ಜೆಎನ್ಯು ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಗೆ ಬೃಹತ್ ಜನಸಮೂಹವೇ ಹರಿದುಬಂದಿದ್ದು, ಜೆಎನ್ಯು ವಿದ್ಯಾರ್ಥಿಗಳ ಪರವಾಗಿ ಭಾರೀ ಬೆಂಬಲ ವ್ಯಕ್ತವಾಗಿದೆ.
SFI – AIDSO – AISF – KVS – AISA ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದು, ಆರ್ಎಸ್ಎಸ್ ಗೂಂಡಾಗಳೇ ದಾಳಿ ನಡೆಸಿದ್ದು ಅದನ್ನು ಖಂಡಿಸಲು ಸಾರ್ವಜನಿಕರು ಜೊತೆಗೂಡಬೇಕೆಂದು ಮನವಿ ಮಾಡಿದ್ದರು.
ಇಡೀ ಘಟನೆಗೆ ಜೆಎನ್ಯುವಿನ ಉಪಕುಲಪತಿಯೇ ಕಾರಣರಾಗಿದ್ದಾರೆ. ಎಬಿವಿಪಿ ಗೂಂಡಾಗಳು ನಿಯಮ ಮೀರಿ ವರ್ತಿಸಲು ಉಪಕುಲಪತಿಗಳೇ ಕಾರಣ. ಅವರು ಕೇಂದ್ರ ಸರ್ಕಾರದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ದುರ್ಘಟನೆ ನಡೆದಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಕೋಮುವಾದಿಗಳ ಪ್ರಾಯೋಜಿತ ದಾಳಿಗೆ ನಾವು ಎದುರುವುದಿಲ್ಲ. ದೇಶದ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.
ಸರ್ಕಾರವು ಕೂಡಲೇ ನಿಪಕ್ಷಪಾತವಾಗಿ ತನಿಖೆ ನಡೆಸಿ ಗೂಂಡಾಗಳ ವಿರುದ್ಧ ಕ್ರಮ ಜರುಗಿಸಬೇಕು. ಯಾವುದೇ ಕಾರಣಕ್ಕೂ ಜೆಎನ್ಯು ಮುಚ್ಚುವ ಮಾತನಾಡಬಾರದು. ಇಲ್ಲಿದಿದ್ದರೆ ದೇಶಾದ್ಯಂತ ವಿದ್ಯಾರ್ಥಿ ಹೋರಾಟ ಭುಗಿಲೇಳಲಿದೆ ಎಂದು ಎಚ್ಚರಿಕೆ ನೀಡಿದರು.
ಎಸ್ಎಫ್ಐನ ವಿ.ಅಂಬರೀಶ್, ಗುರುರಾಜ ದೇಸಾಯಿ, ಎಐಎಸ್ಎಫ್ನ ಜ್ಯೋತಿ.ಕೆ, ಎಐಡಿಎಸ್ಓನ ವಿ.ಎನ್ ರಾಜಶೇಖರ, ಅಜಯ್ ಕಾಮತ್, ಕೆವಿಎಸ್ನ ಸರೋವರ್ ಬೆಂಕಿಕೆರೆ, ಎಐಎಸ್ಎನ ಪಿ.ಎ ದೇವಯ್ಯ ಸಮಾನ ಮನಸ್ಕ ಹೋರಾಟಗಾರರಾದ ಬಿ.ಶ್ರೀಪಾದ್ ಭಟ್, ಮಲ್ಲಿಗೆ ಸಿರಿಮನೆ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.