ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಇಂದು ಭಾರೀ ಭೂಕುಸಿತ ಸಂಭವಿಸಿದ್ದು, ಹಲವಾರು ಮನೆಗಳು ನಾಶವಾಗಿದ್ದು, ಅನೇಕ ಜನರು ಅವಶೇಷಗಳಲ್ಲಿ ಸಿಲುಕಿರುವ ಸಾಧ್ಯತೆ ಇದೆ.
ವೈರಲ್ ವಿಡಿಯೋದಲ್ಲಿ ಭೂಕುಸಿತದ ದೃಶ್ಯಗಳು ಸೆರೆಯಾಗಿದ್ದು, ವಿಡಿಯೋದಲ್ಲಿ ಅನೇಕ ಬಹುಮಹಡಿ ಕಟ್ಟಡಗಳು ಕುಸಿಯುತ್ತಿರುವುದು ಕಂಡು ಬಂದಿದೆ.
ಭೂಕುಸಿತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತುರ್ತು ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದ್ದು, ಇಂದಿನಿಂದ ಮುಂದಿನ ಎರಡು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದೆ.
ಭೂಕುಸಿತದಿಂದ ಕುಲ್ಲು ಜಿಲ್ಲೆಯಲ್ಲಿ ಬೃಹತ್ ವಾಣಿಜ್ಯ ಕಟ್ಟಡವು ಕುಸಿಯುತ್ತಿರುವುದನ್ನು ವಿಡಿಯೋಗಳು ತೋರಿಸಿದೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಎಕ್ಸ್ ನಲ್ಲಿ (ಟ್ವಿಟ್ಟರ್)ನಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಕುಲ್ಲುವಿನಿಂದ ಭಯಾನಕ ದೃಶ್ಯಗಳು ಈಗ ಹೊರಹೊಮ್ಮುತ್ತಿವೆ. ಸ್ಥಳೀಯ ಆಡಳಿತವು ಅಪಾಯವನ್ನು ಮನಗಂಡು ಎರಡು ದಿನಗಳ ಮೊದಲು ಕಟ್ಟಡದಲ್ಲಿದ್ದವರನ್ನು ಯಶಸ್ವಿಯಾಗಿ ಸ್ಥಳಾಂತರಿಸಿದೆ ಎಂಬುದು ಗಮನಾರ್ಹವಾಗಿದೆ ಎಂದು ಬರೆದಿದ್ದಾರೆ.
ಹಿಮಾಚಲ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಂದು ಎನ್ಡಿಟಿವಿ ಜೊತೆ ಮಾತನಾಡಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಭೂಕುಸಿತದ ಮೊದಲು ಅಲ್ಲಿನ ಜನರನ್ನು ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯದಿಂದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಿಂದಾಗಿ ಕುಲು-ಮಂಡಿ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿವೆ.
ನಿರಂತರ ಮಳೆಯಿಂದಾಗಿ ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತಗಳು, ಮೇಘಸ್ಫೋಟಗಳು ಮತ್ತು ಹಠಾತ್ ಪ್ರವಾಹ ಉಂಟಾಗಿ ವ್ಯಾಪಕ ವಿನಾಶ ಉಂಟುಮಾಡಿದೆ. ರಾಜ್ಯ ಸರ್ಕಾರವು ಈ ಹಿಂದೆ ಇಡೀ ರಾಜ್ಯವನ್ನು “ನೈಸರ್ಗಿಕ ವಿಕೋಪ ಪೀಡಿತ ಪ್ರದೇಶ” ಎಂದು ಘೋಷಿಸಿದೆ.
ರಾಜ್ಯಕ್ಕೆ ಈ ಬಾರಿ ಮುಂಗಾರು ಮಳೆ ಆಗಮಿಸಿದ ನಂತರ ಮಳೆಯ ಹಾನಿಯಿಂದ 8,014.61 ಕೋಟಿಗಳಷ್ಟು ಹಾನಿಯಾಗಿದೆ ಎಂದು ಸರಕಾರ ಹೇಳಿದೆ. ಮಳೆಯಿಂದಾಗಿ 2,022 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ ಮತ್ತು 9,615 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 113 ಕಡೆ ಭೂಕುಸಿತಗಳಿಂದ ಮೂಲಭೂತ ಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ ಮತ್ತು ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಮಳೆಯಿಂದಾಗಿ 224 ಜನರು ಸಾವನ್ನಪ್ಪಿದ್ದಾರೆ, ಇನ್ನೂ 117 ಮಂದಿ ಮಳೆ ಸಂಬಂಧಿತ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರದ ಬುಲೆಟಿನ್ ತಿಳಿಸಿದೆ.
Disturbing visuals emerge from Anni, Kullu, depicting a massive commercial building collapsing amidst a devastating landslide.
It's noteworthy that the administration had identified the risk and successfully evacuated the building a two days prior. pic.twitter.com/LIWs5FPWle
— Sukhvinder Singh Sukhu (@SukhuSukhvinder) August 24, 2023
ಇದನ್ನು ಓದಿ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಎಫ್ ಐಆರ್ ದಾಖಲಿಸಲು ಸೂಚಿಸಿದ್ದ ಜಡ್ಜ್ ಅಮಾನತು