ಕರ್ನಾಟಕದ ವಿಧಾನ ಪರಿಷತ್ಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜಗದೀಶ್ ಶೆಟ್ಟರ್, ಎನ್.ಎಸ್ ಬೋಸರಾಜು ಮತ್ತು ತಿಪ್ಪಣ್ಣಪ್ಪ ಕಮಕನೂರುರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲಕ್ಷ್ಮಣ ಸವದಿ, ಆರ್ ಶಂಕರ್ ಹಾಗೂ ಬಾಬುರಾವ್ ಚಿಂಚನಸೂರ್ ಅವರ ರಾಜೀನಾಮೆಯಿಂದ ತೆರವಾದ ಈ ಮೂರು ಸ್ಥಾನಗಳಿಗೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿತ್ತು.
ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯಬೇಕಿದ್ದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 20 ಕೊನೆಯ ದಿನವಾಗಿತ್ತು. ಜೊತೆಗೆ ನಾಮಪತ್ರ ವಾಪಸ್ ಪಡೆಯಲು ಜೂನ್ 23 ಕೊನೆಯ ದಿನವಾಗಿತ್ತು. ಕಾಂಗ್ರೆಸ್ನಿಂದ ಮೇಲಿನ ಮೂವರು ಅರ್ಜಿ ಸಲ್ಲಿಸಿದರೆ ಬಿಜೆಪಿ, ಜೆಡಿಎಸ್ನಿಂದ ಯಾರೂ ಸಹ ಕಣಕ್ಕಿಳಿಯಲಿಲ್ಲ.
ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಕೆ.ಪದ್ಮರಾಜನ್ ಎಂಬುವವರು ನಾಮಪತ್ರ ಸಲ್ಲಿಸಿದರೂ ಸಹ ಅವರಿಗೆ ಸೂಚಕರಿಲ್ಲದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಕಣದಲ್ಲಿ ಮೂವರೇ ಇದ್ದ ಕಾರಣದಿಂದ ಈ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ವಿಧಾನಸಭೆಯ ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿ ಎಂ.ಕೆ ವಿಶಾಲಾಕ್ಷಿಯವರು ಘೋಷಿಸಿದ್ದಾರೆ.
ಇತ್ತೀಚೆಗೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್ಗೆ ಬಂದ ಮಾಜಿ ಸಿಂ ಜಗದೀಶ್ ಶೆಟ್ಟರ್ ರವರ ಅಧಿಕಾರವಧಿ 14.06.2028ರವರೆಗೆ ಇದೆ.
ತಿಪ್ಪಣ್ಣಪ್ಪ ಕಮಕನೂರುರವರ ಅಧಿಕಾರವಧಿ 30.06.2026ರವರೆಗಿನ ಮೂರು ವರ್ಷವಿದೆ. ಸಚಿವರಾಗಿ ನೇಮಕಗೊಂಡಿರುವ ಎನ್.ಎಸ್ ಬೋಸರಾಜುರವರನ್ನು 17.06.2024ರ ಒಂದು ವರ್ಷದ ಅವಧಿಯ ಸ್ಥಾನಕ್ಕೆ ಚುನಾಯಿಸಲಾಗಿದೆ.
ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಪಟ್ಟು: ಬಿಜೆಪಿಯಲ್ಲಿ ಶುರುವಾಯಿತು ಟೆನ್ಷನ್