Homeಆರೋಗ್ಯಗೋರಖ್‍ಪುರ ಮತ್ತು ಮುಜಾಫರ್‍ ಪುರ ದುರಂತಗಳು ಏಕೆ ಮರುಕಳಿಸುತ್ತಲೇ ಇರಲಿವೆ?

ಗೋರಖ್‍ಪುರ ಮತ್ತು ಮುಜಾಫರ್‍ ಪುರ ದುರಂತಗಳು ಏಕೆ ಮರುಕಳಿಸುತ್ತಲೇ ಇರಲಿವೆ?

- Advertisement -
- Advertisement -

| ಡಾ. ಸ್ವಾತಿ ಶುಕ್ಲಾ |ಅನುವಾದ: ನಿಖಿಲ್ ಕೋಲ್ಪೆ

ಬಿಹಾರದಲ್ಲಿ ಎನ್ಸೆಸೆಫಲೈಟಿಸ್‍ನಿಂದ ಸಾವಿಗೀಡಾದ ಮಕ್ಕಳ ಸಂಖ್ಯೆ 150ಕ್ಕೆ ಹತ್ತಿರವಾಗಿದೆ. ಈ ದೇಶದ ಒಳನಾಡುಗಳ ಪರಿಚಯ ಇರುವವರಿಗೆ ಮುಜಾಫರ್‍ಪುರದ ದುರಂತ ಸಂಭವಿಸಲೆಂದೇ ಕಾಯುತ್ತಿತ್ತು ಎಂದು ಸುಲಭದಲ್ಲಿ ಅರಿವಾಗುತ್ತದೆ. ಗ್ರಾಮೀಣ ಸಮುದಾಯವು ಇಲ್ಲಿ ಜಾತಿ, ಬಡತನ, ಅಪೌಷ್ಠಿಕತೆ ಮತ್ತು ಕಳಪೆ ಆರೋಗ್ಯ ಆಡಳಿತಗಳ ಜಾಲದಲ್ಲಿ ಸಿಕ್ಕಿಬಿದ್ದಿದೆ.

ಮೊದಲ ವರದಿಗಳು ಲಿಚಿ ಕಾಯಿಗಳಲ್ಲಿ ಇರುವ, ದೇಹದಲ್ಲಿ ಗ್ಲೂಕೋಸ್ ಅಂಶವನ್ನು ತೀರಾ ಕೆಳಕ್ಕಿಳಿಸುವ ವಿಷಕಾರಕ ಪದಾರ್ಥಗಳನ್ನು ದೂರಿದ್ದವು. ಆದರೆ, ನಂತರದ ಕೆಲವೇ ದಿನಗಳಲ್ಲಿ ಹೊಟ್ಟೆಗಿಲ್ಲದೆ ಹಸಿವಿನಿಂದ ಕಾಯಿ ಲಿಚಿಯನ್ನು ತಿನ್ನುತ್ತಿದ್ದ ಮಕ್ಕಳು ಈ ರೋಗದಿಂದ ಬಾಧಿತರಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಹೆಚ್ಚಿನವು ಒಂದೇ ಆಸ್ಪತ್ರೆ- ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮೇಲೆ ಗಮನ ಕೇಂದ್ರೀಕರಿಸಿವೆ. ಮೂರನೇ ಹಂತದ ಘಟಕವಾಗಿರುವ ಅದು ಕೇಸುಗಳ ಸಂಖ್ಯೆಯನ್ನು ನಿಭಾಯಿಸಲು ಒದ್ದಾಡುತ್ತಿದೆ. ಮುಖ್ಯ ಗಮನವು ಆಸ್ಪತ್ರೆಯ ಸ್ವಚ್ಛತೆ, ಸಾಕಷ್ಟು ಸಂಖ್ಯೆಯ ಹಾಸಿಗೆಗಳು ಇಲ್ಲದೇ ಇರುವುದು, ರೋಗಿಗಳು ಮತ್ತು ಹೆತ್ತವರು ನೆಲದ ಮೇಲೆಯೇ ಮಲಗುತ್ತಿರುವುದು, ವೈದ್ಯರ ಕೊರತೆ ಇತ್ಯಾದಿಗಳ ಕುರಿತೇ ಇತ್ತು. ಇವೆಲ್ಲವೂ ನಿಜ.

ಆದರೆ, ಈ ತಪ್ಪಿಸಬಹುದಾಗಿದ್ದ ದುರಂತಕ್ಕೆ ಇತರ ಕಾರಣಗಳೂ ಇವೆ. ಈ ದುರಂತದ ಉತ್ತುಂಗದಲ್ಲಿ ನಾವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಳಿ, ಅದರಲ್ಲೂ ಮುಖ್ಯವಾಗಿ ನಮ್ಮಲ್ಲಿಯೇ ಕೇಳಬೇಕಾದ ಕೆಲವು ಪ್ರಶ್ನೆಗಳಿವೆ. ಅವುಗಳಲ್ಲಿ ಮುಖ್ಯವಾಗಿರುವುದು ಎಂದರೆ ಎಷ್ಟರತನಕ ನಾವು ಈ ದುರಂತ ಪರಿಸ್ಥಿತಿಯನ್ನು ಮುಂದುವರಿಯಲು ಬಿಡಲಿದ್ದೇವೆ ಎಂಬುದು. ಆದರೆ, ಈ ಕೆಳಗಿನ ಪ್ರಶ್ನೆಗಳನ್ನು ಬಹುಶಃ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಎಂದಿಗೂ ಕೇಳಲಾರವು.

1. ಹಲವು ಮಕ್ಕಳು ಹಳ್ಳಿಗಳಿಂದ ಆಸ್ಪತ್ರೆಗೆ ಬರುವ ದೂರದ ಪ್ರಯಾಣದ ವೇಳೆ ಸಾವಿಗೀಡಾದವು. ಮಕ್ಕಳನ್ನು ಸಾಗಿಸಲು ನೆರವಾದ ಹಲವು ಸ್ಥಳೀಯ ವರದಿಗಾರರು ಮತ್ತು ಸ್ವಯಂಸೇವಕರು, ಮುಚ್ಚಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎತ್ತಿಹೇಳಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ಲೂಕೋಸ್ ಅಥವಾ ಕನಿಷ್ಟ ಓಆರ್‍ಎಸ್ ನೀಡುವುದರಿಂದ ಪ್ರಾಥಮಿಕ ರೋಗಲಕ್ಷಣಗಳನ್ನು ಗುಣಪಡಿಸಬಹುದಾಗಿದ್ದರೂ, ತೃತೀಯ ಹಂತದ ಆಸ್ಪತ್ರೆಗೆ ಮಕ್ಕಳನ್ನು ಸಾಗಿಸಬೇಕಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಏಕೆ ಮುಚ್ಚಿದ್ದವು ಮತ್ತು ಆಶಾ ಕಾರ್ಯಕರ್ತೆಯರು ಏನು ಮಾಡುತ್ತಿದ್ದರು? ಈಗಿರುವ ಆರೋಗ್ಯ ಕೇಂದ್ರಗಳ ದಯನೀಯ ಸ್ಥಿತಿಗೆ ಯಾರು ಕಾರಣರು?

2. ಬಿಹಾರದಲ್ಲಿ ಹೆಚ್ಚುಕಡಿಮೆ 44 ಶೇಕಡಾ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇದು ರೋಗವನ್ನು ಎದುರಿಸುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. ದುರ್ಬಲ ಪ್ರಕೃತಿಯ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಎಇಎಸ್ ಗುಣಲಕ್ಷಣಗಳು ಹೆಚ್ಚಾಗಿ ಉಲ್ಭಣಿಸಿವೆ ಎಂದು ಅಮೆರಿಕದ ಸಂಸ್ಥೆ- ಇನ್‍ಸ್ಟಿಟ್ಯೂಟ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಅದರ ಭಾರತೀಯ ಸಹಯೋಗಿಗಳು ನಡೆಸಿದ ವೈಜ್ಞಾನಿಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಬಿಹಾರದಲ್ಲಿ ಎಇಎಸ್ ಪತ್ತೆಯಾದ ಎಲ್ಲಾ ಮಕ್ಕಳು ಬಡ ಕೆಳಜಾತಿ ಕುಟುಂಬಗಳ ಮಕ್ಕಳಾಗಿದ್ದು, ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಯಾವುದೇ ಎಇಎಸ್ ಪ್ರಕರಣ ಪತ್ತೆಯಾಗಿಲ್ಲ. ಹಲವು ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆ ಎಂದು ತಳಮಟ್ಟದ ವರದಿಗಳು ಹೇಳುತ್ತವೆ. ಅರ್ಧದಷ್ಟು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿರುವಾಗ ಸರಕಾರ ಅವರ ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡುತ್ತಿದೆ?

3. ರಾಜ್ಯವು ಈ ಪ್ರದೇಶದಲ್ಲಿ 1995ರಿಂದಲೂ ಎಇಎಸ್ ಪ್ರಕರಣಗಳನ್ನು ಕಾಣುತ್ತಿದೆ. ಈ ರೋಗವನ್ನು ನಿಯಂತ್ರಿಸಲು ಒಂದು ಸಾಮಾನ್ಯ ಕಾರ್ಯಾಚರಣಾ ಪ್ರಕ್ರಿಯೆ (ಎಸ್‍ಓಪಿ)ಯನ್ನು ರೂಪಿಸಲು ಆರೋಗ್ಯ ಇಲಾಖೆಗೆ 17 ವರ್ಷಗಳು ಬೇಕಾದವು. ಆ ಬಳಿಕ ಈ ರೋಗ ನಿಯಂತ್ರಣದಲ್ಲಿ ಸರಕಾರವು ಸಮಾಧಾನಕರ ಯಶಸ್ಸು ಕಂಡಿದ್ದು, ಸಾವಿನ ಸಂಖ್ಯೆಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಸಾವಿನ ಸಂಖ್ಯೆ ನೂರು ದಾಟಿದ ಬಳಿಕವಷ್ಟೇ ರಾಜ್ಯ ಮತ್ತು ಕೇಂದ್ರ ಮಂತ್ರಿಗಳು ಈ ಪ್ರದೇಶಗಳಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಆಡಳಿತ, ಆರೋಗ್ಯ ಅಧಿಕಾರಿಗಳು ಮತ್ತು ಮಂತ್ರಿಗಳ ಅಸಡ್ಡೆಯ ಮನೋಭಾವವನ್ನು ಕ್ಯಾಮೆರಾಗಳು ಸೆರೆಹಿಡಿದಿವೆ. ಆದರೂ, “ಈ ತಿಂಗಳಲ್ಲಿ ಮಕ್ಕಳು ಸಾಯುವುದು ಸಾಮಾನ್ಯ” ಎಂದು ತಿಪ್ಪೆಸಾರಿಸಿದರೂ ಏನೂ ಆಗದೆ ಬಚಾವಾಗುವಂತಹ ಉಡಾಫೆಗೆ ಕಾರಣವಾಗುವುದು ಏನು ಎಂದು ಕೇಳಲು ನಾವು ವಿಫಲರಾಗಿದ್ದೇವೆ.

4. ಚುನಾವಣೆಯ ಕಾರಣದಿಂದ ಈ ಬಾರಿ ಜಾಗೃತಿ ಕಾರ್ಯಕ್ರಮಗಳು ಸರಿಯಾಗಿ ನಡೆದಿಲ್ಲ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಚೌಬೆ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ಜಾಗೃತಿ ಕಾರ್ಯಕ್ರಮಗಳು ಮೇಲೆ ಹೇಳಿರುವ ಎಸ್‍ಓಪಿಯ ಪ್ರಮುಖ ಭಾಗ. ಜನರಿಗಾಗಿ ಬಳಸಬೇಕಾಗಿದ್ದ ಸಂಪನ್ಮೂಲ ಮತ್ತು ಜನಶಕ್ತಿಯನ್ನು ಚುನಾವಣೆಗೆ ತಿರುಗಿಸಲಾಯಿತು. ಹೌದು, ಚುನಾವಣೆಗಳು ಮುಖ್ಯ. ಆದರೆ, ಮುಂದಿನ ಐದು ವರ್ಷಗಳ ಕಾಲ ನಮ್ಮನ್ನು ಯಾರು ಆಳಲಿದ್ದಾರೆ ಎಂದು ನಿರ್ಧರಿಸುವುದು ಬೇರೆಲ್ಲದ್ದಕ್ಕಿಂತಲೂ ಮುಖ್ಯವಾಗಬೇಕೆ?

5. ಸರಕಾರವು 21 ಜೂನ್ 2013ರಲ್ಲಿ ಆಚರಿಸಿದ ಮೊದಲ ಯೋಗ ದಿನಾಚರಣೆಗೆ ಹತ್ತಿರಹತ್ತಿರ 32 ಕೋಟಿ ರೂ.ಗಳನ್ನು ಖರ್ಚು ಮಾಡಿತು. ಹೆಚ್ಚಿನ ಹಣ ಪ್ರಚಾರ, ಯೋಗ ದಿನ ಆಚರಿಸಲು ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಿಗೆ ನೀಡಿದ ನಿಧಿಗೆ ಖರ್ಚಾಯಿತು. ಸುಮಾರು 300-400 ಕೋಟಿ ರೂ.ಗಳನ್ನು ಯೋಗ ದಿನದ ಕಾರ್ಯಕ್ರಮಕ್ಕೆ ಪ್ರತೀವರ್ಷ ಬೇರೆಬೇರೆ ರಾಜ್ಯಗಳಲ್ಲಿ ಜಲನಿರೋಧಕ ಗೋಪುರ ನಿರ್ಮಿಸಲು ಖರ್ಚು ಮಾಡಲಾಯಿತು.

ಉತ್ತರ ಪ್ರದೇಶದಲ್ಲಿ ಸರಕಾರವು ಕುಂಭಮೇಳ ಆಚರಿಸುವುದಕ್ಕೆ ಸಾವಿರಾರು ರೂ.ಗಳನ್ನು ಖರ್ಚು ಮಾಡುತ್ತದೆ. ಯಾತ್ರಿಕರಿಗಾಗಿ ಕಳೆದ ವರ್ಷ ನೂರು ಹಾಸಿಗೆಗಳ ಒಂದು ತಾತ್ಕಾಲಿಕ ಹೈಟೆಕ್ ಆಸ್ಪತ್ರೆಯನ್ನು ಕಟ್ಟಲಾಯಿತು. ಕಳೆದ ಆಗಸ್ಟ್‍ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶದ ಮೇರೆಗೆ ಕನ್ವರಿಯಾಗಳ ಮೇಲೆ ಹೂವಿನ ದಳಗಳನ್ನು ಸುರಿಸಲು 14 ಲಕ್ಷ ರೂ.ಗಳನ್ನು ಸುರಿಯಲಾಯಿತು. ಆದರೆ ಎಇಎಸ್‍ನಿಂದ ಸಾಯುತ್ತಿರುವ ಮಕ್ಕಳಿಗಾಗಿ ಒಂದು ತಾತ್ಕಾಲಿಕ ಆಸ್ಪತ್ರೆ ಕಟ್ಟಲು ಸರಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ?

ಮಾಧ್ಯಮಗಳು ಈ ಪ್ರಶ್ನೆಗಳನ್ನು ಸರಕಾರಗಳಿಗೆ ಯಾಕೆ ಕೇಳುತ್ತಿಲ್ಲ?
ಸರಕಾರದ ಚಾಕರಿಯವರಂತೆ ಮಾಧ್ಯಮದವರು, ವೈದ್ಯರು, ದಾದಿಯರು, ಕಂಗೆಟ್ಟ ಹೆತ್ತವರ ಬೆನ್ನುಹತ್ತುತ್ತಾ, ಬೈಯ್ಯುತ್ತಾ ಅವರ ಗಂಟಲೊಳಗೇ ಮೈಕುಗಳನ್ನು ತುರುಕುತ್ತಿದ್ದಾರೆ. ‘ಬ್ರೇಕಿಂಗ್ ನ್ಯೂಸ್’’ ಮತ್ತು “ಎಲ್ಲರಿಗಿಂತಲೂ ಮೊದಲು” ಹುಚ್ಚಿನಲ್ಲಿ ಅವರು ಹೆಚ್ಚು ಟಿಆರ್‍ಪಿಗಾಗಿ ಜನರ ಸಂಕಷ್ಟವನ್ನು ‘ತಮಾಷಾ’ದಂತೆ ಮಾರುವ ಮಾನಗೇಡಿಗಳಾಗಿದ್ದಾರೆ. ಇವೆಲ್ಲವೂ ಪ್ರತಿಪಕ್ಷಗಳು ಏನು ಮಾಡುತ್ತಿವೆ ಎಂದು ಕೇಳುವುದರ ಜೊತೆಗೆ ನಡೆಯುತ್ತಿವೆ. ಬಿಹಾರದಲ್ಲಿ ಪ್ರತಿಪಕ್ಷಗಳು ಕಳೆದ ಹತ್ತು ವರ್ಷಗಳಿಂದ ಮತ್ತು ಕೇಂದ್ರದಲ್ಲಿ ಐದು ವರ್ಷಗಳಿಂದ ಅಧಿಕಾರದಲ್ಲಿಲ್ಲ ಎಂಬುದನ್ನು ಅವರು ಮರೆತಂತಿದೆ.

ಗೋರಖ್‍ಪುರದಲ್ಲೂ ಮಾಧ್ಯಮಗಳು ಇದೇ ರೀತಿಯ ವರಸೆ ತೋರಿದ್ದವು. ಅಲ್ಲಿ ಜಪಾನೀಸ್ ಎನ್ಸೆಫಲೈಟಿಸ್‍ನಿಂದ ನರಳುತ್ತಿದ್ದ ಸಾವಿರಕ್ಕೂ ಹೆಚ್ಚು ಮಕ್ಕಳು ಆಮ್ಲಜನಕದ ಕೊರತೆಯಿಂದ ಸಾವಿಗೀಡಾಗಿದ್ದರು. ಸರಕಾರವನ್ನು ರಕ್ಷಿಸುವ ಯತ್ನದಲ್ಲಿ ಒಂದು ಆಸ್ಪತ್ರೆ ಮತ್ತದರ ವೈದ್ಯರ ಮೇಲೆ ಗೂಬೆಕೂರಿಸಲಾಯತು. ಮಕ್ಕಳ ಸಾವಿಗೆ ಹೊಣೆಗಾರರೆಂದು ಅನ್ಯಾಯವಾಗಿ ಆರೋಪಕ್ಕೆ ಗುರಿಯಾಗಿ ಅಮಾನತುಗೊಂಡಿದ್ದ ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ಅವರು ಇದೀಗ ಎಇಎಸ್ ಕುರಿತು ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ, ಆರೋಗ್ಯ ಶಿಬಿರಗಳನ್ನು ಸ್ಥಾಪಿಸುತ್ತಾ ಮುಜಾಫರ್‍ಪುರದಲ್ಲಿ ಎಡೆಬಿಡದೆ ದುಡಿಯುತ್ತಿದ್ದಾರೆ. ಯಾವುದೇ ಮಾಧ್ಯಮಗಳು ಇದನ್ನು ವರದಿಯೇ ಮಾಡಿಲ್ಲ.

ಕೆಲವು ಸುದ್ದಿ ಚಾನೆಲ್‍ಗಳಂತೂ, ಸಾಯುತ್ತಿರುವ ಹೆಚ್ಚಿನ ಮಕ್ಕಳು ಬಡ ದಲಿತ ಮತ್ತು ಓಬಿಸಿ ಸಮುದಾಯವರೆಂಬ ಸತ್ಯದತ್ತ ಗಮನಸೆಳೆದ ಲಾಲೂ ಪ್ರಸಾದ್ ಯಾದವ್ ಅವರ ಆರ್‍ಜೆಡಿ ಪಕ್ಷವು ಜಾತಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದವು.
ಯಾಕೆ ಬಹುತೇಕ ಎಲ್ಲಾ ಸಾವುಗಳು ದಲಿತ ಮತ್ತು ಓಬಿಸಿ ಸಮುದಾಯಗಳಲ್ಲಿ ಸಂಭವಿಸಿವೆ ಎಂಬುದು ಅತ್ಯಂತ ಪ್ರಸ್ತುತವಾದ ಪ್ರಶ್ನೆಯಾಗಿದ್ದು, ಅದನ್ನು ಚಾಪೆಯ ಕೆಳಗೆ ತಳ್ಳಲಾಗುತ್ತಿದೆ. ವಾಸ್ತವ ಎಂದರೆ ಅದು ಜಾತಿ, ಬಡತನ, ಅಪೌಷ್ಠಿಕತೆ ಮತ್ತು ಸರಕಾರಿ ಅಸಡ್ಡೆಗಳ ನಡುವಣ ಸಂಬಂಧವನ್ನು ತೋರಿಸುವುದರಿಂದ ಮಾಧ್ಯಮಗಳು ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ.

ಅಪೌಷ್ಠಿಕತೆ ಮತ್ತು ಮೋದಿ ಅಂಟೋಯ್ನೆಟ್!

ಕಳೆದ ವರ್ಷ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 119 ದೇಶಗಳ ಪೈಕಿ 103ನೇ ಸ್ಥಾನದಲ್ಲಿತ್ತು. ಅಂಕಿಅಂಶಗಳ ಪ್ರಕಾರ ಪ್ರತೀ ಐವರು ಮಕ್ಕಳಲ್ಲಿ ನಾಲ್ಲರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಮೊನ್ನೆ ಪ್ರಧಾನಿ ಮೋದಿ ಮುಜಾಫರ್‍ಪುರದಿಂದ 400 ಕಿ.ಮೀ. ದೂರವಿರುವ ರಾಂಚಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಿ, “ನಾವು ಯೋಗವನ್ನು ಹಳ್ಳಿಗಳಿಗೆ ಕೊಂಡೊಯ್ಯಬೇಕು”ಎಂದರು. 2012ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಇದೇ ಮೋದಿ, ತನ್ನ ರಾಜ್ಯದಲ್ಲಿ ಅಪೌಷ್ಠಿಕತೆಯ ಪ್ರಮಾಣ ದೊಡ್ಡದಾಗಿರುವುದಕ್ಕೆ ಸಸ್ಯಾಹಾರ ಪದ್ಧತಿ ಮತ್ತು ‘ಪಿಗರ್ ಕಾನ್ಷಿಯಸ್’ ಹೆಣ್ಣುಮಕ್ಕಳು ಕಡಿಮೆ ತಿನ್ನುವುದು ಕಾರಣ ಎಂದು ಸಬೂಬು ನೀಡಿದ್ದರು.

150ರಷ್ಟು ಮಕ್ಕಳ ಸಾವಿನಿಂದ ಇಡೀ ದೇಶವೇ ಮರುಗುತ್ತಿರುವಾಗ, ಈ ವಿಷಯದ ಕುರಿತು ಪ್ರಧಾನಿಯ ಮೌನ ಕಿವಿಗಡಚಿಕ್ಕುವಂತಿದೆ. ಇದೇ ಹೊತ್ತಿಗೆಗೆ ಅವರು ಕ್ರಿಕೆಟಿಗ ಶಿಖರ್ ಧವನ್ ಹೆಬ್ಬೆರಳಿಗಾದ ಗಾಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದೇ ಹೊತ್ತಿಗೆ ಅವರು ರಾಜಸ್ಥಾನದಲ್ಲಿ ಕಟ್ಟಡ ಕುಸಿದು 14 ಮಂದಿ ಸಾವಿಗೀಡಾದ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ. ಅವರೆಲ್ಲರೂ ರಾಮಕಥಾ ಕೇಳುತ್ತಿದ್ದರು. ಇಲ್ಲಿ ಅದಕ್ಕೆ ಆದ್ಯತೆ! ಸರಿತಾನೆ?

ಮಕ್ಕಳು ಬಡತನ ಮತ್ತು ಅಪೌಷ್ಠಿಕತೆಯಿಂದ ಸಾಯುತ್ತಿರುವುದು ಆಕಸ್ಮಿಕವೇನಲ್ಲ. ಅದು ಕ್ರಿಮಿನಲ್ ನಿರ್ಲಕ್ಷ್ಯ. ಇದು ಚೆನ್ನಾಗಿ ಯೋಜಿಸಲಾಗಿರುವ ಕಾರ್ಯತಂತ್ರವೊಂದರ ಭಾಗ. ಇಲ್ಲಿ ಆಹಾರ, ಆರೋಗ್ಯ ಮತ್ತು ಶಿಕ್ಷಣ ಪಡೆಯಲು ತಾಕತ್ತಿಲ್ಲದ ಬಡವರು ತೊಲಗಬೇಕು. ಯಾಕೆಂದರೆ ಅವರು, ನಾವು ಬದುಕುತ್ತಿರುವ ‘ಹೊಳೆಯುತ್ತಿರುವ ಭಾರತ’ದ ಭ್ರಮೆಗೆ ಸರಿಹೊಂದುವುದಿಲ್ಲ.

ಸರಕಾರವು ಸಾರ್ವಜನಿಕ ಮೂಲಸೌಕರ್ಯಕ್ಕಿಂತ ಖಾಸಗಿ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಆದ್ಯತೆ ನೀಡುತ್ತಿದೆ ಎಂದರೆ, ನಾವು ಒಂದು ದೇಶವಾಗಿ ವಿಫಲರಾಗಿದ್ದೇವೆ. ಭಾರತವು ಒಂದು ತೃತೀಯ ಜಗತ್ತಿನ ದೇಶ. ಇಂತಹ ದೇಶದಲ್ಲಿ ‘ನೆರವು’ ಎಂದು ಕರೆಯಲಾಗುವಂತದ್ದು ಒಂದು ರಾಜಕೀಯ ಅಗತ್ಯವಲ್ಲ; ಅದೊಂದು ಮಾನವೀಯ ಅಗತ್ಯ. ಸಂವಿಧಾನವು ನಿರ್ದೇಶಿಸಿರುವ ಆಹಾರ, ಆರೋಗ್ಯ ಮತ್ತು ಶಿಕ್ಷಣದ ಮೂಲಭೂತ ಸೇವೆಗಳನ್ನು ಒದಗಿಸಲು ಸರಕಾರಗಳು ವಿಫಲವಾಗುತ್ತಿರುವ ತನಕ ಗೋರಖ್‍ಪುರ ಮತ್ತು ಮುಜಾಫರ್‍ಪುರಗಳಂತವು ನಿಲ್ಲಲಾರವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...