HomeUncategorizedಸಿನಿಮಾ ರಂಗ - ಹಾಸ್ಯ, ವಿಮರ್ಷೆ, ಆಶಯ

ಸಿನಿಮಾ ರಂಗ – ಹಾಸ್ಯ, ವಿಮರ್ಷೆ, ಆಶಯ

- Advertisement -
- Advertisement -

ಫಿಟ್‍ನೆಸ್ ಫಜೀತಿಗಳು

ಸಿನಿಮಾಕ್ಕಾಗಿ ತಮ್ಮ ದೇಹವನ್ನೇ ಏರುಪೇರು ಮಾಡಿಕೊಳ್ಳುವ ಈಗಿನ ಹೀರೋಗಳ ಕಾಯಿಲೆ ಯಾರ್ಯಾರಿಗೋ ಹಬ್ಬಿ, ಏನೇನೋ ರಾದ್ಧಾಂತ ಮಾಡುತ್ತಿದೆ. ಸಿನಿಮಾದ ಪಾತ್ರಕ್ಕಾಗಿ ದಪ್ಪ-ಸಣ್ಣ ಆಗುವುದು, ದಾಡಿ ಬೆಳೆಸುವುದು, ಹುಚ್ಚಾಪಟ್ಟೆ ಹೇರ್‍ಸ್ಟೈಲ್ ಮಾಡಿಕೊಳ್ಳೋದು ಮಾಮೂಲಿ. ಪಾತ್ರವೊಂದು ನಿಜವಾಗಿಯೂ ಅಂತಹ ಮಾರ್ಪಾಟನ್ನು ಬಯಸಿದರೆ ತಪ್ಪೇನು ಇಲ್ಲ. ಆದರೆ ಸ್ನಾಯುಗಳನ್ನು ತೋರಿಸೋದೆ ಟ್ರೆಂಡ್ ಆಗಿದೆ ಅನ್ನೋ ಕಾರಣಕ್ಕೆ, ಅಗತ್ಯವಿಲ್ಲದಿದ್ದರು ನಾಯಕರುಗಳು `ಮೈ’ಮಾಟ ತೋರಿಸುವ ದೃಶ್ಯಗಳನ್ನು ತುರುಕಿ ಸಿನಿಮಾವನ್ನೇ ಹಾಳು ಮಾಡುವ ಖಯಾಲಿ ಈಚೀಚೆಗೆ ಹೆಚ್ಚಾಗಿದೆ. ಜಿಮ್‍ಗಳಲ್ಲಿ ಕಸರತ್ತು ಮಾಡಿಕೊಂಡಿದ್ದ ಹೀರೋಗಳು ಈಗ ಫಿಟ್ನೆಸ್ ಹೆಸರಲ್ಲಿ ಒಬ್ಬರಿಗೊಬ್ಬರ ಕಾಲೆಳೆದುಕೊಂಡು ಅಭಿಮಾನಿಗಳಿಗೆ ಪುಕ್ಕಟೆ ಮನರಂಜನೆ ಕೊಡಲು ಶುರು ಮಾಡಿದ್ದಾರೆ. ಮೊನ್ನೆ ಸುದೀಪ್ ಇಂತದ್ದೇ ಹುಚ್ಚಾಟ ಮಾಡಿಕೊಂಡು ಯಶ್ ಮತ್ತು ಉಪೇಂದ್ರರಿಗೆ ಫಿಟ್ನೆಸ್ ಸವಾಲು ಹಾಕಲು ಹೋಗಿ, ಅವರಿಂದ ಡಿಫೆರೆಂಟ್ ಆಗಿಯೇ ಉತ್ತರ ಪಡೆದು ಮುಖಕ್ಕೆ ಟವೆಲ್ ಮುಚ್ಕೊಳೋ ಕೆಲಸ ಮಾಡಿಕೊಂಡರು.
ಈಗ ಈ ಚಾಲೆಂಜ್ ದಹಲಿಯ ಸಂಸತ್‍ವರೆಗೂ ತಲುಪಿದೆ. ವಿಶ್ವಗುರು ಆಗಲು ಹೊರಟಿರುವ ನಮ್ಮ ದೇಶದ ಪ್ರಧಾನ ಸೇವಕ ನರೇಂದ್ರ ಮೋದಿಯವರು ಭಾರತ ತಂಡದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಗೆ ವರ್ಕ್‍ಔಟ್ ಚಾಲೆಂಜ್ ಹಾಕಿ ವಿಚಿತ್ರ ಟ್ರೆಂಡೊಂದನ್ನು ಹುಟ್ಟುಹಾಕಿದ್ದಾರೆ. ದೇಶಸೇವೆ ಮಾಡುವ ಬದಲು ದೇಹಸೇವೆ ಮಾಡಿಕೊಳ್ಳಲು ಮುಂದಾಗಿರುವ ಅವರು ಇದೀಗ ಇರಲಾರದೆ ಇರುವೆ ಬಿಟ್ಟುಕೊಂಡವರಂತೆ ರಾಷ್ಟ್ರದ ಜನರೆದುರು ಕಾಮಿಡಿ ಪೀಸ್ ಆಗ್ಬಿಟ್ಟಿದ್ದಾರೆ. ಹುಲ್ಲು, ನೀರು, ಕಾಂಕ್ರಿಟ್ ಮೇಲೆ ನಡೆಯುತ್ತಾ ಕಲ್ಲು ಬಂಡೆಯ ಮೇಲೆ ಯೋಗ ವ್ಯಾಯಾಮ ಮಾಡುತ್ತಿದ್ದ ಮೋದಿಯನ್ನು ಚುಡಾಯಿಸಲು ಮೋದಿಯನ್ನೇ ಅನುಸರಿಸಿ ಕೆಲವರು ಕಾಮಿಡಿ ವಿಡಿಯೊ ಮಾಡಿದರೆ, ಕೆಲವರು ಫೋಟೋಶಾಪ್ ಮಾಡಿ ಅವರನ್ನು ಹೀನಾಮಾನ ಅಣಕಿಸುತ್ತಿದ್ದಾರೆ. ಪ್ರಧಾನ ಸೇವಕರಿಗೆ ಇದೆಲ್ಲಾ ಬೇಕಿತ್ತಾ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ.

****

ದರ್ಶನ್ ಪ್ರಪಂಚ ಮತ್ತಷ್ಟು ಹಿಗ್ಗಲಿ

ಸಿನಿಮಾ ಅಂದ್ರೆ ಬೆಳ್ಳೆತೆರೆಗೆ ಸೀಮಿತವಾದ ಕ್ಷೇತ್ರವಲ್ಲ. ಅದು ಬದುಕಿನ ಪ್ರತಿಫಲನ, ಪೀಳಿಗೆಗಳ ಪಾಠ. ಅದೆಷ್ಟೊ ಜನರ ಬದುಕನ್ನೆ ಬದಲಿಸಿದ ಹಲವಾರು ಸಿನಿಮಾಗಳು ನಿದರ್ಶನ ನಮ್ಮ ಕಣ್ಮುಂದಿದೆ. ರಾಜ್‍ಕುಮಾರ್ ತಮ್ಮ ನಟನೆಯ ಹೊರತಾಗಿಯೂ ಜನರಿಗೆ ಹತ್ತಿರವಾದದ್ದು ಅವರ ಕಾಳಜಿ, ಕಳಕಳಿ, ಮುಗ್ಧತೆಯಿಂದ. ಅವುಗಳಿಂದ ಪ್ರಭಾವಿತರಾದ ಅಪಾರ ಅಭಿಮಾನಿ ಸಮೂಹವಿದೆ. ನಟ ತನ್ನ ಪಾತ್ರಗಳನ್ನೂ ಮೀರಿ ಬೆಳೆಯುವ ಸಾಧ್ಯತೆಯನ್ನು ರಾಜ್, ವಿಷ್ಣು, ಶಂಕರ್‍ನಾಗ್‍ರಂತಹ ದಿಗ್ಗಜರು ತೋರಿಸಿಕೊಟ್ಟು ಹೋಗಿದ್ದಾರೆ. ಆದರೆ ಈಗಿನ ನಟರಲ್ಲಿ ಅಂತದ್ದನ್ನು ಕಾಣೋದೆ ಅಪರೂಪವಾಗಿದೆ. ಇವತ್ತಿನ ದಿನಗಳಲ್ಲಿ ಯಶೋಗಾಥೆ, ಪ್ರಕಾಶ್‍ರಾಜ್ ಫೌಂಡೇಷನ್‍ನಂತಹ ಜನರಿಗೆ ಉಪಕಾರಿಯಾಗುವಂತಹ, ಜನಪರವಾಗಿ ಮಾತನಾಡುವ, ಜನರ ಹೋರಾಟಗಳಲ್ಲಿ ಭಾಗಿಯಾಗುವ ಹಲವು ಸ್ಯಾಂಡಲ್‍ವುಡ್‍ನ ಹೀರೋಗಳ ಮಧ್ಯೆ ತನ್ನ ಸ್ನೇಹಿತರ ಬಳಗಕ್ಕೆ ಒಂದಲ್ಲ ಒಂದು ರೀತಿಯಲ್ಲಿ ನೆರವು ನೀಡುತ್ತಾ ಬಂದಿರುವ ದರ್ಶನ್, ಸಿನಿಮಾಗಳಲ್ಲಿ ಅವಕಾಶ ಸಿಗದೆ ಜೀವನಕ್ಕಾಗಿ ಟ್ಯಾಕ್ಸಿ ಡ್ರೈವಿಂಗ್ ಮಾಡುತ್ತಿದ್ದ ಹಿರಿಯ ನಟ ಅಶ್ವಥ್ ಅವರ ಮಗ ಶಂಕರ್ ಅಶ್ವಥ್‍ಗೆ ಪಿ.ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ತನ್ನ ಯಜಮಾನ ಸಿನಿಮಾದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ತನಗೆ ಅವಕಾಶ ಕಲ್ಪಿಸಿಕೊಟ್ಟ ದರ್ಶನ್‍ರನ್ನ ಶಂಕರ್ ಚಿತ್ರರಂಗದ ದಿಗ್ವಿಜಯರಾದ ರಾಜ್, ವಿಷ್ಣುರ ಸಾಲಿಗೆ ಸೇರಿಸಿ ಹೊಗಳಿದ್ದಾರೆ. ನಟರಾದವರಿಗೆ ನಿಜಕ್ಕೂ ತಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ಇಂತಹ ಕಾಳಜಿ ಇರಬೇಕು. ಆದರೆ ಆ ಸುತ್ತಲಿನ ಪ್ರಪಂಚ ಕೇವಲ ತಮ್ಮ ಬಂಧು, ಸ್ನೇಹಿತರು, ಪಾಲುದಾರರಿಗೆ ಮಾತ್ರ ಸೀಮಿತವಾದರೆ ಅದರಿಂದ ಹೆಚ್ಚೇನು ಲಾಭವಿಲ್ಲ. ದರ್ಶನ್‍ರ ಈ ಕಾಳಜಿಯ ಪ್ರಪಂಚ ಮತ್ತಷ್ಟು ಹಿಗ್ಗುವಂತಾದಾಗ ಅವರು ನಿಜಕ್ಕೂ ಮಹನೀಯರ ಸಾಲಿನಲ್ಲಿ ನಿಲ್ಲಲು ಅರ್ಹರೆನಿಸುತ್ತಾರೆ. ಹಾಗಾಗಲಿ ಎಂಬುದೇ ನಮ್ಮ ಹಾರೈಕೆ.

****

ತೆಲುಗಿನ NTR ಜೀವನ ‘ಚಿತ್ರ’ದಲ್ಲಿ ಕನ್ನಡದ ರಾಜ್ ಪಾತ್ರ

ಟಾಲಿಹುಡ್‍ನ ಸೂಪರ್ ಸ್ಟಾರ್ ನಟ ಎನ್.ಟಿ.ರಾಮದೇವ್‍ರವರ ಬಯೋಪಿಕ್ ಸಿನಿಮಾ ಈಗಾಗಲೇ ಸೆಟ್ಟೇರಿದ್ದು, ಚಿತ್ರೀಕರಣ ಕೂಡ ಆರಂಭವಾಗಿದೆ. ಈ ಚಿತ್ರ ಎನ್‍ಟಿಆರ್ ಅವರ ಖಾಸಗೀ ಜೀವನದ ಹಲವು ವಿಷಯಗಳನ್ನು ಒಳಗೊಂಡಿದೆ. ಅವರ ಬಾಲ್ಯ, ಸಿನಿಮಾ ರಾಜಕೀಯ ಮತ್ತು ಜೀವನದಲ್ಲಾದ ವಿವಾದಗಳನ್ನು ಒಳಗೊಂಡಿದೆ. ಎನ್‍ಟಿಆರ್ ಬಯೋಪಿಕ್ ಚಿತ್ರದಲ್ಲಿ ಎನ್‍ಟಿಆರ್ ಬಣ್ಣದ ಜೀವನದಲ್ಲಿ ಪ್ರಭಾವ ಬೀರಿದ ಚಿತ್ರರಂಗದ ಸ್ಟಾರ್‍ಗಳ ಪಾತ್ರಗಳನ್ನು ಸಹ ತೋರಿಸಲಾಗಿದ್ದು. ಕನ್ನಡದ ಸ್ಯಾಂಡಲ್‍ಹುಡ್‍ನ ದಿಗ್ಗಜ ಡಾ.ರಾಜ್‍ಕುಮಾರ್ ಅವರ ಪಾತ್ರವೂ ಬರಲಿದೆ. ಕನ್ನಡ ಚಿತ್ರರಂಗವನ್ನು ದಾಟಿ ಹೊರಹೋಗದ ರಾಜಣ್ಣ ಎನ್‍ಟಿಆರ್ ಬದುಕಿನಲ್ಲಿ ಬೀರಿದ ಪಾತ್ರವೇನು, ಚಿತ್ರದಲ್ಲಿ ರಾಜ್ ಅವರ ಪಾತ್ರಕ್ಕೆ ಬಣ್ಣ ಹಚ್ಚುವವರಾರು? ಎಂಬ ಪ್ರಶ್ನೆ ಕನ್ನಡಿಗರಲ್ಲಿ ಕಾಡತ್ತಿದೆ. ಆದರೆ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ತೇಜ್ ಮಹಿತಿ ಬಿಟ್ಟುಕೊಟ್ಟಿಲ್ಲ.

****

`ಕಲಿ’ಗೆ ಅದೇನು ಕೇಡುಗಾಲ ಬಂತು

ಗಿಮಿಕ್ ನಿರ್ದೇಶಕ ಪ್ರೇಮ್‍ರವರ ಡ್ರೀಮ್ ಪ್ರಾಜೆಕ್ಟ್ ಎಂದೇ ಸುದ್ದಿಯಾಗಿದ್ದ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯಿಸಲಿದ್ದ ‘ಕಲಿ’ ಚಿತ್ರ ಮುಹೂರ್ತ ಮುಗಿಸಿ ಸುಮ್ಮನಾಗಿಬಿಟ್ಟಿದೆ. ಮುಹೂರ್ತ ಮುಗಿದು ಎರಡು ವರ್ಷವಾದರೂ ಚಿತ್ರ ಸೆಟ್ಟೇರಿದಿದ್ದರಿಂದ ಕಲಿ ಚಿತ್ರದ ಅಬ್ಬರದ ಕನಸು ಕಂಡಿದ್ದ ಸುದೀಪ್ ಅಭಿಮಾನಿಗಳು ಚಿತ್ರ ಸೆಟ್ಟೇರುವುದೋ , ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಇಷ್ಟಾದರೂ ಚಿತ್ರ ಬಗ್ಗೆ ಸುದೀಪ್ ಆಗಲೀ, ಪ್ರೇಮ್ ಆಗಲಿ ತುಟಿ ಬಿಚ್ಚಿರಲಿಲ್ಲ. ನಿರ್ಮಾಪಕ ಮನೋಹರ್ ಮಾತ್ರ ಚಿತ್ರ ನಿಂತು ಹೋಗಿಲ್ಲ ಡಿಲೇ ಆಗಿದೆ ಅಷ್ಡೇ ಎಂದಿದ್ದರು.
ಆದರೆ ಸುದೀಪ್ ಈಗ ಚಿತ್ರ ಸೆಟ್ಟೇರುವುದಿಲ್ಲ, ಸಿನಿಮಾ ಡ್ರಾಪ್ ಆಗಿದೆ ಎಂದಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂ.1 ಯಾರಿ ವಿತ್ ಶಿವಣ್ಣ, ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಸುದೀಪ್ ಸತ್ಯ ಬಿಚ್ಚಿಟ್ಟಿದ್ದಾರೆ. ಮಹಾಭಾರತ ಯಾವುದೋ ಭಾಗವನ್ನು ಆಯ್ದುಕೊಂಡು ಸ್ಕ್ರಿಪ್ಟ್ ರೆಡಿಯಾಗಿತ್ತು, ಅದನ್ನು ಸುದೀಪ್ ಮೆಚ್ಚಿಕೊಂಡಿದ್ದರು. ಆದರೆ ಮುಹೂರ್ತದ ನಂತರ ಈ ಸ್ಕ್ರಿಪ್ಟ್ ಸರಿಯಿಲ್ಲ, ಯಾವುದೊ ಒಂದು ಪಾಸಿಟಿವ್ ಆಗಿಲ್ಲ ಎನ್ನಿಸುತ್ತಿತ್ತು ಹಾಗೂ ಮಹಾಭಾರತದ ಆ ಭಾಗವನ್ನು ಮುಟ್ಟಬೇಡಿ ಅದು ಸರಿಯಿಲ್ಲ, ಆ ಸ್ಕ್ರಿಪ್ಟ್ ಪಾಸಿಟಿವ್ ಆದುದ್ದಲ್ಲ ಎಂದು ತುಂಬಾ ಜನ ಹೇಳಿದ್ದರು, ಹಾಗಾಗಿ ಈ ಸ್ಕ್ರಿಪ್ಟ್ ಬೇಡ ಬೇರೆಯದು ಮಾಡೋಣ ಎಂದು ಪ್ರೇಮ್ ಅವರನ್ನು ಒಪ್ಪಿಸಿದ್ದೇನೆ ಎಂದಿದ್ದಾರೆ.

– ಸೋಮಶೇಖರ್ ಚಲ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...