Homeಕರ್ನಾಟಕಸುರತ್ಕಲ್‌ ಫಾಝಿಲ್ ಹತ್ಯೆ: ಸುನ್ನಿ-ಶಿಯಾ ಕತೆ ಕಟ್ಟಿ ತನಿಖೆಯ ದಾರಿ ತಪ್ಪಿಸುತ್ತಿರುವ ಬಿಜೆಪಿ ಬೆಂಬಲಿಗರು

ಸುರತ್ಕಲ್‌ ಫಾಝಿಲ್ ಹತ್ಯೆ: ಸುನ್ನಿ-ಶಿಯಾ ಕತೆ ಕಟ್ಟಿ ತನಿಖೆಯ ದಾರಿ ತಪ್ಪಿಸುತ್ತಿರುವ ಬಿಜೆಪಿ ಬೆಂಬಲಿಗರು

- Advertisement -
- Advertisement -

ರಾಜ್ಯದ ಕೋಮು ಸೂಕ್ಷ್ಮ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕಳೆದ ಒಂದು ವಾರದಲ್ಲಿ ಒಟ್ಟು ಮೂವರು ಯುವಕರನ್ನು ಕೊಲೆ ಮಾಡಲಾಗಿದೆ. ಈ ಮೂರು ಪ್ರಕರಣದಲ್ಲಿ ಮಸೂದ್ ಅವರನ್ನು ಕೊಂದಿರುವ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅದರ ನಂತರ ನಡೆದ ಪ್ರವೀಣ್ ಕೊಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವರದಿ ಬರೆಯುವವರೆಗೂ ಫಾಝಿಲ್ ಕೊಲೆ ಮಾಡಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ.

ಮಸೂದ್ ಕೊಲೆ ಆರೋಪಿಗಳು ಅವರನ್ನು ‘ಮೈ ತಾಗಿದೆ’ ಎಂಬ ಕ್ಷುಲ್ಲಕ ವಿಚಾರವನ್ನು ಹಿಡಿದು ಕೊಲೆ ಮಾಡಿದ್ದಾರೆ ಎಂಬುವುದು ಈಗಾಗಲೆ ಬಹಿರಂಗಗೊಂಡಿದೆ. ಪ್ರವೀಣ್ ಅವರ ಕೊಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ಅವರು ಪ್ರವೀಣ್ ಕೊಲೆಯನ್ನು ಯಾಕೆ ಮಾಡಿದ್ದಾರೆ ಎಂದು ಇನ್ನೂ ಪೊಲೀಸರು ಬಹಿರಂಗಪಡಿಸಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅದಾಗ್ಯೂ, ಪ್ರವೀಣ್ ಅವರ ಮೇಲೆ ದಾಳಿ ನಡೆದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸುದ್ದಿ ಬಂದಕೂಡಲೇ ‘ಕಹಳೆ’ ಎಂಬ ಬಿಜೆಪಿ ಪರ ಒಲವಿನ ಬಲಪಂಥೀಯ ಪ್ರೊಪಗಾಂಡ ವೆಬ್‌ಸೈಟ್‌, ಪ್ರವೀಣ್ ಅವರನ್ನು ‘ಜಿಹಾದಿ’ಗಳು ಕೊಂದಿದ್ದಾರೆ ಎಂದು ಬರೆದು ಅವರ ಕೊಲೆಗೆ ಮುಸ್ಲಿಮರು ಕಾರಣ ಎಂಬಂತೆ ವರದಿ ಮಾಡಿತ್ತು.

ಕಹಳೆ ವೆಬ್‌ಸೈಟ್‌ ಅನ್ನು ವರದಿ ಮಾಡಿದಾಗ ಪೊಲೀಸರು ಇನ್ನೂ ಯಾವುದೇ ಆರೋಪಿಗಳನ್ನು ಬಂಧಿಸಿರಲಿಲ್ಲ. ಕೊಲೆ ನಡೆಸಿದವರು ಯಾರು ಎಂದು ಇನ್ನೂ ಯಾರಿಗೂ ಗೊತ್ತಿರಲಿಲ್ಲ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಪ್ರವೀಣ್ ಅವರನ್ನು ಕೊಲೆ ನಡೆಸಿದ್ದಾರೆ ಎಂಬುವುದಷ್ಟೆ ಪ್ರಾಥಮಿಕ ವರದಿ. ಆದರೆ ಬಿಜೆಪಿ ಬೆಂಬಲಿತ ವೆಬ್‌ಸೈಟ್‌ಗಳು ಮತ್ತು ಅವರ ಬೆಂಬಲಿಗರು ಮುಸ್ಲಿಮರೇ ಕೊಲೆ ನಡೆಸಿದ್ದಾರೆ ಎಂದು ಷರಾ ಬರೆದು ಬಿಟ್ಟಿದ್ದರು.

ಆರ್ಕೈವ್‌ಗೆ ಇಲ್ಲಿ ಕ್ಲಿಕ್ ಮಾಡಿ

ಇಷ್ಟೆ ಅಲ್ಲದೆ, ಪೊಲೀಸರು ಅಧೀಕೃತ ಮಾಹಿತಿ ನೀಡುವುದಕ್ಕಿಂತ ಮುಂಚೆಯೆ, ರಾಜ್ಯದ ಜವಾಬ್ದಾರಿಯುತ ಸಾಂವಿಧಾನಿಕ ಹುದ್ದೆಯಲ್ಲಿ ಇರುವ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರು ಹಾಗೂ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಸಂಸದರೂ ಆಗಿರುವ ನಳಿನ್ ಕುಮಾರ್‌ ಕಟೀಲ್ ಅವರು ಬಲಪಂಥೀಯ ರಾಜಕೀಯ ಪಕ್ಷವಾದ ಎಸ್‌ಡಿಪಿಐ ಮತ್ತು ಅವರ ಮಾತೃ ಸಂಘಟನೆ ಪಿಎಫ್‌ಐ ಮೇಲೆ ಆರೋಪ ಹೊರಿಸಿದ್ದರು. ಆದರೆ ಈ ವೇಳೆ ಕೂಡಾ ಪೊಲೀಸರು ಯಾವುದೇ ಆರೋಪಿಗಳನ್ನು ಬಂಧಿಸಿರಲಿಲ್ಲ.

ಈ ರೀತಿಯ ಹೇಳಿಕೆಗಳಿಂದ ಅಥವಾ ವರದಿಗಳಿಂದ ಜನರು ಇನ್ನಷ್ಟು ಉದ್ರಿಕ್ತರಾಗುತ್ತಾರೆ ಎಂದು ಗೊತ್ತಿದ್ದರೂ ಜನಪ್ರತಿನಿಧಿಗಳು, ಅವರ ಬೆಂಬಲಿಗರು ಹಾಗೂ ಮಾಧ್ಯಮಗಳು ಊಹಾಪೋಹಗಳನ್ನು ಹರಿಬಿಟ್ಟಿದ್ದಾರೆ. “ಈ ರೀತಿಯ ಕೃತಕ ಒತ್ತಡಗಳು ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ಅಮಾಯಕರು ಪ್ರಕರಣದಲ್ಲಿ ಸಿಲುಕುವ ಅಪಾಯಗಳು ಇರುತ್ತದೆ ಮತ್ತು ತಪ್ಪಿತಸ್ಥರು ಬಚಾವ್ ಆಗುವ ಸಂಭವ ಇರುತ್ತದೆ” ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಪ್ರವೀಣ್ ಹತ್ಯೆ ಸಂಬಂಧ ಬಿಜೆಪಿ ಅಧ್ಯಕ್ಷ ಕಟೀಲ್‌ರನ್ನು ತನಿಖೆಗೊಳಪಡಿಸಬೇಕು – ಸಿದ್ದರಾಮಯ್ಯ ಆಗ್ರಹ

ಸುರತ್ಕಲ್ ಫಾಝಿಲ್ ಪ್ರಕರಣ

ಪ್ರವೀಣ್ ಕೊಲೆ ನಡೆದು ಒಂದು ದಿನ ಮುಗಿಯುವುದರ ಒಳಗಾಗಿ ಮಂಗಳೂರು ಹೊರ ವಲಯದ ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ದಾಳಿ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸುವ ಮುಂಚೆಯೆ ಕೆಲವು ಬಿಜೆಪಿ ಬೆಂಬಲಿತ ಪೇಜ್‌ಗಳು ಮತ್ತು ಬಿಜೆಪಿ ಬೆಂಬಲಿಗರು ಫಾಝಿಲ್ ಕೊಲೆ ಸುನ್ನಿ-ಷಿಯಾ ಪ್ರೇಮ ಪ್ರಕರಣ ಕೊಲೆ ಎಂದು ತೀರ್ಪು ನೀಡಿ ದುರುದ್ದೇಶದಿಂದ ಹರಿಬಿಡಲಾಗಿತ್ತು.

ಲವ್ ವಿಷಯದಲ್ಲಿ ಸುನ್ನಿ ಮುಸಲ್ಮಾನ ಸಮುದಾಯದ ತಂಡ ಮತ್ತು ಶಿಯಾ ಮುಸಲ್ಮಾನ ಸಮುದಾಯದ ತಂಡದ ನಡುವೆ ಸುರತ್ಕಲ್‌ನಲ್ಲಿ ಮಾರಾಮಾರಿ. ಮೇಲ್ಜಾತಿ ಸುನ್ನಿ ಮುಸಲ್ಮಾನರ ಯುವತಿಯನ್ನು ಪ್ರೀತಿಸಿದ ಕೆಳಜಾತಿಯ ಷಿಯಾ ಮುಸಲ್ಮಾನ ಯುವಕನ ಮೇಲೆ ತಲವಾರು ದಾಳಿ ನಡೆಸಿ ಕೊಂದ ಸುನ್ನಿ ಮುಸಲ್ಮಾನರು. ಯುವಕನ ಸ್ಥಿತಿ ಗಂಭೀರ” ಎಂಬ ಸಂದೇಶವನ್ನು ಬಿಜೆಪಿ ಬೆಂಬಲಿಗರು ಹರಿಯಬಿಟ್ಟಿದ್ದರು. ಕನ್ನಡದ ಮಾಧ್ಯಮಗಳು ಕೂಡಾ ಅದನ್ನೇ ವರದಿ ಮಾಡಿದ್ದವು.

ಕೊಲೆಯಾದ ಕೂಡಲೇ ಫೇಸ್‌ಬುಕ್‌ನಲ್ಲಿ ತಪ್ಪು ಸಂದೇಶ ಹರಿಯ ಬಿಟ್ಟ ಬಿಜೆಪಿ ಬೆಂಬಲಿಗರ ಕೆಲವು ಪೋಸ್ಟ್‌

ಯಾವುದೇ ಅಧಿಕೃತವಲ್ಲದ ಬಿಜೆಪಿ ಬೆಂಬಲಿಗರು ಹರಿಬಿಟ್ಟ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಮಂಗಳೂರು ನಗರ ಕಮಿಷನರ್‌ ಶಶಿಕುಮಾರ್‌ ಅವರು ಕೂಡಾ ತಪ್ಪು ಸಂದೇಶ ಹರಿಬಿಡದಂತೆ ಹಾಗೂ ಕೊಲೆಗೆ ಕಾರಣ ಏನು ಎಂಬ ಬಗ್ಗೆ ಇನ್ನೂ ತಿಳಿದಿಲ್ಲ ಎಂದು ತಿಳಿಸಿದ್ದರು. ಮಾಧ್ಯಮಗಳು ಹಾಗೂ ಸಾರ್ವಜನಿಕರು ವದಂತಿ ಹರಡಬೇಡಿ ಎಂದು ಕಿಡಿ ಕಾರಿದ್ದರು.

ಈ ನಡುವೆ ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ಮೊಯಿದಿನ್ ಬಾವ ಅವರು, ‘‘ಇದು ಪ್ರೇಮ ಪ್ರಕರಣದ ಕಾರಣಕ್ಕೆ ನಡೆದ ಕೊಲೆ” ಎಂದು ಹೇಳಿದ್ದಾಗಿ ಕನ್ನಡ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಮೊಯಿದಿನ್ ಬಾವ ಅವರು, “ನಾನು ಈ ರೀತಿ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ಹೇಳಿಕೆ ತಿರುಚಿರುವ ಸುವರ್ಣ ನ್ಯೂಸ್ ವಿರುದ್ಧ ಪ್ರಕರಣ ದಾಖಲಿಸುತ್ತೇನೆ” ಎಂದು ಹೇಳಿದ್ದರು.

ಅದಾಗಿಯೂ ದೇಶದ ಪ್ರಮುಖ ಇಂಗ್ಲಿಷ್‌‌‌‌ ಪತ್ರಿಕೆಯಾಗಿರುವ ಡೆಕ್ಕನ್ ಹೆರಾಲ್ಡ್‌ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ, “ಶಿಯಾ ಸಮುದಾಯದ ಹುಡುಗಿಯನ್ನು ಪ್ರೀತಿಸುತ್ತಿದ್ದ ಕಾರಣ ಫಾಝಿಲ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೊಹಮ್ಮದ್ ಫಾಝಿಲ್ ಅವರು ಸುನ್ನಿ ಮುಸ್ಲಿಂ ಎಂದು ಪೊಲೀಸ್ ಮೂಲಗಳು ತಿಳಿಸಿವೆ” ಎಂದು ವರದಿ ಮಾಡಿದೆ. ಈ ವರದಿಯಲ್ಲಿ ಬಿಜೆಪಿಯ ಬೆಂಬಲಿಗರು ಹರಿಬಿಟ್ಟ ಸಂದೇಶಕ್ಕಿಂತ ಕೊಲೆಗೀಡಾದ ಯುವಕನ ಪಂಥವನ್ನು ಬದಲಿಸಿ ವರದಿ ಮಾಡಲಾಗಿದೆ.

ಆರ್ಕೈವ್‌ಗೆ ಇಲ್ಲಿ ಕ್ಲಿಕ್ ಮಾಡಿ

ಡೆಕ್ಕನ್ ಹೆರಾಲ್ಡ್‌‌ನ ಈ ವರದಿಯನ್ನು ಉಲ್ಲೇಖಿಸಿ ಭಾರತ ಮಟ್ಟದಲ್ಲಿ ಬಿಜೆಪಿಯ ಪರವಾಗಿ ಪ್ರೊಪಗಾಂಡ ಹರಡುವ ಒಪಿಂಡಿಯಾ ಎಂಬ ವೆಬ್‌ಸೈಟ್‌, “ಸುನ್ನಿ ಫಾಜಿಲ್ ಶಿಯಾ ಹುಡುಗಿಯನ್ನು ಪ್ರೀತಿಸುತ್ತಿರುವುದೇ ಹತ್ಯೆಗೆ ಕಾರಣ ಎಂದು ವರದಿಗಳು ಸೂಚಿಸುತ್ತವೆ” ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಿದೆ.

ಆರ್ಕೈವ್‌‌ ಇಲ್ಲಿ ಕ್ಲಿಕ್ ಮಾಡಿ

ವಾಸ್ತವದಲ್ಲಿ ಕೊಲೆಯಾದ ಫಾಝಿಲ್‌ ಆದರೆ ಸುನ್ನಿ ಮುಸ್ಲಿಂ ಆಗಿದ್ದು, ಬಿಜೆಪಿ ಬೆಂಬಲಿಗರು ಹೇಳುವಂತೆ ಶಿಯಾ ಪಂಥವನ್ನು ಅನುಸರಿಸುವ ಯುವಕನಲ್ಲ. ಅವರ ಅಂತ್ಯ ಸಂಸ್ಕಾರವನ್ನು ಸುರತ್ಕಲ್‌ನ ಮಂಗಳಪೇಟೆಯ ಮುಹಿಯದ್ದೀನ್ ಮಸೀದಿಯಲ್ಲಿ ಮಾಡಲಾಗಿದೆ. ಈ ಮಸೀದಿ ಸುನ್ನಿ ಮಸೀದಿಯಾಗಿದೆ.

ಫಾಝಿಲ್ ಅವರು ಸುನ್ನಿ ಪಂಥವನ್ನು ಅನುಸರಿಸುತ್ತಿದ್ದರು. ಅಷ್ಟಕ್ಕೂ ಸುರತ್ಕಲ್ ಆಸುಪಾಸಿನಲ್ಲಿ ಶಿಯಾ ಪಂಥದ ಜನರು ಕೂಡಾ ಇಲ್ಲ ಎಂದು ಸ್ಥಳೀಯರು ಉಲ್ಲೇಖಿಸುತ್ತಾರೆ. ಹೀಗಾಗಿ ಬಿಜೆಪಿ ಬೆಂಬಲಿಗರು ಸುನ್ನಿ ಶಿಯಾ ಕಟ್ಟುಕತೆಯನ್ನು ತನಿಖೆಯ ದಾರಿ ತಪ್ಪಿಸಲು ಬೇಕಾಗಿ ದುರುದ್ದೇಶ ಪೂರ್ವಕವಾಗಿ ಹರಿಯ ಬಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

‘‘ಸುನ್ನಿ-ಶಿಯಾ ಪ್ರೇಮ ವಿವಾದ’’ ಎಂಬುವುದು ಬಲಪಂಥೀಯರು ಕಟ್ಟಿದ ಅಪ್ಪಟ ಕಟ್ಟುಕತೆ ಎಂದು ಬ್ಯಾರಿ ಸಮುದಾಯದ ಸಂಸ್ಕೃತಿ ಚಿಂತಕ, ಬರಹಗಾರ ಇಸ್ಮತ್ ಪಜೀರ್‌ ಅವರು ಆರೋಪಿಸುತ್ತಾರೆ. “ವಾಸ್ತವದಲ್ಲಿ ಕರಾವಳಿಯಲ್ಲಿ ಶಿಯಾ ಸಮುದಾಯ ತೀರಾ ಇಲ್ಲವೆ ಇಲ್ಲ ಎನ್ನುವಷ್ಟು ಕಡಿಮೆ, ಇದ್ದರೂ ಒಂದಷ್ಟು ಬೆರಳೆಣಿಕೆಯ ಆಗರ್ಭ ಶ್ರೀಮಂತರು ವ್ಯಾಪರಕ್ಕೆ ಅಷ್ಟೆ ಬರುತ್ತಾರೆ. ಅವರು ಇಲ್ಲಿನ ಬ್ಯಾರಿ ಸಮುದಾಯ(ಸ್ಥಳೀಯ ಮುಸ್ಲಿಮರು)ದೊಂದಿಗೆ ಸಾಮಾಜಿಕವಾಗಿ ಬೆರೆಯುವುದೆ ಇಲ್ಲ. ಅವರಿಗೆ ಬ್ಯಾರಿ ಭಾಷೆಯು ಬರುವುದಿಲ್ಲ” ಎಂದು ಹೇಳಿದ್ದಾರೆ.

ಅದೂ ಅಲ್ಲದೆ ಶಿಯಾ-ಸುನ್ನಿ ಎಂಬುವುದು ಮುಸ್ಲಿಮರ ಒಳಗಿನ ಜಾತಿಗಳೂ ಅಲ್ಲ ಎಂದು ಇಸ್ಮತ್ ಹೇಳುತ್ತಾರೆ. ಸುನ್ನಿ-ಶಿಯಾ ಎಂಬುವುದು ತಾತ್ವಿಕ ಭಿನ್ನತೆಗಳ ಆಧಾರದಲ್ಲಿ ವಿಂಗಡನೆಗೊಂಡಿರುವ ಪಂಥಗಳಾಗಿವೆ. ಭಾರತದಲ್ಲಿ ಕಂಡು ಬರುವ ಜಾತಿ ಮಾದರಿಯಲ್ಲಿ ಅವುಗಳು ಇರುವುದಿಲ್ಲ. ಜಾತಿಗಳು ಜನ್ಮತಃ ಬರುತ್ತದೆ ಮತ್ತು ತಮ್ಮ ಹೆತ್ತವರ ಜಾತಿಯೆ ಮಕ್ಕಳ ಜಾತಿಯೂ ಆಗಿರುತ್ತದೆ. ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸುನ್ನಿ ಮುಸ್ಲಿಂ ಒಬ್ಬ ಯಾವುದೇ ಸಮಯಕ್ಕೆ ಶಿಯಾ ಆಗಬಹುದಾಗಿದೆ ಹಾಗೆಯೆ ಶಿಯಾ ಒಬ್ಬ ಸುನ್ನಿ ಕೂಡಾ ಆಗಬಹುದಾಗಿದೆ. ಅವುಗಳು ಕೇವಲ ಸೈದ್ಧಾಂತಿಕ ವಿಚಾರ ಧಾರೆಯಾಗಿದೆ.

ಇದನ್ನೂ ಓದಿ: ‘ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೊರಟರೆ ಕರಾವಳಿ ತಾಲಿಬಾನ್ ಆಗಲ್ವಾ?’

ಫಾಝಿಲ್ ಕೊಲೆಯು ಸುನ್ನಿ-ಶಿಯಾ ಪ್ರೇಮ ವಿಚಾರದ ಕಾರಣಕ್ಕೆ ನಡೆದಿದೆ ಎಂಬ ವರದಿಯ ಬಗ್ಗೆ ಮಾತನಾಡಿದ ಇ‌ಸ್ಮತ್ ಪಜೀರ್‌, “Deccan herald‌ ನಂತಹ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೂ ಈ‌ ಸಂಘಪರಿವಾರದ ಆಯಾಮವನ್ನು‌ ಸುದ್ಧಿ‌ಮೂಲವಾಗಿ ಎತ್ತಿಕೊಂಡು ವರದಿ ಮಾಡಿ‌‌ ಉನ್ನತ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆಂದು ಪ್ರಕಟಿಸಿದೆ ಎಂಬುವುದು ಬೇಸರದ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಇದು ಕಟ್ಟುಕತೆಯ ಇನ್ನೊಂದು ವರ್ಷನ್. ಮೊದಲನೆಯದಾಗಿ ಮಂಗಳೂರಿನಲ್ಲಿ ಶಿಯಾ ಪಂಗಡದ ಮುಸ್ಲಿಮರು ತೀರಾ ಇಲ್ಲವೆನ್ನುವಷ್ಟು ವಿರಳ. ಒಂದು ವೇಳೆ ಇದ್ದರೂ ಅವರು ಮೂಲತಃ ಮಂಗಳೂರಿಗರಲ್ಲ, ಅವರಿಗೆ ಮಂಗಳೂರು ಮುಸ್ಲಿಮರಾಡುವ ಬ್ಯಾರಿ ಭಾಷೆ ಗೊತ್ತಿರುವುದಿಲ್ಲ.ಹಾಗೊಂದು ವೇಳೆ ಎಲ್ಲಿಂದಲೋ ವ್ಯಾಪಾರ- ಉದ್ಯೋಗಕ್ಕಾಗಿ ಬಂದು ನೆಲೆಸಿರುವ ಶಿಯಾಗಳಿದ್ದರೂ ಅವರ ಸಂಖ್ಯೆ ಅಕ್ಷರಶಃ ಬೆರಳೆಣಿಕೆಯನ್ನೂ ದಾಟುವುದಿಲ್ಲ” ಎಂದು ಹೇಳಿದ್ದಾರೆ.

ಏನಿದು ಶಿಯಾ ಸುನ್ನಿ ಪಂಥ?

“ಶಿಯಾ ಮತ್ತು ಸುನ್ನಿ ಎನ್ನುವುದು ಜಾತಿಯೂ ಅಲ್ಲ, ಮೇಲು ಕೀಳು ಎಂಬ ಪ್ರಶ್ನೆಯೂ ಅಲ್ಲಿ ಬರುವುದಿಲ್ಲ.
ಸುನ್ನಿಗಳು ಪ್ರವಾದಿ ಮುಹಮ್ಮದ್ ಅವರ ಬಳಿಕ ಬಂದ ನಾಲ್ಕು ಮಂದಿ ಖಲೀಫರನ್ನು ಅನುಸರಿಸುತ್ತಾರೆ ಮತ್ತು ಗೌರವಿಸುತ್ತಾರೆ. ಸುನ್ನಿಗಳು ವಂಶಾಡಳಿತವನ್ನು ಒಪ್ಪುವುದಿಲ್ಲ. ಶಿಯಾಗಳು ಪ್ರವಾದಿ ಅವರನ್ನು ಸುನ್ನಿಗಳಷ್ಟೇ ಗೌರವಿಸುತ್ತಾರೆ, ಪ್ರೀತಿಸುತ್ತಾರೆ”

“ಆದರೆ ಶಿಯಾಗಳ ವಾದವೇನೆಂದರೆ ಇಸ್ಲಾಮಿನ ಮೊದಲ ಖಲೀಫ ಆಗಬೇಕಾಗಿದ್ದದ್ದು ಪ್ರವಾದಿ ಅವರ ಪುತ್ರಿ ಫಾತಿಮಾ ಅವರ ಪತಿ ಅಲಿ ಅವರು. ಆದರೆ ಪ್ರವಾದಿ ಅವರ ಪತ್ನಿ ಆಯಿಶಾ ಅವರು ಅಲಿ ಅವರಿಗೆ ಅಧಿಕಾರ ಸಿಗದಂತೆ ತಪ್ಪಿಸಿ ತನ್ನ ತಂದೆ ಅಬೂಬಕರ್ ಸಿದ್ದೀಖ್ ಅವರಿಗೆ ಖಿಲಾಫತ್ ಕೊಟ್ಟರು ಎನ್ನುವುದು ಶಿಯಾಗಳ ವಾದ. ಆ ಕಾರಣಕ್ಕಾಗಿ ಪ್ರವಾದಿಯ ಅಳಿಯನಾದ ಅಲಿ ಅವರಿಗೆ ಅಧಿಕಾರ ತಪ್ಪಿತು. ಮೊದಲ ಖಲೀಫನಾಗಬೇಕಿದ್ದ ಅಲಿ ಅವರು ನಾಲ್ಕನೇ ಖಲೀಫರಾಗಿದ್ದು ಕುತಂತ್ರದ ಪರಿಣಾಮ ಎನ್ನುವುದು ಶಿಯಾಗಳ ವಾದ”

“ಶಿಯಾಗಳು ಮೊದಲ ಮೂರು ಖಲೀಫರಾಗಿದ್ದ ಅಬೂಬಕರ್ ಸಿದ್ದೀಖ್, ಉಮರ್ ಬಿನ್ ಖತ್ತಾಬ್ ಮತ್ತು ಉತ್ಮಾನ್ ಬಿನ್ ಅಫ್ಫಾನ್‌ರನ್ನು ಒಪ್ಪುವುದಿಲ್ಲ, ಅಂಗೀಕರಿಸುವುದಿಲ್ಲ ಮತ್ತು ಅವರಿಗೆ ಅಗೌರವ ಸೂಚಿಸುತ್ತಾರೆ.
ಆದರೆ ವಾಸ್ತವದಲ್ಲಿ ಧಾರ್ಮಿಕ ವಿಚಾರದಲ್ಲಿ ಇಸ್ಲಾಮ್ ವಂಶಾಡಳಿತವನ್ನು ಒಪ್ಪುವುದಿಲ್ಲ. ಯಾರು ಅರ್ಹರೋ ಅವರಿಗೆ ಧಾರ್ಮಿಕ ನೇತೃತ್ವ ಸಿಗಬೇಕೆನ್ನುವುದು ಇಸ್ಲಾಮಿನ ಡೆಮಾಕ್ರಟಿಕ್ ಚಿಂತನೆ. ಒಂದು ವೇಳೆ ಕುಟುಂಬಿಕನೇ ಇತರೆಲ್ಲರಿಗಿಂತ ಅರ್ಹನೂ, ಹಿರಿಯನೂ ಆಗಿದ್ದರೆ ಆತನ ಅರ್ಹತೆಯ ಆಧಾರದಲ್ಲಿ ಮಾತ್ರ ಆತನಿಗೆ ಧಾರ್ಮಿಕ ನೇತೃತ್ವ ನೀಡಬಹುದು.ಇದು ಸುನ್ನಿಗಳು ಒಪ್ಪುವ ವ್ಯವಸ್ಥೆ”

“ಒಟ್ಟಿನಲ್ಲಿ ಶಿಯಾ ಮತ್ತು ಸುನ್ನಿ ಎನ್ನುವುದು ತಾತ್ವಿಕ ಭಿನ್ನತೆಗಳೇ ಹೊರತು ಅವು ಜಾತಿಗಳಲ್ಲ ಮತ್ತು ಇವೆರಡರ ಮಧ್ಯೆ ಮೇಲು ಕೀಳು ಎಂಬ ವಿಚಾರವೇ ಬರುವುದಿಲ್ಲ. ಫಾಝಿಲ್ ಕೊಲೆಯ ದಿಕ್ಕನ್ನು ತಪ್ಪಿಸಲು ಸಂಘಪರಿವಾರ ಕೊಲೆಗೆ ಮುನ್ನವೇ ತಯಾರಿಸಿದ ಸ್ಕ್ರಿಪ್ಟ್ ಶಿಯಾ-ಸುನ್ನಿ. ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲದ ಹೆಂಗ್ ಪುಂಗ್ಲಿ ಯುನಿವರ್ಸಿಟಿಯಲ್ಲಿ ಕಲಿತವರು ಮಾತ್ರ ಶಿಯಾ- ಸುನ್ನಿಯನ್ನು ಮೇಲ್ಜಾತಿ- ಕೀಳ್ಜಾತಿ ಎಂದು ವಿಶ್ಲೇಷಿಸಲು ಸಾಧ್ಯ” ಎಂದು ಇಸ್ಮತ್‌ ಪಜೀರ್‌ ಹೇಳಿದ್ದಾರೆ.

ಒಟ್ಟಾರೆಯಾಗಿ ಕೋಮು ಸೂಕ್ಷ್ಮ ಸಂದರ್ಭದಲ್ಲಿ ತನಿಖೆಯ ಮೇಲೆ ಪ್ರಭಾವ ಬೀರುವಂತೆ ಯಾರೂ ಹೇಳಿಕೆ ನೀಡಬಾರದು. ಮಾಧ್ಯಮಗಳು ಸಹ ಜವಾಬ್ದಾರಿಯಿಂದ ವರ್ತಿಸಬೇಕು. ಆದರೆ ಕರ್ನಾಟಕದಲ್ಲಿ ಅದು ಉಲ್ಟಾ ಆಗುತ್ತಿದೆ. ಹಾಗಾಗಿ ಪೊಲೀಸ್ ಇಲಾಖೆ ಈ ಕುರಿತು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಅದೇ ರೀತಿಯಾಗಿ ಎಲ್ಲಾ ಆಯಾಮಗಳಿಂದ ಪ್ರಾಮಾಣಿಕ ತನಿಖೆ ನಡೆಸಿ  ಹಂತಕರನ್ನು ಬಂಧಿಸಬೇಕು. ಇಂತಹ ಪ್ರಕರಣಗಳು ಪುನಾರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...