ಸೋಮವಾರ ಒಂದೇ ದಿನ ಸಂಸತ್ನ ಉಭಯ ಸದನಗಳಿಂದ ಒಟ್ಟು 78 ಸಂಸದರನ್ನು ಅಮಾನತು ಮಾಡಲಾಗಿದೆ. ಭಾರತೀಯ ಸಂಸತ್ನ ಇತಿಹಾಸದಲ್ಲಿ ಒಂದೇ ದಿನ ಇಷ್ಟೊಂದು ಸಂಸದರನ್ನು ಅಮಾನತು ಮಾಡಿರುವುದು ಇದೇ ಮೊದಲು.
ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, “ಪ್ರಜಾಪ್ರಭುತ್ವದ ತಾಯಿಯನ್ನು ಅನಾಥಗೊಳಿಸಲಾಗಿದೆ” ಎಂದಿದ್ದಾರೆ. ‘ಪ್ರಜಾಪ್ರಭುತ್ವದ ಉಳಿವು’ ಖಾತ್ರಿಪಡಿಸುವ ಜವಾಬ್ದಾರಿಯನ್ನು ನಾಗರಿಕರು ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
Mother of Democracy
Has orphaned it !
The people of India must take care and ensure its survival
— Kapil Sibal (@KapilSibal) December 19, 2023
ಡಿಸೆಂಬರ್ 14ರಂದು ರಾಜ್ಯಸಭೆಯ ಒಬ್ಬರು ಮತ್ತು ಲೋಕಸಭೆಯ 13 ಜನರು ಸೇರಿ ಒಟ್ಟು 14 ಸಂಸದರನ್ನು ಅಮಾನತು ಮಾಡಲಾಗಿತ್ತು. ಡಿ.18 ಸೋಮವಾರ ರಾಜ್ಯಸಭೆಯಿಂದ 45 ಮತ್ತು ಲೋಕಸಭೆಯಿಂದ 33 ಸಂಸದರು ಸೇರಿ 78 ಮಂದಿಯನ್ನು ಅಮಾನತು ಮಾಡಲಾಗಿದೆ. ಈ ಮೂಲಕ ಅಮಾನತ್ತಾದ ಒಟ್ಟು ಸಂಸದರ ಸಂಖ್ಯೆ 92 ಆಗಿದೆ.
ಡಿಸೆಂಬರ್ 13ರಂದು ಸಂಸತ್ನಲ್ಲಿ ಸಂಭವಿಸಿದ್ದ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವರು ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಕ್ಕೆ ಸಂಸತ್ನಲ್ಲಿ ದುರ್ನಡತೆಯ ಆರೋಪ ಹೊರಿಸಿ 78 ಸಂಸದರನ್ನು ಸೋಮವಾರ ಅಮಾನತು ಮಾಡಲಾಗಿದೆ.
ಡಿ.14 ರಂದು ಸಂಸತ್ನಲ್ಲಿ ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿದ್ದಕ್ಕೆ ಲೋಕಸಭೆಯಿಂದ 13 ಮತ್ತು ರಾಜ್ಯಸಭೆಯಿಂದ ಟಿಎಂಸಿ ಸಂಸದ ಡೆರೆಕ್ ಒ ಬ್ರಿಯಾನ್ ಸೇರಿ 14 ಮಂದಿಯನ್ನು ಅಮಾನತು ಮಾಡಲಾಗಿತ್ತು.
ಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಪ್ರತಿಕ್ರಿಯೆಗೆ ಆಗ್ರಹಿಸಿದ್ದಕ್ಕೆ ಲೋಕಸಭೆ ಸ್ಪೀಕರ್ ಓ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಪಕ್ಷಗಳು ಘಟನೆಯನ್ನು ರಾಜಕೀಯ ಮಾಡುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಪ್ರತಿಕ್ರಿಯೆಗೆ ಪಟ್ಟು: 90 ವಿಪಕ್ಷಗಳ ಸಂಸದರ ಅಮಾನತು