ಬಸವನಗುಡಿಗೆ ತಟ್ಟಿದ್ದ ಶಾಪ ನಿಮ್ಮ ಪಾದಗಳ ಸ್ಪರ್ಶದಿಂದ ಮುಕ್ತಿಯಾಗಿದೆ. ಈ ದೇಶವನ್ನು ನಾವು ಕಟ್ಟಿದ್ದೇವೆ. ಅಶ್ವಿನಿ ಎಂಬ ಹೆಣ್ಣು ಮಗಳು ವಿಶ್ವಸಂಸ್ಥೆಗೆ ಹೋಗಿದ್ದಾಳೆ. ಬಾಬಾ ಸಾಹೇಬರು ಭೌತಿಕವಾಗಿ ಇಲ್ಲ. ಆದರೆ ಸಂವಿಧಾನದ ಮೂಲಕ ಅವರು ಜೀವಂತವಾಗಿದ್ದಾರೆ. ಅಂತಹ ಸಂವಿಧಾನವನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮ ಹೊಣೆ ಎಂದು ದಲಿತ ಮುಖಂಡರಾದ ಮಾವಳ್ಳಿ ಶಂಕರ್ ಅಭಿಪ್ರಾಯಪಟ್ಟರು.
ಬುದ್ಧನ ಕ್ರಾಂತಿಯನ್ನು ಪುಷ್ಯಶುಂಗ ಕುಟಿಲ ಬುದ್ದಿಯಿಂದ ಪ್ರತಿ ಕ್ರಾಂತಿ ಮೂಲಕ ತಡೆದು, ಬುದ್ದರನ್ನೇ ದೇಶದಿಂದ ಓಡಿಸಿದನು. ಆದರೆ ಅಂಬೇಡ್ಕರ್ ಬುದ್ಧನನ್ನು ವಾಪಸ್ ತಂದರು. ಆದರೆ ಮನುವಾದಿಗಳು ಈಗ ಭೂತಚೇಷ್ಟೇ ಮತ್ತೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಶ್ಮೀರ್ ಫೈಲ್ಸ್ ಎನ್ನುತ್ತಾರೆ. ಇಲ್ಲಿ ದಲಿತ್ ಫೈಲ್ಸ್ ಇಲ್ಲಿದೆ ನೋಡಿ. ಬಿಲ್ಕಿಸ್ ಬಾನೋ ಫೈಲ್ಸ್ ಎಲ್ಲಿಗೆ ಹೋಯಿತಪ್ಪ? ಕಾಂಗನಾ ರಾಣವತ್ ಗೆ ಜೆಡ್ ಪ್ಲಸ್ ಸೆಕ್ಯುರಿಟಿ, ನಮಗೆ ರಕ್ಷಣೆ ಇಲ್ಲ. ಕಾಶ್ಮೀರ್ ಫೈಲ್ಸ್ ಎನ್ನುತ್ತೀರಾ? ಎಲ್ಲಿ ನಮ್ಮ ಕಂಪಾಲಪಲ್ಲಿ ಫೈಲ್ಸ್, ಖೈರ್ಲಾಂಜಿ ದಲಿತ ಫೈಲ್ಸ್ ಎಂದು ಪ್ರಶ್ನಿಸಿದರು.
ಕುವೆಂಪು ಹೇಳುತ್ತಿದ್ದರು, ನಾವು ಹಿಂದೂ ಅಲ್ಲ, ಹಿಂದೂ ಅಲ್ಲ ಎನ್ನುತ್ತಿದ್ದರು. ನೀವು ಏನು ಹೇಳುತ್ತೀರಿ? ಹಿಂದೂ ಧರ್ಮದ ಹೆಸರಿನಲ್ಲಿ ನಿಮ್ಮ ತಿನ್ನುವ ಆಹಾರವನ್ನು ಅವರು ನಿರ್ಧಾರ ಮಾಡುತ್ತಿದ್ದಾರೆ ಇದು ತಪ್ಪಬೇಕು ಎಂದರು.
ಗೋಹತ್ಯೆ ನಿಷೇಧ ಮಾಡುತ್ತೇವೆ ಅನ್ನುತ್ತಾರೆ ನರೇಂದ್ರ ಮೋದಿಯವರು. ಏನು ಮೋದಿ ಮನೆಯಲ್ಲಿ, ಬೊಮ್ಮಾಯಿ ಮನೆಯಲ್ಲಿ ದನ ಸಾಕಿಕೊಂಡಿದ್ದೀರಾ? ನಮ್ಮ ದಲಿತರ, ರೈತರ ಮೇಲೆ ನಿಮ್ಮ ಪ್ರಹಾರವನ್ನು ಒಪ್ಪುವುದಿಲ್ಲ ಎಂದರು.
ರಾಜಸ್ಥಾನದಲ್ಲಿ ದಲಿತ ಮಗು ನೀರು ಕುಡಿದಿದ್ದಕ್ಕೆ ಕೊಂದರಿ? ಬಿಲ್ಕಿಸ್ ಬಾನೋ ಅತ್ಯಾಚಾರ ಮಾಡಿ, ಅವರ ಮಗುವನ್ನು ಕೊಂದಿದ್ದೀರಿ. ಆದರೆ ನೀವು ಎಷ್ಟೇ ದಾಳಿ ಮಾಡಿದರೂ ಸಹ ನಾವು ಎದ್ದು ಬರುತ್ತೇವೆ. ನಾವು ಬಾಬಾ ಸಾಹೇಬರ ಕುಡಿಗಳು ಎಂದು ಗುಡುಗಿದರು.
ನಾವು ದೇಶದ್ರೋಹಿಗಳಾಗಿಲ್ಲ, ಬಂದೂಕು ಹಿಡಿದಿಲ್ಲ. ಯಾರನ್ನು ತುಳಿದಿಲ್ಲ. ಆದರೆ ಈ RSS ನವರು ಬಂದೂಕು ಹಿಡಿದಿದ್ದಾರೆ. ಈ ಶನಿಸಂತಾನವನ್ನು ಮುಗಿಸಬೇಕಾಗಿದೆ. ನಾವು ಏಕಲವ್ಯನ ವಂಶಸ್ಥರು, ಹೆಬ್ಬರಳನ್ನು ಕಿತ್ತುಕೊಂಡರೂ ಸಹ ನಾವು ಮತ್ತೆ ಮತ್ತೆ ಬಿಲ್ಲು ಹಿಡಿಯುತ್ತೇವೆ. ನಾವು ದೇಶವನ್ನು ಕಟ್ಟಿದವರು. ನೀಲಿಯ ದಂಡು ಬೆಂಗಳೂರಿಗೆ ಬಂದಿದೆ ಎಂದರು.
ಇಡಬ್ಲೂಎಸ್ ಮೀಸಲಾತಿ ಹತ್ತು ಪರ್ಸೆಂಟ್ ಕೊಟ್ಟಿದ್ದೀರಿ. ಅಂದರೆ ಮೀಸಲಾತಿ ನಿಮ್ಮ ಅಪ್ಪನದ್ದಾ? ನಾವು ಮೋದಿಯನ್ನು ಬೈಯೋದ್ದಲ್ಲ, ಬಿಜೆಪಿ ಸಂಘಪರಿವಾರದ ಗುಲಾಮಗಿರಿಯನ್ನು ಮಾಡುತ್ತಿರುವ ದಲಿತ ಎಂಪಿಗಳನ್ನು ಬೈಯ್ಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಚರಿತ್ರೆ ಹೊಸದಾಗಿ ಬರೆಯುತ್ತೇವೆ ಎನ್ನುತ್ತಾರೆ. ಮುಸಲ್ಮಾನರ ಬೂತ ತೋರುಸುತ್ತಿದ್ದಾರೆ. ಅಮಿತ್ ಶಾರವರೆ ನೀವೇನು ಚರಿತ್ರೆ ಬರೆಯುವುದು? ಸಿಂಹಗಳ ಚರಿತ್ರೆಯನ್ನು ಸಿಂಹಗಳೇ ಬರೆಯುತ್ತೇವೆ. ನರಿಗಳು ಬರೆಯಬೇಕಿಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ; ಮಹಿಳೆಯರ ಹಕ್ಕುಗಳಿಗಾಗಿ ರಾಜೀನಾಮೆ ನೀಡಿದ ಏಕೈಕ ನಾಯಕ ಅಂಬೇಡ್ಕರ್: ನಾಗಮೋಹನ್ ದಾಸ್