ರಾಮನಗರದ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕ ತಮಗೆ ಆಹ್ವಾನ ನೀಡದಿರುವುದರ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ರವರನ್ನು ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ರಾಮನಗರದಲ್ಲಿ ಜರುಗಿದೆ.
ರಾಮನಗರ ಉಸ್ತುವಾರಿ ಸಚಿವ ಡಾ. ಅಶ್ವತ್ಥನಾರಾಯಣ ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಇಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ, ತಡೆದು ನಿಲ್ಲಿಸಿದ ಸಂಸದ ಡಿ ಕೆ ಸುರೇಶ್ “ಏಯ್ ಮಂತ್ರಿಗಳೆ ನಿಂತ್ರ್ಕಳ್ಳಿ, ನನಗೂ ಪ್ರೋಟೋಕಾಲ್ ಇದೆ. ನಿಮಗೊಬ್ಬರಿಗೆ ಅಲ್ಲ” ಎಂದು ಕಿಡಿಕಾರಿದ್ದಾರೆ.
ಯಾರ್ರಿ ಅವನು ಡೆಪ್ಯೂಟಿ ಕಮಿಷನರ್ ಕರೀರಿ ಇಲ್ಲಿ, ನಾನು ಈ ಕ್ಷೇತ್ರದ ಪ್ರತಿನಿಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಸಚಿವ ಡಾ.ಕೆ ಸುಧಾಕರ್ ಕಾಲ್ಕೀಳಲು ಪ್ರಯತ್ನಿಸುತ್ತಿದ್ದಂತೆ, “ಏಯ್ ನಿಲ್ರಿ ಮಂತ್ರಿಗಳೇ, ನಿಂತುಕೊಳ್ಳಿ, ನಾನು ಈ ಕ್ಷೇತ್ರದ ಪ್ರತಿನಿಧಿ. ನನಗೂ ಪ್ರೋಟೋಕಾಲ್ ಇದೆ. ನಿಮ್ಮೊಬ್ಬರಿಗೆ ಅಲ್ಲ” ಎಂದು ಏರುಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು. ಆಗ ಮಧ್ಯಪ್ರವೇಶಿಸಿದ ಡಾ.ಅಶ್ವತ್ಥನಾರಾಯಣ್ ಕೂಗಡಾಬೇಕಿಲ್ಲ ಎಂದರು. ಆಗ ಡಿ.ಕೆ ಸುರೇಶ್ ಅಭಿಮಾನಿಗಳು ಜೋರಾಗಿ ಕೂಗಿ ಎಲ್ಲಾ ಬಿಜೆಪಿ ಕಾರ್ಯಕ್ರಮ ಮಾಡಿಕೊಂಡುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಅಶ್ವತ್ಥನಾರಾಯಣ್ ಪ್ರೋಟೋಕಾಲ್ ಅಂದ್ರೆ ಏನ್ರಿ? ನಿಮ್ಮನ್ನು ಬರಬೇಡಿ ಎಂದು ತಡೆದವರು ಯಾರು ಎಂದಾಗ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವವರು, ಉಪ ಮುಖ್ಯಮಂತ್ರಿಗಳಾಗಿದ್ದವರು ನಿಮಗೆ ಪ್ರೋಟೋಕಾಲ್ ಏನೆಂದು ಹೇಳಿಕೊಡಬೇಕೆ? ಕಾರ್ಯಕ್ರಮದ ವಿವರಗಳನ್ನು ಮೊದಲೇ ನೀಡಬೇಕು ಅಲ್ಲವೆ? ರಾತ್ರಿ ಆಹ್ವಾನ ಪತ್ರಿಕೆ ಹಂಚಿ ಬೆಳಿಗ್ಗೆ ಉದ್ಘಾಟನೆ ಮಾಡುವುದು ಯಾವ ಪ್ರೊಟೋಕಾಲ್ ಎಂದು ಡಿ.ಕೆ ಸುರೇಶ್ ಪ್ರಶ್ನಿಸಿದರು.
ಎಲ್ಲವನ್ನು ನಿಗಧಿ ಮಾಡಿಯೇ ಮಾಡುತ್ತಿದ್ದೇವೆ ಎಂದು ಡಾ.ಅಶ್ವತ್ಥನಾರಾಯಣ್ ಸಮರ್ಥಿಸಿಕೊಳ್ಳಲು ಮುಂದಾದರು. ಆಗ ಮಾತನಾಡಿದ ಡಿ.ಕೆ ಸುರೇಶ್, ನೀವು ಯಾವಾಗ ನಿಗದಿ ಮಾಡಿದ್ದೀರಿ ನನಗೆ ಗೊತ್ತಿಲ್ಲ, ನನಗೆ ಮುಂಚೆನೇ ಆಹ್ವಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಡಾ. ಸುಧಾಕರ್ ತುಟಿಬಿಚ್ಚದೆ ಸುಮ್ಮನಿದ್ದರು.
ಕಳೆದ ವಾರ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕು ಉದ್ಘಾಟನಾ ಕಾರ್ಯಕ್ರಮಕ್ಕೂ ಸಂಸದ ಡಿ.ಕೆ ಸುರೇಶ್ರವರನ್ನು ಆಹ್ವಾನಿಸಲಾಗಿರಲಿಲ್ಲ. ಹಾಗಾಗಿ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಅಲ್ಲದೇ ಆ ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿಯವರು ಸಹ ನನ್ನನ್ನು ಕಾಟಾಚಾರಕ್ಕೆ ಕರೆದಿದ್ದಾರೆ ಎಂದು ಆರೋಪಿಸಿದ್ದರು. ಜೊತೆಗೆ ಹಾರೋಹಳ್ಳಿ ತಾಲ್ಲೂಕು ರಚನೆಗೆ ಶ್ರಮಿಸಿದ್ದು ನಾನು, ಆದರೆ ಸಚಿವರು ಬಿಜೆಪಿ ಸರ್ಕಾರ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ; ಹಾರೋಹಳ್ಳಿ: ಒಂದೇ ವೇದಿಕೆಯಲ್ಲಿ ಅಶ್ವಥ್ ನಾರಾಯಣ್, ಅನಿತಾ ಕುಮಾರಸ್ವಾಮಿ ಜಟಾಪಟಿ