ಉತ್ತರಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯ ದೇವಸ್ಥಾನವೊಂದಕ್ಕೆ ಮುಸ್ಲಿಂ ಶಾಸಕಿಯ ಭೇಟಿಯ ನಂತರ ಹಿಂದುತ್ಳ ಸಂಘಟನೆಗಳ ಸದಸ್ಯರು ಗಂಗಾಜಲ ಎರಚಿ ಶುಚಿಗೊಳಿಸಿದ ಘಟನೆ ನಡೆದಿದೆ.
ಡೊಮರಿಯಾಗಂಜ್ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕಿ ಸೈಯಾದಾ ಖಾತೂನ್ ಅವರು ಸಿದ್ಧಾರ್ಥ್ ನಗರ ಜಿಲ್ಲೆಯ ಬಲ್ವಾ ಗ್ರಾಮದ ಸಮ್ಯ ಮಾತಾ ದೇವಸ್ಥಾನಕ್ಕೆ ರಾಮ ಕಥಾಗೆ ಅಲ್ಲಿನ ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ಹೋಗಿದ್ದರು. ಮರುದಿನ ಹಿಂದುತ್ವ ಸಂಘಟನೆಗಳು ಮತ್ತು ಸ್ಥಳೀಯ ಪಂಚಾಯತ್ ಸದಸ್ಯರು ದೇವಸ್ಥಾನಕ್ಕೆ ಗಂಗಾಜಲ ಸಿಂಪಡಿಸಿ ಶುದ್ಧೀಕರಣ ನಡೆಸಿ ಹನುಮಾನ್ ಚಾಲೀಸಾವನ್ನು ಪಠಿಸಿದರು ಮತ್ತು ಡೊಮರಿಯಾಗಂಜ್ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಈ ಕುರಿತು ಬರ್ಹ್ನಿ ಚಾಫಾ ನಗರ ಪಂಚಾಯತ್ ಅಧ್ಯಕ್ಷ ಧರ್ಮರಾಜ್ ವರ್ಮಾ ಮಾತನಾಡಿದ್ದು, ಸಮ್ಯ ಮಾತಾ ಮಂದಿರವು ಭಕ್ತರ ನಂಬಿಕೆಯ ಕೇಂದ್ರವಾಗಿದೆ. ಸ್ಥಳೀಯ ಶಾಸಕರು ದೇವಾಲಯಕ್ಕೆ ಅಗೌರವ ತೋರಿದ್ದಾರೆ. ಅವರು ಮಾಂಸಾಹಾರಿ ಮತ್ತು ಅವರ ಭೇಟಿಯು ಸ್ಥಳದ ಪಾವಿತ್ರ್ಯತೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಈ ವೇಳೆ ಸಂತೋಷ್ ಪಾಸ್ವಾನ್, ಮಿಥ್ಲೇಶ್ ಪಾಂಡೆ, ವಿಜಯ್ ಮದೇಸಿಯಾ ಮತ್ತು ಪ್ರಮೋದ್ ಗೌತಮ್ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ವರ್ಮಾ ಜೊತೆಗಿದ್ದರು.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಶಾಸಕಿ ಖಾತೂನ್, ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ, ಮೇಲಾಗಿ ನಾನು ಸಾರ್ವಜನಿಕ ಪ್ರತಿನಿಧಿ. ಅದು ದೇವಸ್ಥಾನವಾಗಲಿ ಅಥವಾ ಮಸೀದಿಯಾಗಲಿ, ನನ್ನನ್ನು ಆಹ್ವಾನಿಸಿದರೆ ನಾನು ಖಂಡಿತವಾಗಿಯೂ ಅಲ್ಲಿಗೆ ಹೋಗುತ್ತೇನೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ವಿವಿಧ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಣ ನೀಡಲಾಗಿದೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ದೂರು ದಾಖಲಾಗಿಲ್ಲ, ಯಾವುದೇ ಘರ್ಷಣೆಯ ಸಾಧ್ಯತೆಯನ್ನು ತಪ್ಪಿಸಲು ಪೊಲೀಸ್ ತಂಡವು ಪ್ರದೇಶದಲ್ಲಿ ಗಸ್ತು ತಿರುಗುತ್ತಿದೆ. ಈ ಬಗ್ಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಡೊಮರಿಯಾಗಂಜ್ ಸರ್ಕಲ್ ಆಫೀಸರ್ ಸುಜಿತ್ ಕುಮಾರ್ ರೈ ಹೇಳಿದ್ದಾರೆ.
ನಾವು ಘಟನೆಯ ಬಗ್ಗೆ ವಿವರಣೆ ತೆಗೆದುಕೊಂಡು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಿದ್ಧಾರ್ಥ್ ನಗರ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.
ಇದನ್ನು ಓದಿ: ಬಿಪಿನ್ ರಾವತ್ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ದುರಂತದ ತನಿಖೆ ಸ್ಥಗಿತ