ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರವರ ಮಗ ಆಶಿಶ್ ಮಿಶ್ರಾ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರನ್ನು ಕೊಂದ ಘಟನೆ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಆರಂಭವಾಗಿದೆ. ಸಂಯುಕ್ತ ಹೋರಾಟ ಕರ್ನಾಟಕ ಮತ್ತು ರೈತ ಸಂಘಟನೆಗಳು, ಪ್ರಗತಿಪರ ಮತ್ತು ಎಡ ಸಂಘಟನೆಗಳು ಮೈಸೂರು ಬ್ಯಾಂಕ್ ವೃತ್ತದ ಬಳಿ ಸೇರಿ ಆಕ್ರೋಶ ಹೊರ ಹಾಕಿದ್ದಾರೆ. ವಿದ್ಯಾರ್ಥಿ ಯುವಜನ ಸಂಘಟನೆಗಳು ಸಾಥ್ ನೀಡಿವೆ.
ಸರ್ಕಾರದ ಕ್ರೌರ್ಯವನ್ನು ಖಂಡಿಸಿ ಘೋಷಣೆ ಕೂಗಿದ ಪ್ರತಿಭಟನಾಕಾರರು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗನಾದ ಆಶೀಶ್ ಮಿಶ್ರಾನನ್ನು ಬಂಧಿಸಬೇಕು. ಸಚಿವ ಸ್ಥಾನದಿಂದ ಅಜಯ್ ಮಿಶ್ರಾರನ್ನು ಕಿತ್ತೊಗೆಯಬೇಕು ಎಂದು ಆಗ್ರಹಸಿದ್ದಾರೆ.
ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕ ಸರೋವರ್ ಬೆಂಕಿಕೆರೆ ಮಾತನಾಡಿ “ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ರವರು ಸ್ವಲ್ಪವು ಮಾನವೀಯತೆ ಇಲ್ಲದೆ ವರ್ತಿಸುತ್ತಿದ್ದಾರೆ. ಇವರಿಬ್ಬರೂ ಬಂಡವಾಳಶಾಹಿಗಳ ಬೂಟು ನೆಕ್ಕುತ್ತಿದ್ದಾರೆ. ಹಾಗಾಗಿಯೇ ಪ್ರತಿನಿತ್ಯ ರೈತರ ಕೊಲೆಯಾಗುತ್ತಿದೆ” ಎಂದು ಕಿಡಿಕಾರಿದರು.
ಲಖೀಂಪುರ ಖೇರಿಯಲ್ಲಿ ನಡೆದಿರುವ ರೈತರ ಮೇಲಿನ ದಾಳಿ ಮತ್ತು ಮಾರಣಹೋಮಕ್ಕೆ ಕಾರಣರಾದ ಕೇಂದ್ರ ಸಚಿವ ಅಜಯ್ ಮಿಶ್ರಾ ತೆನಿ ಮತ್ತು ಈ ಘಟನೆಯ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ಎಸಗಿರುವ ಉತ್ತರಪ್ರದೇಶ ಸರ್ಕಾರದ ಮೇಲೆ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕವು ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯ ಮನವಿಯನ್ನೂ ಕಳಿಸಿದೆ.
ಘಟನೆಯಲ್ಲಿ ನಾಲ್ವರು ರೈತರು ಹತ್ಯೆಯಾಗಿದ್ದಾರೆ. ಇನ್ನೂ ಹಲವು ರೈತ ನಾಯಕರು ಮತ್ತು ಪ್ರತಿಭಟನಾ ನಿರತ ರೈತರು ಗಂಭೀರ ಸ್ವರೂಪದಲ್ಲಿ ಘಾಯಗೊಳಿಸಿರುವ ಹೀನಕೃತ್ಯಕ್ಕೆ ಕಾರಣರಾದ ಸಚಿವರ ಮೇಲೆ ಮತ್ತು ಅವರ ಬೆಂಗಾವಲು ಪಡೆಯ ಮೇಲೆ ಉತ್ತರ ಪ್ರದೇಶ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಪ್ರತಿಭಟನಾಕಾರರು ಅಗ್ರಹಿಸಿದ್ಧಾರೆ.
ಇತ್ತೀಚೆಗೆ, ಸಚಿವ ಸಚಿವ ಅಜಯ್ ಮಿಶ್ರಾ ತೆನಿ ಅವರು ರೈತರ ಪ್ರತಿಭಟನೆಯ ಕುರಿತು ಬಹಿರಂಗ ಬೆದರಿಕೆ ಹಾಕಿದ್ದರು. ಅವರ ಬೆದರಿಕೆಯನ್ನು ಖಂಚಿಸಿ, ಅವರು ಪ್ರತಿನಿಧಿಸುವ ಕ್ಷೇತ್ರವಾದ ಲಖೀಂಪುರ ಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಚಿವರ ಬೆಂಗಾವಲು ಪಡೆಯ ವಾಹನ ಹರಿಸುವ ಮೂಲಕ ತಮ್ಮ ಬೆದರಿಕೆಯನ್ನು ಸಚಿವ ಸತ್ಯಗೊಳಿಸಿದ್ದಾರೆ. ಈ ಕೃತ್ಯ ಭಾರತದ ಜನರಿಗೆ ಸಂವಿಧಾನ ಕೊಡಮಾಡಿರುವ ಪ್ರತಿಭಟನೆಯ ಹಕ್ಕಿನ ತೀವ್ರ ಉಲ್ಲಂಘನೆಯೂ ಆಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ಧಾರೆ.
ಈ ಘಟನೆ ನಡೆದ ನಂತರವೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಥವಾ ಯಾವುದೇ ಉನ್ನತಾಧಿಕಾರಿಗಳು ಜವಾಬ್ದಾರಿಯುತ ವರ್ತನೆ ತೋರಿಲ್ಲ. ಹತ್ಯೆಯಾದ, ಗಾಯಗೊಂಡ ರೈತರನ್ನು ಅಥವಾ ಅವರ ಕುಟುಂಬಗಳನ್ನು ಸಂಪರ್ಕಿಸುವುದಾಗಲೀ, ಘಟನೆಗೆ ಕಾರಣರಾದವರ ಮೇಲೆ ಕ್ರಮ ಜರುಗಿಸುವ ಭರವಸೆಯನ್ನಾಗಲೀ ನೀಡಿಲ್ಲ. ಇದು ಹಾಡುಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಸಂಯುಕ್ತ ಹೋರಾಟ-ಕರ್ನಾಟಕ ಆಕ್ರೋಶ ವ್ಯಕ್ತಪಡಿಸಿದೆ.
ಇಂತಹ ಗಂಭೀರ ಪ್ರಕರಣದ ಸಂದರ್ಭದಲ್ಲಿ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಬೇಕು. ಉತ್ತರ ಪ್ರದೇಶದ ಸರ್ಕಾರ ಮತ್ತು ಹಿಂಸೆಗೆ ಕಾರಣರಾದ ಸಚಿವರ ಮೇಲೆ ಕೂಡಲೇ ಕ್ರಮಕೂಗೊಳ್ಳುವ ಭರವಸೆ ನೀಡಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ರೈತ ಹೋರಾಟಗಾರರಾದ ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ, ಸಿಪಿಎಂ ಸಂಘಟನೆಯ ವರಲಕ್ಷ್ಮಿ, ವಿಮಲ ಮುಂತಾದವರು ಭಾಗವಹಿಸಿದ್ದರು.
ವಿಡಿಯೋ ನೋಡಿ
ಇದನ್ನೂ ಓದಿ: ನಾಲ್ವರು ರೈತರ ಹತ್ಯೆ: ಕೇಂದ್ರ ಸಚಿವ ಮತ್ತು ಮಗನ ಮೇಲೆ ಕೊಲೆ ಪ್ರಕರಣ ದಾಖಲು