ತಮಿಳುನಾಡಿಗೆ ಬರುವ ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದಿ ಭಾಷಿಕರ ಬಗ್ಗೆ ಡಿಎಂಕೆ ಸಂಸದ ದಯಾನಿಧಿ ಮಾರನ್ ಹೇಳಿಕೆಯನ್ನು ಖಂಡಿಸಿದ ತೇಜಸ್ವಿ ಯಾದವ್, ಬಿಹಾರದ ಜನರಿಲ್ಲದೆ ಇದ್ದರೆ ಹಲವು ರಾಜ್ಯಗಳ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಳ್ಳುತ್ತವೆ ಎಂದು ಹೇಳಿದರು.
ಸಂಸದ ಮಾರನ್ ಅವರ ವಿವಾದಿತ ಹೇಳಿಕೆಯು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದು, ಬಿಜೆಪಿಯು ಉತ್ತರ ಪ್ರದೇಶ ಮತ್ತು ಬಿಹಾರದ ಇಂಡಿಯಾ ಮೈತ್ರಿಕೂಟದ ನಾಯಕರನ್ನು ಈ ವಿಷಯದ ಬಗ್ಗೆ ತಮ್ಮ ತುಟಿ ಹೊಲೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದೆ.
‘ಆ ಪಕ್ಷದ (ಡಿಎಂಕೆ) ಯಾವುದೇ ನಾಯಕರು ಯುಪಿ ಮತ್ತು ಬಿಹಾರದ ಜನರ ಬಗ್ಗೆ ಏನಾದರೂ ಹೇಳಿದ್ದರೆ, ಅದು ಖಂಡನೀಯ, ನಾವು ಅದನ್ನು ಒಪ್ಪುವುದಿಲ್ಲ. ಯುಪಿ ಮತ್ತು ಬಿಹಾರದ ಕಾರ್ಮಿಕರಿಗೆ ದೇಶದಾದ್ಯಂತ ಬೇಡಿಕೆಯಿದೆ. ಅವರು ಬೇರೆಡೆ ಹೋಗುವುದನ್ನು ನಿಲ್ಲಿಸಿದ ನಂತರ ಅವಲಂಬಿತ ರಾಜ್ಯಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ, ಅವರ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಳ್ಳುತ್ತವೆ’ ಎಂದು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
‘ಒಂದು ನಿರ್ದಿಷ್ಟ ಸಮುದಾಯದ ಜನರು ಮಾತ್ರ ಯಾಕೆ ಚರಂಡಿ ಸ್ವಚ್ಛಗೊಳಿಸುತ್ತಾರೆ ಎಂದು ಅವರು ಹೇಳಿದ್ದರೆ ಅದಕ್ಕೆ ಅರ್ಥ ಇರುತ್ತಿತ್ತು. ಆದರೆ, ಅವರು ಬಿಹಾರ ಮತ್ತು ಉತ್ತರಪ್ರದೇಶದ ಜನರು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಖಂಡನೀಯ… ಎಲ್ಲ ಪಕ್ಷಗಳ ನಾಯಕರು ಇಂತಹ ಹೇಳಿಕೆಗಳನ್ನು ನೀಡುವುದನ್ನು ವಿರೋಧಿಸಬೇಕು’ ಎಂದು ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರದಿಂದ ತಮಿಳುನಾಡಿಗೆ ಬರುವ ಹಿಂದಿ ಭಾಷಿಗರು ಕಟ್ಟಡ, ರಸ್ತೆಗಳ ನಿರ್ಮಾಣ ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂಬ ಇಂಡಿಯಾ ಮೈತ್ರಿಕೂಟದ ಪಕ್ಷವಾದ ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರ ಹೇಳಿಕೆಗೆ ಬಿಹಾರ ಉಪಮುಖ್ಯಮಂತ್ರಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಡಿಎಂಕೆ ಸಂಸದರ ಹೇಳಿಕೆಯ ವಿಡಿಯೊ ಕ್ಲಿಪ್ ವೈರಲ್ ಆಗಿದ್ದು, ಇದನ್ನು ಪಾಟ್ನಾ ಸಾಹಿಬ್ನ ಬಿಜೆಪಿ ಲೋಕಸಭಾ ಸಂಸದ, ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಂಚಿಕೊಂಡಿದ್ದರು. ‘ಡಿಎಂಕೆ ನಾಯಕರು ಬಿಹಾರದ ಜನರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದ್ದರು.
‘ತಮ್ಮ ಇಂಡಿಯಾ ಮೈತ್ರಿಕೂಟದ ಸದಸ್ಯರಾಗಿರುವ ನಿತೀಶ್ ಕುಮಾರ್ ಅವರ ಆಡಳಿತದಲ್ಲಿ ಬಿಹಾರದ ಜನರು ತಮಿಳುನಾಡಿಗೆ ಹೋಗಬೇಕಾಯಿತು’ ಎಂದು ಬಿಜೆಪಿ ಹೇಳಿದ್ದರು.
ಇದನ್ನೂ ಓದಿ; ಹಿಂದಿ ಭಾಷಿಕರು ತಮಿಳುನಾಡಿನಲ್ಲಿ ಶೌಚಾಲಯ ಸ್ವಚ್ಛಗೊಳಿಸುತ್ತಾರೆ; ವಿವಾದ ಸೃಷ್ಟಿಸಿದ ದಯಾನಿಧಿ ಮಾರನ್ ಹೇಳಿಕೆ