ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಮಾರ್ಚ್ 31ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸುವುದಾಗಿ ಎಎಪಿ ನಾಯಕ ಮತ್ತು ದೆಹಲಿ ಸಚಿವ ಗೋಪಾಲ್ ರೈ ಘೋಷಿಸಿದ್ದಾರೆ.
ಕೇಜ್ರಿವಾಲ್ ಅವರ ಬಂಧನದ ಸಮಯದಲ್ಲಿ ಅವರನ್ನು ಭೇಟಿ ಮಾಡಲು ನಮ್ಮ ಯಾವುದೇ ಸಚಿವರು ಮತ್ತು ಶಾಸಕರಿಗೆ ಅವಕಾಶ ನೀಡಿಲ್ಲ. ನಿನ್ನೆ ಶಹೀದಿ ದಿವಸ, ನಾವು ಭಗತ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಯಸಿದ್ದೆವು, ಆದರೆ ನಮ್ಮನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಯಿತು ಎಂದು ಗೋಪಾಲ್ ರೈ ಅವರು ದೆಹಲಿಯಲ್ಲಿ INIDA ಮೈತ್ರಿ ನಾಯಕರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನು ಇಡಿ ಕಸ್ಟಡಿಯಲ್ಲಿದ್ದಾಗ ದೆಹಲಿ ಸರ್ಕಾರದ ಜಲ ಇಲಾಖೆಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ. ಕೇಜ್ರಿವಾಲ್ ಅವರ ಈ ನಡೆಯನ್ನು ದೆಹಲಿ ಸಚಿವೆ ಅತಿಶಿ ಶ್ಲಾಘಿಸಿದ್ದಾರೆ. ಅವರು ನನಗೆ ಇಡಿ ಕಸ್ಟಡಿಯಿಂದ ಈ ನಿರ್ದೇಶನಗಳನ್ನು ನೀಡಿದ್ದಾರೆ. ನಾನು ಇದನ್ನು ಸ್ವೀಕರಿಸಿದಾಗ ನನ್ನ ಕಣ್ಣುಗಳು ಕಣ್ಣೀರಿನಿಂದ ಕೂಡಿದೆ. ಈ ಪರಿಸ್ಥಿತಿಯಲ್ಲಿಯೂ ಯಾರು ಹೀಗೆ ಯೋಚಿಸುತ್ತಾರೆ? ಜೈಲಿನಿಂದಲೂ ದೆಹಲಿಯ ಜನರ ಬಗ್ಗೆ ಯೋಚಿಸುವ ವ್ಯಕ್ತಿಯೊಬ್ಬರಿದ್ದರೆ ಅದು ಅರವಿಂದ್ ಕೇಜ್ರಿವಾಲ್ ಎಂದು ಹೇಳಿದ್ದಾರೆ.
ಎಎಪಿ ಪಕ್ಷದ ವರಿಷ್ಠ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದನ್ನು ವಿರೋಧಿಸಿ ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಿ ಬಿಜೆಪಿ ಸರ್ಕಾರದ ಪ್ರತಿಕೃತಿ ದಹಿಸಲು ಎಎಪಿ ನಿರ್ಧರಿಸಿದೆ. ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ ಮತ್ತು ಕೇಂದ್ರ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿ ಮತ್ತು ಇಡಿ ಕಚೇರಿಗೆ ಹೋಗುವ ರಸ್ತೆಗಳನ್ನು ಮುಚ್ಚಲಾಗಿದೆ.
ದೆಹಲಿಯ ಮಧ್ಯ ನೀತಿ ಹಗರಣಕ್ಕೆ ಸಂಬಂಧಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಕಳೆದ ಗುರುವಾರದಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿಯ ಮಧ್ಯ ನೀತಿ ಹಗರಣದಲ್ಲಿ ಕೇಜ್ರಿವಾಲ್ ಕಿಂಗ್ಪಿನ್ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ಹೇಳಿದ್ದು, 2021-22ರ ಅಬಕಾರಿ ನೀತಿಯನ್ನು ರೂಪಿಸುವ ಪಿತೂರಿಯಲ್ಲಿ ಅರವಿಂದ್ ಕೇಜ್ರಿವಾಲ್ ಭಾಗಿಯಾಗಿದ್ದಾರೆ. ನಿರ್ದಿಷ್ಟ ವ್ಯಕ್ತಿಗಳಿಗೆ ಸಹಾಯ ಮಾಡಲು ಮತ್ತು ಸದರಿ ನೀತಿಯ ಮೂಲಕ ಮದ್ಯದ ಉದ್ಯಮಿಗಳಿಂದ ಕಿಕ್ಬ್ಯಾಕ್ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಇಡಿ ಆರೋಪಿಸಿದೆ, ವಿಚಾರಣೆ ಬಳಿಕ ಕೇಜ್ರಿವಾಲ್ಗೆ ನ್ಯಾಯಾಲಯ ಮಾ. 28ರವೆರೆಗೆ ಇಡಿ ಕಸ್ಟಡಿಯನ್ನು ನೀಡಿದೆ.