ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ನಿನ್ನೆ ರಾತ್ರಿ ನಡೆದ ಹಿಂಸಾಚಾರದಿಂದ ಕನಿಷ್ಠ 34 ಜನರು ಗಾಯಗೊಂಡಿದ್ದಾರೆ. ಈ ದಾಳಿ ನಡೆಸಿದವರು ABVPಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದಕ್ಕೆ ಹಲವು ಫೋಟೊಗಳು ಸಾಕ್ಷಿ ಒದಗಿಸಿವೆ.
ಎಬಿವಿಪಿಯ ಜೆಎನ್ಯು ಕಾರ್ಯಕಾರಿ ಸಮಿತಿಯ ಸದಸ್ಯನಾದ ವಿಕಾಸ್ ಪಟೇಲ್ ಎಂದು ಗುರುತಿಸಲ್ಪಟ್ಟ ಯುವಕನು ಲಾಠಿಗಳೊಂದಿಗೆ ಶಸ್ತ್ರಸಜ್ಜಿತವಾದ ಹತ್ತಾರು ಯುವಕರ ಗುಂಪಿನೊಂದಿಗೆ ನಿಂತಿರುವ ಫೋಟೊ ಸಿಕ್ಕಿದೆ.
ವಿಕಾಸ್ ಪಟೇಲ್ ದೆಹಲಿ ಪೊಲೀಸರು ಬಳಸುವಂತಹ ಫೈಬರ್-ಗ್ಲಾಸ್ ಲಾಠಿ ಹಿಡಿದುಕೊಂಡು ನಿಂತಿದ್ದರೆ, ನೀಲಿ ಮತ್ತು ಹಳದಿ ಬಣ್ಣದ ಸ್ವೆಟರ್ ಧರಿಸಿ ಅವನ ಪಕ್ಕದಲ್ಲಿ ನಿಂತಿರುವುದು ಜೆಎನ್ಯುನಲ್ಲಿ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಶಿವ ಪೂಜನ್ ಮಂಡಲ್ ಎಂದು ಗುರುತಿಸಲ್ಪಟ್ಟ ವಿದ್ಯಾರ್ಥಿಯಾಗಿದ್ದಾನೆ. ಈತನೂ ಸಹ ಎಬಿವಿಪಿ ಸದಸ್ಯನೆಂದು ಹೇಳಲಾಗಿದೆ.
ಈ ಫೋಟೊವನ್ನು ಜೆಎನ್ಯು ಮೇಲೆ ದಾಳಿ ನಡೆಯುವ ಮೊದಲು ಅಂದರೆ ಭಾನುವಾರ ಮಧ್ಯಾಹ್ನ ತೆಗೆಯಲಾಗಿದೆ ಎಂದು ಹೇಳಲಾಗಿದೆ. ದಾಳಿಯ ಬಗ್ಗೆ ಮಾತಾಡಿಕೊಳ್ಳಲು ಅವರೆಲ್ಲರೂ ಒಂದೇಡೆ ಸೇರಿದ್ದಾಗ ತೆಗೆದಿರುವ ಫೋಟೊ ಇದಾಗಿದೆ.
ಮತ್ತೊಂದು ಗುಂಪಿನ ಫೋಟೊದಲ್ಲಿ ಶಿವ ಪೂಜನ್ ಮಂಡಲ್ ದೊಡ್ಡ ಗುಂಪಿನ ಜೊತೆ ಲಾಠಿಗಳನ್ನಿಡಿದು ಕ್ಯಾಂಪಸ್ ಕಡೆಗೆ ಸಾಗುತ್ತಿರುವ ಫೋಟೊ ಸಿಕ್ಕಿದೆ. ಇನ್ನೊಂದು ಫೋಟೊ ಕ್ಯಾಂಪಸ್ ಒಳಗೆ ಅವರು ಹೋಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಮುಂದುವರಿದು ಜೆಎನ್ಯು ಮೇಲೆ ದಾಳಿಯ ನಂತರ ಆ ಸಶಸ್ತ್ರ ಗುಂಪು ಜೆಎನ್ಯು ಕ್ಯಾಂಪಸ್ನಿಂದ ನಿರ್ಗಮಿಸುವಾಗ ರಾತ್ರಿಯ ಸಮಯದಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಸಹ ಶಿವ ಪೂಜನ್ ಮಂಡಲ್ ಕಂಡುಬಂದಿದ್ದಾನೆ. ಅಲ್ಲದೇ ಪೊಲೀಸರು ಈ ದಾಳಿಕೋರರನ್ನು ಬೇಗ ಬೇಗ ಹೋಗಿ ಎಂದು ಮಾರ್ಗದರ್ಶನ ಮಾಡುವುದು ಕಂಡುಬಂದಿರುವುದರಿಂದ ದಾಳಿಗೆ ಪೊಲೀಸರ ಬೆಂಬಲವಿದೆ ಎಂಬ ಅನುಮಾನಗಳು ಮೂಡುವಂತಾಗಿದೆ. ವಿಡಿಯೋ ನೋಡಿ
ಜೆಎನ್ಯು ದಾಳಿಯ ವಿಚಾರ ದೇಶಾದ್ಯಂತ ವೈರಲ್ ಆದ ಕೂಡಲೇ ಪಟೇಲ್ ಮತ್ತು ಮಂಡಲ್ ಇಬ್ಬರೂ ಸಹ ತಮ್ಮ ಸಾಮಾಜಿಕ ಮಾಧ್ಯಮಗಳ ಎಲ್ಲಾ ಖಾತೆಗಳನ್ನು ಡಿಲೀಟ್ ಮಾಡಿದ್ದಾರೆ.
ಇನ್ನು ಮುಂದುವರಿದು ಫ್ರೆಂಡ್ಸ್ ಆಫ್ ಆರ್ಎಸ್ಎಸ್ ಎಂಬ ವಾಟ್ಸಾಪ್ ಗುಂಪಿನ ಸ್ಕ್ರೀನ್ಶಾಟ್ನಲ್ಲಿ ಪಟೇಲ್ ಅವರ ಸಂಖ್ಯೆಯೂ ಇದೆ. ಇದರಲ್ಲಿ ಎಬಿವಿಪಿ ಸದಸ್ಯರ ಗುಂಪು ಜೆಎನ್ಯು ಕ್ಯಾಂಪಸ್ನಲ್ಲಿ ಎಡ ವಿದ್ಯಾರ್ಥಿಗಳ ಮೇಲೆ ನಡೆಸುವ ದಾಳಿಯ ಬಗ್ಗೆ ಚರ್ಚಿಸಿರುವುದು ಕಂಡುಬಂದಿದೆ.
ಅದೇ ಗುಂಪಿನ ಚಾಟ್ನಲ್ಲಿರುವ ಇತರರಲ್ಲಿ ಜೆಎನ್ಯುನಲ್ಲಿ ಸಂಸ್ಕೃತ ವಿದ್ಯಾರ್ಥಿ ಯೋಗೇಂದ್ರ ಭಾರದ್ವಾಜ್ ಮತ್ತು ಜೆಎನ್ಯುನಲ್ಲಿ ಪಿಎಚ್ಡಿ ಮಾಡುತ್ತಿರುವ ವಿದ್ಯಾರ್ಥಿ ಸಂದೀಪ್ ಸಿಂಗ್ ಸೇರಿದ್ದಾರೆ. ಭಾರದ್ವಾಜ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಡಿಲಿಟ್ ಮಾಡಿದ್ದಾರೆ. ಆದರೆ ಅವರ ಟ್ವಿಟ್ಟರ್ ಪ್ರೊಫೈಲ್ನ ಸ್ಕ್ರೀನ್ಶಾಟ್ಗಳು ಅವರನ್ನು ಎಬಿವಿಪಿ ಸದಸ್ಯರೆಂದು ಗುರುತಿಸುತ್ತಿವೆ. ಸಂದೀಪ್ ಸಿಂಗ್ ಅವರ ಖಾತೆ ಸಕ್ರಿಯವಾಗಿದೆ.
ವಾಟ್ಸಾಪ್ ಚಾಟ್ನಲ್ಲಿ, ಯೋಗೇಂದ್ರ ಭಾರದ್ವಾಜ್ ಅವರು “ಎಡ ಭಯೋತ್ಪಾದನೆ” ಯನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಾರೆ ಮತ್ತು “ನಾವು ಅವರನ್ನು ಹಿಡಿದು ಹೊಡೆಯಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯದ ಹುಡುಗರು ಸೇರಿದಂತೆ ಹೊರಗಿನಿಂದ ಜೆಎನ್ಯುಗೆ ಹಲವಾರು ಹುಡುಗರು ಬಂದು ಹಲ್ಲೆ ನಡೆಸುವ ಕುರಿತು ಯೋಜನೆಯ ವಿವಿಧ ಅಂಶಗಳನ್ನು ಈ ಮೂವರೂ ಚರ್ಚಿಸಿದ್ದಾರೆ. ಈ ವಾಟ್ಸಾಪ್ ಗುಂಪಿಗೆ ಸೇರಲು ಲಿಂಕ್ಗಳನ್ನು ಹಲವರಿಗೆ ಹಂಚಿದಾಗ ಅದರಲ್ಲಿ ಕೆಲ ಎಡಪಕ್ಷದ ವಿದ್ಯಾರ್ಥಿಗಳು ಸೇರಿದ್ದಾರೆ. ಇದು ಗೊತ್ತಾದ ಕೂಡಲೇ ಅವರನ್ನು ರಿಮೂವ್ ಮಾಡಿ ಮತ್ತು ಇಡೀ ಗ್ರೂಪ್ ಅನ್ನೇ ಡಿಲೀಟ್ ಮಾಡಿ ಎಂಬ ಸಂದೇಶಗಳು ಕೂಡ ಬಂದಿದೆ.
ಎಬಿವಿಪಿ ಹಿಂಸಾಚಾರದಲ್ಲಿ ತಮ್ಮ ಪಾತ್ರವನ್ನು ನಿರಾಕರಿಸಿದೆ, ಫೋಟೊಗಳು ಮತ್ತು ವಾಟ್ಸಾಪ್ ಚಾಟ್ಗಳನ್ನು ಫೋಟೊಶಾಪ್ ಮಾಡಲಾಗಿದೆ ಎಂದು ಹೇಳಿದೆ.
ಕೃಪೆ; ಎನ್ಡಿಟಿವಿ