ದೆಹಲಿ ಅಬಕಾರಿ ನೀತಿಯ ಕುರಿತು ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿದೆ. ಮೋದಿ ಸರ್ಕಾರದ ವಿರುದ್ಧ ಕೇಜ್ರಿವಾಲ್ ಧ್ವನಿಯೆತ್ತಿದ್ದರು, ಅವರ ಧ್ವನಿಯನ್ನು ದಮನ ಮಾಡಲು ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ದೆಹಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ಹೇಳಿದ್ದಾರೆ.
ಶನಿವಾರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅತಿಶಿ, ”ದೆಹಲಿ ಸಿಎಂಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿದೆ. ಯಾಕೆ ವಿಚಾರಣೆಗೆ ಕರೆದಿದ್ದಾರೆ, ಕೇಜ್ರಿವಾಲ್ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿತ್ತಾ…? ಚಿನ್ನದ ಬಿಸ್ಕತ್ ಸಿಕ್ಕಿದೆಯೇ..? ಯಾವ ಪುರಾವೆಗಳೂ ಇಲ್ಲದಿದ್ದರೂ ವಿಚಾರಣೆಗೆ ಕರೆಯಲಾಗಿದೆ. ಈ ತನಿಖಾ ಸಂಸ್ಥೆಗಳು ಕೇಜ್ರಿವಾಲ್ ಅವರ ಧ್ವನಿಯನ್ನು ಹತ್ತಿಕ್ಕಲು ಬಯಸುತ್ತಿರುವ ಕಾರಣ ಅವರನ್ನು ಕರೆಯುತ್ತಿವೆ” ಎಂದು ಹೇಳಿದರು.
ಇಂದು ಕೇಂದ್ರ ಮತ್ತು ಪ್ರಧಾನಿ ವಿರುದ್ಧ ಧ್ವನಿ ಎತ್ತುತ್ತಿರುವವರು ನಾಯಕ ಅರವಿಂದ್ ಕೇಜ್ರಿವಾಲ್ ಅವರು ಎಂದು ಅವರು ಹೇಳಿದರು.
”ಮೋದಿ ಅವರು ಸುಮಾರು 10 ವರ್ಷಗಳ ಕಾಲ ಸರ್ಕಾರ ನಡೆಸುತ್ತಿದ್ದಾರೆ. ಅವರು ಹಣದುಬ್ಬರವನ್ನು ಕಡಿಮೆ ಮಾಡುವ ಬಗ್ಗೆ ಮಾತನಾಡುತ್ತಾರೆ. ಆದರೆ ಎಲ್ಲದರ ಬೆಲೆ ಹೆಚ್ಚಾಗಿದೆ. ಅದರ ವಿರುದ್ದ ಅರವಿಂದ್ ಕೇಜ್ರಿವಾಲ್ ಮಾತ್ರ ಧ್ವನಿ ಎತ್ತುತ್ತಿದ್ದಾರೆ” ಎಂದು ಅತಿಶಿ ಹೇಳಿದರು.
ಉದ್ಯೋಗವಿಲ್ಲ ಮತ್ತು 5 ಕೋಟಿಗೂ ಹೆಚ್ಚು ಯುವಕರು ನಿರುದ್ಯೋಗಿಗಳಾಗಿದ್ದಾರೆ. ದೇಶದಲ್ಲಿ ಸುಮಾರು 22 ಕೋಟಿ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಕೇಜ್ರಿವಾಲ್ ಧ್ವನಿ ಎತ್ತುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಬಕಾರಿ ನೀತಿ ಅಕ್ರಮ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ಗೆ ಸಿಬಿಐ ಸಮನ್ಸ್
”ದೇಶದ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಮೋದಿಜಿ ಪ್ರಧಾನಿಯಾದ ನಂತರ, ಅವರ ಆತ್ಮೀಯ ಸ್ನೇಹಿತನ ನಿವ್ವಳ ಮೌಲ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಭ್ರಷ್ಟಾಚಾರವನ್ನು ಕೇಜ್ರಿವಾಲ್ ಅವರು ವಿಧಾನಸಭೆಯಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದರು. ಅದೇ ಕಾರಣಕ್ಕಾಗಿ ಮೋದಿ ಅವರು ಕೇಜ್ರಿವಾಲ್ ಅವರ ಧ್ವನಿಯನ್ನು ಹತ್ತಿಕ್ಕಲು ಬಯಸುತ್ತಾರೆ” ಎಂದು ಅತಿಶಿ ಹೇಳಿದರು.
ಕೇಂದ್ರವು ಕೇಜ್ರಿವಾಲ್ಗೆ ಎಷ್ಟೇ ಬೆದರಿಕೆ ಹಾಕಿದರೂ ಎಎಪಿ ಭ್ರಷ್ಟಾಚಾರದ ವಿರುದ್ಧ ಜನರ ಪರವಾಗಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತದೆ ಎಂದರು.
”ಸಿಬಿಐ ಮತ್ತು ಇಡಿ ಮೂಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಮೌನಗೊಳಿಸಬಹುದು ಎಂದು ಅವರು ಭಾವಿಸಿದರೆ ಎಎಪಿ ಹೆದರುವುದಿಲ್ಲ” ಎಂದು ಅವರು ಹೇಳಿದರು.
ದೆಹಲಿ ಅಬಕಾರಿ ನೀತಿ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, ಸಿಬಿಐ ಏಪ್ರಿಲ್ 16 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿದೆ.
ಕೇಜ್ರಿವಾಲ್ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಎಎಪಿ ನಾಯಕರು ಹೇಳಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮಗಳ ಆರೋಪದಲ್ಲಿ ಜೈಲಿನಲ್ಲಿದ್ದಾರೆ.
ದೆಹಲಿಯಲ್ಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಸಿಸೋಡಿಯಾ ಅವರನ್ನು ಇಡಿ ಮತ್ತು ಸಿಬಿಐ ಬಂಧಿಸಿದೆ.
ಫೆಬ್ರವರಿ 26, 2023 ರಂದು ಸಿಬಿಐ ಸಿಸೋಡಿಯಾ ಅವರನ್ನು ಬಂಧಿಸಿತು. ನಂತರ ಮಾರ್ಚ್ 9 ರಂದು, ತಿಹಾರ್ ಜೈಲಿನಲ್ಲಿ ಗಂಟೆಗಳ ವಿಚಾರಣೆಯ ನಂತರ ಇಡಿ ಅವರನ್ನು ಬಂಧಿಸಿತು.