ನಿವೃತ್ತಿ ಹೊಸ್ತಿಲಲ್ಲಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಘೋಟ್ನೇಕರ್ ತಮ್ಮ ವಿರುದ್ಧ ದಾಖಲಾಗಿರುವ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಉತ್ತರ ಕನ್ನಡ ಜಿಲ್ಲಾ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು, ಅವರನ್ನು ತಕ್ಷಣ ಬಂಧಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಘೋಟ್ನೇಕರ್ ತವರೂರು ಹಳಿಯಾಳದ ದಲಿತ ಯುವಕ ವಿನೋದ್ ತೆಗ್ನಳ್ಳಿ ಮತ್ತು ಮೇಲ್ವರ್ಗದ ರಜಪೂತ್ ಜಾತಿಯ ಯುವತಿಯ ಪ್ರೇಮ ವಿವಾಹ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ 11 ಜೂನ್ 2019 ರಂದು ಮಾತುಕತೆ ನಡೆಯುತ್ತಿದ್ದಾಗ ಏಕಾಏಕಿ ಠಾಣೆಗೆ ನುಗ್ಗಿದ್ದ ಘೋಟ್ನೇಕರ್ ಹುಡುಗಿ ಕಡೆಯವರ ಪರವಾಗಿ ನಿಂತು ದಲಿತರನ್ನು ಜಾತಿ ಅವಹೇಳನ ಮಾಡಿ ಬೈದಿದ್ದರೆಂದು ಆರೋಪಿಸಲಾಗಿತ್ತು. ದಲಿತರ ಮೇಲೆ ಎಗರಾಡಿ ಅಪಮಾನ ಮಾಡಿದ್ದರೆನ್ನಲಾಗಿತ್ತು.
ಈ ಕುರಿತು ಹನುಮಂತ ಛಲವಾದಿ ಎಂಬುವವರು ಘೋಟ್ನೇಕರ್ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿದ್ದರು.
ತಮ್ಮ ಮೇಲೆ ಹಾಕಲಾಗಿರುವ ಎಫ್ಐಆರ್ ರದ್ದು ಗೊಳಿಸುವಂತೆ ಕೋರಿ ಘೋಟ್ನೇಕರ್ ಉಚ್ಛನ್ಯಾಯಾಲಯದ ಧಾರವಾಡದ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಆ ಅರ್ಜಿ ವಜಾ ಆಗಿತ್ತು. ಆದರೆ ಅಧಿಕಾರದ ಪ್ರಭಾವ ಬಳಸಿ ಬಂಧನದಿಂದ ತಪ್ಪಿಸಿ ಕೊಳ್ಳುತ್ತಿದ್ದಾರೆಂದು ದಲಿತ ಸಂಘಟನೆಗಳು ಆರೋಪಿಸುತ್ತಾ ಬಂದರೂ ಘೋಟ್ನೇಕರ್ ನಿರಾತಂಕವಾಗಿ ಓಡಾಡಿಕೊಂಡಿದ್ದರು.
ಬಂಧನದ ಭೀತಿಯಿಂದ ಸೇಷನ್ಸ್ ನ್ಯಾಯಾಲಯದಲ್ಲಿ ಘೋಟ್ನೇಕರ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯೂ ಈಗ ವಜಾ ಆಗಿದ್ದು, ಘೋಟ್ನೇಕರ್ರವರನ್ನು ತಕ್ಷಣ ಬಂಧಿಸಬೇಕೆಂದು ಹಳಿಯಾಳದ ದಲಿತ ಪರ ಸಂಘಟನೆಗಳು ಆಗ್ರಹಿಸುತ್ತಿವೆ. ಬಂಧನವಾಗದಿದ್ದರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ದಲಿತ ಸಂಘಟನೆಗಳ ಒಕ್ಕೂಟದ ಕುಮಾರ ಬಸಪ್ಪಾ ಕಲಬಾವಿ, ಹನುಮಂತ ಛಲವಾದಿ, ರಾಯಪ್ಪ ಹೊಂಗಲ ಮುಂತಾದವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದ 10 ಸಾವಿರ ಖಾಸಗಿ ಶಾಲೆಗಳು ಮುಚ್ಚುವ ಹಂತದಲ್ಲಿ!