ಗುಜರಾತ್ನ ಮೋರ್ಬಿ ಸೇತುವೆ ಕುಸಿತದ ಕುರಿತು ಸುಳ್ಳು ಸುದ್ದಿ ಟ್ವೀಟ್ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಸಾಕೇತ್ ಗೋಖಲೆ ಅವರಿಗೆ ಜಾಮೀನು ದೊರೆತ ಕೆಲವೇ ಗಂಟೆಗಳಲ್ಲಿ ಅವರನ್ನು ಗುರುವಾರ ಮತ್ತೆ ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಸೇತುವೆ ಕುಸಿದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದರ ಕುರಿತು ಸುಳ್ಳು ಸುದ್ದಿಯನ್ನು ಹರಡುವ ಮೂಲಕ ‘ಚುನಾವಣೆ ಸಮಯದಲ್ಲಿ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸಲಾಗಿದೆ’ ಎಂಬ ಆರೋಪದ ಮೇಲೆ ಮೊರ್ಬಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಗುರುವಾರ ಸಾಕೇತ್ ಅವರರನ್ನು ಬಂಧಿಸಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ವರದಿಯ ಪ್ರಕಾರ ಮೊದಲ ಪ್ರಕರಣದಲ್ಲಿ ಗೋಖಲೆ ಜಾಮೀನು ಪಡೆದ ‘ಕೇವಲ ಒಂದು ಗಂಟೆ’ ನಂತರ ಹೊಸ ಪ್ರಕರಣವನ್ನು ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಮಾಡಲಾದ ಆರೋಪಗಳು ಅಹಮದಾಬಾದ್ನಲ್ಲಿ ದಾಖಲಾಗಿರುವ ಮೊದಲ ಪ್ರಕರಣದಂತೆಯೇ ಇವೆ. ಮಚ್ಚು ನದಿಯ ಸೇತುವೆ ಕುಸಿದು 141 ಜನರು ಸಾವನ್ನಪ್ಪಿದ ಒಂದು ದಿನದ ನಂತರ ನವೆಂಬರ್ 1 ರಂದು ಪ್ರಧಾನಿ ಮೊರ್ಬಿಗೆ ಭೇಟಿ ನೀಡಿದ್ದರು.
ಡಿಸೆಂಬರ್ 1ರಂದು ಗೋಖಲೆ ಅವರು ಟ್ವೀಟ್ ಮಾಡಿ, “ಮೋದಿಯವರು ಮೊರ್ಬಿಗೆ ಭೇಟಿ ನೀಡಲು 30 ಕೋಟಿ ರೂಪಾಯಿ ಖರ್ಚಾಗಿದೆ ಎಂಬ ವಿಷಯವನ್ನು ಮಾಹಿತಿ ಹಕ್ಕು ಅರ್ಜಿ ಬಹಿರಂಗಪಡಿಸಿದೆ” ಎಂದು ಆರೋಪಿಸಿ ಸುದ್ದಿ ಕ್ಲಿಪ್ಪಿಂಗ್ ಹಂಚಿಕೊಂಡಿದ್ದರು. ಆದರೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ಚೆಕ್ ಖಾತೆಯು ಈ ಆರೋಪವನ್ನು ನಿರಾಕರಿಸಿತ್ತು.
ಈ ಸುದ್ದಿ ಕ್ಲಿಪ್ಪಿಂಗ್ ಸ್ಥಳೀಯ ಪತ್ರಿಕೆ ಗುಜರಾತ್ ಸಮಾಚಾರ್ಗೆ ಸಂಬಂಧಿಸಿದೆ. ಆದರೆ ಪತ್ರಿಕೆಯು ಈ ಸುದ್ದಿಯನ್ನು ಪ್ರಕಟಿಸಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
#TMC National Spokesperson #SaketGokhale re-arrested in another Morbi- linked case hours after being granted bail. pic.twitter.com/wBbofdqhkP
— Sreyashi Dey (@SreyashiDey) December 8, 2022
ಗೋಖಲೆ ಅವರನ್ನು ಮೊದಲು ಡಿಸೆಂಬರ್ 5 ರಂದು ರಾಜಸ್ಥಾನದ ಜೈಪುರದಲ್ಲಿ ಗುಜರಾತ್ ಪೊಲೀಸರು ಬಂಧಿಸಿದ್ದರು. ಅವರನ್ನು ಅಹಮದಾಬಾದ್ಗೆ ಕರೆತಂದ ನಂತರ ಔಪಚಾರಿಕವಾಗಿ ಅರೆಸ್ಟ್ ಮಾಡಲಾಯಿತು. ನಂತರ ಡಿಸೆಂಬರ್ 8 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. ರಾಜಕೀಯ ಮೈಲೇಜ್ ಪಡೆಯುವುದಕ್ಕಾಗಿ ಮೋದಿಯವರ ಮೋರ್ಬಿ ಭೇಟಿಯ ಬಗ್ಗೆ ಗೋಖಲೆ ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ ಎಂದು ಗುಜರಾತ್ ಪೊಲೀಸರು ಆರೋಪಿಸಿದ್ದರು.
ಗುರುವಾರ, ತೃಣಮೂಲ ಕಾಂಗ್ರೆಸ್ ವಕ್ತಾರರಿಗೆ ಅಹಮದಾಬಾದ್ ನ್ಯಾಯಾಲಯವು ಪ್ರಕರಣದಲ್ಲಿ ಜಾಮೀನು ನೀಡಿತು. ಪಕ್ಷದ ಸಂಸದ ಡೆರೆಕ್ ಒ’ಬ್ರಿಯಾನ್ ಗುರುವಾರ ಸಂಜೆ 4.47 ಕ್ಕೆ ಜಾಮೀನಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದಾಗ್ಯೂ, ಐದು ಗಂಟೆಗಳ ನಂತರ, ರಾತ್ರಿ 8.45ಕ್ಕೆ ಗೋಖಲೆಯನ್ನು ಮತ್ತೆ ಬಂಧಿಸಲಾಯಿತು ಎಂದು ಒ’ಬ್ರಿಯಾನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
SHOCKER #Break
@SaketGokhale @AITCofficial being harassed by Gujarat Police even after getting bail. ARRESTED AGAIN 8.45pm Dec 8. While he was leaving Cyber PS in Ahmedabad, Police team without notice/warrant are arresting him and taking him to unknown destination. CONDEMNABLE— Derek O'Brien | ডেরেক ও'ব্রায়েন (@derekobrienmp) December 8, 2022
ಯಾವುದೇ ಸೂಚನೆ ಅಥವಾ ವಾರಂಟ್ ಇಲ್ಲದೆ ವಕ್ತಾರರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ‘ಅಜ್ಞಾತ ಸ್ಥಳ’ಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎರಡನೇ ಪ್ರಕರಣದಲ್ಲಿ, ಗೋಖಲೆ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 125ರ (ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಮೊರ್ಬಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯೊಬ್ಬರು, ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸಿದ್ದಾರೆ. ಗುಜರಾತ್ನಲ್ಲಿ ರಾಜ್ಯ ಚುನಾವಣೆಗಳ ಕಾರಣ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಗೋಖಲೆ ಅವರು ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಏತನ್ಮಧ್ಯೆ, ತೃಣಮೂಲ ಕಾಂಗ್ರೆಸ್ ಪಕ್ಷವು ಐದು ಸದಸ್ಯರ ನಿಯೋಗವನ್ನು ಮೊರ್ಬಿಗೆ ಕಳುಹಿಸಿದೆ. “ಮೊರ್ಬಿ ದುರಂತಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನೂ ಈವರೆಗೆ ಬಂಧಿಸಿಲ್ಲ. ಆದರೆ ಸತ್ಯ ಹೇಳುವವರಿಗೆ ಕಿರುಕುಳ ನೀಡಲಾಗುತ್ತಿದೆ” ಎಂದು ಪಕ್ಷವು ಟ್ವೀಟ್ ಮಾಡಿದೆ. “ನಾವು ಸಾಕೇತ್ ಗೋಖಲೆ ಅವರ ಪರವಾಗಿ ನಿಲ್ಲುತ್ತೇವೆ ಮತ್ತು ನಾವು ನಮ್ಮ ಎಲ್ಲಾ ಶಕ್ತಿಯೊಂದಿಗೆ ಹೋರಾಡುತ್ತೇವೆ” ಎಂದು ಪ್ರತಿಕ್ರಿಯಿಸಿದೆ.
ಈ ಬಂದನ ಕಂಡನಾರ್ಹ.