ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ದೇಶದ ರೈತರು ದೆಹಲಿಯ ಗಡಿಗಳಲ್ಲಿ ನಡೆಸುತ್ತಿರುವ ದಿಟ್ಟ ಹೋರಾಟ ಸತತ 9ನೇ ದಿನಕ್ಕೆ ಕಾಲಿಟ್ಟಿದೆ. ಈ ಒಂದು ವಾರದಲ್ಲಿಯೇ ಕೇಂದ್ರ ಸಚಿವರು ಹೋರಾಟನಿರತ ರೈತ ಮುಖಂಡರೊಂದಿಗೆ ಎರಡು ಸುತ್ತಿನ ಸಭೆ ನಡೆಸಿದ್ದು, ಎರಡೂ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಇಂದು ಮೂರನೇ ಸುತ್ತಿನ ಸಭೆ ನಡೆಯಲಿದ್ದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹಸಚಿವ ಅಮಿತ್ ಶಾ ಇಂದು ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇನ್ನೊಂದು ಕಡೆ ರೈತರು ಇಂದಿನ ಮಾತುಕತೆ ನಮ್ಮ ಕೊನೆ ಮಾತಕತೆಯಾಗಲಿದ್ದು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದಿದ್ದರೆ ಮಂಗಳವಾರ ಭಾರತ್ ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೃಷಿ ಕಾಯ್ದೆಗಳಲ್ಲಿ ತಿದ್ದುಪಡಿ ತರುವುದಾಗಿ, ಎಂಎಸ್ಪಿ ನೀಡುವುದಾಗಿ ಮತ್ತು ಗುತ್ತಿಗೆ ಪದ್ದತಿಯಲ್ಲಿನ ಸಮಸ್ಯೆ ಬಗೆಹರಿಸಲು ಕೋರ್ಟ್ಗೆ ಹೋಗಬಹುದು ಎಂಬ ಬದಲಾವಣೆಗೆ ಕೇಂದ್ರ ಒಪ್ಪಿಕೊಂಡಿದೆ. ಆದರೆ ಮೂರು ಕಾಯ್ದೆಗಳನ್ನು ಹಿಂಪಡೆಯದ ಹೊರತು ಕೇಂದ್ರದ ಯಾವುದೇ ಬದಲಾವಣೆಗೆ ನಮ್ಮ ಒಪ್ಪಿಗೆಯಿಲ್ಲ ಎಂದು ಹೋರಾಟನಿರತ ರೈತರು ಪಟ್ಟು ಹಿಡಿದಿದ್ದಾರೆ.
ರೈತರ ಗೊಂದಲಗಳನ್ನು ನಮ್ಮ ಸಚಿವರು ನಿವಾರಿಸಿದ್ದಾರೆ. ಆದರೂ ವಿರೋಧ ಪಕ್ಷಗಳ ರಾಜಕೀಯ ಕುಮ್ಮಕ್ಕಿನಿಂದ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ ಎಂದು ಕೃಷಿ ರಾಜ್ಯ ಸಚಿವ ಕೈಲಾಶ್ ಚೌಧರಿ ಆರೋಪಿಸಿದ್ದಾರೆ.
ಸರ್ಕಾರದ ಜೊತೆ ಮಾತುಕತೆಯಿಂದ ಪ್ರಯೋಜನವಿಲ್ಲ. ಅವರು ಕಾಯ್ದೆಗಳನ್ನು ವಾಪಸ್ ಪಡೆಯಲು ಮುಂದಾಗುತ್ತಿಲ್ಲ. ಹಾಗಾಗಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯ. ಹಾಗಾಗಿ ಮಂಗಳವಾರ ಭಾರತ್ ಬಂದ್ ನಡೆಸಲಿದ್ದೇವೆ. ದೆಹಲಿಯ ಪ್ರತಿ ರಸ್ತೆಗಳನ್ನು, ಪ್ರತಿ ಟೋಲ್ಗಳನ್ನು ಬಂದ್ ಮಾಡುತ್ತೇವೆ ಎಂದು ರೈತರು ಘೋಷಿಸಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 8 ರ ಮಂಗಳವಾರ ಭಾರತ್ ಬಂದ್ಗೆ ಕರೆ ನೀಡಿದ ಹೋರಾಟನಿರತ ರೈತರು