ಸಿದ್ದರಾಮಯ್ಯನವರ ಸಚಿವ ಸಂಪುಟ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಸಿಎಂ ಸಿದ್ದರಾಮಯ್ಯನವರು ಸೇರಿ 34 ಸಚಿವ ಸ್ಥಾನಗಳನ್ನು ಎರಡು ಹಂತದಲ್ಲಿ ತುಂಬಲಾಗಿದೆ ಮಾತ್ರವಲ್ಲದೇ ಎಲ್ಲರಿಗೂ ಖಾತೆ ಹಂಚಿಕೆ ಮಾಡಿ ಮುಗಿಸಲಾಗಿದೆ. ಆ ಮೂಲಕ ಅತೃಪ್ತ ಶಾಸಕರಿಗೆ ನೀಡುವುದಕ್ಕಾಗಿ ಕೆಲ ಸ್ಥಾನಗಳನ್ನು ಖಾಲಿ ಬಿಟ್ಟುಕೊಳ್ಳುವ ಸಂಪ್ರದಾಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ. ಹೊಸಬರು ಮತ್ತು ಅನುಭವಿಗಳ ಸಮತೋಲನ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸಚಿವ ಸಂಪುಟ ರಚಿಸಲಾಗಿದ್ದು, 9 ಶಾಸಕರಿಗೆ ಮೊದಲ ಬಾರಿಗೆ ಸಚಿವ ಸ್ಥಾನ ನೀಡಲಾಗಿದೆ. ಒಬ್ಬ ಮಹಿಳೆಗೆ ಮಾತ್ರ ಸಚಿವ ಸ್ಥಾನ ನೀಡಿದ್ದು ಬಿಟ್ಟರೆ ಉಳಿದಂತೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆಗೆ ಸಿದ್ದರಾಮಯ್ಯನವರ ಸರ್ಕಾರ ಒತ್ತು ಕೊಟ್ಟಿದೆ.
9 ಶಾಸಕರಿಗೆ ಮೊದಲ ಬಾರಿಗೆ ಸಚಿವರಾಗುವ ಭಾಗ್ಯ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಿಂದ ಕೆ ವೆಂಕಟೇಶ್
ತುಮಕೂರು ಜಿಲ್ಲೆಯ ಮಧುಗಿರಿಯಿಂದ ಕೆ ಎನ್ ರಾಜಣ್ಣ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಮಂಕಾಳ್ ವೈದ್ಯ
ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಬೈರತಿ ಸುರೇಶ್
ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಮಧು ಬಂಗಾರಪ್ಪ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಡಾ. ಎಂ ಸಿ ಸುಧಾಕರ್
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬಿ ನಾಗೇಂದ್ರ
ರಾಯಚೂರಿನ ಎನ್ ಎಸ್ ಬೋಸರಾಜುರವರು ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.
ಸಾಮಾಜಿಕ ನ್ಯಾಯ
ಕುರುಬರು (2 ಪ್ರಾತಿನಿಧ್ಯ): ಸಿದ್ದರಾಮಯ್ಯ (ಮುಖ್ಯಮಂತ್ರಿ), ಬೈರತಿ ಸುರೇಶ್
ಲಿಂಗಾಯತರು (8 ಪ್ರಾತಿನಿಧ್ಯ): ಎಂ.ಬಿ.ಪಾಟೀಲ (ಕೂಡು ಒಕ್ಕಲಿಗ ಲಿಂಗಾಯತರು), ಈಶ್ವರ ಖಂಡ್ರೆ (ಬಣಜಿಗ ಲಿಂಗಾಯತ), ಶರಣಬಸಪ್ಪ ದರ್ಶನಾಪುರ (ರಡ್ಡಿ ಲಿಂಗಾಯತ), ಶಿವಾನಂದ ಪಾಟೀಲ (ಪಂಚಮಸಾಲಿ), ಎಸ್.ಎಸ್.ಮಲ್ಲಿಕಾರ್ಜುನ (ಸಾದರ ಲಿಂಗಾಯತ), ಶರಣ ಪ್ರಕಾಶ ಪಾಟೀಲ (ಆದಿ ಬಣಜಿಗ ಲಿಂಗಾಯತ), ಲಕ್ಷ್ಮಿ ಹೆಬ್ಬಾಳಕರ್ (ಪಂಚಮಸಾಲಿ), ಎಚ್.ಕೆ.ಪಾಟೀಲ (ನಾಮಧಾರಿ ರೆಡ್ಡಿ)
ಒಕ್ಕಲಿಗರು (6 ಪ್ರಾತಿನಿಧ್ಯ): ಡಿ.ಕೆ.ಶಿವಕುಮಾರ್, ರಾಮಲಿಂಗ ರೆಡ್ಡಿ (ರೆಡ್ಡಿ ಒಕ್ಕಲಿಗ), ಕೃಷ್ಣ ಬೈರೇಗೌಡ, ಎನ್.ಚಲುವರಾಯಸ್ವಾಮಿ, ಕೆ.ವೆಂಕಟೇಶ್, ಡಾ.ಎಂ.ಸಿ.ಸುಧಾಕರ್.
ಪರಿಶಿಷ್ಟ ಜಾತಿಗಳು (6 ಪ್ರಾತಿನಿಧ್ಯ): ಬಲಗೈ (ಹೊಲೆಯ) ಸಮುದಾಯದ ಡಾ.ಎಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ, ಪ್ರಿಯಾಂಕ್ ಖರ್ಗೆ, ಎಡಗೈ (ಮಾದಿಗ) ಸಮುದಾಯದ ಆರ್.ಬಿ.ತಿಮ್ಮಾಪುರ, ಕೆ.ಎಚ್.ಮುನಿಯಪ್ಪ, ಭೋವಿ ಸಮುದಾಯದ ಶಿವರಾಜ ತಂಗಡಗಿ.
ಪರಿಶಿಷ್ಟ ಪಂಗಡಗಳು (3 ಪ್ರಾತಿನಿಧ್ಯ): ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಬಿ.ನಾಗೇಂದ್ರ.
ಅಲ್ಪಸಂಖ್ಯಾತರು (4 ಪ್ರಾತಿನಿಧ್ಯ): ಜಮೀರ್ ಅಹ್ಮದ್ ಖಾನ್- ಮುಸ್ಲಿಂ, ರಹೀಂ ಖಾನ್- ಮುಸ್ಲಿಂ, ಕೆ.ಜೆ.ಜಾರ್ಜ್- ಕ್ರಿಶ್ಚಿಯನ್, ಡಿ.ಸುಧಾಕರ್- ಜೈನ.
ಇತರೆ ಜಾತಿಗಳಗ ಪ್ರಾತಿನಿಧ್ಯ
ಬ್ರಾಹ್ಮಣ- ದಿನೇಶ್ ಗುಂಡೂರಾವ್
ಮೊಗವೀರ- ಮಂಕಾಳ ಸುಬ್ಬ ವೈದ್ಯ
ಮರಾಠ- ಸಂತೋಷ್ ಎಸ್.ಲಾಡ್
ರಾಜು ಕ್ಷತ್ರೀಯ- ಎನ್.ಎಸ್.ಬೋಸರಾಜು
ಈಡಿಗ- ಮಧು ಬಂಗಾರಪ್ಪ
ಪ್ರಾದೇಶಿಕ ಸಮತೋಲನ
ರಾಜ್ಯದ 31 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಿಗೆ ಸಚಿವ ಸ್ಥಾನ ಲಭಿಸಿದೆ. ಬೆಂಗಳೂರು ನಗರ ಜಿಲ್ಲೆಯ ಆರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಮೈಸೂರು ಎರಡನೇ ಸ್ಥಾನದಲ್ಲಿದ್ದು, ಸಿದ್ದರಾಮಯ್ಯ ಅವರಲ್ಲದೇ ಇನ್ನೂ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ.
ತುಮಕೂರು, ವಿಜಯಪುರ, ಕಲಬುರಗಿ, ಬೀದರ್ ಮತ್ತು ಬೆಳಗಾಂ ಜಿಲ್ಲೆಗಳ ತಲಾ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. 16 ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.
ಕೋಲಾರ, ಹಾಸನ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ವಿಜಯನಗರ ಜಿಲ್ಲೆಗಳಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.
ಇದನ್ನೂ ಓದಿ: ಜಾತಿ ಪ್ರಾತಿನಿಧ್ಯ: ಬೊಮ್ಮಾಯಿ ಸಂಪುಟಕ್ಕಿಂತ ಸಿದ್ದರಾಮಯ್ಯ ಕ್ಯಾಬಿನೆಟ್ ವೈವಿಧ್ಯಮಯ