಂಗಳೂರಿನ ದೈವಸ್ಥಾನ, ದೇವಸ್ಥಾನ, ಮಸೀದಿ ಮತ್ತು ಸಿಖ್ ಗುರುದ್ವಾರ ಸೇರಿದಂತೆ ಒಟ್ಟು 18 ಕಾಣಿಕೆ ಡಬ್ಬಿಗಳಿಗೆ ಕಾಂಡೋಮ್ ಹಾಕಿರುವುದಾಗಿ ಒಪ್ಪಿಕೊಂಡಿದ್ದಾಗಿ ನಗರದ ಆಯುಕ್ತರಾದ ಶಶಿಕುಮಾರ್ ತಿಳಿಸಿದ್ದಾರೆ.
ಬಂಧಿತ ಆರೋಪಿಯು ಮಂಗಳೂರು ಹೊರವಲಯದ ಕೋಟೆಕಾರು ಕೊಂಡಾಣದಲ್ಲಿ ವಾಸಿಸುತ್ತಿದ್ದು, ಮೂಲತಃ ಹುಬ್ಬಳ್ಳಿ ನಿವಾಸಿಯಾಗಿದ್ದಾನೆ. ಆದರೆ ಕಳೆದ 24 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ರಿಕ್ಷಾ ಡ್ರೈವರ್ ಆಗಿದ್ದ ಆರೋಪಿಯು ಪ್ರಸ್ತುತ ಪೇಪರ್ ಮತ್ತು ರಟ್ಟುಗಳನ್ನು ಸಂಗ್ರಹಿಸಿ ಅದನ್ನು ಮಾಡಿ ಜೀವನ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:‘ಹಿಂದುತ್ವದಿಂದ ಬಂಧುತ್ವದ ಕಡೆಗೆ’ – ಸಂಘಪರಿವಾರದಿಂದ ಹೊರಬಂದ ನಾಯಕರೊಂದಿಗೆ ಮಾತುಕತೆ
ಮಂಗಳೂರಿನಲ್ಲಿ ಇತ್ತೀಚೆಗೆ ದೈವಸ್ಥಾನದ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಂ ಪತ್ತೆಯಾಗುತ್ತಿರುವ ಬಗ್ಗೆ ಸರಣಿಯಾಗಿ ವರದಿಯಾಗಿತ್ತು. ಜೊತೆಗೆ ಹಲವು ಪ್ರದೇಶಗಳಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ಅಲ್ಲದೆ, ಕೆಲವು ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿ, ಪ್ರಕರಣಕ್ಕೆ ಕೋಮುಬಣ್ಣ ಹಚ್ಚಲು ಪ್ರಯತ್ನಿಸಿದ್ದರು.
ಡಿಸೆಂಬರ್ 28 ರಂದು ಮಂಗಳೂರು ನಗರದ ನಂದಿಗುಡ್ಡೆಯಲ್ಲಿರುವ ಕೊರಗಜ್ಜ ದೈವಸ್ಥಾನದ ಕಟ್ಟೆಯ ಮೇಲೆ ಕಾಂಡೋಮ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈತನನ್ನು ಬಂಧಿಸಿದಾಗ, ಆರೋಪಿಯ ಉಳಿದ ಪ್ರಕರಣಗಳು ಕೂಡ ಬೆಳಕಿಗೆ ಬಂದಿದೆ.
ಆರೋಪಿಯು ಸುಮಾರು 20 ವರ್ಷಗಳ ಹಿಂದೆಯೆ ಕುಟುಂಬದೊಂದಿಗೆ ಸಂಪರ್ಕ ಕಡಿದು ಏಕಾಂಗಿಯಾಗಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದು, “ಅವನ ಹಿಂದೆ ಯಾವುದೇ ಜನ ಅಥವಾ ಗುಂಪಿನ ಕೈವಾಡ ಇಲ್ಲ, ಆತ ಏಕಾಂಗಿಯಾಗಿ ಈ ಕೃತ್ಯಗಳನ್ನು ಮಾಡುತ್ತಿದ್ದ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಮುಸ್ಲಿಮರ ವಿರುದ್ದ ಹಿಂಸಾಚಾರಕ್ಕೆ ಕರೆ ನೀಡಿದ ಸಂಘಪರಿವಾರದ ನಾಯಕ ಶರಣ್ ಪಂಪ್ವೆಲ್
ಮಾರ್ನಮಿಕಟ್ಟೆಯಲ್ಲಿರುವ ಕೊರಗಜ್ಜನ ಕಟ್ಟೆ, ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ, ಕೊಂಡಾಣ ದೈವಸ್ಥಾನ, ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್ ಸಮೀಪದ ಕಾಣಿಕೆ ಡಬ್ಬಿ, ಒಮೆಗಾ ಆಸ್ಪತ್ರೆ ಬಳಿಯ ಕಲ್ಲುರ್ಟಿ ದೈವಸ್ಥಾನ, ಪಂಪ್ ವೆಲ್ ಬಳಿಯಿರುವ ದೈವಸ್ಥಾನ, ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ, ಕಲ್ಲಾಪು ನಾಗನಕಟ್ಟೆ, ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ, ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ, ಕುತ್ತಾರು ಕೊರಗಜ್ಜನ ಕಟ್ಟೆ, ಕುಡುಪು ದೈವಸ್ಥಾನ, ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ, ನಂದಿಗುಡ್ಡೆಯ ಕೊರಗಜ್ಜನ ಗುಡಿ, ನಗರದ ಎ.ಬಿ.ಶೆಟ್ಟಿ ವೃತ್ತದ ಬಳಿಯ ಸೈದಾನಿ ಬೀಬಿ ದರ್ಗಾ, ಬಂಗ್ರ ಕೂಳೂರಿನಲ್ಲಿರುವ ಸಿಖ್ ಗುರುದ್ವಾರ, ಕೋಟ ಶ್ರೀ ಬಬ್ಬುಸ್ವಾಮಿ ದೈವಸ್ಥಾನ- ಮಂಕಿಸ್ಟ್ಯಾಂಡ್ ಹಾಗೂ ಜೆಪ್ಪು ಮಹಾಕಾಳಿಪಡ್ಪುವಿನಲ್ಲಿರುವ ಆದಿ ಮಾಹೇಶ್ವರಿ ದೈವಸ್ಥಾನ ಭಜನಾ ಮಂಡಳಿಯ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರ ಇತ್ಯಾದಿಗಳನ್ನು ಹಾಕಿದ್ದಾಗಿ ಆರೋಪಿಯು ಒಪ್ಪಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಜನರು ತಪ್ಪಾಗಿ ಆರಾಧನೆ ಮಾಡುತ್ತಾ ದೇವರ ಅವಕೃಪೆಗೆ ಪಾತ್ರರಾಗುತ್ತಿದ್ದಾರೆ. ನೀವು ಆರಾಧಿಸುವ ದೇವರಿಗೆ ಕಾಣಿಕೆ ಡಬ್ಬಿಯನ್ನೇ ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬ ಸಂದೇಶವನ್ನು ಜನರಿಗೆ ನೀಡುವುದಕ್ಕಾಗಿ ಆರೋಪಿಯು ದಾರ್ಮಿಕ ಕೇಂದ್ರಗಳನ್ನು ಅಪವಿತ್ರ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಆರೋಪಿ ದೇವದಾಸ್ ದೇಸಾಯಿ, ತಾನು ಮಾಡಿದ ಯಾವುದೆ ಕೃತ್ಯದ ಬಗ್ಗೆ ಪಶ್ಚಾತಾಪ ಇಲ್ಲ ಎಂದು ಹೇಳಿಕೊಂಡಿದ್ದಾನೆ. “ಹದಿನೈದು ವರ್ಷಗಳಿಂದ ಬೈಬಲನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದೇನೆ. ಭೂಮಿಗೆ ಅಂತ್ಯ ಬರುವ ಮೊದಲು ಏಸುಕ್ರಿಸ್ತನ ಹೆಸರಿನಲ್ಲಿ ರಕ್ಷಣೆ ಹೊಂದಿ ಎಂದು ಅದು ಹೇಳುತ್ತದೆ. ಆದರೆ ಜನರು ಇದನ್ನು ಪಾಲಿಸುತ್ತಿಲ್ಲ, ಹಾಗಾಗಿ ಅಪವಿತ್ರ ಜಾಗಗಳಿಗೆ ಅಪವಿತ್ರ ವಸ್ತುಗಳನ್ನು ಹಾಕುತ್ತಿದ್ದೆ” ಎಂದು ಹೇಳಿದ್ದಾನೆ.
ಇದನ್ನೂ ಓದಿ:ಜಿಹಾದಿ ಎಂದು ಶಿರಡಿ ಸಾಯಿಬಾಬಾ ಮೂರ್ತಿ ಧ್ವಂಸಗೈದ ಸಂಘಪರಿವಾರದ ಕಾರ್ಯಕರ್ತರು- ದೂರು ದಾಖಲು